ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಪರಂಪರೆಗಳು, ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ. ಒಂದುಕಡೆ ಬಹಳ ಮುಂದುವರೆದ ಆಧುನಿಕ ಜನಾಂಗ ಇನ್ನೊಂದೆಡೆ ಮೂಡ ನಂಬಿಕೆಯೋ, ಮತ್ತೇನೋ ಅಥವಾ ಪವಾಡಗಳೋ ಎನ್ನುವಂತಹ ಉತ್ಸವಗಳು. ಹಳೆಯ ತರಂಗವನ್ನು ತಿರುವುತ್ತಿದ್ದಾಗ ಈ ಲೇಖನವು ನನ್ನನ್ನು ಸೆಳೆಯಿತು. ನನ್ನ ಬ್ಲಾಗಿನ ಹೆಸರೇ ತಿಳಿಸುವಂತೆ ನನ್ನ ಚಿತ್ತವನ್ನು ಕದಡುವ ಅಥವಾ ಪ್ರಸನ್ನಗೊಳಿಸುವ ಯಾವುದೇ ಸಂಗತಿಯನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಹಾಗಾಗಿ ಈ ಲೇಖನ. ಇದೇ ೨೦೦೭ರ ಎಪ್ರಿಲ್ ತರಂಗದಲ್ಲಿ ಕಿಶನ್ ರಾವ್ ಕುಲಕರ್ಣಿ ಕುಪ್ಪಗಿಯವರ ಲೇಖನಿಯಿಂದ ಮೂಡಿ ಬಂದ ಈ ಲೇಖನದಿಂದ ಸಂಕ್ಷಿಪ್ತವಾಗಿ ಆಯ್ದು ಪ್ರಸ್ತುತ ಪಡಿಸಿದ್ದೇನೆ.
ಬೈಲಕೂರ ಎಂಬ ಊರು,. ಬಹುಶಃ ಉತ್ತರ ಕರ್ನಾಟಕದ ಒಂದು ಹಳ್ಳಿ. ಎಲ್ಲಾ ಊರಿನಲ್ಲಿ ನಡೆಯಿವಂತೆ ಈ ಊರಿನಲ್ಲೂ ಒಂದು ಜಾತ್ರೆ ನಡೆಯುತ್ತದೆ. ಆದರೆ ಈ ಜಾತ್ರೆಯು ಎಲ್ಲಾ ಕಡೆಯಲ್ಲಿ ಇರುವಂತೆ ರಥೋತ್ಸವವೋ ಅಥವಾ ದೀಪಾರಾಧನೆಯಿಂದಲೋ ಕಳೆಕಟ್ಟುವುದಿಲ್ಲ.......ಆದರೆ ಪೊರಕೆ ಏಟಿನಿಂದ, ಅದೂ ಖುಷಿಯಿಂದ ತಿನ್ನುವ ಏಟುಗಳಿಂದ ಕಳೆಕಟ್ಟುತ್ತದೆ. ಆದರೆ ನನ್ನನ್ನು ಸೆಳೆದದ್ದು ಇದಲ್ಲ. ಇಲ್ಲಿಯೇ ಪಾದುಕೆ ಸೇವೆ ಎಂದು ಮತ್ತೊಂದು ಹರಕೆಯ ಸೇವೆಯನ್ನು ಭಕ್ತರು ಹೊತ್ತುತ್ತಾರೆ. ಅದೂ ಯಾವ ದೇವರಿಗೆ ಅಂತಿರಾ....ಪವನಪುತ್ರ ಹನುಮಾನನಿಗೆ! ಇದರಲ್ಲೇನು ವಿಚಿತ್ರ ಎಂದುಕೊಳ್ತಿರಾ? ಸರಿ ಬಿಡಿ, ಇಂತಹ ಹರಕೆಗಳು ಭಾರತದ ಉದ್ದಗಲಕ್ಕೂ ನಡೆಯುತ್ತಿರುವುದರಿಂದ ಅದರಲ್ಲೇನೂ ಆಶ್ಚರ್ಯವೂ ಇಲ್ಲ ವಿಚಿತ್ರವೂ ಇಲ್ಲ. ವಿಪರ್ಯಾಸವಿರುವುದು ಭಕ್ತರು ಹರಕೆಯೆಂದು ಒಪ್ಪಿಸುವ ಪಾದುಕೆಯಲ್ಲಿ.
ಈ ಪಾದುಕೆಗಳು ಸುಮಾರು ಒಂದು ಅಡಿಅಗಲ ಮತ್ತು ಎರಡು ಅಡಿ ಉದ್ದವಾಗಿದ್ದು ಮುತ್ತು, ಹವಳ, ಬಣ್ಣ ಬಣ್ಣದಬಟ್ಟೆ, ಗೆಜ್ಜೆ, ಮಿರಿಮಿರಿ ಮಿಂಚುವ ಕಾಗದಗಳಿಂದ ಅಲಂಕೃತಗೊಂಡಿರುತ್ತದೆ. ಹರಕೆಹೊತ್ತವರು ಮಾರುತಿಯ ಗುಡಿಗೆ ತಮ್ಮ ತಲೆಯ ಮೇಲೆ ಈ ಪಾದುಕೆಗಳನ್ನು ಹೊತ್ತು ತರುತ್ತಾರೆ. ಇಲ್ಲಿ ಹರಕೆಯ ಕಥೆ ಮುಗಿಯುವುದಿಲ್ಲ. ಈ ಪಾದುಕೆಗಳಿಂದ ಮೈಯಲ್ಲ ಹೊಡಕೊಳ್ಳುತ್ತಾರೆ. ಹೀಗೆ ಮಾಡಿದರೆ ಮೈ- ಕೈ ನೋವು, ಕೆಮ್ಮು, ದಮ್ಮು, ನೆಗಡಿಯಂತಹ ಕಾಯಿಗಳು ವಾಸಿಯಾಗುತ್ತದೆ ಅಲ್ಲದೆ ಭೂತ- ದೆವ್ವಗಳ ಕಾಟವೂ ಮಾಯವಾಗುತ್ತದೆ ಎಂದು ನಂಬುತ್ತಾರೆ.
ನಾ ಓದಿದಂತೆ ಕ್ರೂರತನವಿರುವುದು ಪಾದುಕೆಯಲ್ಲಿ. ಈ ಪಾದುಕೆಗಳನ್ನು ತಯಾರಿಸಲು ಕೊಂಬು, ಕಿವಿ, ಬಾಲ, ಹಲ್ಲು ಮುಕ್ಕಾಗಿರದ ಆರೋಗ್ಯವಂತ ಕಪಿಲೆ ಇಲ್ಲವೇ ಬಿಳಿ ಆಕಳಿನ ಚರ್ಮವೇ ಬೇಕು. ಈ ಮೆಟ್ಟನ್ನು ಗುಡಿಗೆ ಒಪ್ಪಿಸುವಾಗ ಅದನ್ನು ತಯಾರಿಸಿದ ಚಮ್ಮಾರನಿಗೆ ಕಬ್ಬು, ಐದು ಬಗೆಯ ಧಾನ್ಯ, ದಕ್ಷಿಣೆ, ಹೋಳಿಗೆಯ ಉಲ್ಪಿ ಕೊಡುವುದು ಮಾತ್ರವಲ್ಲದೆ ಒಂದು ಪ್ರಾಣಿಯನ್ನು ಬಲಿ ನೀಡಿ ಪ್ರಸ್ಥ ಮಾಡಿಸಬೇಕು. ಇದಕ್ಕೆಲ್ಲಾ ಸುಮಾರು ಹದಿನೈದು ಸಾವಿರ ರೂಪಾಯಿ ಖರ್ಚು ಆಗುವುದೆಂದು ಲೇಖನ ಬರೆದ "ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ" ಬರೆದಿದ್ದಾರೆ.
ಬೇಸರವೆಂದರೆ ಈ ಹರಕೆಯನ್ನು ಪೂರೈಸಲು ಒಂದು ಆರೋಗ್ಯವಂತ ದನವು ಬಲಿಯಾಗಬೇಕಾಗುತ್ತದೆ. ಇಂತಹ ಪರಂಪರೆಯ ಅಗತ್ಯ ನಮಗಿದೆಯೇ? ಎಂಬುದುದು ನನ್ನ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಕಳುಗಳನ್ನು, ಅಪರೂಪದ ತಳಿಗಳನ್ನು ರಕ್ಷಿಸುವಂತಹ ಕಾರ್ಯಗಳು ನಡೆಯುತ್ತಿವೆ. ಗೋಮೂತ್ರದಿಂದ ಔಷಧ ಮಾತ್ರವಲ್ಲದೆ ಕೀಟನಾಶಕಗಳನ್ನೂ ತಯಾರಿಸುತ್ತಿದ್ದಾರೆ ಮತ್ತು ಅದರ ಪ್ರಚಾರವೂ ಆಗಿ ಜನರು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಈ ಬೈಲಕೂರಿನ ಜನತೆಗೆ ತಿಳಿ ಹೇಳಿ ಆರೋಗ್ಯವಂತ ದನದ ಹತ್ಯೆಯ ಪರಂಪರೆಯನ್ನು ದೂರಮಾಡಿಸುವ ಪ್ರಯತ್ನಗಳು ನಡೆಯಬೇಕು.
ಕಾಮಧೇನುವನ್ನು ಪೂಜಿಸುವಂತ ಹಿರಿಮೆಯನ್ನು ಹೊತ್ತಿದ ಹಿಂದೂ ನಾಡಿನಲ್ಲೇ ಹರಕೆಯ ಹೆಸರಿನಲ್ಲಿ ಹಸುವಿನ ಕ್ರೂರ ಹತ್ಯೆ......ಎಂತಹ ವಿಪರ್ಯಾಸ.
ಅಂದ ಹಾಗೆ ಇದೇ ಊರಿನಲ್ಲಿ ನಡೆಯುವ ಪೊರಕೆ ಜಾತ್ರೆಯೂ ಏನೂ ಕಡಿಮೆ ವಿಚಿತ್ರದಲ್ಲ. ಒಂದು ಸಮಾಧಾನವೆಂದರೆ ಇದರಲ್ಲಿಯಾವುದೇ ಪ್ರಾಣಿಯನ್ನು ಬಲಿ ಕೊಡುವುದಿಲ್ಲ. ಆ ವರ್ಣನೆ ಇನ್ನೊಂದು ಕಂತಿನಲ್ಲಿ.