ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 December, 2012

ಸಾರ್ಥಕ ಕ್ಷಣ!

      ಒಂದು ವಾರದಿಂದ ಸ್ತಬ್ಧವಾಗಿದ್ದ ನನ್ನ ಮೊಬೈಲ್ ಮೊನ್ನೆ ರಾತ್ರಿ ರಿಂಗುಟ್ಟಿತು. ಸಿಕ್ಕಾಪಟ್ಟೆ ಖುಷಿಯಾಗಿ ಯಾರು ಅಂತ ನೋಡಿದರೆ ಸಯ್ಯದ್ ಸರ್! ಅರೆ ಮಕ್ಕಳು ಆಗಲೇ ಮನೆಗೆ ಹೋದ್ರಲ್ವಾ...ಮತ್ತೆ ಏನಾಯ್ತೊ ಅಂತ ಹಿಂಜರಿಯುತ್ತಲೇ ಸ್ಲೈಡ್ ಮಾಡಿ,
  "ಹಲೋ..."  ಕ್ಷೀಣ ಸ್ವರದಲ್ಲಿ ಅಂದೆ.
 " ಮೇಡಮ್, ನಮ್ಮ ಅಮ್ಮ ಮನೆಗೆ ಬಂದಿದ್ದಾರೆ. ಅವರಿಗೆ ನಿಮ್ಮನ್ನು ಒಮ್ಮೆ ನೋಡಬೇಕಂತೆ. ನಾಳೆ ಹೇಗೂ ಕಾಲೇಜಿಗೆ ರಜೆ. ನಿಮಗೆ ಬರಲಿಕ್ಕಾಗ್ತದಾ  ಮೇಡಂ?...ಅಲ್ಲ ಮೇಡಂ ನೀವು ಕಾಲೇಜಿಗೂ ಬರದೇ ತುಂಬಾ ದಿನವಾಯ್ತು...ಏನು?" ಬಡ ಬಡ ಮಾತಾಡಿಬಿಟ್ರು.

 "ಸರ್, ನಿಮ್ಮ ಅಮ್ಮನೇ ನಮ್ಮ ಮನೆಗೆ ಬರ್ಬಹುದಿತ್ತು. ಆದರೆ ಅವರಿಗೆ ನಡೆಯಲಿಕ್ಕಾಗೊಲ್ಲ ಅಂತ ಮಕ್ಕಳು ಹೇಳಿದ್ದಾರೆ. ಸರಿ ಸರ್,  ಭಾನುವಾರ ಸಂಜೆ ಆದ್ರೆ ಬರ್ತೇನೆ. ಆದರೆ ನಿಮ್ಮ ಮಿಸ್ಸೆಸ್ಸಿಗೆ ಹೇಳಿ ಏನು ಸ್ಪೆಷಲ್ ಮಾಡ್ಬಾರದಂತ. ಸರ್, ಮಗ ಮನೆಗೆ ಬಂದಿದ್ದಾನೆ. ಅಲ್ಲದೆ ಗ್ಲಾಸ್ ಪೈಂಟಿಂಗ್  ಆರ್ಡರ್ ಒಂದು ಮಾಡಿಕೊಡುವ ಬರದಲ್ಲಿ ಹೆಬ್ಬೆರಳಿಗೆ ಗಾಯವಾಗಿದೆ. ಮನೆಯಲ್ಲಿ ಕೆಲಸನೂ ಹೆಚ್ಚು... ಹೀಗೆಲ್ಲ ಆದಾಗ ನಾನು ಕಾಲೇಜಿಗೆ ಬಂದು ಏನು ಪ್ರಯೋಜನ.. ಚಿತ್ರ ಬಿಡಿಸುವಷ್ಟು ತ್ರಾಣ ಇರದಿದ್ರೆ? "

 "ಸರಿ ಮೇಡಂ ಆದ್ರೆ ಮನೆಗೆ ಬನ್ನಿ" ಎಂದು ಹೇಳಿ ಫೋನು ಇಟ್ರು.

    ನನಗೆ ಕೆಲವು ಕ್ಷಣ ಹೇಗೆ ಪ್ರತಿಕ್ರಿಯಿಸುವುದು ಅಂತ ತಿಳಿಯಲಿಲ್ಲ.. ಅಲ್ಲ ನನ್ನ ಕಾಲೇಜಿನ ಸರ್.. ಅವರ ಅಮ್ಮ ಯಕ್ಷಿತ್, ಸಾಮಾನ್ಯರಲ್ಲಿ ಸಾಮಾನ್ಯಳಾದ ನನ್ನಲ್ಲಿ ಏನು ನೋಡಿದ್ದಾರೆ.. ನನಗೊತ್ತು.. ನನ್ನಲ್ಲಿ ಮನೆ ಪಾಠಕ್ಕೆ ಬರುವ ಅನೇಕ ಮಕ್ಕಳು ನಾನು ಅವರ ಜೊತೆ ವ್ಯವಹರಿಸುವ ರೀತಿ ನೋಡಿ ಮೆಚ್ಚಿದ್ದಾರೆ ಅಂತ.. ಆದರೆ ಕೆಲವೇ ಕೆಲವು ಆಮಂತ್ರಣ ಬಿಟ್ಟರೆ ಮತ್ತೆಲ್ಲ ಮನೆಯವರು ಅತೀ ಆತ್ಮೀಯತೆಯಿಂದ ನನ್ನ ಜೊತೆ ವ್ಯವಹರಿಸಿರಲಿಲ್ಲ.... 


 ಅದೇ ಅನುಭವವನ್ನು ಮತ್ತೆ ಇವತ್ತಿನ RX LIFE CYCLE RALLY ಯಲ್ಲೂ ಪಡೆದಾಗ ಮನ ತುಂಬಿ ಬಂತು.  ನಿನ್ನೆ ಡಾ. ಗಾಯತ್ರಿ ಅವರ ಫೋನು ಬಂದಿತು.

"ಶೀಲಾ, ನಾಳೆ ನೀನು ಕಾಪಿಕಾಡ್ ಶಾಲೆಗೆ ಬಂದು ನಮಗೆ ಸಹಾಯ ಮಾಡಬೇಕು.  ನೀನು ಬೆಳಿಗ್ಗೆ rally ಪ್ರಾರಂಭವಾಗುವಾಗಲೇ ಬರ್ತಿಯಾ?"

"ಇಲ್ಲ ಗಾಯತ್ರಿ, ನನಗೆ ೬ಗಂಟೆಗೆ ಬರ್ಲಿಕ್ಕಾಗೊಲ್ಲ..ನಾನು ಮತ್ತೆ ಸೀದ ಶಾಲೆಗೆ ಬರ್ತೇನೆ."

"ಸರಿ ವಂದನಾ ನಿನಗೆ ನಿನ್ನ ಕೆಲಸ ಏನು ಅಂತ ಹೇಳ್ತಾಳೆ.. ನೀನು ನಮ್ಮ ಮೀಟಿಂಗಿಗೂ ಬರ್ಲಿಲ್ಲ.." 

"ಅರೇ ಗಾಯತ್ರಿ, ನಿನಗೆ ಗೊತ್ತುಂಟಲ್ವಾ.. ನನಗೆ ತರಗತಿಗಳು ಇವೆ ಅಂತ... "

"ಹೌದು... ಅದನ್ನು ನನಗೆ ವಂದನಾನೂ ಹೇಳಿದ್ಳು... ಆದರೂ ನೀನು ಬಂದ್ರೆ ಒಳ್ಳೆದಿತ್ತು."

ನಮ್ಮ ಮಾತುಕತೆ ಹೀಗೆ ನಡೆದಿತ್ತು. ಮತ್ತೆ ವಂದನಾಳ ಫೋನು ಬಂದು ನಾನು ಇವತ್ತು ಬೆಳಿಗ್ಗೆ ತಿಂಡಿ ( ಉದ್ದಿನ ಅಪ್ಪ), ಚಟ್ನಿ ತಯಾರಿಸಿ ೭.೪೫ಕ್ಕೆ ಕಾಪಿಕಾಡ್ ಶಾಲೆಗೆ ಹೋಗಿ ತಲುಪಿದೆ. (ರಿಕ್ಷಾ ಏರುವ ಮೊದಲೇ ಡ್ರೈವರನ್ನು ಕೇಳಿಯೇ ಹತ್ತಿದೆ.. ಮಂಗಳೂರಿನಲ್ಲಿದ್ದು ೪೪ ವರ್ಷವಾದರೂ ಸರಿಯಾಗಿ ಏನೂ ಪರಿಚಯವಿಲ್ಲ.. ಅಲ್ಲದೆ ಈಗ ಹೊಸ ಹೊಸ ಬಿಲ್ಡಿಂಗುಗಳು ಮೇಲೆದ್ದು ಇದ್ದ ಸ್ವಲ್ಪ ಪರಿಚಯನೂ ಹೊರಟು ಹೋಗಿದೆ) ಅಲ್ಲಿ ನನಗೆ ಬೂತ್ ನಂಬ್ರ ೪ರಲ್ಲಿ ಕೆಲಸ. ಅರುಣಳ ಪರಿಚಯ ಅಲ್ಲಿಯೇ ಆದದ್ದು... ಮಾತನಾಡುತ್ತ,

"ನಿಮ್ಮ ಬಗ್ಗೆ ವಂದನಾಳು ತುಂಬನೇ ಹೇಳ್ತಾಳೆ... ಒಳ್ಳೆ ಕಲಿಸ್ತಿರಂತೆ."

"ಅರೇ, ಎಲ್ಲರೂ ಒಳ್ಳೆ ಕಲಿಸ್ತಾರಪ್ಪ..ಅಂತಹುದೇನೆ ನಾನೇನು ಮಾಡಿಲ್ಲ"

"ಅಲ್ಲ, ನೀವು ಬರೇ ಕಲಿಸುವುದು ಮಾತ್ರವಲ್ಲವಂತೆ.. ಏನೇನೋ ಒಳ್ಳೆ ಮಾತು ಸಹ ಹೇಳ್ತಿರಂತೆ.. ಅಲ್ಲದೆ ನೀವು ಹಾಗೆ ನಿಮ್ಮ ಜೀವನ ಸಹ ನಡೆಸುವುದಂತೆ... "
ಕೇಳಿ ದಂಗಾದೆ. 
ಅಲ್ಲ, ಅದೇನೋ ಹೌದು.. ನಾನು ಇವರೆಲ್ಲರಿಗಿಂತ ಭಿನ್ನವಾದ ಜೀವನ ನಡೆಸುತ್ತೇನೆ..  ಆದರೆ ಅದರ ಬಗ್ಗೆ ಪ್ರಚಾರಮಾಡೊಲ್ಲ.. ಬಹುಶಃ ನನ್ನಲ್ಲಿ ಬರುವ ಮಕ್ಕಳು ಎಲ್ಲ ಮನೆಗೆ ಹೇಳಿರ್ಬೇಕೇನೋ...." 
ನನ್ನ ಮುಖದಲ್ಲಿ ತೃಪ್ತಿಯ ಮಂದಹಾಸ! 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...