ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 September, 2015

ಗೌರಿ ಗಣೇಶ!




ಕಡೆಗಣಿಸಬೇಡ, ನನ್ನೊಲವೇ!

ಒಲವೇ,

ಕಡೆಗಣಿಸಬೇಡವೇ,
ದೂರದ, ಕೈಗೆಂದೂ ನಿಲುಕದ
ಚುಕ್ಕಿಯ ಹೊಳಪಿಗೆ ಮರುಳಾಗಿ
ಬದುಕು ನಿನ್ನ ಸೆರಗಿನ ಅಂಚಿಗೆ
ಗಂಟು ಹಾಕಿದ ಮುತ್ತು, ಮಾಣಿಕ್ಯಗಳ ಕಡೆಗಣಿಸಬೇಡವೆ,
ಆ ಮುತ್ತು, ಮಾಣಿಕ್ಯಗಳ!

ಕೇಳಿಲ್ಲಿ, ನಿನಗರಿವಿದೆ ತಾನೇ,
ಆ ಚುಕ್ಕಿಯ ವ್ಯಾಪ್ತಿ
ನಿನ್ನ ನನ್ನ ಎಣಿಕೆಗೂ
ಮೀರಿದ್ದು.
ಮತ್ತು ಅದು ನೀಡುವ
ಅನುಪಮ
ಬೆಳಕಷ್ಟೇ ನಮಗೆ
ಸೇರಿದ್ದು!

07 September, 2015

ಕ್ಷಮೆಯಿರಲಿ ಒಲವೇ,

 


ಒಲವೇ,

ಕ್ಷಮಿಸಿ ಬಿಡು,
ಅಂದಿನ ದಿನ ಹಾಗೇ ಉಳಿದಿದೆಯೆಂಬ ಭ್ರಮೆ..
ಒಂದಿಷ್ಟು ಅತಿಕ್ರಮಿಸಲು ಹೊರಟೆ
ಹ್ಮ್.. ನನ್ನ ನಗುವಿನ ಪಾಲು ನಿನಗೂ ಕೊಡಲಷ್ಟೇ.

ಇರಲಿ ಬಿಡು, ನಿನ್ನ ಬದುಕು ನಿನ್ನದು.
ನೆನಪಿರಲಿ, ನನ್ನ ಒಲವು
ಬದಲಾಗದು..
ನಾನಳಿಯುವರೆಗೂ ನನ್ನಲ್ಲಿಯೇ

ಅದರ ಬೀಡು!

03 September, 2015

ಕಾಲ ಚಕ್ರ!

ಒಲವೇ,
ಹೌದು, ಈಗೀಗ ದಿನಗಳು ಬಲು ಕಠಿಣ,
ಎಲ್ಲರ ತಪ್ಪುಗಳಿಗೂ ನೀನೇ ಹೊಣೆ ಅನ್ನುವವರೇ ಸುತ್ತಲೂ

ಆಪಾದನೆಗಳ ಬೆಟ್ಟದ ಭಾರ ಇನ್ನು ಹೊರಲಾರೆ
ಎಂದು ಬೆನ್ನು ಹಾಕಿ ಹೊರಟೆಯಲ್ಲ,

ಸ್ವಲ್ಪ ತಡೆ, ಕೊನೆಯ ಮಾತು ಕೇಳು
ಬಹುಶಃ ನೀನು ಮರೆತಿರುವೆ,

ಕಾಲ ಮತ್ತು ಹಾದಿ, ಬದಲಾಗುವಿಕೆ
“ಆತನ” ನಿಯಮ!
-ರೂಮಿ ಪ್ರೇರಣೆ

When you go through a hard period,
 When everything seems to oppose you,
When you feel you cannot even bear one more minute,
Never give up,

Because it is the time and place that the course will divert.

29 August, 2015

||ವಿನಾಶ ಕಾಲೇ ವಿಪರೀತ ಬುದ್ಧಿಃ||

ಪೌಲಸ್ತ್ಯಃ ಕಥಮನ್ಯದಾರಹರಣೆ ದೋಷಂ ನ ವಿಜ್ಞಾತವಾನ್
ರಾಮೇಣಾಪಿ ಕಥಂ ನ ಹೇಮಹರಿಣಸ್ಯಾಸಂಭವೋsಲಕ್ಷಿತಃ|
ಅಕ್ಷೈಶ್ಚಾಪಿ ಯುಧಿಷ್ಠಿರೇಣ ಸಹಸಾ ಪ್ರಾಪ್ತೋ ಹಯನರ್ಥಃ ಕಥಮ್
ಪ್ರತ್ಯಾಸನ್ನವಿಪತ್ತಿಮೂಢಮನಸಾಂ ಪ್ರಾಯೋ ಮತಿಃ ಕ್ಷೀಯತೆ||
-ಪಂಚತಂತ್ರ
ಕಠಿಣ ತಪಗೈದು ಶಿವನನ್ನೇ ಒಲಿಸಿದ ಪೌಲಸ್ತ್ಯನು ಪರಪತ್ನಿಯನ್ನು ಅಪಹರಿಸುವಂತ ನೀಚ ಕಾರ್ಯ ಮಾಡಿದನೇಕೆ,
ಸುವರ್ಣ ಚಿಂಕೆಯೆಂಬುವುದಿಲ್ಲವೆಂದು ರಾಮನಿಗೆ ಅರಿವಾಗಲಿಲ್ಲ ಅದೇಕೆ,
ದ್ಯೂತವು ಕಷ್ಟಗಳ ಸಾಗರವನ್ನೇ ಹೊತ್ತುತರುವುದೆಂಬ ವಿವೇಕ ಯುಧಿಷ್ಠಿರನಿಗೆ ಇರಲಿಲ್ಲವೇಕೆ,
ಪ್ರಾಯಃ ವಿಧಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಇಂದ್ರಿಯಗಳು ಮಂಕಾಗಿ ಬುದ್ಧಿ ಬಲಹೀನವಾಗುತ್ತದೆ!

-ಪಂಚತಂತ್ರ

28 August, 2015

ಸತ್ಯ ದರ್ಶನ!


    ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೇ ಇದ್ದಾಗ  ದುಃಖ ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು, ಬಂಧು ಮಿತ್ರರ ಜೀವನವನ್ನೂ ನರಕವನ್ನಾಗಿ ಮಾಡುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ.
    ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೇ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತಾ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಉದ್ವೇಗಕ್ಕೆ ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದ ಆತ ಯಶಸ್ಸನ್ನು ಕಾಣಬಲ್ಲ.
-ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ

ಹಾಳು ಮೋಹ.. ಬುದ್ಧಿ ಮಂಕು!

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ|
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋsಭಿಜಾಯತೇ||

ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ವಿನಶ್ಯತಿ||

||ವಿಷಯಗಳನ್ನೇ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ರೊಚ್ಚಿನಿಂದ ಮಾಡಬಾರದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ||


-ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ

22 August, 2015

ಅವನೊಲವಿನ ಭಾವದಲಿ ನಾನು ಪರವಶ!

ಚುಕ್ಕಿಗಳು ಕಪ್ಪುಕುಳಿಯಕ್ಕಾಳಕ್ಕಿಳಿದು ಮಾಯವಾಗಿ,
ಕತ್ತಲೆಯ ಕರಾಳ ಬಾಹು ಚಂದ್ರಮನ ನುಂಗಿ,
ನಭವು ಸೂತಕದಾಚರಣೆಯಲಿರುವ ತನಕ
ನಾನು ಅವನೊಲವಿನ ಭಾವದಲೇ ಪರವಶ.


-      ಪ್ರೇರಣೆ  ಡಬ್ಲ್ಯು ಬಿ ಯೀಟ್ಸ್ ಅವರ ಕವನ!

ನೋವುಗಳ ನಿವಾರಣೆಯ ಹೊಣೆ ನಿನ್ನದೇ, ಒಲವೇ!

ಏ ಮಾಲಿಕ್, ತೆರೆ ಬಂದೆ ಹಮ್..

ಒಲವೇ,
ಚಂಚಲ ಚಿತ್ತನೀ ಮರ್ತ್ಯ,
ಜತೆಗೆ ನೂರಾರು ನ್ಯೂನತೆಗಳು..
ಆದರೂ ನಿನ್ನೀ ಸಾಮಿಪ್ಯ,
ಸದಾ ತೋರುವ  ಅನುಕಂಪ,
ಅನುರಾಗ ತುಂಬಿದೆ ಇಲ್ಲಿ,
ಇಳೆಯ ಬೆಚ್ಚಗಿನ ಮಡಲಲ್ಲಿ;
ಉಸಿರಿತ್ತಾಗಲೇ ಬೊಗಸೆ
ತುಂಬಾ ಉಡುಗೊರೆ
ಮತ್ತಿನ್ನೇನು,
ನೋವುಗಳ ನಿವಾರಣೆಯೂ
ನಿನ್ನದೇ ಹೊಣೆ
ನನಗಿದೆ ದೃಢ ನಂಬಿಕೆ!

ಏ ಮಾಲಿಕ್, ತೆರೆ ಬಂದೆ ಹಮ್

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...