ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

25 October, 2012

ಮನದೊಳಗಿನ ಕಿಚ್ಚು....ತನ್ನನ್ನೇ ಸುಡುವುದಲ್ಲವೆ!

    ಕಿಚ್ಚು- ಹೊರಗೇ ಇರಲಿ, ಒಳಗೇ ಇರಲಿ....ಮಾಡುವ  ಕೆಲಸ  ಒಂದೇ ಸುಡುವುದು. ಹೊರಗಿನ ಕಿಚ್ಚು ಕಣ್ಣಿಗೆ ಕಾಣಬಲ್ಲದು, ಅದನ್ನು ಆರಿಸಲು ಸಾಧ್ಯವಿದೆ. ಆದರೆ ಒಳಗಿನ ಕಿಚ್ಚು ಪರರನ್ನು ಮಾತ್ರವಲ್ಲದೆ ತನ್ನನ್ನೂ ಸುಡುವುದು. ಈ ಸತ್ಯವನ್ನು ಅರಿತಿದ್ದರೂ ನಾವದನ್ನು ಆರಿಸಲು ಪ್ರಯತ್ನಿಸುವುದಿಲ್ಲವೆ! ಏಕೆ ಹೀಗೆ? ಹಳೆ ಸುಧಾ ಪತ್ರಿಕೆಯ  "ವಿಚಾರ ಲಹರಿಯ" ಅಂಕಣದಲ್ಲಿ  ಒಂದು ಹೃದಯ ವಿದ್ರಾವಕ ಘಟನೆಯನ್ನು ನಿರೂಪಿಸಿದ್ದಾರೆ ವೈನತೇಯರು.

    ತಾಂಜಾವೂರು ರಾಜರ ಆಸ್ಥಾನದಲ್ಲಿ ವೀಣಾವಾದನದಲ್ಲಿ ಅದ್ವಿತೀಯ ಪಾಂಡಿತ್ಯವುಳ್ಳ ಕಾಳಹಸ್ತಿಯೆಂಬ ವೀಣಾವಾದಕರಿದ್ದರು. ತಮ್ಮಂತಹ ಮತ್ತೊಬ್ಬ ವಿದ್ವಾಂಸರು ಇರಬಾರದೆಂದು  ತಮ್ಮ ಪಾಂಡಿತ್ಯವನ್ನು ಯಾರೊಂದಿಗೂ ಹಂಚದೇ ಕಾಪಾಡಿಕೊಂಡಿದ್ದರು. ಮೈಸೂರಿನ ಅರಸರ ಆಮಂತ್ರಣದ ಕಾರಣ ಅವರಿಗೆ ಕೆಲವು ದಿನದ ಮಟ್ಟಿಗೆ ತಮ್ಮೂರಿನಿಂದ ದೂರವುಳಿಯಬೇಕಾಯಿತು. ಅರಸರ ಪೂಜೆಯ ಹೊತ್ತಿಗೆ ಹೊಸ ವೈಣಿಕನ ವಾದನ ಆಲಿಸಿದ ಅರಸರಿಗೆ ಬಹಳ ಮೆಚ್ಚಿಗೆಯಾಯಿತು. ಆ ಹೊಸ ವೈಣಿಕ ಬೇರ್ಯಾರಾಗಿರದೇ ಕಾಳಹಸ್ತಿಯವರ ಮಗನೇ ಆಗಿದ್ದನು. ಮೈಸೂರಿನಿಂದ ಹಿಂದಿರುಗಿ ಬಂದ ಕಾಳಹಸ್ತಿಯವರಿಗೆ ಮಗ ತಮಗಿಂತ ಚೆನ್ನಾಗಿ ನುಡಿಸುವನೆಂಬ ವಿಷಯ ಹಿಡಿಸಲಿಲ್ಲ. ತಡೆಯಲಾಗದಷ್ಟು ಈರ್ಷೆ ಸ್ವಂತ ಮಗನ ಮೇಲೆ ಉಂಟಾಯಿತು. ತಾವೇನೂ ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ಮಗನನ್ನು ಅಭಿನಂದಿಸುವ ನೆವನದಲ್ಲಿ ಅವನ ನಡುಬೆರಳನ್ನೇ ಕಚ್ಚಿತುಂಡು ಮಾಡಿಬಿಟ್ಟರು! ಅಕಟಕಟಾ!

    ಏಕಲವ್ಯನು ದ್ರೋಣರ ಮಾತ್ಸರ್ಯದಿಂದ ಹೆಬ್ಬೆರಳನ್ನೇ ಕಳಕೊಂಡನು. ದುರ್ಯೋಧನನು ತನ್ನ ಮಾತ್ಸರ್ಯದಿಂದ ತನ್ನ ವಂಶವನ್ನೆ ನಾಶಮಾಡಿದನು.    ಅಯ್ಯೋ ಮಾತ್ಸರ್ಯವು ಏನೇನು ಮಾಡಬಲ್ಲದು. ಅರಿಷಡ್ವರ್ಗಗಳ ವಾಸವು ಈ ನರ ದೇಹದೊಳು...ದೇವನು ಇತ್ತ ಸಹಜ ಸ್ವಭಾವವದು. ಅದು ಬೇರೊಬ್ಬರಿಗೆ ಹಾನಿ ಮಾಡುವ ಮಟ್ಟಕ್ಕೆ ಎಂದೂ ಏರಲು ಬಿಡಕೂಡದು. ಈರ್ಷೆಯು ನಮ್ಮ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಬೇಕೇ ಹೊರತು  ಮತ್ತೊಬ್ಬರನ್ನು ಮಟ್ಟ ಹಾಕುವಂತೆ ಮಾಡಿಸಕೂಡದು.

   ಉಪಸಂಹಾರದಲ್ಲಿ ಚಿಕ್ಕ ಕತೆ:
        ಮಗ ಗಣಕಯಂತ್ರದಲ್ಲಿ ಏನೋ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಟ ಆಡುತ್ತಿದ್ದಾನೆ.....ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿದ್ದಾನೆ...ಮಧ್ಯಮಧ್ಯದಲ್ಲಿ ತನ್ನ ಗೆಲುವನ್ನು ಮನೆಯಲ್ಲಿ ಎಲ್ಲರಿಗೂ ಕೇಳುವ ಹಾಗೆ ಹೂ ಹಾ..ಶಬ್ದಗಳು! ಕೊನೆಗೂ ಆಟ ಮುಗಿದು ಅಗಲ ಮುಖಮಾಡಿಕೊಂಡು ಹೊರ ಬಂದವನನ್ನು ನೋಡಿ " ಇದೇನು ಮಹಾ...ನಾನು ಒಂದಷ್ಟು ಆ ಗೇಮ್ ಕಲಿತರೆ ನಿನ್ನನ್ನು ಸೋಲಿಸುತ್ತಿದ್ದೆ." ಮಗನ ಮುಖ ಚಿಕ್ಕದಾಯಿತು. .....ಮಾತೇ ಇಲ್ಲ. ಮರುದಿನ ತನ್ನ ತಾಯಿಯ ಹತ್ತಿರ ತನ್ನನ್ನು ಚುಚ್ಚುತ್ತಿದ್ದ ಆ ಮಾತನ್ನು ಹೇಳಿಕೊಂಡ ಮಗ ಅಂದ, " ಅಮ್ಮ, ಅಪ್ಪನಿಗೆ ನನ್ನ ಮೇಲೆ ಹೊಟ್ಟೆಕಿಚ್ಚು." ಕೇಳಿದ ಅಮ್ಮನಿಗೆ ಹುಚ್ಚುಹಿಡಿಯುವುದು ಮಾತ್ರ ಬಾಕಿ!

     ಮಗ ತನ್ನ ದೊಡ್ಡ್ಪಪ್ಪನ ಊರಿಗೆ ಹೋದವನು ಮರಳಿ ಬಂದಿದ್ದಾನೆ. ಮೊದಲಬಾರಿಗೆ ತನ್ನ ದೊಡ್ಡಪ್ಪ, ದೊಡ್ಡಮ್ಮ, ತನ್ನ ಅಣ್ಣ, ಅಕ್ಕಂದಿರನ್ನು ಭೇಟಿಯಾಗಿದ್ದಾನೆ. ( ಬುದ್ಧಿಬಂದ ನಂತರ) ಸಮಯವಲ್ಲಿ ಆನಂದದಿಂದ ಕಳೆಯಿತು ಎಂಬುದನ್ನು ಆತನ ಮುಖವು ಸಾರಿ ಸಾರಿ ಹೇಳುತಿತ್ತು. ಅಷ್ಟರಲ್ಲೇ ಅವನ ದೊಡ್ಡಮ್ಮನ ಫೋನು. ಅವನ ಅಮ್ಮನಿಗೆ ಅಭಿನಂದನೆಗಳ ಸುರಿಮಳೆ..... ಎಂತಹ ಸುಪುತ್ರನೇ ನಿನ್ನ  ಮಗ...... ಅಪ್ಪಟ ಚಿನ್ನ...... ನಡತೆಯಲ್ಲಿ ಮಾತ್ರವಲ್ಲ ಜ್ಞಾನದಲ್ಲೂ ಅವನಿಗೆ ಅವನೇ ಸರಿಸಾಟಿ.....      ಇದನ್ನು ಕೇಳಿದ ಪೋಷಕರಿಗೆ ಮಹಾನಂದವಾಗದಿರಲು ಸಾಧ್ಯವೇ. ಆದರೆ ಅವನ ತಂದೆ ಮಾತ್ರ ಕೊಕ್ಕೆ ಹಾಕಿಯೇ ಬಿಟ್ಟರು. ಅವರೆಲ್ಲ ಒಂದಿಷ್ಟು ಕೂಡಿಸಿ(ಉತ್ಪ್ರೇಕ್ಷಿಸಿ)  ಮಾತನಾಡುವವರು........ ಇವನದೇನು ಮಹಾ......!  ಕೋಚಿಂಗ್ ಕ್ಲಾಸ್ ಹೋಗದೇ, ತರಗತಿಯಲ್ಲೂ ಚೆನ್ನಾಗಿ ಕಲಿಸದೇ ಇದ್ದರೂ ತನ್ನದೇ ಬಲದಲ್ಲಿ ಸರಕಾರಿ ಸೀಟ್ ಪಡೆದು, ಇದೀಗ ತರಗತಿಯಲ್ಲಿ  ಗುರುಗಳಿಗೆ ಮಾತ್ರವಲ್ಲದೆ ತನ್ನ ಗೆಳೆಯ ಗೆಳತಿಯರಿಗೂ ನೆಚ್ಚಿನವನಾದ ಈ ಹುಡುಗ ತನ್ನ ಪೋಷಕರಿಂದ ಇಂತಹ ಮಾತನ್ನು ಕೇಳಿಸಿಕೊಂಡರೆ ಅವನ ಮನಸ್ಥಿತಿ ಏನಾಗಬಹದು!

ನನ್ನ ಗೆಳತಿಯ ಕತೆ ಕೇಳಿದ ದಿನವೇ ಕಾಕತಾಳಿಯವಾಗಿ ಈ ಲೇಖನವನ್ನು ಓದಿದೆ. ಮನಸ್ಸಿನ ಸಂಕಟ ತಡೆಯಲಾರದೆ ಹೀಗೆ ಹಂಚಿ  ಭಾರ ಇಳಿಸಿಕೊಂಡೆ!

2 comments:

Badarinath Palavalli said...

ದೇವರೇ... :(

Sheela Nayak said...

ಬದರಿ....ಓದಿ ಬೇಸರವಾಯ್ತಲ್ಲವ...ಏನು ಮಾಡೋದು, ಇದುವೇ ಜೀವನ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...