ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

21 February, 2012

ನನ್ನ ಬಗ್ಗೆ ವಿಶೇಷ ಬರಹ- ಡೆಕ್ಕನ್ ಹೆರಾಲ್ಡನಲ್ಲಿ! - ಇದು ಕನಸೋ ನನಸೋ?





    ಗಾಂಧಿ ಪಾರ್ಕಿನಲ್ಲಿ ಆ ಪತ್ರಕರ್ತೆ ನನ್ನ ಮನೆಗೆ ಬರುತ್ತಾಳೆಂದು ಹೇಳಿದಳೇನೋ ಹೌದು...ಆದರೆ ನಾನು ಖಂಡಿತ ಬರುವಳೆಂದು ಅಂದುಕೊಂಡಿರಲಿಲ್ಲ..ಆದರೆ ಈ ವರ್ಣ ವನಿತಾ ನಡೆದ ಎರಡೇ ದಿನದ ನಂತರ ನನಗೊಂದು ಕಾಲ್ ಬಂತು...ಅಪರಿಚತ ಅಂಕೆ! ಸರಿ ಎತ್ತಿದ ಕೋಡಲೇ " ನಾನು ಡೆಕ್ಕನ್ ಹೆರಾಲ್ಡ್‌ನಿಂದ ಅಕ್ಷತಾ, ಮಧ್ಯಾಹ್ನ ೨.೩೦ ಹತ್ತಿರ ಮನೆಗೆ ಬರಬಹುದೇ"  ಎಂದಾಗ ನನ್ನ ಕಿವಿಯನ್ನೇ ನಂಬಿರಲಿಲ್ಲ...ಸುಧಾರಿಸಿಕೊಂಡು ನನಗೆ ಅಷ್ಟು ಹೊತ್ತಿಗೆ ನನ್ನ ತರಗತಿ ಪ್ರಾರಂಭವಾಗುವುದರಿಂದ ಸಾಧ್ಯವಾಗುವುದಿಲ್ಲವೆಂದಾಗ. ೧೧.೩೦ಹೊತ್ತಿಗೆ ಬರಬಹುದೇ ಎಂದಳು. ( ನನಗೆಕೋ ಆಕೆಯನ್ನು ಏಕವಚನದಲ್ಲೇ ಸಂಬೋಧಿಸುವಷ್ಟು ಮನಸ್ಸಿಗೆ ಹಿಡಿಸಿದಳು.  ಈಕೆ ಮಾತ್ರವಲ್ಲದೆ ಆ ಪಾರ್ಕಿನಲ್ಲಿ ನಮ್ಮ ಛಾಯಾ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದ ಇನ್ನೊಂದು ಹುಡುಗಿ ಕೂಡ ತುಂಬಾನೆ ಇಷ್ಟವಾದಳು. ) 
   

   ಅಕ್ಷತಾ ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು..ಈ ಗುಣ ಹಾಗೆ ಕಾಪಿಕೊಂಡು ಬಂದರೆ ಒಂದು ದಿನ ಆಕೆ ಖಂಡಿತ ಉನ್ನತ ಸ್ಥಾನಕ್ಕೆ ಏರಬಲ್ಲಳು.  ಆಗಲೂ ನನಗೆ ಈ ಸಂದರ್ಶನ ಅಥವಾ ಲೇಖನ ಪೇಪರಿನಲ್ಲಿ ಪ್ರಕಟವಾಗುತ್ತದೆ ಎಂದು ನಂಬಿಕೆ ಇರಲಿಲ್ಲ..ಹಾಗಾಗಿ ನಾನು ನನ್ನ ದಿನ ನಿತ್ಯದ ವಸ್ತ್ರದಲ್ಲೇ ಇದ್ದೆ..ನನಗೋ ನನ್ನ ಕತೆ ಕೇಳುವರು ಬೇಕಿತ್ತೋ ಏನೋ ..ಆಕೆಯಲ್ಲಿ ನನ್ನ ಬದುಕಿನ ಕೆಲ ಹಾದಿಯನ್ನು ಬಿಚ್ಚಿಟ್ಟೆ. ಈ ಹಾದಿಯೇನು ಸುಗಮವಾಗಿರಲಿಲ್ಲ...ಆದರೂ ಹಟಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಇವತ್ತು ಒಂದಿಷ್ಟು ಗೆಲುವುಗಳನ್ನು ನನ್ನ ಸೆರಗಿನೊಳಗೆ ಬಚ್ಚಿಟ್ಟುಕೊಂಡಿದ್ದೇನೆ. ಅದೆಷ್ಟೋ ಸಲ ಏಣಿಯ ತುದಿ ಮುಟ್ಟಿ ಹಾವಿನ ಮೂಲಕ ಪಾತಾಳಕ್ಕೆ ಜಾರಿದ್ದೇನೆ..ಮತ್ತೆ ಮೈ ಒದರಿ, ನನ್ನ ಅದೃಷ್ಟಕ್ಕೆ ಛಲವೊಡ್ಡಿ ನಡೆದಿದ್ದೇನೆ. ಒಂದಂತೂ ನಿಜ..ನನ್ನ ನಂಬಿಕೆಗಳನ್ನು, ನನ್ನ ತತ್ವಗಳನ್ನು ಪಾಲಿಸುವಲ್ಲಿ ರಾಜಿಮಾಡಿಕೊಳ್ಳದೆ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ನನ್ನ ಕಸುವು ಒಂದಿಷ್ಟು ಸವೆದರೂ ಕನಸನ್ನು ನನಸು ಮಾಡಿಕೊಳ್ಳುವ ಛಲ ಬಿಡುವುದಿಲ್ಲ. ಎಂಟನೆಯ ವಯಸ್ಸಿನಲ್ಲಿ ಶ್ರ‍ೀ ರಾಮಕೃಷ್ಣ ಪರಮಹಂಸರ ಕತೆಗಳತ್ತ ಆಕರ್ಷಿತಳಾದ ನನಗೆ ಇಂದೂ ಅವು ನನ್ನ ಜೀವನವನ್ನು ರೂಪಿಸುವಲ್ಲಿ ಪಾತ್ರವಹಿಸಿವೆ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆಯೆನಿಸುತ್ತದೆ. ಅದರಲ್ಲೂ ಗೋಪಾಳನ ಕತೆ- ( ಬೆಂಗಾಳಿ ಭಾಷೆಯ ಬಳಕೆಯಂತೆ ಳ ಬಳಸಿದ್ದೇನೆ.) ಇನ್ನೊಂದು ಭಕ್ತನ ಕನಸಿನಲ್ಲಿ ಬಂದು ಅವನ ಕಷ್ಟದಲ್ಲಿ ಸಹಾಯ ಮಾಡುವ ದೇವರು. ಇನ್ನೊಂದು ಪೋಸ್ಟಿನಲ್ಲಿ ಈ ಕತೆಗಳನ್ನು ಹಾಕುತ್ತೇನೆ. 

        ಶನಿವಾರ ಬೆಳಿಗ್ಗೆ ಬಹುಶಃ ಹನ್ನೊಂದು ಗಂಟೆ ಕಾಣುತ್ತದೆ...ನನ್ನ ಮಾಮನ ಫೋನು...ನಿನ್ನ ಬಗ್ಗೆ ಪೇಪರಿನಲ್ಲಿ ಆರ್ಟಿಕಲ್ ಬಂದಿದೆ...ಸಂತೋಷವಾಯಿತು...ಹತ್ತೇ ನಿಮಿಷದಲ್ಲಿ ಓರಗಿತ್ತಿಯ ಮೆಸೇಜ್- ತ್ರಿಲ್ಡ್! ನಿನ್ನ ಬಗ್ಗೆ ಓದಿ...ನಮ್ಮ ಮನೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು...ನನಗೋ ನಂಬಲಾಗುತ್ತಿಲ್ಲ...ಪೇಪರ್ ಇನ್ನೂ ನೋಡೇ ಇಲ್ಲ...ಸರಿ ಇನ್ನು ಉಳಿದವರಿಗೆ ಓರಗಿತ್ತಿ ತಿಳಿಸುವಳು ಎಂದು ಸುಮ್ಮನಾಗಿಬಿಟ್ಟೆ....ನನ್ನ ಫೇಸ್ ಬುಕ್ ಮಿತ್ರರಿಗೆ ಮೆಸೇಜ್ ಕೊಟ್ಟೆ...ಹೆಚ್ಚಿನವರು ತಟಸ್ತರಾಗಿದ್ದರು...ಆಸು ಸರ್ ಕೂಡಲೇ ಅಂತರ್ಜಾಲ ಪತ್ರಿಕೆ ಓದಿ ಶೇರ್ ಮಾಡಿಬಿಟ್ಟರು...ನನ್ನ ಮಕ್ಕಳಿಗೂ ಹೊಸ ಬಗೆಯ ಆನಂದ...ಬಹುಶಃ ಪ್ರತಿಕ್ರಿಯಿಸಲೂ ತಿಳಿಯುತ್ತಿಲ್ಲ...ನನ್ನ ಅಮ್ಮನಂತೂ ಆಕಾಶದಲ್ಲಿ ತೇಲಾಡುತ್ತಿದ್ದಾರೆ...ಕಷ್ಟಪಟ್ಟು ಆ ಲೇಖನ ಓದಿ ನನಗೆ ಹೇಳಿದಾಗ ನನ್ನ ದಿನ ಸಾರ್ಥಕವಾಯಿತೆಂದು ಅನಿಸದೇ ಹೋದರೆ ಹೇಗೆ?  

   ಸರಿ ಎಲ್ಲರೊಂದಿಗೆ ಹಂಚಿಕೊಂಡು ಆನಂದವನ್ನು ದುಪ್ಪಟ್ಟು ಮಾಡಿಕೊಂಡಿದ್ದೇನೆ..ಇನ್ನು ಬ್ಲಾಗ್ ಮಿತ್ರರೊಂದಿಗೆ ಹಂಚಿಕೊಳ್ಳಲಾಗಿರುತ್ತಲಾಗುತ್ತದೆಯೇ! ಹಾಗಾಗಿ ಈ ಬರಹದ ಮೂಲಕ ಅದನ್ನು ಹೇಳಿದ್ದೇನೆ...ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ!!!!!

2 comments:

kiran said...

ನಿಮ್ಮ ಮನೆಯ ಅಂಗಳದಲ್ಲಿ ಈಜಿದ್ದು ಈಗ್ಗೆ ಕೆಲವೇ ನಿಮಿಷಗಳ ಮುಂಚೆ, ಸ್ವಲ್ಪ ಹೊತ್ತಿನಲ್ಲೇ ನಿಮ್ಮ ಜೀವನ ಪ್ರೀತಿ ಹಾಗು ಉಪ್ಪಿನಕಾಯಿಯ ಹಾಗಿನ ಚಿಕ್ಕ ಪುಟ್ಟ ಹಾಸ್ಯ, ಹಹಹ, very nice i found this blog

Sheela Nayak said...

ಕಿರಣ,
ತಮ್ಮ ಅಭಿಪಾಯಕ್ಕೆ ಧನ್ಯವಾದ! :-)

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...