ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

01 February, 2014

ಒಲವಿನ ಓಲೆ..

 ಒಲವೇ,
ಅಂದೆಂದೋ ನೀ ಬರೆದು ಹೃದಯದ ಕವಾಟಿನ
ಮೂಲೆಯಲಿಟ್ಟ ಓಲೆಯು  ಸಿಕ್ಕಿದ ಕ್ಷಣವೇ
ನನ್ನಾತ್ಮವೂ ಗೂಡಿಗೆ ಮರಳಿತು!

ನಲ್ಬೆಳಗು!


ಕೇಜ್ರಿ, ಮೋದಿ, ಆರ್ ಜಿ, ಅ ಜಿ... ಡಬ್ಬಿಂಗ್, ಪ್ರೇಮ್, ಕಂಬಾರ... “
ಅರೇ ನಮ್ಮ ಮಾನ ಹರಾಜಾಗುತಿದೆ ಇಲ್ಲಿ, ಮುಗಿಲಲಿ..
ಜಳಕ ಗಿಳಕ ಮಾಡ್ಕೊಂಡು  ಅಲ್ಲಿ ಪಕ್ಕಿಗಳು ಕಾದಿದ್ರೆ..
ಕಮಲಾಕ್ಷಿಯು ಕಣ್ಮುಚ್ಚಿ ಇವಳನೇ ನೆನೆತಿದ್ರೆ..
ಇವಳು ಹೊರತು ಬೆಳಗು ಕಣ್ತೆರೆಯೊಲ್ಲ ಅಂತ ಕರೆತಿದ್ರೆ..
ಮೇಘನಾವೆಯಲಿ ಹುಟ್ಟುಹಾಕುತಾ ಕೈಲೊಂದು ಮಿಣುಕಾಡುತಿರುವ ಚುಕ್ಕಿಯ ಹಿಡಿದು ನಾನು ಹುಡುಕುತಿದ್ರೆ..
ಮುಗಿಲಸಾಗರದ ದ್ವೀಪದಲಿ ಬಾವಿಯ ಕಟ್ಟೆಯ ಮೇಲೆ ಕೆಂಗಣ್ಣು ಮೇಲೆ ಕೆಳಗೆ ತೇಲಿಸ್ತಾ..
ಎಲೆಯಡಿಕೆ ಮೆಲ್ಲುತ್ತಾ, ಕೆಂಪು ರಸ ಉಗುಳುತ್ತಾ..
ಬಾಯ್ಬಿಟ್ಟು ಇವಳನೇ ನೋಡಿ ಕುಂತ ಚುಕ್ಕಿಗಳ ಮೇಲೆ ಚಿಮ್ಮಿಸ್ತಾ..
ಸೀರೆ ಮೇಲಕ್ಕೆತ್ತಿ ಸೊಂಟಕೆ ಬಿಗಿದು ನುಣುಪಾದ ಕಪ್ಪು ಮೀನಖಂಡಗಳ ಮೇಲೆ ಭಾರ ಹಾಕ್ತಾ..
ನಸುಗುಲಾಲಿ ಕಾಲ್‍ಬೆರಳಿಗೆ ಕಡುಗೆಂಪು ಬಣ್ಣ ಹಾಕಿಕೊಳ್ತಾ..
ಸಮಯದ ಪರಿವಿಯಿಲ್ಲದೆ ನಶೆಯ ಮತ್ತು ಏರಿಸುತಿದ್ರೆ
ಧರ ಧರ ಎಳೆತಂದು ಕೊಡದಿಂದ ಉಗುರುಬೆಚ್ಚ ನೀರು ಸುರಿದ್ರೆ..
ನಮ್ಮ ಅಂಗಣದ ಕಾಲುವೆಯಲಿ ಕಪ್ಪು ಹೊಳೆ
ಜೇನು ಬಣ್ಣದ ಚೆಲುವೆಗೆ ಅಚ್ಚಹಾಲು ಬಣ್ಣದ ಮೈಸೂರು ಸಿಲ್ಕ್ ಸೀರೆ
ನಾಟ್ಯವಾಡುತಿರುವ ನವಿಲ ಹೊದ್ದ ಹೊನ್ನ ನೂಲಿನ ಕಸೂತಿಯ ಸೆರಗು ಬೀಸುತಿರೆ
ಕೆಂಪು ಕೊಕ್ಕು ಹಸುರು ಮೈಯ ಪಕ್ಕಿ ಅಂಚಿನಲಿ ಮಿಂಚಿರೆ
ತೆಳುನಡುವಿಗೆ  ಮುತ್ತಿನ ಝಾಲರಿಯ ವಯ್ಯಾರ
ನೀಳ ತೋಳಿಗೆ ನೀಲಿ ಕಲ್ಲಿನ ಹೊನ್ನ ನಾಗಬಂಧಿ
ಮಲ್ಲಿಗೆ ಮೊಗ್ಗಿನ ಹೊನ್ನ ಹಾರದ ಭಾರಕೆ ನವಿರು ಬಡಿತದೆಗೆ
ಘಳಿಗೆಗೊಮ್ಮೆ ಜೂಲಾಡುವ ಮುತ್ತಿನ ಝುಮುಕಿ ನಾಚಿಕೆಯಿಂದ ನಸುಗೆಂಪಾದ ಕಿವಿಗೆ
ದಾಳಿಂಬೆ ಎಸಳುಗಳ ತೋರಣ ತೋರಿಸಲೊಪ್ಪದೆ ನಸುಬಿರಿದ ಗುಲಾಲಿ ತುಟಿ
ಬಗ್ಗಿದ ಬಿಲ್ಲದಂತಿಹ ಹುಬ್ಬಿನ ಮಧ್ಯ ಬಿದಿಗೆ ಚಂದ್ರಾಕಾರದ  ಕೆಂಪು ಬೊಟ್ಟು
ಭಾರವಾದ ಕಡುಗಪ್ಪು ರೆಪ್ಪೆ ಹೊದಿಸಿದ ಕಾಡಿಗೆ ಬಳಿದ ಮೋಹಕ ಕಣ್ಣು
ಸುಗಂಧರಾಜ ಮಾಲೆಯ ಸುತ್ತಿದ ಬಳುಕುವ ವೇಣಿ
ಗಂಡುಬೀರಿಯಂತೆ ಕೆಂಪುಸರ  ಚಿಮ್ಮಿಸುತ್ತಾ  ಬಾವಿಕಟ್ಟೆಯಲಿ ಕೂತವಳು ಇವಳೇನು..
ರಾಟೆಗೆ ಬಿಗಿದ ಹಗ್ಗದಷ್ಟು ದಪ್ಪದ ಬೆಳ್ಳಿ ಗೆಜ್ಜೆಯ ಪಾದ ಮೆಲ್ಲನೂರುತ್ತ
ಲೋಕದೊಡೆಯನ ರಥವೇರಿದಳು;
ಕಣ್ಣು ಕಣ್ಣುಗಳ ಮಿಲನ..
ಬೆಳ್ಳನೆ ಬೆಳಗಾಯ್ತು..
ಬಿಟ್ಟಕಣ್ಣಿಂದ ನೋಡುತ್ತಿದ್ದ ಚುಕ್ಕಿ ಚಂದ್ರಮರೆಲ್ಲಾ ಮಂಕಾಗಿ ಮುಖಮರೆಸಿಕೊಂಡರು

ನಲ್ಬೆಳಗಿನ ಬೆಳಕಲಿ ಲೋಕವೆಲ್ಲಾ ಮಿಂದು ಪಾವನವಾಯಿತು!

30 January, 2014

ಗುಟ್ಟು ರಟ್ಟು..

ಒಲವೇ,
ಅಂಗಣದಲಿ ಅದೆಷ್ಟು ಹೆಜ್ಜೆ ಗುರುತು
ತುಲಸಿ ಕಟ್ಟೆಯಲಿ ಬಿದಿರು ಕೊಳಲು
ಮುಂಜಾವು ಕೈಯಲಿ ನನ್ನ ಗೆಜ್ಜೆ
ಎಲ್ಲಾ ಹೆಜ್ಜೆಗಳ ಗುಟ್ಟು ರಟ್ಟು!

ದಾಸರೆಂದರೆ ಪುರಂದರದಾಸರು..

 ಜಿಪುಣಾಗ್ರೇಸರ ಶ್ರೀನಿವಾಸ ನಾಯಕನಿಗೆ ಬದಲಾಗಲು  ಸತಿಶಿರೋಮಣಿ ಸರಸ್ವತಿಯ ಮೂಗುತಿಯ ನೆವನ ಸಾಕಾಯ್ತು..
“ನವಕೋಟಿನಾರಾಯಣ”  ಬಿರುದನ್ನು ತ್ಯಾಗ ಮಾಡಿ ಪುರಂದರದಾಸರಾಗಿ ಬದಲಾದರು. ಅವರು  ಕೇವಲ ಭಕ್ತಿ ಸಾಹಿತ್ಯ ಮಾತ್ರವಲ್ಲದೆ ಕನಾರ್ಟಕ ಸಂಗೀತದ ಪಿತಾಮಹರಾಗಿಯೂ ಮರೆಯಲಾರದ ಕೊಡುಗೆ ಇತ್ತು ನಮ್ಮೆಲ್ಲರ ಮನೆ ಮನದಲ್ಲಿ ಅಜರಾಮರಾಗಿ ಉಳಿದಿದ್ದಾರೆ!
   ಅಂತಹ ಸಂಗೀತ ಜ್ಞಾನವಿಲ್ಲದ ನನ್ನಂತಹ ಪಾಮರರಿಗೂ ಸುಲಭದಲಿ ಹರಿಕೀರ್ತನೆಯ ಲಾಭ ದೊರಕಿಸಿಕೊಟ್ಟ ಪುರಂದರದಾಸರ ಆರಾಧನೆಯ ಸುಸಂದರ್ಭದಲ್ಲಿ..
ತಾಳನು ಹರಿ ಕೇಳನೂ |
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ |
ತಾಳನು ಹರಿ ಕೇಳನೂ ||

ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು |
ಕೊಂಬು ಕೊಳಲು ಶಂಖ ವಾದ್ಯವಿದ್ದು |
ತುಂಬೂರ  ನಾರದರ ಗಾನ ಕೇಳುವ ಹರಿ |
ನಂಬಲಾರ ಈ ಡಂಭನ ಕೂಗಾಟ ||

ನಾನಾ ವಿಧದ ರಾಗ ಭಾವ ತಿಳಿದ ಸ್ವರ |
ಜ್ಞಾನ ಮನೋಧರ್ಮ ಜಾತಿಯಿದ್ದು |
ದಾನವಾರಿಯ ದಿವ್ಯ ನಾಮರಹಿತವಾದ |
ಹೀನನಾ ಸಂಗೀತ ಸಾಹಿತ್ಯಕೆ ಮನವಿತ್ತು ||

ಅಡಿಗಡಿಗಾನಂದ ಭಾಷ್ಪ ಪುಳಕವಾಗಿ |
ನುಡಿ ನುಡಿಗೆ ಶ್ರೀಹರಿ ಎನುತ |
ಧೃಡ ಭಕುತರನು ಕೂಡಿ ಹರಿ ಕೀರ್ತನೆ ಪಾಡಿ |
ಕಡೆಗೆ ಶ್ರೀಪುರಂದರ ವಿಠಲನೆಂದರೆ ಕೇಳ್ವ ||


29 January, 2014

ಒಲವೇ..

ಒಲವೇ,

ಒಲುಮೆ ತೋರಲು ನಾ ಕಲಿತೆ

ಕಲಿಸಿದ್ದು ನೀನೇ ಹಚ್ಚಿದ ಹಣತೆ

ಒಲವೇ..

ಒಲವೇ,

ನಾ ಒಲವಿನ ಕಾವ್ಯ ಬರೆದದ್ದು


ನಿನ್ನ ಕಣ್ಣಲಿದ್ದ ಭಾವವನು ಕದ್ದು

27 January, 2014

ನಲ್ಲಿರುಳಿನ ಮೌನ ಗಾನ..

ನಲ್ಲಿರುಳಿನ ಮೌನ ಗಾನ..
--------------------------

ದೂರದಲ್ಲಿ ಒಂಟಿ ಶ್ವಾನದ ಗೋಳು..
ಸಂಗಾತಿಯ ಅಗಲಿಕೆಯ ನೋವು

ನಭದಲಿ ಚುಕ್ಕಿಗಳೂ ಮಂಕು..
ಶಶಿಯನಾವರಿಸಿದೆ ಪರದೆ ಕರಿಕಪ್ಪು

ಅಂಗಣದಲಿನ್ನೂ ಉರಿಯುತಿದೆ  ದೀಪ..
ಮನೆಯೊಡೆಯನಿನ್ನೂ ಮರಳಿಲ್ಲದ ಸಂಕೇತ

ಕಿಟಿಕಿಗೊರಗಿದ  ಹಸಿರು ಕಂಕಣಗಳಿಗಿಲ್ಲ
ಮೆಚ್ಚಿಸುವ ಕಿಂಕಿಣಿ  ಭಾಗ್ಯವಿಲ್ಲ

ನಿಟ್ಟುಸಿರಿಗೆ ಕರಗುತಿದೆ ಮಂಜು..
ಅಳಲು ಹರಿದು ಒದ್ದೆಗಣ್ಣು

ನಲ್ಲಿರುಳಿಗೂ ಅವನದೇ ಧ್ಯಾನ
ಹಾಡುತಿದೆ ಮೌನ ಗಾನ!

ಭಾಸ್ಕರನ ವಿನ್ಯಾಸ!
----------------

ನೀಲರಂಗಿನ ಸೀರೆ
ಕೇಸರಿ, ಕೆಂಪು
ಚಿತ್ತಾರದ ಹೊನ್ನಂಚು
ಭಾಸ್ಕರನ ವಿನ್ಯಾಸ
ಮತ್ತೆ ಕೇಳಬೇಕೆ
ಮುಂಜಾವಿನ ಲಾಸ್ಯ!

26 January, 2014

ಹೆಣ್ಣು ಜನುಮ ಬಯಸಿದ ಮುಂಜಾವು!


1.       ಹೆಣ್ಣು ಜನುಮ ಬಯಸಿದ ಮುಂಜಾವು!
----------------------------------

ತಲೆಗೆ ಕಟ್ಟಿದ ಅರಿವೆಯೆಡೆಯಿಂದ ಹೊರಗಿಣುಕುತ ಕಣ್ಣ ಕೆಣಕುವ ಮುಂಗುರುಳು..
ಕಣ್ಣ ಜತೆ ಸರಸವಾಡುವ ಮುಂಗುರುಳ ಅತ್ತ ಅಟ್ಟುವ ಮುಂಗೈಯ ಘಲ್ ಘಲ್ ನಾದದ ಮಾರ್ದನಿ..
ಕಣ್ಣು ಕತ್ತಿನ ಯುಗಳ ನಾಟ್ಯಕೆ ಮುತ್ತಿನ ಝುಮುಕಿಯ, ಕಪ್ಪು ಮಣಿಯ ಹಾರದ ತಾಳ..
ಮಿಡಿಮಾವಿನ ಕಾಯಿಯೆಡೆಯಿಂದ ಹೊರಡುವ ಪಂಚಮ ರಾಗದ ಕೋಗಿಲೆಯ ಕುಹೂ ಕುಹೂ..
ಬಿಸಿ ನೀರಿನ ಜಳಕಕೆ  ಬೆವರ ಮುತ್ತುಗಳು ಬೆನ್ನ ಮೇಲೆ ಕಚಕುಳಿಯಿಡುತ   ಎಳೆಕಿರಣಗಳೊಡನೆ ಆಡುತಿವೆ ಕಣ್ಮುಚ್ಚಾಲೆ..
ಸೊಂಟಕೆ ಬಿಗಿದ ಸೆರಗು ಜಾರಿ ನೆಲ ಮುತ್ತಿಕ್ಕಲು ಇಂಚಿಚಾಗಿ ಜಾರುತಿದೆ, ಮರುತನ ಸಂಚೇನೋ..
“ಕೌಸಲ್ಯಾ ಸುಪ್ರಜಾ ರಾಮಾ.. “ ಇದ್ಯಾವುದರ ಪರಿವಿಯಿಲ್ಲದ  ಮಗ್ನಳಾಗಿ  ಚುಕ್ಕಿ ಇಡುವ ನೀರೆ

ಈ ಪರಿಗೆ ಸೋತ ಮುಂಜಾವು ಹೆಣ್ಣು ಜನುಮ ಬಯಸಿದುದರಲಿ ತಪ್ಪೇನೂ ಇಲ್ಲವೆನುವೆ!

25 January, 2014

8. ಯಾರ ಕಣ್ಣಲಿ ಯಾರ ಬಿಂಬ..



ಬಲವಾಗಿ ಅಪ್ಪಿ ಹಿಡಿದ ನೈದಿಲೆಯ ರೆಪ್ಪೆಗಳ ಪುಸಲಾಯಿಸಿ ಮೆಲ್ಲನೆ ತೆರೆದು
ಅಲ್ಲಿ ಮಿಂಚುವ ತನ್ನ ಬಿಂಬ ಕಂಡು ಮೆರೆವ ಆಸೆ ಪೂರ್ಣ ಚಂದಿರನಿಗೆ;

ಕಡುನೀಲಿ ಸೀರೆಗೆ ಅಲ್ಲಲ್ಲಿ ಹೊಳೆವ ಬೆಳ್ಳಿ ಟಿಕಲಿಗಳನಂಟಿಸಿ
’ಘಲ್ ಘಲ್’ ನಾದದೊಂದಿಗೆ ವಯ್ಯಾರದಿ ಬರುವ ನಲ್ಲಿರುಳಿಗೆ
ಪೂರ್ಣ ಚಂದಿರನ ಕಣ್ಣಲ್ಲಿ ತನ್ನ ಕಪ್ಪುಬಿಂಬ ಕಾಣುವಾಸೆ;

ಕಣ್ಮುಚ್ಚಿ ಕಲ್‍ಬೆಂಚಮೇಲೆ ಕಲ್ಪನೆಯ ಲೋಕದಲಿ ಕಳೆದುಹೋದವಳು
ನಲ್ಲಿರುಳು-ಚಂದಿರನ ಒಲವಿನ ಕಣ್ಣಾಟವನು ಕಂಡು ಮುಗುಳುನಗುತ್ತಾ
ಕಣ್ದೆರೆದಾಗ ಲೋಕ ಕಂಡಿತು ಅವಳೊಲವಿನ ಬಿಂಬ ಅವಳ ಕಣ್ಣಲಿ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...