ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 November, 2011

ಅಣ್ಣಾ ಹಜಾರೆ- ಏನಾಗಿದೆ ನಿಮಗೆ?


         ಶರದ್ ಪವಾರ್‌ರ ಕಪಾಳ ಮೋಕ್ಷದ ಪ್ರಸಂಗದ ಬಗ್ಗೆ ನನಗೆ ತಿಳಿದದ್ದು ಬಹಳ ತಡವಾಗಿ...ಇದು ಒಂದು ಶಾಕಿಂಗ್ ನ್ಯೂಸ್ ಆಗಿರಲಿಲ್ಲ..ಯಾಕೆಂದರೆ ಪಾದುಕ ಪೂಜೆಯ ಪ್ರಸಂಗಳು ನಮ್ಮಲ್ಲಿ ಈಗ ಸಾಮನ್ಯವಾಗಿದೆ. ಆದರೂ ಇದೊಂದು ಗಂಭೀರವಾದ ಘಟನೆ...ಪವರ್‌ಫುಲ್ ಪವಾರ್‌ರಿಗೆ ತಪರಾಕಿ ಕೊಡುವುದೆಂದರೆ...ಅದರಲ್ಲೂ  ಜಡ್    ಸೆಕ್ಯುರಿಟಿಯಿರುವ ರಾಜಕಾರಣಿಗೆ!  ಹೀಗೆಲ್ಲಾ ಮಾಡುವುದರಿಂದ ಹರವಿಂದ್ ಸಿಂಗ್‌ನಂತವರು ತಾವು ಬಹಳ ಘನ ಕಾರ್ಯ ಮಾಡಿದೇವೆಂದು ಹಿಗ್ಗಿದರೆ ಅದು ಅವರ ಮೂರ್ಖತನ....ದೇವರು ಕೊಟ್ಟ ಶಿಕ್ಷೆಯಿಂದ ಬುದ್ಧಿ ಕಲಿತಿಲ್ಲ ಪವಾರ್! ಆಧುನಿಕ ವೈದ್ಯಕೀಯ ಸವಲತ್ತುಗಳಿದ್ದರೂ ಸೊಟ್ಟಗಾದ ಮುಖ ಸರಿಪಡಿಸಲಾಗಲಿಲ್ಲ....ಆದರೂ ಸುಟ್ಟ ಮುಖವೆತ್ತಿ ತಿರುಗುತ್ತಿದ್ದಾರೆ....ಆದರೆ ಅಣ್ಣಾಹಜಾರೆಯ ಹೇಳಿಕೆ ಖಂಡಿತ ಒಂದು ಶಾಕಿಂಗ್ ನ್ಯೂಸ್! ಕೆಲವೊಂದು ಸಮಯದಿಂದ ಅಣ್ಣಾ ಹಜಾರೆ ಮತ್ತವರ ಸಂಗಡಿಗರು ಒಂದಲ್ಲ ಒಂದು ಹೇಳಿಕೆ ಕೊಟ್ಟು ತಮ್ಮ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲ...ಗಾಂಧೀಜಿಯ ಸತ್ಯಾಗ್ರಹದ ಮಾದರಿಯಲ್ಲಿ ನಡೆದವರು ಇದೇ ಹಜಾರೆಯೇ? ಅಹಿಂಸಾ ಮಾರ್ಗದ ನೇಕಾರನೆಂದು ಸಾರಿಕೊಂಡವರು ಇವರೇ ತಾನೇ? ಈಗಾಗಲೇ ನಮ್ಮ ಇತಿಹಾಸದಿಂದ ನಾವೆಲ್ಲ ಪಾಠಕಲಿತಿಲ್ವಾ? ಕತ್ತಿ, ಈಟಿ, ಬಂದೂಕು, ಬಾಂಬ್‌ಗಳಿಂದ ಏನು ಸಾಧನೆಯಾಗಿದೆ..ಬರೇ ರಕ್ತಪಾತ, ಜೀವಹಾನಿ ಹೊರತು ಮತ್ತೇನು ಪಡೆದಿಲ್ಲ ಮನುಜ ಕುಲ. ಇದೆಲ್ಲಾ ಗೊತ್ತಿದ್ದರೂ ಮತ್ತೂ ಹಿಂಸೆಗೆ ಕೈಯೆತ್ತಿ ಬಲ ಕೊಡುತ್ತಿದ್ದಾರೆ..ಯಾಕೆ??ಅಣ್ಣಾಹಜಾರೆ..ಯಾಕೆ ಹೀಗೆ ಬದಲಾಗುತ್ತಾ ಬಂದಿದಿರಿ? ನೀವು ಯಾವ ಆಮಿಷಕ್ಕೆ ನಿಮ್ಮನ್ನು ಒಡ್ಡಿದಿರಾ? ದೇಶದ ಜನತೆ ನಿಮ್ಮನ್ನು ದೇವರೆಂದು ಆರಾಧಿಸಿದಕ್ಕೆ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದಿರಾ?



  
    ಈಗೀಗ ನನಗೆ ಮಹಾತ್ಮಾ ಗಾಂಧೀಜಿಯವರ ನಿಲುವು ಅರ್ಥವಾಗುತ್ತಿದೆ... ಗಾಂಧಿಜೀಯವರನ್ನು, ಅವರ ತತ್ವಗಳನ್ನು ಮೆಚ್ಚಿದ್ದರೂ ಮನಸ್ಸಿಗೆ ಅವರು ತಮ್ಮ ಮಕ್ಕಳಿಗೆ ಬಹಳ ಅನ್ಯಾಯ ಮಾಡಿದ್ದರೆಂದೆನಿಸಿತ್ತು. ಹರಿಲಾಲ್‌ರ ಜೀವನ ಹಾಳು ಬೀಳುವುದಕ್ಕೆ ಗಾಂಧಿಯವರ ನಿಲುವೇ ಕಾರಣವೆಂದು ವಾದಿಸುತ್ತಿದ್ದೆ. ತಾವು ವಿದೇಶಕ್ಕೆ ಹೋಗಿ ಕಲಿತಿದ್ದರೂ ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರೆಂದು ದೂರುತ್ತಿದ್ದೆ.. ಬಹುಶಃ ಅವರಿಗೆ ಖಂಡಿತವಾಗಿ ಗೊತ್ತಿತ್ತು.. ಅವರು ತಾವು ನಂಬಿದ ತತ್ವವನ್ನು ಮೊದಲು ಮನೆಯವರ ಮೇಲೆ ಪ್ರಯೋಗ ಮಾಡಿದರು... ಮಾದರಿಯಾದರು.. ಸ್ವಾರ್ಥವನ್ನು ಎಂದೂ ತೋರಲಿಲ್ಲ.. ಬೇಧಭಾವ ಮಾಡಲಿಲ್ಲ... ಈ ಗುಣಗಳಿಂದಲೇ ಅವರು ಪ್ರಥ್ವಿಯ ಜನರ ಮನದಲ್ಲಿ ಸ್ಥಾನ ಪಡೆದರು... ಆದರೆ ಅಕಟಕಾ.. ತಮ್ಮದೇ ನೆಲದ ಜನರ ಮನದಿಂದ ದೂರವಾಗಿದ್ದಾರೆ... ಗಾಂಧೀಜಿ ಎಂದೂ ಖ್ಯಾತಿಗೆ, ಕಾಸಿಗೆ ಮರುಳಾಗಲಿಲ್ಲ... ಆದರೂ ಅವರು ಪಾಕಿಸ್ಥಾನದ ವಿಷಯದಲ್ಲಿ ಸೋತರು... ಕೆಲವೊಂದು ಹಿತಾಸಕ್ತಿಗೆ ಬಲಿಯಾದರು.. ಅವರಿಗೆ ತಿಳಿದಿತ್ತು... ಎಲ್ಲಿಯಾದರು ತಾವು ಸಂಸಾರದ ಬಗ್ಗೆ ಅತೀ ಗಮನ ಹರಿಸಿದರೆ ಅಥವಾ ಖ್ಯಾತಿಯ ಕಡೆ ಗಮನ ಕೊಟ್ಟರೆ ತಮ್ಮ ಗುರಿ, ತತ್ವ ಎರಡೂ ತಪ್ಪುವುದು. ಮೋಹವು ನಮ್ಮ ಮೂಲ ಸ್ವಭಾವವನ್ನು ಬದಲಿಸುತ್ತದೆ. ಗಾಂಧಿಯವರು ವ್ಯಾಮೋಹವನ್ನು ಜಯಿಸಿದ್ದರು... ಅದರಿಂದಲೇ ಅವರ ವ್ಯಕ್ತಿತ್ವವು ಮೇರು ಪರ್ವತದೆತ್ತರಕ್ಕೆ ಬೆಳೆಯಿತು.. ಜಗತ್ತಿನ ಉದ್ದಗಲಕ್ಕೂ ಹರಡಿತು.

     ಆದರೆ ಹಜಾರೆಯವರೆ, ನೀವೀಗ ಖ್ಯಾತಿಯ ಮೋಹ ಪಾಶಕ್ಕೆ ಸಿಲುಕಿದ್ದಿರಿ... ನಿಮ್ಮ ನಡೆಗಳೆಲ್ಲಾ ಸರಿಯೆಂಬ ಭ್ರಮೆಗೆ ಸಿಲುಕಿ ನಿಮ್ಮನ್ನು ಪೂಜಿಸುತ್ತಿರುವ ಯುವವರ್ಗವನ್ನು ಹಿಂಸೆಯ ದಾರಿಗೆಳೆಯುತ್ತಿದ್ದಿರಾ! ದಯವಿಟ್ಟು ಗಮನಿಸಿ .ಗಾಂಧಿಯವರಂತೆ ನಿಮ್ಮ ಹೋರಾಟ ಹೊರಗಿನ ಶತ್ರುಗಳೊಂದಿಗಲ್ಲ.. ನಮ್ಮವರೇ ಆದ ಹಿತ ಶತ್ರುಗಳೊಂದಿಗೆ!  ಮುಳ್ಳಿನ ಮೇಲೆ ಹರಡಿರುವ ವಸ್ತ್ರವನ್ನು ಜಾಗರೂಕತೆಯಿಂದ ಬಿಡಿಸುವಂತೆ ನಿಮ್ಮ ನಡೆಯಾಗಬೇಕು ಹೊರತು, ಇಂತಹ ಒರಟು ಹೇಳಿಕೆ ನಿಮಗೆ ಶೋಭೆಯಲ್ಲ. 

    ಹಜಾರೆ ಎಡವಿದ್ದಾರೆನಿಸುವುದು, ಸಂಸಾರವಿಲ್ಲವಿದ್ದರೇನಾಯಿತು! ಖ್ಯಾತಿಗೆ ಮರುಳಾಗಿದ್ದಾರೆ! ಸರಿಯಾಗಿ ಆಲೋಚಿಸದೆ ಹೇಳಿಕೆ ನೀಡುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಓಟುಹಾಕಬಾರದೆಂದು ಕರೆಕೊಟ್ಟಾಗಲೇ.. ಎಲ್ಲಿಯೋ ಶೃತಿ ತಪ್ಪುತಿದೆ ಅನ್ನಿಸಿತ್ತು.. ಭ್ರಷ್ಟಾಚಾರಕ್ಕಿಂತ ಲೋಕಪಾಲಕ ಮಸೂದೆಯ ಪ್ರತಿಷ್ಟೆ ಹೆಚ್ಚಾಗುತ್ತಿದೆಯೇ ಎಂದೆನಿಸಿತ್ತು ಕೂಡ. ಸಂತೋಷ್ ಹೆಗ್ಡೆ, ಅಗ್ನಿವೇಶ್‌ನವರ ಹೇಳಿಕೆಗಳು ನನ್ನ ಮನಸ್ಸಿನ ಅನಿಸಿಕೆಯನ್ನು ಧೃಡಪಡಿಸಿತ್ತು... ಅಲ್ಲದೆ ಕಾಶ್ಮೀರದ ಬಗ್ಗೆ ಹೇಳಿಕೆ, ಬೇಡಿಯವರ ಹಗರಣವೆಲ್ಲವೂ ಕೂಡಿ ಜನರಿಗೆ ಒಂದಷ್ಟು ನಿರಾಸೆಯಾದದ್ದು ಖಂಡಿತ ಸತ್ಯ. ಅಂತೂ ಹಜಾರೆಯವರು ಇಂತಹ ಹೇಳಿಕೆಗಳಿಂದ ರಾಮ್‌ದೇವ ಬಾಬಾನವರಂತೆ ತಮ್ಮ ಕೈಯಿಂದಲೇ ತಮ್ಮ ಘನತೆಗೆ ಕಳಂಕ ಹಚ್ಚುವ ಕೆಲಸ ಮಾಡುತ್ತಿದ್ದಾರೆ... ನನ್ನ ಮಾತಿಗೆ ನೀವೆಲ್ಲಾ ಸಹಮತಿ ಕೊಡದಿರಬಹುದು... ಹೆಚ್ಚಿನವರು ಹಜಾರೆಯನ್ನು ಕುರುಡರಂತೆ ಹಿಂಬಾಲಿಸುತ್ತಿದ್ದಾರೆ.. ನಮ್ಮದುರಾದೃಷ್ಟ... ಭಾರತೀಯರು ಬಲು ಬೇಗ ಅನುಯಾ ಯಿಗಳಾಗುತ್ತಾರೆ, ಮತ್ತು ಕಣ್ಣು ಮುಚ್ಚಿ, ವಿವೇಚನೆಯಿಲ್ಲದೆ ದೇವರ ಪೀಠದಲ್ಲಿಟ್ಟು ಪೂಜೆ ಮಾಡುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ನೆಹರೂ ಮನೆತನದ ನಿಷ್ಠ ಹಿಂಬಾಲಕರು. ಆದ್ದರಿಂದ ಸೋನಿಯಾ ಅವರಿಗೆ ಯೋಗ್ಯತೆ ಇಲ್ಲದಿದ್ದರೂ ಅಧಿಕಾರ ದೊರೆತಿರುವುದು.


      ಇನ್ನು  ಮೀಡಿಯಾಗಳು ಇಂತಹ ಪ್ರಸಂಗಳನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತವೆ.. ತಮ್ಮ ಟಿ ಆರ್ ಪಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬಳಸಿಕೊಳ್ಳುತ್ತವೆ. ಮತ್ತೆ ಹೊಸ ಪ್ರಸಂಗ ಹೊಸ ವಿಷಯ ಸಿಕ್ಕಿದ ಕೂಡಲೆ ಇದನ್ನು ಮರೆತು ಬಿಡುತ್ತವೆ. ಆದರೆ ನಮ್ಮ ಜನರು ಸಾಮೂಹಿಕ ಸನ್ನಿಗೆ ಒಳಗಾದವರಂತೆ ವಿವೇಚನೆ ಕಳೆದು ಕೊಂಡವರಂತೆ ವರ್ತಿಸುವುದನ್ನು ನೋಡಿ ಬೇಸರವಾಗುತ್ತದೆ... ದಿನಕ್ಕೊಂದು ಹಗರಣ, ಬೆಲೆಯೇರಿಕೆ, ಭ್ರಷ್ಟಾಚಾರ... ಮೊದಲಾದವುಗಳಿಂದ ಜನಸಾಮಾನ್ಯರು ರೊಚ್ಚಿಹೋಗಿದ್ದಾರೆ ನಿಜ... ಅದಕ್ಕಾಗಿ ಹಿಂಸೆಗಿಳಿಯುವುದು ಸರಿಯಲ್ಲ.. ಮಾತ್ರವಲ್ಲದೆ ಇದನ್ನು ಸಮರ್ಥಿಸಿ ಬುದ್ಧಿಜೀವಿಗಳು ಹೇಳಿಕೆ ನೀಡುವುದು ಸಮಂಜಸವಲ್ಲ. ಇಂತಹ ವಿಷಯಗಳ ಮೇಲೆ ಲೇಖನ ಬರೆಯುವುದೆಂದರೆ  ಅದಕ್ಕೆ     ಮಿತಿಯೇ ಇರುವುದಿಲ್ಲ.. ಏನೋ ರಾಜಕಾರಣದ ಒಳಗಿನ ಹೂರಣ ಬೇರೆಯೇ ಇರುತ್ತದೆ.. ಅದರ ಬಗ್ಗೆ ಹೇಳಿದಷ್ಟು ಕಮ್ಮಿಯೇ!

7 comments:

ತೇಜಸ್ವಿನಿ ಹೆಗಡೆ said...

ಲೇಖನದ ಓಘ ಚೆನ್ನಾಗಿದೆ. ನಿಮ್ಮ ಕಳಕಳಿ ಆಶಯ ಮೆಚ್ಚದಕ್ಕದ್ದೇ. ಆದರೆ ಸ್ವಲ್ಪ ಭಾವೋದ್ರೇಕದಿಂದ ಬರೆದಂತೆ ಅನಿಸಿತು. ಪವಾರ್ ಅಂತಹ ಕೊಳಕು ರಾಜಕಾರಣಿಕೆ ಆದ ಶಿಕ್ಷೆ ಕಡಿಮೆಯದ್ದೇ. ಸಹನೆ ಎಲ್ಲರಲ್ಲೂ ನಶಿಸುತ್ತದೆ. ಸಹನೆಗೂ ಒಂದು ಮಿತಿ ಇದ್ದೇ ಇರುತ್ತದೆ. ಅದನ್ನು ಸಾಧಿಸಲು ಗಾಂಧೀಜಿಯಂತಹವರ ಮನೋ ಬಲ ಬೇಕಾಗುತ್ತದೆ. ಆದರೆ ಎಲ್ಲರೂ ಗಾಂಧಿಜೀ ಆಗಲಾರದು. ಭಗತ್ ಸಿಂಗ್ ಅಂತಹವರೂ ಇರಲೇ ಬೇಕು. ಕೇವಲ ಓರ್ವ ವ್ಯಕ್ತಿ/ಸಂಘಟನೆ/ಶಕ್ತಿ ಯಿಂದ ದೇಶ ಕಟ್ಟಲು ಅಸಾಧ್ಯ. ಎಲ್ಲರೀತಿಯ ತಾತ್ವಿಕ ನೈತಿಕ ಶಕ್ತಿಯಿಂದ ಮಾತ್ರ ಬಲಿಷ್ಟತೆ ಸಾಧ್ಯ. ಹಾಗಾಗಿ ಗಾಂಧಿತತ್ವ ಮಾತ್ರದಿಂದ ಉದ್ಧಾರ ಸಾಧ್ಯ ಎನ್ನುವುದನ್ನು ನಾನು ಒಪ್ಪಲಾರೆ. ಒಮ್ಮೊಮ್ಮೆ ಪಾಠಕಲಿಸಲು ದಂಡವನ್ನೂ ಹಿಡಿಯಬೇಕಾಗುತ್ತದೆ. ಹಜಾರೆಯವರ ಆ ಪ್ರತಿಕ್ರಿಯೆಯಲ್ಲಿ ಉದ್ರೇಕಿಸುವಂತಹ ಹೇಳಿಕೆಯೇನೋ ಅಷ್ಟು ಕಂಡುಬಂದಿಲ್ಲ...

ಇನ್ನು ಕಾಂಗ್ರೆಸ್‌ಗೆ ಓಟು ಕೊಡಬೇಡಿ ಎಂದು ಅವರು ಹೇಳುವ ಬದಲು ಭ್ರಷ್ಟ ಪಕ್ಷಗಳಿಗೆ ಕೊಡಬೇಡಿ ಅನ್ನಬೇಕಿತ್ತು. ಕಾರಣ ಎಲ್ಲಾ ಪಕ್ಷಗಳೂ ಈಗ ಒಂದೇ ರೀತಿ ಆಗಿವೆ. ಯಾವ ಪಕ್ಷವೂ ಶುದ್ಧವಾಗಿಲ್ಲ. ಇಂತಿರುವಾಗ ಒಂದೇ ಪಕ್ಷದ ಕುರಿತು ಹೇಳಿಕೆ ಸಲ್ಲ.

Anonymous said...

ಅಣ್ಣಾ ಹಜಾರೆ ಒಂದು ಪಕ್ಷಕ್ಕೆ ಓಟು ಹಾಕಬೇಡಿ ಎಂದು ಹೇಳಿರುವುದು ಸಮಂಜಸವಾದ ಧೋರಣೆ ಎನಿಸುವುದಿಲ್ಲ. ಅಣ್ಣಾ ಹಜಾರೆಗೆ ಒಂದು ಪಕ್ಷದ ಭ್ರಷ್ಟಾಚಾರ ಮಾತ್ರ ಕಣ್ಣಿಗೆ ಕಾಣುತ್ತದೆ, ಇನ್ನೊದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಜಾಣ ಮೌನ ತಳೆಯುತ್ತಾರೆ. ಇದರಿಂದ ಇವರು ಒಂದು ಪಕ್ಷದ ಪರವೋ ಎಂಬ ಭಾವನೆ ಬಂದು ನಿಧಾನಕ್ಕೆ ಹೋರಾಟ ತನ್ನ ಬಲವನ್ನು ಕಳೆದುಕೊಳ್ಳುತ್ತದೆ. ಹೀಗಾಗದಂತೆ ಅಣ್ಣಾ ಹಜಾರೆ ನೋಡಿಕೊಳ್ಳುತ್ತಿಲ್ಲ. ಒಂದು ಪಕ್ಷಕ್ಕೆ ಓಟು ಹಾಕಬೇಡಿ ಎಂದು ಹೇಳುವಾಗ ಅವರು ಪರ್ಯಾಯವನ್ನು ಸೂಚಿಸದೆ ಹೋದರೆ ವ್ಯವಸ್ಥೆ ಇನ್ನಷ್ಟು ಹದಗೆಡುವ ಸಂಭವೂ ಇದೆ. ವಾಸ್ತವವಾಗಿ ನೋಡುವಾಗ ದೇಶದ ಮುಂದೆ ಇರುವ ಇನ್ನೊಂದು ಪಕ್ಷ ಹಜಾರೆ ಓಟು ಹಾಕಬೇಡಿ ಎಂದು ಹೇಳಿದ ಪಕ್ಷಕ್ಕಿಂತ ಹೆಚ್ಚು ಬೇಗನೆ, ಹೆಚ್ಚು ತೀವ್ರವಾಗಿ ಭ್ರಷ್ಟವಾಗಿದೆ ಮಾತ್ರವಲ್ಲ ಪ್ರತಿಗಾಮಿ ಧೋರಣೆಯದೂ ಆಗಿದೆ. ಇಂಥ ಸ್ಥಿತಿಯಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಒಂದು ಪಕ್ಷಕ್ಕೆ ಮಾತ್ರ ಓಟು ಹಾಕಬೇಡಿ ಎಂದು ಹೇಳಿದರೆ ಈಗಿರುವ ವ್ಯವಸ್ಥೆಗಿಂತ ಇನ್ನಷ್ಟು ಅರಾಜಕ ವ್ಯವಸ್ಥೆ ಬರುವ ಸಂಭವ ಇದೆ-ಆನಂದ ಪ್ರಸಾದ್

ನರೇಂದ್ರ ಪೈ said...

ಶೀಲಾ,
ನಿಜ ಹೇಳಬೇಕೆಂದರೆ ನನಗೆ ಅಣ್ಣಾಹಜಾರೆಯವರಲ್ಲಾಗಲೀ, ಸಂತೋಷ ಹೆಗಡೆಯವರಲ್ಲೇ ಆಗಲಿ ಅಂಥಾ ಭರವಸೆಯೇನಿಲ್ಲ. ಅಥವಾ ಇದನ್ನು ಹೀಗೆ ಹೇಳಬಹುದು; ನಾವು ಮಾಡಬೇಕಾದ್ದನ್ನು ಇವರು ಮಾಡುತ್ತಿದ್ದಾರೆ ಎನ್ನುವ ಮಟ್ಟಿಗೆ ನಮಗೆ ಇವರ ಬಗ್ಗೆ ಅಭಿಮಾನವಿದ್ದರೂ ಅದು ನಮ್ಮ ಕ್ರಿಯಾಹೀನ ಸ್ಥಿತಿಯನ್ನೇ ತೋರಿಸುತ್ತದೆಯೇ ವಿನಃ ಇನ್ನೇನಲ್ಲ. ಇವರು ಏನೇನೆಲ್ಲ ಮಾಡಬೇಕೆಂದು ನಾವು ನಿರೀಕ್ಷಿಸುವುದು ಕೂಡಾ ಅಷ್ಟೇ.ಯಾಕೆ ಅವರೇ ಮಾಡಬೇಕು, ನಾವೂ ಮಾಡಬಹುದಾದ್ದು ಇಲ್ಲವೆ? ಆದರೆ ನಮಗೆ ನಮ್ಮ ನಮ್ಮ ದೈನಂದಿನ, ತಾಪತ್ರಯಗಳು ಹೆಚ್ಚೇ ಹೊರತು ದೇಶದ ಬಗ್ಗೆ ಏನಾದರೂ ಮಾಡುವುದಕ್ಕೆ ಪುರುಸೊತ್ತೂ ಇಲ್ಲ, ಮನಸ್ಸೂ ಇಲ್ಲ. ಯಾರು ಈ ದೇಶದ ಬಗ್ಗೆ ಕಾಳಜಿ-ಕಳಕಳಿ ತೋರಿಸಿ ಏನಾದರೂ ಮಾಡುತ್ತಿದ್ದಾರೋ ಅವರ ಉದ್ದೇಶದ ಬಗ್ಗೆಯೂ ನನಗೆ ಅನುಮಾನಗಳಿದ್ದೇ ಇವೆ. ನನ್ನದು ರೋಗಿಷ್ಠ ಮನಸ್ಥಿತಿಯಿದ್ದರೂ ಇರಬಹುದು, ಆ ಬಗ್ಗೆ ನನಗೇನೂ ಬೇಸರವಿಲ್ಲ. ಆದರೆ, ಅಣ್ಣಾಹಜಾರೆ ನಿರಶನ ಕೂತಾಗ, ಸಂತೋಷ ಹೆಗ್ಡೆ ಭೂಹಗರಣಗಳನ್ನ ಮತ್ತೊಂದನ್ನ ಬಯಲಿಗೆ ತರುತ್ತಿದ್ದಾಗ ನನಗೆ ಅನಿಸಿದ್ದೇನೆಂದರೆ, ಇದನ್ನು ಪ್ರತಿಯೊಬ್ಬ ನಾಗರಿಕನೂ ಸಾಂಕೇತಿಕವಾಗಿ ತೆಗೆದುಕೊಳ್ಳಬೇಕು ಮತ್ತು ತನ್ನ ಸ್ವಂತದ ಭ್ರಷ್ಟತೆಯನ್ನು ನೀಗಿಕೊಳ್ಳಲು ತನ್ನಿಂದಾದ ಪ್ರಯತ್ನ ಮಾಡಬೇಕು. ಇಷ್ಟನ್ನು ಈ ಇಬ್ಬರಾದರೂ ನಮ್ಮಲ್ಲಿ ಪ್ರಚೋದಿಸಬೇಕು ಅನಿಸಿತ್ತು ಮತ್ತು ನನ್ನಲ್ಲಿ ಅಂಥ ಒಂದು ಆತ್ಮಾವಲೋಕನವನ್ನು ಇವರು ಪ್ರಚೋದಿಸಿದ್ದರು. ಇದರಾಚೆ ನನಗೆ ಬೇರೆ ದೊಡ್ಡ ದೊಡ್ಡ ಸಂಗತಿಗಳೆಲ್ಲ ಬೇಡ. ಸಾಧ್ಯವಿದ್ದಷ್ಟೂ ಸುದ್ದಿ ಮತ್ತು ಟೀವಿಗಳಿಂದ ದೂರ ಉಳಿಯುವುದಕ್ಕೆ ನಾನು ಇಷ್ಟಪಡುತ್ತಿರುವುದೂ ಇಂಥದೇ ಕಾರಣಗಳಿಗಾಗಿ. ಸುದ್ದಿ ಮಾಡುವವರು, ಸುದ್ದಿಯನ್ನು ಹೆಕ್ಕಿಕೊಂಡು ಬದುಕುತ್ತಿರುವವರು, ಅದಕ್ಕೇ ಬಣ್ಣಹಾಕಿ ಮಾರಲು ಇಡುತ್ತಿರುವವರು ಮತ್ತು ಸತ್ಯಗಳು ಸುಳ್ಳಾಗುತ್ತ, ಸುಳ್ಳುಗಳು ಸತ್ಯವಾಗುತ್ತ, ಸುದ್ದಿಯಲ್ಲಿರುವ ಮನುಷ್ಯರೇ ಸುಳ್ಳಾಗುತ್ತಿರುವ ಈ ದಿನಗಳಲ್ಲಿ ಎಲ್ಲದರ ಬಗ್ಗೆ ಅಸಹ್ಯ ಮಾತ್ರ ಉಳಿಯುತ್ತದೆ ಮನಸ್ಸಿನಲ್ಲಿ. ಯಾಕೆಂದರೆ, ಇವತ್ತು ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳು ಮಾತ್ರಾ ಭ್ರಷ್ಟರು ಎಂದೋ, ಅವರ ಭ್ರಷ್ಟತೆ ದೊಡ್ಡದು ಆದುದರಿಂದ ಮುಖ್ಯ ಎಂದೋ ನಾನು ಅಂದುಕೊಂಡಿಲ್ಲ. ಯಥಾ ರಾಜ ತಥಾ ಪ್ರಜಾ ಎನ್ನುವುದನ್ನೇ ಯಥಾ ಪ್ರಜಾ ತಥಾ ರಾಜ ಎನ್ನುತ್ತೇನೆ ನಾನು. ನನ್ನನ್ನು ನಾನು ತಿದ್ದಿಕೊಳ್ಳಬಹುದು, ಬೇರೆಯವರನ್ನು ನಾನು ತಿದ್ದಲಾರೆ ಮತ್ತು ನನಗದರಲ್ಲಿ ಆಸಕ್ತಿಯೂ ಇಲ್ಲ. ನಿಮ್ಮ ಕಳಕಳಿಯ ಬಗ್ಗೆ ನನಗೆ ಮೆಚ್ಚುಗೆ ಮತ್ತು ಅನುಕಂಪ ಎರಡೂ ಇವೆ. ಆದರೆ ಸಂಪದದಲ್ಲಿ ನಡೆಯುತ್ತಿರುವಂಥ ಚರ್ಚೆಯಲ್ಲಿ ನಿಜಕ್ಕೂ ಆಸಕ್ತಿಯಿಲ್ಲ. ಅದಕ್ಕಾಗಿ ಇಲ್ಲಿ ಪ್ರತಿಕ್ರಿಯೆ ಹಾಕುತ್ತಿದ್ದೇನೆ.

ನರೇಂದ್ರ ಪೈ said...

ಶೀಲಾ,
ನಿಜ ಹೇಳಬೇಕೆಂದರೆ ನನಗೆ ಅಣ್ಣಾಹಜಾರೆಯವರಲ್ಲಾಗಲೀ, ಸಂತೋಷ ಹೆಗಡೆಯವರಲ್ಲೇ ಆಗಲಿ ಅಂಥಾ ಭರವಸೆಯೇನಿಲ್ಲ. ಅಥವಾ ಇದನ್ನು ಹೀಗೆ ಹೇಳಬಹುದು; ನಾವು ಮಾಡಬೇಕಾದ್ದನ್ನು ಇವರು ಮಾಡುತ್ತಿದ್ದಾರೆ ಎನ್ನುವ ಮಟ್ಟಿಗೆ ನಮಗೆ ಇವರ ಬಗ್ಗೆ ಅಭಿಮಾನವಿದ್ದರೂ ಅದು ನಮ್ಮ ಕ್ರಿಯಾಹೀನ ಸ್ಥಿತಿಯನ್ನೇ ತೋರಿಸುತ್ತದೆಯೇ ವಿನಃ ಇನ್ನೇನಲ್ಲ. ಇವರು ಏನೇನೆಲ್ಲ ಮಾಡಬೇಕೆಂದು ನಾವು ನಿರೀಕ್ಷಿಸುವುದು ಕೂಡಾ ಅಷ್ಟೇ.ಯಾಕೆ ಅವರೇ ಮಾಡಬೇಕು, ನಾವೂ ಮಾಡಬಹುದಾದ್ದು ಇಲ್ಲವೆ? ಆದರೆ ನಮಗೆ ನಮ್ಮ ನಮ್ಮ ದೈನಂದಿನ, ತಾಪತ್ರಯಗಳು ಹೆಚ್ಚೇ ಹೊರತು ದೇಶದ ಬಗ್ಗೆ ಏನಾದರೂ ಮಾಡುವುದಕ್ಕೆ ಪುರುಸೊತ್ತೂ ಇಲ್ಲ, ಮನಸ್ಸೂ ಇಲ್ಲ. ಯಾರು ಈ ದೇಶದ ಬಗ್ಗೆ ಕಾಳಜಿ-ಕಳಕಳಿ ತೋರಿಸಿ ಏನಾದರೂ ಮಾಡುತ್ತಿದ್ದಾರೋ ಅವರ ಉದ್ದೇಶದ ಬಗ್ಗೆಯೂ ನನಗೆ ಅನುಮಾನಗಳಿದ್ದೇ ಇವೆ. ನನ್ನದು ರೋಗಿಷ್ಠ ಮನಸ್ಥಿತಿಯಿದ್ದರೂ ಇರಬಹುದು, ಆ ಬಗ್ಗೆ ನನಗೇನೂ ಬೇಸರವಿಲ್ಲ. ಆದರೆ, ಅಣ್ಣಾಹಜಾರೆ ನಿರಶನ ಕೂತಾಗ, ಸಂತೋಷ ಹೆಗ್ಡೆ ಭೂಹಗರಣಗಳನ್ನ ಮತ್ತೊಂದನ್ನ ಬಯಲಿಗೆ ತರುತ್ತಿದ್ದಾಗ ನನಗೆ ಅನಿಸಿದ್ದೇನೆಂದರೆ, ಇದನ್ನು ಪ್ರತಿಯೊಬ್ಬ ನಾಗರಿಕನೂ ಸಾಂಕೇತಿಕವಾಗಿ ತೆಗೆದುಕೊಳ್ಳಬೇಕು ಮತ್ತು ತನ್ನ ಸ್ವಂತದ ಭ್ರಷ್ಟತೆಯನ್ನು ನೀಗಿಕೊಳ್ಳಲು ತನ್ನಿಂದಾದ ಪ್ರಯತ್ನ ಮಾಡಬೇಕು. ಇಷ್ಟನ್ನು ಈ ಇಬ್ಬರಾದರೂ ನಮ್ಮಲ್ಲಿ ಪ್ರಚೋದಿಸಬೇಕು ಅನಿಸಿತ್ತು ಮತ್ತು ನನ್ನಲ್ಲಿ ಅಂಥ ಒಂದು ಆತ್ಮಾವಲೋಕನವನ್ನು ಇವರು ಪ್ರಚೋದಿಸಿದ್ದರು. ಇದರಾಚೆ ನನಗೆ ಬೇರೆ ದೊಡ್ಡ ದೊಡ್ಡ ಸಂಗತಿಗಳೆಲ್ಲ ಬೇಡ. ಸಾಧ್ಯವಿದ್ದಷ್ಟೂ ಸುದ್ದಿ ಮತ್ತು ಟೀವಿಗಳಿಂದ ದೂರ ಉಳಿಯುವುದಕ್ಕೆ ನಾನು ಇಷ್ಟಪಡುತ್ತಿರುವುದೂ ಇಂಥದೇ ಕಾರಣಗಳಿಗಾಗಿ. ಸುದ್ದಿ ಮಾಡುವವರು, ಸುದ್ದಿಯನ್ನು ಹೆಕ್ಕಿಕೊಂಡು ಬದುಕುತ್ತಿರುವವರು, ಅದಕ್ಕೇ ಬಣ್ಣಹಾಕಿ ಮಾರಲು ಇಡುತ್ತಿರುವವರು ಮತ್ತು ಸತ್ಯಗಳು ಸುಳ್ಳಾಗುತ್ತ, ಸುಳ್ಳುಗಳು ಸತ್ಯವಾಗುತ್ತ, ಸುದ್ದಿಯಲ್ಲಿರುವ ಮನುಷ್ಯರೇ ಸುಳ್ಳಾಗುತ್ತಿರುವ ಈ ದಿನಗಳಲ್ಲಿ ಎಲ್ಲದರ ಬಗ್ಗೆ ಅಸಹ್ಯ ಮಾತ್ರ ಉಳಿಯುತ್ತದೆ ಮನಸ್ಸಿನಲ್ಲಿ. ಯಾಕೆಂದರೆ, ಇವತ್ತು ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳು ಮಾತ್ರಾ ಭ್ರಷ್ಟರು ಎಂದೋ, ಅವರ ಭ್ರಷ್ಟತೆ ದೊಡ್ಡದು ಆದುದರಿಂದ ಮುಖ್ಯ ಎಂದೋ ನಾನು ಅಂದುಕೊಂಡಿಲ್ಲ. ಯಥಾ ರಾಜ ತಥಾ ಪ್ರಜಾ ಎನ್ನುವುದನ್ನೇ ಯಥಾ ಪ್ರಜಾ ತಥಾ ರಾಜ ಎನ್ನುತ್ತೇನೆ ನಾನು. ನನ್ನನ್ನು ನಾನು ತಿದ್ದಿಕೊಳ್ಳಬಹುದು, ಬೇರೆಯವರನ್ನು ನಾನು ತಿದ್ದಲಾರೆ ಮತ್ತು ನನಗದರಲ್ಲಿ ಆಸಕ್ತಿಯೂ ಇಲ್ಲ. ನಿಮ್ಮ ಕಳಕಳಿಯ ಬಗ್ಗೆ ನನಗೆ ಮೆಚ್ಚುಗೆ ಮತ್ತು ಅನುಕಂಪ ಎರಡೂ ಇವೆ. ಆದರೆ ಸಂಪದದಲ್ಲಿ ನಡೆಯುತ್ತಿರುವಂಥ ಚರ್ಚೆಯಲ್ಲಿ ನಿಜಕ್ಕೂ ಆಸಕ್ತಿಯಿಲ್ಲ. ಅದಕ್ಕಾಗಿ ಇಲ್ಲಿ ಪ್ರತಿಕ್ರಿಯೆ ಹಾಕುತ್ತಿದ್ದೇನೆ.

Sheela Nayak said...

ಪ್ರತಿಕ್ರಿಯೆಗಾಗಿ ಧನ್ಯವಾದ ನರೇಂದ್ರ,....ನೀವ್ಹೇಳಿದಂತೆ...ನನಗೂ ಯಾರ ಮೇಲೆ ವಿಶ್ವಾಸವಿಲ್ಲ..ಸಂತೋಷ ಹೆಗ್ಡೆಯಾಗಲಿ...ಅಥವಾ...ಇನ್ಯಾರೇ ಆಗಲಿ...ಯಾಕೆಂದರೆ ನಮ್ಮ ಸಿಸ್ಟಮ್ ಇಷ್ಟೊಂದು ಹಾಳಾಗಿದೆಯಂದರೆ..ನನಗೆ ಬುದ್ಧನ ಕತೆಯೊಂದು ನೆನಪಾಗುತ್ತಿದೆ. ಮೇಲಕ್ಕೆ ತಿಳಿಯಾಗಿದೆ ಎಂದು ಕೈ ಹಾಕಲು ಹೋದರೆ ಕೆಳಗಿರುವ ಕೆಸರೆಲ್ಲ ಮೇಲೆದ್ದು ಬರುವ ಹಾಗಿದೆ ನಮ್ಮ ಪ್ರಜಾಪ್ರಭುತ್ವ! ಹಾಗಂತ ನಾವು ಒಂಚೂರು ತಿಳಿದವರು ಕೈಕಟ್ಟಿ ಕೂರುವ ಹಾಗಿಲ್ಲ...ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ತಿಳಿದಿದ್ದೇನೆ. ನನ್ನ ಲೇಖನ ಹಜಾರೆಯವ ಉಪವಾಸಕ್ಕೆ ದೇಶದಾದ್ಯಂತ ಉಂಟಾದ ಸಂಚಾಲಕ್ಕೆ ನನ್ನ ಮನದಲ್ಲಿ ಮೂಡಿದ ಭಾವನೆ ಫಲವಾಗಿ ಹುಟ್ಟಿತ್ತು.
ಏನಲ್ಲದಿದ್ದರೂ ಹೆಗ್ಡೆಯವರು ರಾಜಕಾರಣಿಗಳ ಮುಖವಾಡಗಳನ್ನು ಕಳಚಿ ಜೈಲಿನ ರುಚಿ ತೋರಿಸಿದರು..ಇಷ್ಟೆಲ್ಲಾ ಮಾಡಲು ಅಪ್ರತಿಮ ಧೈರ್ಯಬೇಕಲ್ಲವೆ? ಹಜಾರೆಯವರು ಪ್ರಾರಂಭಿಸಿದ ಆಂದೋಳನದ ಬಗ್ಗೆಯೂ ನನಗೆ ಮೆಚ್ಚಿಗೆಯಿದೆ. ಆದರೆ ಅವರ ಪ್ರಚೋದನೆಯ ಹೇಳಿಕೆಗಳು ಎಲ್ಲಿ ನಮ್ಮ ಯುವ ಪೀಳಿಗೆಯನ್ನು ತಪ್ಪು ದಾರಿ ಹಿಡಿಯುವಂತೆ ಮಾಡುವುದೋ ಎಂಬ ಹೆದರಿಕೆ...ಮೊದಲೇ ಬಿಸಿ ರಕ್ತ...ಅದಕ್ಕಾಗಿ ಈ ಲೇಖನ.
ನೀವು ಹೇಳುತ್ತಿರುವ ರೋಗಿಷ್ಟ ಮನಸ್ಥಿಯೇ ನನ್ನದೂ ಆಗಿದೆ...ಮನೆ ಮಕ್ಕಳು ಎಂದೇ ಜೀವನ ಸವಿಸುತ್ತಿರುವ ನಾನು ಹೀಗೆ ಲೇಖನ ಬರೆದು ನನ್ನ ಮನಸ್ಸನ್ನು ಸ್ವಾಂತನಗೊಳಿಸುತ್ತಿದ್ದೇನೆ....
ಅರೇ ಇದು ಅದು ನನ್ನದೂ ಅಭಿಪ್ರಾಯ...ಅದರ ಮೇಲೆ ಒಂದು ಲೇಖನ ಬರೆಯುವ ಯೋಚನೆಯಲ್ಲಿದ್ದೆ...ಖಂಡಿತ ಬೇರೆಯವರ ಮೇಲೆ ಎಂದೂ ಅಭಿಪ್ರಾಯ ಹೇರುವುದಿಲ್ಲ...ಆದರೆ ಈ ವ್ಯಕ್ತಿ ಪೂಜೆ ನನ್ನಿಂದ ಸಹಿಸಕ್ಕೊಗಾಲ್ಲ...ಆ ವ್ಯಕ್ತಿ ಎಷ್ಟೆ ಒಳ್ಳೆಯವನಾಗಲಿ...ಗಾಂಧಿಯೇ ಆಗಿರಲಿ....ಆತನ ಹೇಳಿಕೆಯನ್ನಾಗಲಿ ಅಭಿಪಯವನ್ನಾಗಲಿ ಒಂದಿಷ್ಟು ಪರಿಶೀಲಿಸಿ ಒಪ್ಪಿಕೊಳ್ಳಿ ಎನ್ನುವುದೇ ಈ ಬರಹದ ಉದ್ದೇಶ.
ಮತ್ತಿನ್ನೊಮ್ಮೆ ಥಾಂಕ್ಸ್!

Sheela Nayak said...

ತೇಜಸ್ವಿನಿ, ನನ್ನ ಕೋರಿಕೆ ಮನ್ನಿಸಿ ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದ! ನೀವೆಲ್ಲಾ ತಿಳಿದಂತೆ ಖಂಡಿತ ಭಾವೋದ್ವೇಗಕ್ಕೆ ಒಳಪಟ್ಟು ಬರೆದದಲ್ಲ..ಹಜಾರೆಯವರ ಕೋರ್ ಕಮಿಟಿಯಲ್ಲಿರುವ ಸದಸ್ಯರ ನಡವಳಿಕೆ ಮತ್ತು ಸ್ವತಃ ಅಣ್ಣಾ ಅವರ ಹೇಳಿಕೆಗಳು ..ಇವೆಲ್ಲಾ ಈ ಬರಹಕ್ಕೆ ಪ್ರೇರಣೆ. ಜನಪ್ರತಿನಿಧಿಗಳು ಭ್ರಷ್ಟಾಚಾರ ಮಾಡುತ್ತಿದ್ದರೆ ಅವರನ್ನು ಪಟ್ಟದಿಂದ ಕೆಳಗಿಳಿಸಿ...ಬುದ್ಧಿ ಕಲಿಸಿ..ಹೀಗೆ ಹೊಡೆದು ಬಡಿದು ಅಲ್ಲ.. ನಮ್ಮಲ್ಲಿ ಬ್ರಹ್ಮಾಸ್ತ್ರವಿದೆ..ಅದನ್ನು ಪ್ರಯೋಗಿಸೋಣ..ಏನಂತಿರಿ ನೀವು?

Sheela Nayak said...

ಆನಂದಪ್ರಸಾದ್, ನನ್ನ ಬರಹಕ್ಕೆ ನಿಮ್ಮ ಅನುಮೋದನೆ ನೋಡಿ ಸಂತಸವಾಯಿತು...ಒಬ್ಬರಿಗಾದರೂ ನನ್ನ ಕಳಕಳಿ ಅರ್ಥವಾಯಿತಲ್ಲವೆಂದು...ನೀವು ಹೇಳಿದಂತೆ ಪ್ರತಿಯೊಬ್ಬರು ಕೈ ಬೀಸಲು ಪ್ರಾರಂಭಿಸಿದರೆ..ಮತ್ತೆನಾದಿತು? ಗಾಂಧಿಯವರ ತತ್ವಗಳನ್ನು ಪಾಲಿಸುವ ಯತ್ನದಲ್ಲಿದ್ದೆನಾದರೂ ಎಂದೂ ಅವರ ವ್ಯಕ್ತಿ ಪೂಜೆ ಮಾಡಿಲ್ಲ...ತಪ್ಪು ಮಾಡುವುದು ಮಾನವನ ಸಹಜ ಪ್ರಕೃತಿ..ಅಂತೆಯೇ ಗಾಂಧಿಯವರು ತಪ್ಪನ್ನು ಮಾಡಿದ್ದರು..ಒಪ್ಪಿಕೊಂಡಿದ್ದರೂ ಕೂಡ....ಈ ದೊಡ್ಡ ಮನಸು ಹಜಾರೆ ಗ್ಯಾಂಗ್‌ನವರಿಗಿಲ್ಲ...ಹಜಾರೆಯಂತಹ ನೇತಾರರು...ತಾವು ಮಾತನಾಡಿದ್ದು ತಮಾಷೆಗೆ ಎಂದು ಹೇಳಿಕೆ ಕೊಟ್ಟು ಪಾರಾಗುವ ಹಾಗಿಲ್ಲ ಅಲ್ಲವೆ?

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...