ನನ್ನ ಮನಸ್ಸು

13 November, 2013

ಧರ್ಮ, ಕರ್ಮ.. ಬರೇ ಒಲವು!

ಧರ್ಮ ಕರ್ಮ ಸರ್ವವೂ
ಬರೇ ಒಲವು..
ಬರೇ ಒಲವು..
ವರುಷಗಳ ಕಾಲ ಬರೇ ಜಪ ತಪ..
ಹಂಬಲಿಸಿದು ವ್ಯರ್ಥವಾಗಲಿಲ್ಲ..

ಕೆಂಪಗಿನ ಮಾಂಸದ ಅಂಗಾಗ..
ಧಮನಿಗಳಲಿ ಹರಿಯುತಿಹ ನೆತ್ತರು..
ಉಚ್ಛ್ವಾಸ ನಿಶ್ವಾಸಗಳ ಹೊರಒಳ ನಡೆದಾಟ..
ತೃಷೆ, ಕ್ಷುಧೆಗಳ ಕಾಟ..
ಇದೆಲ್ಲಾ ಬರೇ ಲೋಕದ ನೋಟಕೆ..
ಭಾರಗಳ ಹೊರಲಿಕೆ..

ಮನದ ಕೊಳೆಯ ಗುಡಿಸಿ
ಸಿಂಪಡಿಸಿ ಒಲವೆಂಬ ಅಮೃತ
ಅಲ್ಲೀಗ  ಥಳ ಥಳ...
ಗಾಢನೀಲಿ ಅಂಬರದಲಿ
ಕಣ್ಮುಚ್ಚಾಲೆಯಾಡುತಿರುವ ಚುಕ್ಕಿಗಳ ನಡುವಿನ
ಚಂದ್ರಮನ ಚಂದ್ರಿಕೆಯಷ್ಟೇ ತಂಪು
ಮನದ ಕಂಪು..

ಸಾಕು ಸಾಕು..
ಒಲವು ತಮ್ಮಟೆ ಬಡಿದು ಎಚ್ಚರಿಸಿತು
ಒಳಕಿವಿಯ ತೆರೆದು..
ಒಳಗಣ್ಣಿಗೆ ಕಾಣಿಸಿ..
ಬದುಕು ಮುಗಿಸಿ ನನ್ನ ಸೇರಿದರೆ
ಆಗಲೇ ನೀ ಬಾಳುವೆ ಅಂದಿತು!

-ಪ್ರೇರಣೆ ರೂಮಿ

No comments:

Post a Comment