ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 July, 2012

ಕತ್ರಿನ್ ಬೈಂಡರ್ ......


           


           ನಿನ್ನೆ ಮತ್ತಿನ್ನೊಮ್ಮೆ ಕತ್ರಿನ್ ಬೈಂಡರ್ ನನ್ನನ್ನು ಕಾಡಿದಳು(ರು). ಸರಿಯಾಗಿ ನೆನಪಾಗುವುದಿಲ್ಲ ಯಾವಾಗ ಕತ್ರಿನ್( ಕಟ್ರಿನ್) ಅವರ‍ ಯಕ್ಷಗಾನದ ಲೇಖನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಓದಿದ್ದು ಅಂತ..ಆ ಪ್ರತಿ ನನ್ನಲ್ಲಿ ಇದೆಯಾ ಇಲ್ಲವೋ ಗೊತ್ತಿಲ್ಲ..ನನ್ನ ಹತ್ತು ಹಲವು ವಿಷಯಗಳ ಸಂಗ್ರಹಗಳ ಮಧ್ಯೆ ಎಲ್ಲಿ ಇಟ್ಟಿದ್ದೇನಂತ ಹುಡುಕಲು ಹೋದರೆ ನಾನೇ ಕಳೆದು ಹೋಗುವೆನೋ ಅಂತ ಹೆದರಿಕೆಯಾಗುತ್ತೆ.  ಹೋಗಲಿ, ಅದನ್ನು ನಿಧಾನವಾಗಿ ಹುಡುಕಿ ಇಲ್ಲಿ ಹಾಕುತ್ತೇನೆ.  




                                              { ಛಾಯಾ ಚಿತ್ರ- ಅಂತರ್ಜಾಲ ಮೂಲಕ ಪಡೆದದ್ದು}


            ಎಂದಿನಂತೆ ಫೇಸ್ ಬುಕ್‍ನಲ್ಲಿ ಸ್ಟೇಟಸ್ ಓದುತ್ತಿರುವಾಗ ಕೆಂಡ ಸಂಪಿಗೆಯ ಅಬ್ದುಲ್ ರಶೀದ್ ಅವರು ಕತ್ರಿನ್ ಅವರ ಬ್ಲಾಗ್ ಲಿಂಕ್ ಹಾಕಿದ್ದರು..ಧಾವಿಸಿದೆ ಬ್ಲಾಗ್ ಕಡೆ..ಚೆಂದದ ಕನ್ನಡ ಕವನ..ಓದಿ ಹಿಂದೆ ಬಂದು ಲೈಕ್ ಒತ್ತಿ, ರಶೀದ್ ಅವರಿಗೆ ಕತ್ರಿನ್ ಅವರನ್ನು ಅಭಿನಂದಿಸುವಂತೆ ಕಮೆಂಟ್ ಹಾಕಿ ಮತ್ತೆ ನನ್ನ ಕೆಲಸಕ್ಕೆ ಹಿಂದಿರುಗಿದೆ...ಸಂಜೆ ನೋಡುವಾಗ ಕತ್ರಿನ್ ಅವರ ಕಮೆಂಟ್ ಅದರಲ್ಲಿ ಇತ್ತು. ಬಹಳ ಹಿಂದೆ ಅವರೆಡೆ ಸ್ನೇಹ ಹಸ್ತ ಚಾಚಿದ್ದೆ..ಆದರೆ ಅವರಿಂದ ಏನೂ ಪ್ರತಿಕ್ರಿಯೆಯಿರಲಿಲ್ಲ..ನಾನೂ ಮರೆತುಬಿಟ್ಟಿದ್ದೆ. ನಿನ್ನೆ ಅವರನ್ನು ಇಲ್ಲಿ ನೋಡಿದಾಗ ಮತ್ತೊಮ್ಮೆ ಆ ವಿಷಯ ನೆನಪಾಗಿ ಅಲ್ಲೇ ಅವರಿಗೆ ವಿಷಯ ಹೇಳಿದೆ...ಕೂಡಲೇ ಅವರು ನನ್ನನ್ನು ತಮ್ಮ ಸ್ನೇಹಿತೆಯಾಗಿ ಕೂಡಿಸಿಕೊಂಡರು.... ಅದು ಸರಿ,  ಆದರೆ ವಿಷಯ ಅಲ್ಲಿಗೆ ಮುಗಿಯಲಿಲ್ಲ.. ನಾನು ಬೆಳಿಗ್ಗೆನೇ ಅವರ ಬ್ಲಾಗನ್ನು ನನ್ನ ಗೋಡೆಯಲ್ಲಿ ಹಂಚಲು ಬಯಸಿದ್ದೆ..ಆದರೆ ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆ ಎದ್ದಿದ್ದವು..ಅವುಗಳಿಗೆ ಪರಿಹಾರ ಹುಡುಕದೇ ನಾನು ಹಾಗೆ ಮಾಡುವಂತಿರಲಿಲ್ಲ..ಇದೇ ಪ್ರಶ್ನೆ ಬಹಳ ಹಿಂದೆ ಅವರ ಲೇಖನ ಓದಿಯಾದ ನಂತರ ಅವರ ಮೇಲೆ ನನಗೆ ಹುಟ್ಟಿದ ಅಭಿಮಾನದ ಮೇಲೂ ಕಾಡಿತ್ತು...ಆದರೆ ಈಗ ನನಗೆ ಅದರ ಉತ್ತರ ದೊರೆತಿದೆ..ಆಗ ಅಸ್ಪಷ್ಟವಾಗಿದ್ದ ಉತ್ತರ ಈಗ ಸ್ಪಷ್ಟವಾಗಿದೆ.. ಹಾಗಾಗಿ ಸಂಜೆ ಅವರ ಬ್ಲಾಗನ್ನು ನಾನು ಹಂಚಿಕೊಂಡೆ..ಮರುದಿನ ನನ್ನ ಆತ್ಮೀಯ ಮಿತ್ರರೊಬ್ಬರು ನನಗೆ ನನ್ನನ್ನು ಕಾಡಿದ ಪ್ರಶ್ನೆಯನ್ನೇ ಎಸೆದರು...ಅವರಿಗೇನೋ ಉತ್ತರ ಕೊಟ್ಟೆ...ಆದರೆ ನನ್ನ ಮನದಲ್ಲಿದ್ದುದ್ದನ್ನು ಅವರಿಗೆ ಹೇಳಲು ನನ್ನ ಮಾತುಗಳು  ಶಕ್ತವಾಗಿದ್ದವೋ ಇಲ್ಲವೋ ಎಂದು ತಿಳಿಯಲಿಲ್ಲ..  ಮನದಪುಟಗಳಲ್ಲಿ ಮೂಡಿದುದನ್ನು ಬರೆಯದೇ ಹೋದರೆ ಅವು ನನ್ನನ್ನು ಕಾಡುತ್ತವೆ.....ಒಮ್ಮೆ ಅದನ್ನು ಕಕ್ಕಿ ಬಿಟ್ಟರೆ ಒಂದು ಸಲ ಆರಾಮವಾಗುತ್ತೆ.

         ನಾವು ಮೊದಲಿಂದಲೂ ವಿದೇಶಿ ವ್ಯಾಮೋಹಿಗಳು..ನಮ್ಮ ಚರಿತ್ರೆ ಅದನ್ನೇ ಸಾರಿ ಸಾರಿ ಹೇಳುತ್ತದೆ..ನಮ್ಮ ಸನಾತನ ಸಂಸ್ಕೃತಿಯ ಮೇಲೆ ನಮಗೆ ಒಲವು ಅಷ್ಟಕಷ್ಟೇ...ಆದರೆ ವಿದೇಶಿಗಳಿಗೆ ನಮ್ಮ ಯೋಗ, ಧ್ಯಾನ, ಆಶ್ರಮಗಳಲ್ಲಿ ಏನೋ ಆಕರ್ಷಣೆ....ಅಂತೆಯೇ ನಾವು ನಮ್ಮ ಸ್ವಾಮಿಗಳ ಹಿಂದೆ ವಿದೇಶಿ ಅನುನಾಯಿಗಳ ದಂಡನ್ನೇ ಕಾಣುತ್ತೇವೆ.. ಸ್ವಾಮಿಗಳು ಏರ್ಪಡಿಸುವ ಸಮಾರಂಭಗಳಲ್ಲಿ ವಿದೇಶಿಗಳು ಪ್ರಮುಖ ಆಕರ್ಷಣೆ..ಈ ಹಿಪ್ಪಿಗಳ ಅಂಕೆ, ಸಂಖ್ಯೆ ಸ್ವಾಮಿಗಳ ಜನಪ್ರಿಯತೆಗೆ ಆಧಾರ! ಪ್ರಚಾರವೂ ಹೆಚ್ಚುತ್ತದೆ....ಇದೆಲ್ಲಾ ಗೊತ್ತಿದ್ದು ಒಬ್ಬ ವಿದೇಶಿ ಮಹಿಳೆಯ ಮೇಲೆ ನಾನು ಅಭಿಮಾನ ಪಡುವುದು ಅಸಹಜವೆಂದೆನಿಸಿತ್ತು.. ಆದರೆ ಆಕೆ ನಮ್ಮಲ್ಲಿ ಬಂದು ನಮ್ಮ ಗಂಡು ಕಲೆಯೆಂದೇ ಪ್ರಖ್ಯಾತವಾಗಿದ್ದ ಯಕ್ಷಗಾನವನ್ನು ಕನ್ನಡದಲ್ಲೇ ಕಲಿತು ಅದರ ಮೇಲೆ ತಮ್ಮ ಥೀಸಿಸ್ ಬರೆದರೆ ಅದು ಅಭಿಮಾನ ಪಡುವಂತಹ ವಿಷಯ ಸಹ ಹೌದು...ಹಾಗೆಯೇ ನಮ್ಮವರು ವಿದೇಶಕ್ಕೆ ಹೋಗಿ ಅಲ್ಲಿನ ಕಲೆಯನ್ನು ಕಲಿತರೆ ನಾವು ಅಷ್ಟೇ ಅಭಿಮಾನ ತೋರುತ್ತೇವೆಯೋ? ಇದು ನನ್ನ ಸ್ನೇಹಿತರ ಸಂದೇಹ..ನಾನು ಪಡುತ್ತೇನೆ...ಖಂಡಿತ ಪಡುತ್ತೇನೆ.  ಕಲಾಕಾರ ಎಲ್ಲಾ ರೀತಿಯ ಕಲೆಗೂ ಪ್ರಾಮುಖ್ಯತೆ ಕೊಡುತ್ತಾನೆ..ಅದಕ್ಕೆ ದೇಶ, ಭಾಷೆ, ಸಂಸ್ಕೃತಿಯ ಗಡಿಯಿರುವುದಿಲ್ಲ. ...ವಿಶ್ವವನ್ನೆಲ್ಲಾ ತನ್ನಲ್ಲಿ ಅಡಗಿಸಿಕೊಂಡಿದೆ.  ಎರಡನೆಯ ಪ್ರಶ್ನೆ...ಆಕೆ ತನ್ನ ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಕೊಟ್ಟಿದ್ದಾಳೆ...ನಾವು ನಮ್ಮವರು ಹಾಗೆ ವಿದೇಶಿ ಹೆಸರನ್ನು ತಮ್ಮ ಮಕ್ಕಳಿಗೆ ನೀಡಿದರೆ ಅದನ್ನೆ ಖಂಡಿಸುತ್ತೇವೆ ತಾನೆ?  ಈ ಸಂದೇಹಕ್ಕೆ ಅನೇಕ ಉತ್ತರಗಳಿವೆ. ಆಕೆ ಇಲ್ಲಿ ೨೦೦೦ಕ್ಕೆ ಬಂದವಳು..ತನ್ನ ಕಲಿಕೆಯನ್ನು ಮುಗಿಸಿ ಈಗ ಇಂಗ್ಲೆಂಡಿನ ವಿಶ್ವವಿದ್ಯಾಲವೊಂದರಲ್ಲಿ ಕನ್ನಡ ಕಲಿಸುತ್ತಿದ್ದಾರೆಂದು ಓದಿದ ನೆನಪು...

        ಯಕ್ಷಗಾನ ಕಲಿಯಬೇಕಾದರೆ ಅದರ ಮೂಲ ಭಾಷೆಯಾದ ಕನ್ನಡ ಕಲಿತರೆ ಮಾತ್ರ ಸಾಧ್ಯವೆಂದರಿತು ನಮ್ಮ ಭಾಷೆಯನ್ನು ಕಲಿತರು...ಇಲ್ಲಿಯವರೇ ನಮ್ಮ ಮಣ್ಣಿನ ಪರಿಮಳ ಸೂಸುವಂತಹ ಯಕ್ಷಗಾನವನ್ನು ಮೂಲೆಗೊತ್ತಿರಬೇಕಾದರೆ ಬರೇ ಪುರುಷರೇ ಅಭ್ಯಸಿಸುವ, ಸ್ವಲ್ಪ ಕಷ್ಟವಾದ ಅಂಗಾಗ ಚಲನೆಯುಳ್ಳ ಶೈಲಿಯನ್ನು ಕಲಿತು ಪ್ರದರ್ಶಿಸಿ ಪಂಡಿತರ ಮೆಚ್ಚುಗೆ ಗಳಿಸುವುದು ಕಷ್ಟ ಸಾಧ್ಯವೇ ಸರಿ. ಇಲ್ಲಿನ ಮಣ್ಣಿನ ನೆನಪು ದೂರಮಾಡಲು ಸಾಧ್ಯವಾಗದೇ ತನ್ನ ಮಕ್ಕಳಿಗೂ ಭಾರತೀಯ ಹೆಸರನ್ನು ಇತ್ತು ತನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿ ಪಡಿಸಿಕೊಂಡದ್ದು ಮೆಚ್ಚುವಂತಹುದು.
      
          ನಮ್ಮಲ್ಲಿಯೂ ಅನೇಕರು ವಿದೇಶಗಳಿಗೆ ಹೋಗಿ, ಅಲ್ಲಿಯ ವಾದ್ಯ ಅಥವಾ ನೃತ್ಯ ಕಲೆಯಲ್ಲಿ ಪರಿಣತಿ ಗಳಿಸಿ ವಿಖ್ಯಾತರಾಗಿದ್ದಾರೆ...ಮತ್ತು ಅಂತವರನ್ನು ಮಾಧ್ಯಮಗಳು ಗುರುತಿಸಿ ಪ್ರಚಾರಕೊಡುತ್ತಿವೆ..ನಮ್ಮಂತವರು ಅದನ್ನು ನೋಡಿ ಮೆಚ್ಚುಗೆ ಕೊಡುತ್ತಿರುತ್ತೇವೆಯಷ್ಟೇ! ಹಾಂ, ನಾವು ನಮ್ಮ ಮಕ್ಕಳಿಗೆ ವಿದೇಶಿ ಹೆಸರು ಕೊಡುವುದನ್ನು ಮಾತ್ರ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ...ನಮ್ಮ ಭಾರತೀಯ ಹೆಸರುಗಳೇ ವಿಶಿಷ್ಟವಾದದ್ದು..ಪ್ರತಿಯೊಂದು ಹೆಸರಿನ ಹಿಂದೆ ಸುಂದರ ಅರ್ಥವೆದ್ದು ಕಾಣುತ್ತದೆ.  ಬಹುಶಃ ವಿದೇಶಿ ಹೆಸರುಗಳಿಗೂ ಅದರದೇ ಅರ್ಥವಿದ್ದರೂ ಭಾರತೀಯ ಹೆಸರುಗಳಷ್ಟು ಸುಂದರವೂ ಅಲ್ಲ..ವಿಶಿಷ್ಟವೂ ಅಲ್ಲವೆಂದು ನನಗೆ ತೋರುತ್ತದೆ...ಅಷ್ಟಿದ್ದರೂ ೨೨ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವ ನನ್ನ ತಮ್ಮ ತನ್ನ ಮಕ್ಕಳಿಗೆ ಅಲ್ಲಿಯ ಹೆಸರುಗಳನ್ನಿತ್ತಾಗ ನಮಗೆ ಬೇಸರವಾದದ್ದೂ ಸುಳಲ್ಲ...ಆದರೆ ಅವನಿಗೆ ತನ್ನದೇ ಆದ ಕಾರಣಗಳಿದ್ದವು...ಅದನ್ನು ಆತ ನನ್ನ ಬಳಿ ವಿವರಿಸಿದಾಗ ನನ್ನ ಬಾಯಿ ಕಟ್ಟಿತ್ತು...
ಮನುಷ್ಯನು ಸುಲಭವಾಗಿ ಮತ್ತೊಬ್ಬನನ್ನು ದೂರುತ್ತಾನೆ.....ಬೇರೊಬ್ಬರ ತಪ್ಪುಗಳನ್ನು ಎತ್ತಿ ಹಿಡಿಯುವಷ್ಟು ಸುಲಭ ಮತ್ತು ಪ್ರಿಯವಾದ ಕಾರ್ಯ ಮತ್ತೊಂದಿಲ್ಲ ನಮಗೆ...ಅದೇ ನಮ್ಮ ತಪ್ಪನ್ನು ತೋರಿಸಿದರೆ ನಮಗೆ ಕೆಂಡದಂತಹ ಕೋಪ...ಗೊತ್ತಾ..ನಿಮಗೆ ಹಾಗೆ ಮಾಡ್ಲಿಕ್ಕೆ ಹೀಗ್ ಹಾಗೆ ಕಾರಣಗಳಿವೆ..ಹೋಗ್ರಿ  ಹೋಗ್ರಿ...ವಿಷಯ ಗೊತ್ತಿಲ್ಲದೆ ನಂಗೆ ಬುದ್ಧಿ ಹೇಳ್ಲಿಕ್ಕೆ ಬರಬೇಡಿ..ಹುಂ ..ಇದು ನಮ್ಮ ಸಾಮಾನ್ಯ ಮನೋಧರ್ಮ...
  
          ಯಕ್ಷಗಾನವನ್ನು ನಾನು ಕಡೆಯ ಬಾರಿಗೆ ನೋಡಿದ್ದು ನನ್ನ ೧೩ನೇ ವಯಸ್ಸಿನಲ್ಲಿ...ನಂತರ ಬರೇ ಯು-ಟ್ಯೂಬ್ ನಲ್ಲೋ..ಅಥವಾ  ವಿಮರ್ಶೆಗಳನ್ನು, ಲೇಖನಗಳನ್ನು ನೋಡಿ ಸಮಾಧಾನ ಮಾಡಿಕೊಂಡಿದ್ದೇನಷ್ಟೇ...ನನಗೆ ಅಷ್ಟು ಆಸಕ್ತಿಯಿದ್ದರೂ ನನ್ನ ಮಕ್ಕಳಿಗಾಗಲಿ, ನನ್ನಲ್ಲಿ ಬರುವ ಮನೆಪಾಠದ ಮಕ್ಕಳಿಗಾಗಲಿ ಅದರಲ್ಲಿ ಆಸಕ್ತಿ ಹುಟ್ಟಿಸಲು ಯತ್ನಿಸಿ ವಿಫಲಳಾಗಿದ್ದೇನೆ...ಯಕ್ಷಗಾನವೂ ಮೊದಲಿನ ಸೊಗಡನ್ನು ಕಳೆದುಕೊಂಡಿದೆ..ಹೊಸ ಪ್ರಯೋಗ ಫ್ಯೂಜನ್..ಮೊದಲಾದ ವಿವಾದಗಳಲ್ಲಿ ಸಿಕ್ಕಿಕೊಂಡಿದೆ..ಏನಿದ್ದರೂ ಮತ್ತೆ ಹಳೆದಿನಗಳ ಸೊಗಸನ್ನು ತೋರಿಸುವುದರಲ್ಲಿ ಸೋತಿದೆ. ಇಂತಿರುವಾಗ ಆ ಜರ್ಮನ್ ಮಹಿಳೆ ನಮ್ಮ ಕಲೆಯಲ್ಲಿ ಆಸಕ್ತಿ ತೋರಿಸಿದು ಮಾತ್ರವಲ್ಲದೇ ನಮ್ಮ ಭಾಷೆ ಕಲಿತು, ಅದನ್ನೇ ಕಲಿಸುವ ಕಾಯಕ ಮಾಡಿದರೆ ಆಕೆ ಮೇಲೆ ಹೆಮ್ಮೆ ಮೂಡುವುದು ಸಹಜ ತಾನೆ!


ಕೆಂಡ ಸಂಪಿಗೆಯಲ್ಲಿ ಕತ್ರಿನ್!
 -http://kendasampige.com/article.php?id=2281



4 comments:

Anonymous said...

ಜರ್ಮನಿಗೂ ಕನ್ನಡಕ್ಕೂ ಏನೋ ಅವಿನಾಭಾವ ಸಂಬಂಧ ಇರ್ಬೇಕು ಅನ್ಸುತ್ತೆ
ಮೊದಲು ferdinand kittel ಕನ್ನಡ dictionary ಬರೆದರು (ಮಂಗಳೂರಿನಲ್ಲೂ ಇದ್ದರೂಂತ ಹೇಳುತ್ತೆ information )
ಈಗ ಕತ್ರಿನ್ ಬೈಂಡರ್...
ಅದರಲ್ಲೂ ನೀವು, ಒಂಚೂರು ego ಇಲ್ಲದೆ ಇದನ್ನೆಲ್ಲಾ ಹಂಚಿಕೊಳ್ತೀರಲ್ಲ...!!! great

Sheela Nayak said...

ಕಿರಣ್, ಇಗೋ...ಯಾಕಪ್ಪಾ...ಅರ್ಥವಾಗಿಲ್ಲ...ನಮ್ಮ ಮಣ್ಣಿನ ಕಲೆಯ ಬಗ್ಗೆ ಇದೇ ರೀತಿಯ ಆಸಕ್ತಿ ಯಾರು ತೋರಿದ್ದರೂ ನಾನು ಹಾಗೆ ಬರೀತಿದ್ದೆ...ಆಕೆ ವಿದೇಶಿಯಳು ಅಂತ ಮಾತ್ರ ಮೆಚ್ಚಿ ಬರೆದಿಲ್ಲ....ನಮ್ಮ ಲ್ಲಿ ಅನೇಕರಿಗೆ ಇಂತಹ ಕಲೆಯನ್ನು ಕಲಿಯುವ, ಅದನ್ನು ಅಭಿವೃದ್ಧಿ ಪಡಿಸುವ ಅವಕಾಶವಿದ್ದೂ ಮಾಡದೇ ಇರುತ್ತಾರಲ್ಲ..ಬೇಸರವಾಗುತ್ತೆ.. ...ಯಾವುದೇ ರೀತಿಯ ಕಲೆ ನನ್ನನ್ನು ಸೆಳೆಯುತ್ತದೆ..ಹಿಡಿದಿಡುತ್ತದೆ....ಅದರಲ್ಲಿ ಪರಿಣಿತರಾದವರೂ ನನಗೆ ಪ್ರಿಯರಾಗುತ್ತಾರೆ. Thats it.:-)

Suresh said...

ನಾವು ನಮ್ಮ ಸ್ವಾಮಿಗಳ ಹಿಂದೆ ವಿದೇಶಿ ಅನುನಾಯಿಗಳ ದಂಡನ್ನೇ ಕಾಣುತ್ತೇವೆ..?? "ಅನುನಾಯಿ" ಎಂದು ಉದ್ದೇಶಪೂರ್ವಕವಾಗಿ ಬರೆದಿದ್ದೀರೋ ಹೇಗೆ? :)

Sheela Nayak said...

ಆ ಹೊತ್ತಿಗೆ ಅನುಯಾಯಿಗಿಂತ ಅನುನಾಯಿ ಪದ ಬಳಕೆಯೇ ಸೂಕ್ತವೆನಿಸಿತು. ಈ ವಿದೇಶಿಗಳಿಗೆ( ಎಲ್ಲರೂ ಅಲ್ಲ) ನಮ್ಮ ಸ್ವಾಮಿಗಳು..ಅವರ ಉದ್ದನೆಯಕೇಸರಿ ಬಣ್ಣದ ನಿಲುವಂಗಿ... .ಧ್ಯಾನ..ಮೊದಲಾದವುಗಳು ವಿಚಿತ್ರವಾಗಿ ಕಂಡು ಆಕರ್ಷಿತರಾಗುತ್ತಾರೆ..ಅವರಿಗೆ ಒಂದೇ ರೀತಿಯ ಲೈಫ್ ಬೋರು ಹೊಡಿಯುತ್ತದೆ..ಒಟ್ಟಾರೆ ಹೊಸ ಬಗೆಯ ಜೀವನಕ್ಕಾಗಿ ನಾಯಿಗಳಂತೆ ಜೊಲ್ಲು ಸುರಿಸುತ್ತಾರೆ...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...