ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 June, 2013

ಸಂಬಂಧ!




ಮನುಷ್ಯ ಮೂಲತಃ ಒಂಟಿಯೇ. ಅವನ ಬದುಕು ವಿಷಾದದಿಂದ ಕೂಡಿರುತ್ತದೆ. ಅವನ ಸ್ನೇಹಿತರು, ಬಂಧುಗಳು, ಪ್ರೀತಿಪಾತ್ರರು ಅದನ್ನು ಸಹನೀಯವಾಗುವಂತೆ ಮಾಡುತ್ತಾರೆ. ಆದರೆ ಅಂತವರ್ಯಾರೂ ಅವನ ಬದುಕಿನಲ್ಲಿ ಇಲ್ಲದೇ ಹೋದರೆ, ಇದ್ದವರು ಅರ್ಧದಲ್ಲಿ ಎದ್ದು ಹೋದರೆ? ಬದುಕಿಗೆ ವಿದಾಯ ಹೇಳಬೇಕೆಂದು ಅನಿಸುವುದು ಸಹಜ.
-ಉಷಾ ಕಟ್ಟೆ ಮನೆ ಅವರ ಬ್ಲಾಗ್ ನಿಂದ ಎತ್ತಿದ ಕೆಲವು ಸಾಲುಗಳು.

ಆತ್ಮೀಯ ಸಂಬಂಧವೆಂದರೆ,
v  ಅಪರೂಪಕ್ಕೆ ತೊಡುವ ಕಪಾಟಿನಲ್ಲಿ ಬೆಚ್ಚಗೆ ಇರಿಸಿದ ಬಟ್ಟೆಗಳ ಹಾಗಲ್ಲ,
ಮನೆಯಲ್ಲಿ ನಿತ್ಯವೂ ಧರಿಸುವ ಮೈಮನ ಬೆಚ್ಚಗಿರಿಸುವ, ಹಿತ ನೀಡುವ ಬಟ್ಟೆಯಂತಿರಬೇಕು.

v  ಮೊದಲ ಮಳೆ ಸುರಿದಾಗ ಕಂಪನೀಯುವ ಮಣ್ಣಿನಂತಿರಬೇಕು.

v  ನಾಲ್ಕು ದಿನ ವಿಹಾರಕ್ಕೆಂದು ಹೊರಹೋದವರು, ಮರಳಿದಾಗ ನಮ್ಮ ಮನೆ ನಮಗೆ ಕೊಡುವ ಹಿತದಂತಿರಬೇಕು.

v  ಪ್ರತೀದಿನ ಬದುಕಿನಲಿ ಹಲವಾರು ಮುಗುಳುನಗೆಗಳು ತೋರಿಕೆಗೆ ವಿನಿಮಯವಾಗುತ್ತದೆ..  ಹಾಗಿರದೆ ಪರಸ್ಪರ ದೂರವಿದ್ದರೂ ಆ ಅನುಬಂಧದ ತಂದ ಸಂಬಂಧದ ನೆನಪೇ ನಮ್ಮ ವದನದಲಿ ನಗೆಯನು ಚಿಮ್ಮಿಸುವಂತಿರಬೇಕು.

v  ನಲಿವನು ಹಂಚಲು ಇರುವರು ನೂರಾರು ಮಂದಿ, ನೋವನು ಹಂಚಲು ಸಾಧ್ಯ ನಮ್ಮೊಳಗಿರಿಸಿದ ಆ ಆತ್ಮೀಯ ಸಂಬಂಧದೊಂದಿಗೆ ಮಾತ್ರ,

ಆತ್ಮೀಯ ಸಂಬಂಧದಲಿ-

v  ಅಲ್ಲಿ ಎರಡು ಬದಿಯಲಿ ಒಂದೇ ಬಗೆಯ ನಂಬಿಕೆ ವಿಶ್ವಾಸವಿರಬೇಕು..
v  ಕರೆಯದೇ ಓಗೊಡಲು ತಿಳಿದಿರಬೇಕು
v  ಆಡದೇ ಮನವ ತಿಳಿಯಬೇಕು..
v  ಮನದ ಮಾತಿಗೆ ಕಿವಿಯಾಗಬೇಕು.
v  ನೋವಿಗೆ ಸ್ಪಂದಿಸಬೇಕು.
v  ಹಂಚಿ ನೋವನಿಂಗಿಸಬೇಕು.
v  ವಿಚಾರಗಳು ಒಂದೇ ಆಗಿರಬೇಕಿಲ್ಲ.. ಆದರೆ ಪರಸ್ಪರ ಅನುಭವಕೆ ಇರಬೇಕು ಗೌರವ..
v  ಇಲ್ಲಿ ನಾನೇ ಸರಿ ನನ್ನದೇ ಸರಿ ಎನ್ನುವ ಹಾಗಿಲ್ಲ..
v  ಅಸೂಯೆ ಸಲ್ಲ.. ನಮ್ಮವರ ಏಳಿಗೆಗಿರಲಿ ನಮ್ಮ ಸಮ್ಮತಿ.
v  ಏಣಿ ಏರುವಾಗ ಜತೆಗೆ ಬರಲಿ ಎಂಬ ಭಾವವಿರಲಿ.
v  ಸಂಪರ್ಕದಲ್ಲಿ ಸದಾ ಇರಬೇಕು, ಸಾಧ್ಯವಾಗದೇ ಹೋದರೆ ಅದು ಬೇರೆ ಮಾತು
.
v  ವೈಮನಸು ಬಂದರೂ ಮಾತುಕತೆಯಿಂದ ದೂರ ಮಾಡುವ ಉದಾತ್ತ ಮನೋಭಾವವಿರಬೇಕು.

v  ಮನಸು ಮಾತುಕತೆಗೆ ಮುಕ್ತವಾಗಿರಬೇಕು.


ಸಂಬಂಧಗಳು ಬದಲಾವಣೆಗೆ ಹೊರತಾಗಿರುತ್ತದೆ. 

ಋತುಗಳು ಬರುತ್ತವೆ, ಹೋಗುತ್ತವೆ. 

ಆದರೆ ಮನ ಒಪ್ಪಿ ಬೆಸೆದ ಆತ್ಮೀಯ ಸಂಬಂಧಗಳು;

ಶಿಶಿರ ಋತುವಿಗೆ ಒಣಗಿ ನೆಲಗುರುಳಿದ ಎಲೆಗಳಂತಲ್ಲ. 

ವರ್ಷಋತುವಿನ ಬಿರುಗಾಳಿಗೆ ಬೆದರಿ ಬೇರು ಸಮೇತ ಉರುಳು ಮರಗಳಂತಲ್ಲ.

ವೈಶಾಖ ಮಾಸದ ಸುಡು ಬಿಸಿಲಿಗೂ ಬಾಡಿ ಬಸವಳಿಯುವುದಿಲ್ಲ.

ನಿತ್ಯವೂ ವಸಂತ ಋತುವಿನಲ್ಲಿ ಕಂಗೊಳಿಸುವ ಹಸುರು ಎಲೆಗಳ ಮಧ್ಯೆ ಕಂಪ ಹರಡಿ ಸದಾ ನಗೆ ಚೆಲ್ಲುವ ಕುಸುಮಗಳಂತೆ ಉಳಿಯುತ್ತವೆ, ಉಳಿಯಬೇಕು. 

ಅವೇ ನಿಜವಾದ ಬಂಧ. 

ಸಂಬಂಧಗಳು ನಮ್ಮಲ್ಲಿ ಬಲಹೀನತೆ ಹುಟ್ಟಿಸಬಾರದು.

ಮನೋವಿಕಾರಕ್ಕೆ ಕಾರಣವಾಗಬಾರದು.

ಆತ್ಮ ಸ್ಥೈರ್ಯವನ್ನು ನಾಶವಾಗಲು ಕಾರಣವಾಗಬಾರದು.

ಅಪರಾಧ ಮನೋಭಾವವನ್ನು ಬೆಳೆಸಬಾರದು.
  
ಪರಸ್ಪರ ಮಾತುಕತೆಗಳು ನೋವು ಕೊಡಬಾರದು. 

ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ಜಲಪಾತದಂತಿರದೇ ನಿತ್ಯವೂ ಒಂದೇ ಲಹರಿಯಲ್ಲಿರಬೇಕು. 

ಹೊಸ ಆಟಿಗೆ ದೊರೆತಾದ ಮಗು ಅದನ್ನು ತಾನೆಲ್ಲಿ ಹೋಗುತ್ತದೋ ಅಲ್ಲಲ್ಲಿ ಕೊಂಡೊಯ್ಯುತ್ತದೆ.. ಆದರೆ ಹಳತಾದ ಹಾಗೆ ಅದೆಲ್ಲಿ ಇಟ್ಟಿದೆಯೆಂಬುದನ್ನೂ ಮರೆಯುತ್ತದೆ. ಹಾಗಿರಬಾರದು ಆತ್ಮೀಯ ಸಂಬಂಧಗಳು.

ಸಂಬಂಧಗಳು ವೈನಿನಂತಿರಬೇಕು. 

ಹಳತಾದ ಹಾಗೆ ಮತ್ತಷ್ಟು ಬೆಸುಗೆ ಹೆಚ್ಚಬೇಕು. 

ಮನಗಳು ಮತ್ತಿಷ್ಟು ಹತ್ತಿರಬರಬೇಕು.

ಪರಸ್ಪರ ಭಾವಗಳನ್ನು ಗೌರವಿಸಬೇಕು. 

ಪರಸ್ಪರ ಪ್ರತಿಭೆಗಳಿಗೆ ಪ್ರೋತ್ಸಾಹದ ನುಡಿ ಇರಬೇಕು. 

ಆತ್ಮೀಯರ ಮೆಚ್ಚುಗೆಗಿಂತ ಸಿಹಿ ಮತ್ಯಾವುದು ಇಲ್ಲ.

ಅದೇ ಅವರ ಮೌನ, ತಿರಸ್ಕಾರ ಇವುಗಳಿಗಿಂತ ಕಹಿ ಮತ್ಯಾವುದೂ ಇಲ್ಲ.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...