ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 January, 2014

ಪುಳಕಾಭಿಷೇಕ..

ಪುಳಕಾಭಿಷೇಕ..

ಹಸುರು ಪತ್ರಗಳ ಅಲಗುಗಳಲಿ
ಸಾಲಾಗಿ ನಿಂತಿಹ ಸಿಪಾಯಿಗಳು...

ನಿರ್ಮಲ, ಕೋಮಲ, ಪಾರದರ್ಶಕ
ಇಬ್ಬನಿಗಳ ಪುಳಕಾಭಿಷೇಕ ಮುಂಜಾವಿಗೆ..

17 January, 2014

ಕಹ ಸೆ ಆಯೆ ಬದರಾ.. (ಭಾವಾನುವಾದ )

ದೀಪ್ತಿ ನವಾಲ್ ಮತ್ತು ಫಾರುಕ್ ಶೇಖ್ ನನ್ನ ಅಚ್ಚುಮೆಚ್ಚಿನ ಜೋಡಿ!

ಚಶ್ಮೆ ಬದ್ದೂರ್ ಅಚ್ಚುಮೆಚ್ಚಿನ ಚಲನಚಿತ್ರ!

ಈ ಹಿಂದೆ ಇದೇ ಹಾಡನ್ನು ಎಷ್ಟೋ ಸಲ ಕೇಳಿದ್ದೆನಾದರೂ ಇಂದು ಒಳಗಿಳಿದಂತೆ ಅಂದಿಳಿದಿರಲಿಲ್ಲ!. ಬಹುಶಃ ನನ್ನ ಭಾವ ಇನ್ನೂ ಪಕ್ವವಾಗಿರಲಿಲ್ಲ.

ಕೆಲವು ದಿನಗಳ ಹಿಂದೆ ತ್ರಿವೇಣಿ ರಾವ್ ಅವರು ಈ ಹಾಡನ್ನು ಅನುವಾದಿಸಲು ಯತ್ನಿಸಿ ಎಂದು ಹೇಳಿದಾಗ, ಮತ್ತೊಮ್ಮೆ ಮಗದೊಮ್ಮೆ ಕೇಳುತ್ತಿದ್ದಂತೆ ಭಾವಗಳು ಪದಗಳನ್ನೊದಗಿಸಿದವು!  ಇಂದು ಜೈನ್ ಅವರ ಸಾಹಿತ್ಯಕ್ಕೆ ನ್ಯಾಯ ಒದಗಿಸಿದೇನೋ ಗೊತ್ತಿಲ್ಲ.. ನನ್ನ ಮನಸಿಗಂತೂ ತೃಪ್ತಿ ಸಿಕ್ಕಿದೆ!

ಎಲ್ಲಿಂದ ಕವಿಯಿತು ಈ ಕರಿಕಪ್ಪು ಮೋಡ
ಮಿಶ್ರವಾಗುತ ಜತೆಗೆ ಇಳಿಯಿತು ಕಪ್ಪು ಕಜ್ಜಳ ||

ಕಣ್ಣೆವೆಗಳ ರಂಗಿನ ಬೆಳಕು
ಕಣ್ಣೀರಿನ ಜಾಲರಿಯ ಹಾರವು
ಮಿಂಚುತಿಹ ಅನರ್ಘ್ಯ ಮುತ್ತೆಲ್ಲಿ
ಜಾರಿ ಮಿಶ್ರವಾಯಿತು ಮಣ್ಣಲ್ಲಿ ||



ಪಿಯನ ಸಂಗ ಸುಖ ನಿದ್ದೆಯಲಿ ಅವಳು/ಪಿಯನ ಜತೆಗೆ ನಿದ್ದೆಯೂ ಅತ್ತ ತೆರಳಿತು
ಕನಸಿನ ಹೂದೋಟದಲಿ ಮೈಮರೆವು/ಕನಸಿನ ತೋಟದಲೀಗ ಬರೇ ಒಣಹೂಗಳು
ತುಟಿಯ ಒಳಗಿಳಿಯಲು ಕಾತರಿಸಿತು ಅಮೃತ
ಒಳಗಿಳಿಯುತಲೇ ಆಯಿತಲ್ಲ ಅದು ವಿಷ||



ಇಳಿಯಿತು ಮೋಡ ಆವರಿಸಿತು ಕರಿನೆಳಲು
ನಿರ್ದಯಿ ಗಾಳಿ ಉರಿ ಪ್ರಜ್ವಲಿಸಿತು
ಸುರಿಯಿತು ಬಿಡದೇ ಸೋನೆ
ಅಳುತಿದೆ ಹುಚ್ಚು ಮನವೇಕೆ ಕಾಣೆ ||

16 January, 2014

ಮುಂಜಾವು

ಚಳಿಗೆ ನೆಲ ಮೈಮುಚ್ಚಿ ಹೊದ್ದ ಕಡುಗಪ್ಪು
ಇರುಳುಗಂಬಳಿಯನ್ನು ರಭಸದಿಂ ಎಳೆಎಳೆದು
ಮುಗಿಲ ಕವಾಟದೊಳಗೆ ಮಡಚಿಟ್ಟು
ಮಸುಕು ಬಿಳಿ ಪರದೆಯನು ಅಗಲವಾಗಿ ಬಿಡಿಸುತಾ
ತಂಗಾಳಿಗೆ ತೆಳು ಸೊಂಟ ಬಳಕಿಸುತಾ
ಕಂಕಣ-ಗೆಜ್ಜೆಗಳ ಜುಗಲ್^ಬಂದಿಯ ನಿನಾದದೊಂದಿಗೆ
ಹಸುರು ನೆಲದ ಇಬ್ಬನಿ ಮಾಲೆಯಲಿ
ಹೆಜ್ಜೆಯೂರದೇ ಗಾಳಿಯಲಿ ತೇಲುತಾ
ಅಂಗಣಕೊಂದರಂತೆ ಬೆಳ್ಳಿ ಚುಕ್ಕಿಯನಿಕುತಾ
ತೆಳು ಸೆರಗನು ಗಾಳಿಯಲಿ ಹಾರಿಸುತಾ
ಲಾಸ್ಯವಾಡುತ ಬರುತಿಹಳು ಮುಂಜಾವು
ಸೌಂದರ್ಯ ಆಸ್ವಾದಿಸುವುದರಲೇ ಮಗ್ನಳಾದವಳು
ಎಚ್ಚೆತ್ತಿದ್ದು ಒಲವಿನ ಮೆಲು ನುಡಿಗೆ
ಸುಪ್ರಭಾತದ ಹಾರೈಕೆಯ ಸಿಹಿ ಮುತ್ತಿಗೆ!


15 January, 2014

ನಲ್ಲಿರುಳಿಗೂ ಸವಿ ನಿದ್ದೆ..

“ಒಂದೂರಿನಲ್ಲಿ.. “
ಪಾರಿಜಾತದ ಬುಡದಲಿ ತುತ್ತುಣಿಸುತ್ತಾ ಬಿಚ್ಚಿಕೊಳ್ಳುವ ಚುಕ್ಕಿ ಕತೆ..
ನಡುನಡುವಿನಲಿ ತಲೆದೂಗಿದ ಮರುತನ ಪುಷ್ಪವೃಷ್ಟಿ..
ಘಮಘಮಿಸುವ ಪಾರಿಜಾತಗಳ ಚುಕ್ಕಿ ಮಡಿಲಲಿ..
ಜೀರುಂಡೆಗಳು ಕಿವಿನಿಮಿರಿಸಿ ಆಲಿಸುತ್ತಿರುವವೇನೋ..
ಹಿತವಾದ ತಂಬೂರಿ ಝೇಂಕಾರ...
“ಓಂ ನಮೋ ವಾಸುದೇವಾಯ.. “
ಮುದ್ದುಗೆ ಬಾಲ ದ್ರುವನ ತುತ್ತಿನ ಚಿಂತೆ..
ಕೆಂಪು ಕೊಕ್ಕಿನ ಹಕ್ಕಿಗಳು ಉಣಿಸಿದವೆಂದರೇ ತೃಪ್ತಿ..
“ಅಮ್ಮ ಚಂದಮಾಮಂಗೂ.. “
ಅಡ್ಡದಿಡ್ಡಿಯಾಗಿ ಸಾಗುವ ಕತೆಯೊಂದಿಗೆ
ಒಂದು ತುತ್ತು ಉಂಡ
ನಲ್ಲಿರುಳಿಗೂ ಸವಿಗನಸಿನ ನಿದ್ದೆ!

ಅವಳ ವ್ಯಥೆ..

ಇನ್ನೂ ಬಿಸಿ ಆರಿಲ್ಲ..
ಅಂದು ಕೈ ಕೈ ಬೆಸೆದು ಹಾಕಿದ
ಏಳು ಹೆಜ್ಜೆಗಳ ನಕ್ಷೆ ಇನ್ನೂ ಹಸಿ..

ತನುಮನಗಳು ಬೆರೆತು ಹಾಲು ಮರೆತು
ಸಜ್ಜೆ ಹೂಗಳು ನಜ್ಜು ನಜ್ಜಾಗಿ
ಲಜ್ಜೆ ಮರೆತ ಇರುಳು ಇನ್ನೆಲ್ಲಿ..

ಉಸಿರಿಗೆ ಉಸಿರು ಬೆರೆತು
ಜೀವ ಜೀವದ ಮಿಲನವೆಲ್ಲ
ಬರೇ ನೆನಪಾಗಿ ಉಳಿಯುವುದಲ್ಲಿ

ಅವಳ ತೆಕ್ಕೆಯಲ್ಲಿದವನ ನೆನಪು
ಮರೆಯಲಾಗದೆ ತಪ್ತಳಾದವಳ
ಕೊಲ್ಲದೆ ಮರಳುವೆಯೇಕೆ ನಲ್ಲಿರುಳೇ!

ನಲ್ಲಿರುಳ ಕವಿತೆ!

ಮುಂಜಾವಿನಲಿ ಸುತ್ತಿಟ್ಟ ಕನಸುಗಳ ಬಿಡಿಸಲು ಕಾದಿದೆ ನಲ್ಲಿರುಳು
ನಭದಲಿದ ಚುಕ್ಕಿಗಳು ಕನಸಿನಂಗಳಕಿಳಿದು ಚಿತ್ತಾರ ಬಿಡಿಸಲು 
ಜತೆಯಾಗಿ ಯುಗಳ ಗೀತೆ ಹಾಡುತ ನಲಿಯುವ ನನ್ನೊಲವು
ಕಣ್ರೆಪ್ಪೆಯೊಳಗಿನ ಆ ಲೋಕಕೆ ಧಾವಿಸಿದೆ ನನ್ನ ಮನವು!

14 January, 2014

ಒಲವೇ.. ನಿನ್ನದೇ ಆಟ!

ಒಲವೇ,

ಹೂ, ಅದು ನೀನೇ..
ಮನದ ಬಾಗಿಲ ಒದ್ದು
ಅಂತರಂಗ ತೆರೆದೆ
ಮಸುಕಿದ ಭಾವಗಳ ಝಾಡಿಸಿ
ಅಕ್ಷರ ಕಾವ್ಯ ರಚಿಸಿದೆ
ಗೆಜ್ಜೆ ಸದ್ದಿಲ್ಲದೆ ಕುಣಿದಾಟವಾಡಿ
ಹಚ್ಚೆಯಿಂದ ಎದೆ ತುಂಬಿಸಿದೆ
ಕುರುಡಿ ಕಿವುಡಿಯ
ಶ್ರವ್ಯಕೂ ದೃಷ್ಟಿಗೂ ಮುಕ್ತಿಯಿತ್ತೆ
ಗೋರಿಯಿಂದೆನ್ನ ಹೊರಗಟ್ಟಿ
ಗುಡಿಯೊಂದು ಸ್ಥಾಪಿಸಿದೆ
ಒಲವಿನ ಮೂರುತಿಗಲ್ಲಿ
ಡಂಬ ಆಡಂಬರವಿಲ್ಲದೆ
ಧೂಪದಾರತಿ ನಾ ಎತ್ತಿದೆ

ಸುಭಾಷಿತ!

ದರ್ಶನೆ ಸ್ಪರ್ಶನೆ ವಾಪಿ ಶ್ರವಣೆ ಭಾಷಣೇಪಿ ವಾ|
ಯತ್ರದ್ರವತ್ಯಂತರಂಗ ಸ ಸ್ನೇಹ ಇತಿ ಕಥ್ಯತೆ||

ಯಾರ ನೋಟ, ಸ್ಪರ್ಶ, ಶ್ರವಣ ಮತ್ತು ಮಾತು
ನಮ್ಮ ಅಂತರಂಗವನ್ನು ಕರಗಿಸುವುದೋ ಅದನ್ನೇ ಸ್ನೇಹ-ಒಲವು-ಪ್ರೀತಿ ಎನ್ನುತ್ತಾರೆ||


ಗೆಳತಿಯರ ಗೆಳೆಯರ ಒಲವಿನಲಿ ಮುಳುಗೇಳುತಿರುವ ಸುಖ ಭಾವದ ತೃಪ್ತಿ!

13 January, 2014

“ಮೈ ಉಸ್ಕಿ ದಿವಾನಿ.. ಪ್ರೇಮ್ ದಿವಾನಿ”- ರಾಧಾ!

“ಮೈ ಉಸ್ಕಿ ದಿವಾನಿ.. ಪ್ರೇಮ್ ದಿವಾನಿ!"
-------------------------------

 ನಡುಹಗಲಿನಂತೆ ಇವತ್ತಿನ ಹುಣ್ಣಿಮೆ ಬೆಳಕು ಚೆಲ್ಲಿದೆ..

ದೂರದಲ್ಲೆಲ್ಲೋ ಕೋಮಲ ಕೂಗು.. ನವಿಲೊಂದು ತನ್ನ ಪ್ರಿಯತಮೆಯನು ಓಲೈಸುತ್ತಿದೆ.

ಯಮುನೆ ಚಂದಮನ ಕರೆಗೋ ಮತ್ತೇತಕೋ ಕೊಂಚ ಬಿರುಸಿನಿಂದ ದಡವನಪ್ಪುವ ತವಕದಲಿದ್ದಾಳೆ..

ಗೆಜ್ಜೆ ಸದ್ದು ಇಲ್ಲೆಲ್ಲೋ... ಸನಿಹದಲ್ಲೇ..

ಘಮ್ಮನೇ ಪರಿಮಳ ಹೊಮ್ಮುವ ಜಾಜಿ ಸುತ್ತಿದ, ನೆಲಕೆ ಮುತ್ತಿಕ್ಕಲು ಯತ್ನಿಸುವ ವೇಣಿಯ ಒಡತಿಯ ನಡೆ ಇತ್ತಲೇ..

ಕೌಮುದಿಯನ್ನೇ ನಾಚಿಸುವ ಬೆಳಕು, ಅಡಗಿಸಲು ಸೋತಿದೆ ವದನವನು ಅರೆ ಮುಚ್ಚಿದ ಸೆರಗು!

ನೀಳ ನಾಸಿಕದ ನತ್ತಿನ ಮಿಂಚನು ಮೀರಿಸುವ ಕಜ್ಜಲ ಹಚ್ಚಿದ ಕಪ್ಪು ಕೊಳ!

ತೆಳುಸೊಂಟದಿ ಈಗಲೋ ಆಗಲೋ ಜಾರಲೆತ್ನಿಸುವ ಮುತ್ತಿನ ಜಾಲರಿ..

ಕುತ್ತಿಗೆಯನಪ್ಪಿದ ನೀಲಕಂಠಿ..

ಘಲಘಲ.. ಪೈಪೋಟಿಯಲಿ ನಾದತರಂಗವನೆಬ್ಬಿಸುವ ಕಂಕಣಗಳು..

ಓಡಿ ಬಂದದುದಕೋ ಉದ್ವೇಗಕೋ.. ಎದೆ ಹಾರುತಿದೆ..

ಉಸಿರ ಲೆಕ್ಕ ತಪ್ಪುತಿದೆ..

ಬಂಡೆಯ ಮೇಲೆ “ಉಸ್” ಅನುತ ಕೈವೂರಿ ಸೋತವಳಂತೆ ಕುಸಿದಳು..

ತನ್ನ ಕೈಯಲ್ಲಿದ್ದ ಕೊಳಲಿಗೂ ಗರಿಗೂ ಮುತ್ತಿಕ್ಕಿ ಎದೆಗವುಚಿದಳು..

ಗುಸು ಗುಸು ಶಬ್ದಕೆ ಬೆಚ್ಚಿದವಳಿಗೆ ಕಂಡದು ಅಪಹಾಸ್ಯ ಮಾಡುತಿರುವ ಗೋಪಿಯರ ಹಿಂಡು!

“ಇವಳು ನಿಜವಾಗಿ ಹುಚ್ಚಿ! ಎಲ್ಲಿ ನಿನ್ನ ಕನಯ್ಯ! ಅವನಲ್ಲಿ ತನ್ನ ಪಟ್ಟಮಹಿಷಿಯರ ಜತೆ ಸರಸದಲ್ಲಿದ್ದಾನೆ! ನಿನಗೆ ಈ ಬಿದಿರು ತುಂಡು ಮತ್ತು ಪುಕ್ಕನೇ ಗತಿ!”

ನಸುನಕ್ಕಳು..

ಹಲ್ಲು ಬಿರಿದಳು..

ತಡೆಯಲಾಗಲಿಲ್ಲ..

ಗಹಗಹಿಸಿ ಬಿದ್ದು ಬಿದ್ದು ನಕ್ಕವಳನು ಕಂಡು ಗುಂಪು ಬೆದರಿತು!

ಸನ್ನೆ ಮಾಡಿ ಕರೆದಳು!

ಯಮುನೆಯತ್ತ  ಬಗ್ಗಿದಳು!

“ನನ್ನ ಪ್ರತಿಬಿಂಬ ನೋಡಿ ಸಖಿಯರೇ!”

ನೋಡಿದವರು ದಂಗಾಗದರು!

ಎಲ್ಲರೂ ಕಂಡದ್ದು ಮುರಳಿಯನು ಊದುತಿರುವ ಮೋಹನನ ರೂಪ!

12 January, 2014

ಏಕೀ ಅವಾಂತರ..



ಕಪ್ಪು ಮುಗಿಲಲಿ ಲಕ್ಷ ತಾರೆಗಳ ನಡುವೆ  ಕಪ್ಪು ಚಂದಿರ..
ಕೌಮುದಿ ಮುನಿದು ತೆರಳಿರುವಳಂತೆ ಬಿಟ್ಟು ಮಂದಿರ
ವಿಶಾಲ ಸುಪ್ಪತ್ತಿಗೆಯಲಿ ಹೊರಳುತ್ತ ನರಳುತ್ತಿರುವ ಕಾಂತ
ತೌರು ಮನೆಗೆ ತೆರಳಿದವಳಿಗೆ ಕಾಡಿಲ್ಲವೇಕೆ ಏಕಾಂತ

ನಲ್ಲಿರುಳಿಗೇಕೆ ಅಚ್ಚರಿ ಏಕೆ, ಯಾಕೆ, ಹೀಗೆ ಈ ಆವಾಂತರ!


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...