ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 March, 2013

ಹೀಗೊಂದು ಚಿಂತನೆ!

-
ನನ್ನದೊಂದು ಹಳೆಯ ಬರಹ

-
 ಹೀಗೊಂದು ಚಿಂತನೆ!

ಬದುಕೇ,
ನೀ ಬಲು ನಿಗೂಢ,  ದೊಡ್ಡ ಮಾಯಾವಿಯೇ ಸರಿ
ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ

ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು
ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ

ಬಂದು ಹಿಂದಿರುವುದರೆಡೆ ಮಧ್ಯೆ ನಿತ್ಯವೂ ಮರಣ ಜನನ
ಮೂಳೆ ಮಾಂಸಗಳ ಬೆಳೆಸಲು ತತ್ವಗಳ ಅಡವು

ಹತ್ತಿಕ್ಕಿದಷ್ಟೂ ಮತ್ತಷ್ಟು ಬೆಳೆಯುವ ಕಾಮನೆಗಳು
ಕರ್ಮ-ಕರ್ತವ್ಯಗಳೆಡೆಯಲ್ಲಿ ಹೊರಗಿಣುಕುವ ಕನಸುಗಳು

ತಗ್ಗಿ ಬಗ್ಗಿ ನಡೆದರೆ ಗುದ್ದು, ತಲೆಯೆತ್ತಿ ನಡೆದರೆ ಸದ್ದು
ಸೊಲ್ಲೆತ್ತದೇ ಬದುಕು ಅಂದರೂ ಕೇಳದು ಮನದಳಲು

ಒಳಗೊಂದು ಬದುಕು, ಹೊರಗೊಂದು ಬದುಕು
ಯಾವುದು ಮಿತ್ಯ, ಯಾವುದು ಸತ್ಯ ತಿಳಿಯದಲ್ಲ

ಜಾತಿ ಮತ ಧರ್ಮಗಳ ಕಟ್ಟು ಪಾಡು
ಒಂದೇ ವದನ, ಮುಖವಾಡ ಹಲವು

ಹೊರಗೆ ಮಾನವ, ಆಗಾಗ ಇಣುಕುವ ದಾನವ
ಅವಕಾಶವಿದೆಯೇ ಮಾನವೀಯತೆಗೆ

ಒಳಗೆ ತಳಮಳ, ಹೊರಗೆ ಮಂದಹಾಸ
ತೋರುವರೇ ನಾಟಕೀಯತೆ

ಹೊರಗೆ ತಣ್ಣಗೆ, ಒಳಗೆ ಕೋಲಾಹಲ
ಉಕ್ಕುವುದೇ ಹಾಲಾಹಲ

ಹೊರಗೆ ಮಿನುಗುವ ಬಣ್ಣ, ಒಳಗೆ ಕರಿಕತ್ತಲು
ತೋರುವರೇ ದೀವಣಿಗೆಯ

ಚೂರಿ ಕತ್ತಿ ಬೇಕಿಲ್ಲವಲ್ಲ, ಮಾತೇ ಸಾಕಲ್ಲ
ಕೊಡುವರು ಮರಣವನಲ್ಲ

ಹಾವು ಏಣಿಯಾಟದ ನಿತ್ಯ ನಡೆ
ಕಾಲೆಳೆದು ಬೀಳಿಸುವಾಟದ ಕುಸ್ತಿ

ಎತ್ತರಕೇರಿದರೆ ಅಮಲು, 
ಕೆಳಗಿಳಿದರೆ ಸುಸ್ತು

ಆಗೊಮ್ಮೆ ಈಗೊಮ್ಮೆ ಆತ್ಮದೆಚ್ಚರ
ನಡೆ ನಡೆ ಆ ಧಾಮ, ಈ ಧಾಮ

ಮುಳುಗೇಳು ಗಂಗೆಯಲ್ಲಿ
ಕರಗುವುದೇ ಜನುಮ ಜನುಮಗಳ ಪಾಪದ ಅಂಟು

ತಪ್ಪುವುದೇ ವೈತರಿಣೀಯ ನಂಟು
ಮತ್ತೆ ಜನನ ಮರಣದ ಚಕ್ರದಾಟ

ಸದ್ಗತಿಗಾಗಿಲ್ಲವೇಕೆ ನಮ್ಮ ಹೋರಾಟ
ಎಲ್ಲವೂ ಸೂತ್ರದಾರನ ಇಚ್ಛೆಯಾಟ!

"ಇದೆಲ್ಲಾ ಕೇವಲ ನನ್ನಿಚ್ಛೆ- 
ಧರ್ಮ-ಅಧರ್ಮ, ಸತ್ಯ-ಮಿತ್ಯ, 
ಪ್ರೀತಿ-ದ್ವೇಷ, ಜನನ-ಮರಣ... ಎಲ್ಲವೂ ಬೇಕು
ಸುಸೂತ್ರವಾಗಿ ಸಾಗಬೇಕು ಗೊಂಬೆಯಾಟ
ಮಿಥ್ಯಾ ಸಂಸಾರದ ಕೊನೆಯೂ ನಾನಿಚ್ಛಿಸಿದಾಗಲೇ
ನಾನಿತ್ತದನ್ನೂ ಈಯದನ್ನೂ ಒಪ್ಪಿ
ನಡೆ ಮುಂದೆ ನಾ ತೋರುವ ಹಾದಿಯಲಿ 
ಪೊಂದುವೆ ನೀ ಸದ್ಗತಿ"
ಎಂದನಾ ಈ ಆತ್ಮದೊಳಗಿನ ಪರಮಾತ್ಮ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...