ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 December, 2012

ನಾನು ಅಸಹಾಯಕಿ...ಹೀಗೆ ಪತ್ರ ಬರೆದು ಅಂತರಂಗವ ತೋಡಿಕೊಳ್ಳುವೆ!

  ಗೆಳೆಯ,

      ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರಹಸನವನ್ನು ನೀನು ನೋಡುತ್ತಿರಬಹುದು. ಇಂತಹದೆಲ್ಲಾ ನಾಟಕವನ್ನು ನೋಡಿದಾಗ ನನಗೆ ಮೈಯೆಲ್ಲ ಉರಿಯುತ್ತದೆ. ಈ ಫೇಸ್ ಬುಕ್ಕಿನಲ್ಲಿ ಎಲ್ಲರೂ ಅನುಕಂಪದ, ದೊಡ್ಡ ದೊಡ್ಡ   ಮಾತಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರಲ್ಲಿ ಅನೇಕ ಮಂದಿ ಗೋಮುಖ ವ್ಯಾಘ್ರರಿದ್ದಾರೆಂಬು ನಿನಗೂ ಗೊತ್ತು ತಾನೆ!

   " ------ "   ನಾನು ಹಿಂದಿನಿಂದಲೂ ಈ ಶಬ್ದವನ್ನು ಬಳಸುತ್ತಿರಲಿಲ್ಲ...ನನಗೆ ಇನ್ನೂ ನೆನಪಿದೆ, ನಾವೆಲ್ಲ ( ನನ್ನ ಅಪ್ಪ, ಅಮ್ಮ...ನನ್ನ ತಮ್ಮಂದಿರು ) ಒಟ್ಟಿಗೆ ಸಿನೆಮಾ ನೋಡುವಾಗ ಇಂತಹ ದೃಶ್ಯ ಬಂದಾಗಲೆಲ್ಲಾ ನನಗೆ ನೋಡಲು ಆಗುತ್ತಿರಲಿಲ್ಲ. ಎದ್ದು ಹೋಗುತ್ತಿದ್ದೆ...ಸ್ವಲ್ಪ ಸಮಯಕ್ಕಾದರೂ ಟಿವಿ ಆಫ್ ಮಾಡಬಹುದಿತ್ತು ಅಂತ ಅನಿಸುತ್ತಿತ್ತು. ಆದರೆ ನನ್ನ ಅಪ್ಪನಾಗಲಿ, ಅಮ್ಮನಾಗಲಿ ಎದ್ದು ಆಫ್ ಮಾಡುತ್ತಿರಲಿಲ್ಲ. ಸುಮ್ಮನೆ ಕುಳಿತು ನೋಡುತ್ತಿದ್ದರು.  ಯಾರು ಆ ಬಗ್ಗೆ ಮಾತನಾಡುತ್ತಿರಲಿಲ್ಲ. ನನಗೆ ಅಮ್ಮನಾದರೂ ಅಪ್ಪನಿಗೆ ಹೇಳಿ ಪ್ರತಿಭಟಿಸಬಹುದಿತ್ತು ಅಂತ ಎಷ್ಟೋ ಸಲ ಅನಿಸುತ್ತಿತ್ತು. ಮುಂದೆನೂ ಆ ಬಗ್ಗೆ ಪೇಪರಿನಲ್ಲಿ ಅಥವಾ ಟಿವಿಯಲ್ಲಿ ಅದರ ಬಗ್ಗೆ ಮಾಹಿತಿ ಕೊಟ್ಟಾಗ ನನ್ನ ಒಳ ಮನಸ್ಸು ತುಂಬಾ ಅಳುತಿತ್ತು. ಈ ಒಂದು ವಿಷಯಕ್ಕೆ ನಾನು ನನ್ನೊಡೆಯನ ಮೇಲೆ ಬಹಳ ಸಿಟ್ಟುಗೊಂಡಿದ್ದೆ.  ಮೊದಲೇ ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮ, ದೈಹಿಕ ಬಲನೂ ಕಡಿಮೆ...ಅದರ ಮೇಲೆ ಈ ಅತ್ಯಾಚಾರ! ಯಾಕೆ ಹೀಗೆ ಬೇಧಭಾವ ನನ್ನೊಡೆಯ?

       ಏನಾದರೂ ಸಹಿಸಬಹುದು...ಆದರೆ ಇಷ್ಟಕ್ಕೆ ವಿರುದ್ಧವಾಗಿ ಪುರುಷನು ಸ್ತ್ರೀಯ ಮೇಲೆ ತನ್ನ ಪ್ರತಾಪವನ್ನು ತೋರಿಸುವುದು ಎಷ್ಟು ಸರಿ! ಒಂದು ಗಂಡು ಹೆಣ್ಣಿನ ಸಂಗಮವೆಂದರೆ ಅದೊಂದು ಅಮೃತಕ್ಕೆ ಸಮಾನವಾದ ಭಾವ.....ಒಬ್ಬರಿಗೊಬ್ಬರು ಒಲಿದು ದೇಹದ ಜೊತೆ ಮಾನಸಿಕವಾಗಿ ಸಮಾಗಮ ಹೊಂದಿದರೆ ಆ ಸುಖವನ್ನು ಹೋಲಿಸಲು ಉಪಮೆಗಳೇ ಇಲ್ಲವಾಗಬಹುದು.  ಸ್ತ್ರೀ ಅಂದರೆ ಕೇವಲ ಭೋಗದ ವಸ್ತುವೇ? ಅಥವಾ ಬರೇ ಪುರುಷನ ಸೇವೆ ಮಾಡಲು ಬ್ರಹ್ಮನು ಸೃಷ್ಟಿಸಿದನೆ!  ಮಹಾಲಕ್ಷ್ಮಿ, ದುರ್ಗಾ ಸ್ತೋತ್ರ, ಹೀಗೆ ಹಲವಾರು ದೇವಿಯಂದಿರ ಉಪಾಸನೆ ಮಾಡುವ ಪೂಜಾರಿ ಉಳಿದ ಸ್ತ್ರೀಯರನ್ನು ಯಾವ ದೃಷ್ಟಿ ಕೋನದಿಂದ ನೋಡಬಹುದು! ತನ್ನ ಸ್ತ್ರೀ ಮೇಲಧಿಕಾರಿಯ ಎದುರು "ಮೇಡಂ" ಎಂದು ಕರೆಯುವವನು ಆಕೆಯನ್ನು ಹಿಂದಿನಿಂದ ಕರೆಯುವ ಭಾಷೆಯನ್ನು ನಾನು ಕೇಳಿಬಲ್ಲೆ.  ದೇವರು ಸ್ತ್ರೀಗೆ ಪುರುಷರಿಗಿಂತ ಬೇರೆ ರೀತಿಯ ರೂಪ ಕೊಟ್ಟ....ಅದನ್ನು ಸೌಂದರ್ಯದ ದೃಷ್ಟಿಯಿಂದ ನೋಡಬೇಕೆ ಹೊರತು ಕಾಮುಕ ದೃಷ್ಟಿಯಿಂದ ನೋಡುವುದೇ...ನಾನು ಕಲಾರಾಧಕಿ. ನನಗಿನ್ನೂ ಸರಿಯಾಗಿ ನೆನಪಿದೆ, ೧೯೮೯ರಲ್ಲಿ  ನನ್ನ ಮಾಸ್ತ್ರರರು ಶಿಲಾ ಬಾಲಿಕೆಯ ಚಿತ್ರ ಚಾರ್ಕೋಲಿನಲ್ಲಿ ಬಿಡಿಸಲು ಹೇಳಿದಾಗ.....ನನಗೆ ಮೊದಲು ಮುಜುಗರವಾಗಿತ್ತು..ಆದರೆ ಚಿತ್ರ ಬಿಡಿಸುತ್ತಿದ್ದಂತೆಯೇ ನಾನು ಬರೇ ಕಲಾಕಾರಳಾಗಿದ್ದೆ...ಹೆಣ್ಣು ಗಂಡಿನ ಬೇಧ ಭಾವವೇ ನನಗಿರಲಿಲ್ಲ....ಇಂದಿಗೂ ಆ ಚಿತ್ರ ನನ್ನ ಅತ್ತ್ಯುತ್ತಮ ಚಿತ್ರದಲ್ಲಿ ಒಂದಾಗಿದೆ. 

      ಹುಂ, ನನಗಿನ್ನೂ ಚೆನ್ನಾಗಿ ನೆನಪಿದೆ...ನೀನು ಒಮ್ಮೆ ನನ್ನೊಡನೆ ಈ ವಿಷಯ ಚರ್ಚೆ ಮಾಡಲು ಬಯಸಿದ್ದಿ..ಆದರೆ ನನಗಿಷ್ಟವಿರಲಿಲ್ಲ. ಇಂದಿಗೂ ನನಗೆ ಈ ಬಗ್ಗೆ..ಗಂಡಸ್ಯಾಕೆ ಯಾವ ಹೆಣ್ಣಿನ ಜೊತೆಗೂ ಮಾತನಾಡಲು ಆಗುವುದಿಲ್ಲ. ಮತ್ತೆ ಇವತ್ಯಾಕೆ ಈ ಬಗ್ಗೆ ನನಗೆ ಬರೆಯುತ್ತಿರುವಿ ಅಂತ ನಿನಗೆ ಅನಿಸಬಹುದು..ಹೌದು, ಅದಕ್ಕೂ ಕಾರಣವುಂಟು. - ನನ್ನ ಮಗಳು! ದೆಹಲಿಯಲ್ಲಿ  ಬಸ್ಸಿನಲ್ಲಿ ನಡೆದ ಆ ದುರ್ಘಟನೆಯ ಬಗ್ಗೆ ಪೇಪರಿನಲ್ಲಿ ಓದಿ ನನಗೆ ಆಶ್ಚರ್ಯವಾಯಿತು....ಯಾವಾಗಲೂ ಈ ಬಗ್ಗೆ ಮಾತನಾಡದ ನಾನು ಆವತ್ತು ನನ್ನ ಮಗಳಿಗೆ ಕೇಳಿದೆ... ಅವಳಿಗೆ ಈ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. ( ಅಷ್ಟರ ತನಕ ಫೇಸ್ ಬುಕ್ಕಿನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಹರಿಯುತ್ತಿರಲಿಲ್ಲ....whats appನಲ್ಲೂ)  ಪೇಪರಿನಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ...ಓದಿ ಆಶ್ಚರ್ಯ  ಪಡುವ ಹಾಗೆ ಇತ್ತು...ಅನೇಕ ಪ್ರಶ್ನೆಗಳು...ಮನಸ್ಸೊಳಗೆ ಹುಟ್ಟಿದವು. ಆದರೂ ಒಬ್ಬ ಅಸಹಾಯಕ, ಬಲಹೀನ ಹೆಣ್ಣಿನ ಮೇಲೆ ಅನೇಕ ಬಲವಂತ ಗಂಡು ಪ್ರಾಣಿಗಳು ಸವಾರಿ ಮಾಡಿ ತಮ್ಮ ಗಂಡಸುತನವನ್ನು ಸಾಬೀತು ಪಡಿಸುವುದನ್ನು ಓದಿ ಮನ ನಿಸ್ಸಾಹಾಯಕವಾಗಿ ಬಳಲಿತು. ನಾನು ಮಗಳೊಡನೆ ಮೊದಲ ಬಾರಿಗೆ ಮನ ಬಿಚ್ಚಿ, ಮುಜುಗರ ಪಡದೆ ಆ ಬಗ್ಗೆ ಅವಳ ಅಭಿಪ್ರಾಯ ಕೇಳಿದೆ.  ಶಾಲಾ ದಿನಗಳಿಂದಲೂ ಅವಳಿಗೆ  ಹುಡುಗರ ಮತ್ತು ಹುಡುಗಿಯರ ಜೊತೆ ಸಮನಾದ ಸ್ನೇಹವಿತ್ತು. ಅವಳು ತನ್ನ ಎಲ್ಲಾ ಸ್ನೇಹಿತ ಮತ್ತು ಸ್ನೇಹಿತೆಯರ ಬಗ್ಗೆ ನನಗೆ ಮಾಹಿತಿ ಕೊಡುತ್ತಿದ್ದಳು. ಫೇಸ್ ಬುಕ್ಕಿನಲ್ಲೂ ಅಷ್ಟೇ! ಆದರೂ ನಾನು ಅವಳು  ಕಾಲೇಜಿನಲ್ಲಿ ರಾತ್ರಿ ಹೊತ್ತು ಕಾರ್ಯಕ್ರಮವಿದ್ದಾಗ  ತಡವಾಗಿ ಬರುವುದನ್ನು ಆಕ್ಷೇಪಿಸುತ್ತಿದ್ದೆ...." ಅದ್ಯಾಕೆ ನನಗೆ ಮಾತ್ರ ಈ ರೂಲ್..." ಸೂಕ್ಷ್ಮವಾಗಿ ತಿಳಿ ಹೇಳಿದರೂ ಕೇಳುತ್ತಿರಲಿಲ್ಲ. ಮೊನ್ನೆ ದಾರಿಯಲ್ಲಿ ಮಧ್ಯಾಹ್ನದ ಹೊತ್ತು ಒಂಟಿಯಾಗಿ ಬರುವಾಗ ಯಾರೋ ಹುಡುಗ ಬೈಕಿನಲ್ಲಿ ಹೋಗುತ್ತಾ ಇವಳಿಗೆ ಏನೋ ಅಂದನಂತೆ..ಇವಳು ಅವನಿಗೆ ಏನೋ ಹೇಳಬೇಕೆಂದುಕೊಂಡಳಂತೆ..ಮತ್ತೆ ತಾನು ಒಂಟಿಯಾಗಿದ್ದೇನೆಂದು ನೆನಪಾಗಿ ಸುಮ್ಮನಾದಳಂತೆ. ಬಸ್ಸಿನಲ್ಲಿ ಪಾಸ್ ತೋರಿಸಿದಕ್ಕೆ ಕಂಡಕ್ಟರ್ ಬೈದನೆಂದು ಕೋಪಕ್ಕೆ ಅವನಿಗೂ ಇಡಿಯಟ್ ಅನ್ನಲು ಹೋಗಿದ್ದಳು...ಇದೆಲ್ಲಾ ನನಗೆ ಮತ್ತೆ ನೆನಪಿಗೆ ಬಂದು ಇದು ಸರಿಯಾದ ಸಂದರ್ಭ..ಗಂಡಸು ಏನೇನು ಮಾಡಬಲ್ಲ..ಮತ್ತು ನಾವು ಬಲಹೀನ, ಬುದ್ಧಿಹೀನ ಹೆಂಗಸರು ಹೇಗೆ ನಿಸ್ಸಹಾಯಕರಾಗುವ ಸಂದರ್ಭ ಸೃಷ್ಟಿಯಾಗುತ್ತದೆ....ಎಂದೆಲ್ಲ ಹೇಳಿದೆ. "ನೋಡು, ಅತ್ಯಾಚಾರವೆಂದರೆ ದೇಹ ಮಾತ್ರವಲ್ಲ ಮನಸ್ಸಿನ ಮೇಲೂ ಇದರ ಪರಿಣಾಮ ಬೀರುತ್ತದೆ. ನಿಜ, ಕಾಲ ಕಳೆದಂತೆ ದೇಹದ ಮೇಲಿನ ಗಾಯ ಮಾಗುತ್ತದೆ. ಆದರೆ, ಮನಸ್ಸು...ಅದಕ್ಕೆ ತಡೆಯಲಾಗುವುದಿಲ್ಲ." 

        "ಅಮ್ಮ, ಅನೇಕ ಮಂದಿ ಗಂಡಸರು ಹೇಳುತ್ತಾರೆ..ಇದಕ್ಕೆಲ್ಲಾ ನಾವು ಹಾಕುವ ಡ್ರೆಸ್‍ಗಳೇ ಕಾರಣವಂತೆ. ನೀನೇನು ಹೇಳುತ್ತಿಯಾ?" 
   
    " ಅದೂ ಹೌದು..ಆದರೆ ಅದು ಗಂಡಸಿಗೆ ತಾನು ತೋರಿಸುವ ಪೌರುಷ ಸರಿಯೆಂದು ಹೇಳಲು ಇರುವ ಒಂದು ನೆವ. ಬುರ್ಕ ಹಾಕುವ ಮುಸ್ಲಿಮ್ ಹೆಂಗಸರು ಬಲಿಯಾಗಿಲ್ಲವೇನು? ಹೋಗಲಿ, ೩ ವರ್ಷದ ಮಗು..ಅದನ್ನೂ ಬಿಡುವುದಿಲ್ಲವಲ್ಲ ಈ ಗಂಡು...ಅದೆಲ್ಲ ಹೋಗಲಿ, ತನ್ನ ಮಗಳ ಮೇಲೆ, ತನ್ನದೇ ತಂಗಿ ಅಕ್ಕನ ಮೇಲೆ ಪೌರುಷ ಮೆರೆಸುತ್ತಿರುವ ಗಂಡಸನ್ನು ಏನೆಂದು ಕರೆಯೋಣ! ಅದಕ್ಕೆಲ್ಲ ಕುಮ್ಮತ್ತು ನೀಡುವ, ಹಣ ದಾಹಕ್ಕೆ ಬಲಿಯಾಗಿರುವ ತಾಯಂದಿರನ್ನು ಏನೆಂದು ಅನ್ನೋಣ!   ಚಲಚಿತ್ರದಲ್ಲಿ, ಜಾಹಿರಾತಿನಲ್ಲಿ, ಕಲಾತ್ಮಕ ಚಿತ್ರವೆಂಬ ಹೆಸರಿನಲ್ಲಿ..ಹೀಗೆ ಅನೇಕ ರೀತಿಯಲ್ಲಿ ತನ್ನ ಅಂಗಾಂಗಳ ಪ್ರದರ್ಶನ ಮಾಡಿ ಹಣ ಸಂಪಾದಿಸುತ್ತಿರುವ ಸಮಾಜದ ಮೇಲ್ವರ್ಗದ ಜನರನ್ನು ಈ ಕೆಟ್ಟ ವರ್ಗದ ಪಟ್ಟಿಯಲ್ಲಿ ಹಾಕಿದ್ದೇನೆ ನಾನು. 

         ಬಿಡು, ಫೇಸ್ ಬುಕ್ಕಿನಂತ ಸಾಮಾಜಿಕ ತಾಣದಲ್ಲೇ ನಿನಗೆ ಇಂತಹ ಸಾವಿರಾರು ಉದಾಹರಣೆ ಸಿಗುತ್ತದೆ. ನೋಡಿದಿಯಾ ಇಂದು ಹುಡುಗಿ..ಫೋಟೊ ಹಾಕಿದ ಕೂಡಲೇ...ಲೈಕುಗಳ ಮಳೆ ಬರಲು ಆರಂಭವಾಗುತ್ತದೆ....
ಹೋಗಲಿ, ಹುಡುಗಿಯರಿಗೆ ಹೀಗೆ subscription ಹಾಗೂ ಲೈಕುಗಳು ಸಿಗುವುದು ಸಹಜ...ಆದರೆ, ನಾನು ಗಮನಿಸಿದ ಹಾಗೆ ಅನೇಕ ಮದುವೆಯಾದ ಹೆಂಗಸರಿಗೂ ಹೀಗೆ ಲೈಕುಗಳ ಮಳೆ ಸಿಗುವುದುಂಟು. ಅರೇ, ನನಗೆ ಸಿಗುವುದಿಲ್ಲವೇ ಹಾಗೆ...ಯಾಕೆಂದರೆ ನನ್ನ ಸ್ನೇಹಿತರ ವೃತ್ತವನ್ನೇ ಹಾಗಿಟ್ಟಿದ್ದೇನೆ.  ಮತ್ತೆ...ಇರು, ನಿನಗೆ ಕೆಲವರು ಈ ಹೆಂಗಸರಿಗೆ ಲೈಕು ಮಾತ್ರವಲ್ಲ ಕಮೆಂಟು ಹಾಕಿದನ್ನೂ ತೋರಿಸಿತ್ತೇನೆ- nice, beautiful, awesome....smile...ಚೆನ್ನಾಗಿದೆ. ಎಷ್ಟು ಚಂದ ಕಾಣ್ತಿರಾ!  ಇವರು ಮನೆಯಲ್ಲಿ ತಮ್ಮ ಹೆಂಡತಿಯರನ್ನು ಸರಿಯಾಗಿ ನೋಡ್ತಾರೋ ಇಲ್ಲವೋ ಅಂತ ನನಗೆ ಸಂಶಯ. ಇನ್ನು ಕೆಲ ಗಂಡಸರಿಗೆ ಫಿಲ್ಮ್ ಆಕ್ಟರ್ ಅಂದ್ರೆ ಜೀವ..ಮನೆಯಲ್ಲಿ ಯಾವ ಹೆದರಿಕೆ ಇಲ್ಲದೆ ಅವಳ ಅರೆ ಬೆತ್ತಲೆ ಚಿತ್ರ ನೋಡಿ ಆನಂದ ಪಡುತ್ತಾರೆ........" 

    ಗೆಳೆಯ, ಹೀಗೆಲ್ಲ ನನ್ನ ಮಗಳ ಜೊತೆ ಮಾತನಾಡಿದ ನಂತರ ನನಗೆ ನಿನ್ನ ನೆನಪಾಯಿತು. ಇಷ್ಟು ದಿನವೂ ಆ ವಿಷಯ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ತಳಮಳ, ಆತಂಕ, ಮತ್ತಿನ್ನೇನೋ ಎಲ್ಲವನ್ನೂ ನಿನ್ನೊಡನೆ ಹಂಚಬೇಕೆಂದೆನಿಸಿತು. ಹೌದೋ, ನೀನೊಬ್ಬನೇ ನನ್ನ ಮಾತಿಗೆಲ್ಲಾ ಕಿವಿಯಾಗ್ತಿಯಾ...೩ದಿನದಿಂದ ಅದೇ ಸುದ್ದಿಗಳನ್ನು ಕೇಳುತ್ತಿರುವಾಗ, ಏನೂ ಮಾಡಲು ಸಾಧ್ಯವಾಗದ ಅಸಹಾಯಕತೆ ನನ್ನನ್ನು ಹಿಂಡಿ ಬಿಡುತ್ತದೆ...ಒಂಟಿಯಾಗಿದ್ದಾಗಲೆಲ್ಲಾ ನಾನೇ ಆ ಬಲಿಪಶು ಎಂದು ಭಾವನೆ ನನಗೆ ಬರುತ್ತದೆ....

 ಹೇಳೋ, ಇದನೆಲ್ಲಾ ತಡೆಯಲು ಉಪಾಯವುಂಟೇ? ಹೇಳು, ಈಗ ಚರ್ಚೆ ನಡೆಯುತ್ತಿರುವಂತೆ ನೇಣು ಹಾಕಿದರೆ ಇನ್ನು ಮುಂದೆ ಗಂಡಸರು ತಮ್ಮನ್ನು ಸುಧಾರಿಸಿಕೊಳ್ಳುತ್ತಾರೊ..ಅಥವಾ ಅವರನ್ನು ನಪುಂಸಕರನ್ನಾಗಿ ಮಾಡಿದರೆ ಇಂತಹ ಘಟನೆಗಳು ಜರುಗಲಾರವೋ? 

     ಮನೆ ಮನೆಯಲ್ಲೂ, ಮನಮನದಲ್ಲೂ ಸುಧಾರಣೆ ನಡೆಯಬೇಕೋ...ನಮ್ಮ ಮಕ್ಕಳಲ್ಲಿ ಸದಾಚಾರದ ಭಾವವನ್ನು, ನೀತಿಯನ್ನು ಬಿತ್ತಬೇಕೋ...

     ಆದರೆ ಎಲ್ಲಿಯ ತನಕ ನಮ್ಮ ಮನೆ ಮನದಲ್ಲಿ ನೈತಿಕ ಮೌಲ್ಯಗಳ ಬಿತ್ತನೆ ನಡೆಯುವುದಿಲ್ಲವೋ ಅಲ್ಲಿಯ ತನಕ ಯಾವುದು ಬದಲಾಗುವುದಿಲ್ಲ. ನೀತಿ ಪರರಿಗೆ...ತನಗೆ ಯಾವುದೇ ಅನ್ವಯವಾಗುವುದಿಲ್ಲವೆಂಬ ಭಾವವು ನಮ್ಮ ರಕ್ತದಲ್ಲಿ ಹರಿಯುವುದೋ ಅಲ್ಲಿಯ ತನಕ ರಾಮ ರಾಜ್ಯವು ಬರೇ ಕನಸಾಗಿ ಉಳಿಯುವುದು. ಗಂಡು ಹೆಣ್ಣು ಜಾತಿಗಳು ಪರಸ್ಪರ ಗೌರವದಿಂದ ಸಹಮತದಿಂದ ಬಾಳುವೆಯನ್ನು ಪ್ರಾರಂಭಿಸುತ್ತಾರೋ ಅಂದೇ ಮನು ಕುಲ ನಿಜವಾಗಿ ಸ್ವಾತಂತ್ರವನ್ನು ಪಡೆದ ದಿನವೆಂದು ಹೇಳಬಹುದು. 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...