ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

23 November, 2012

ಕುಂಬಳ ಕಾಯಿಯ ಹಲ್ವ( ಕಾಶಿ ಹಲ್ವ)




    ಸೆಮಿಸ್ಟರ್ ಪರೀಕ್ಷೆಯ ತಯಾರಿಗಾಗಿ ಮಗ ಮನೆಗೆ ಬಂದಿದ್ದಾನೆ.  ಅವನಿಲ್ಲದಿದ್ದಾಗ ಸ್ಪೆಷಲ್ ತಿಂಡಿ ಮಾಡಲು ಮನಸ್ಸಿರುವುದೇ ಇಲ್ಲ. ಮೊನ್ನೆ ದೀಪಾವಳಿಗೂ ಅವನಿರಲಿಲ್ಲ. ಈಗ ಏನಾದರೂ ಮಾಡಿ ಕೊಡಬೇಕೆಂದು ೩,೪ ದಿನದಿಂದ ಯೋಚನೆ ಮಾಡುತ್ತಿದ್ದೆ...ಆದರೆ ಏನು ಮಾಡಲಿ, ಕಾಲೇಜು, ಮನೆಪಾಠ, ಮನೆ ಕೆಲಸ ಇವುಗಳ ಮಧ್ಯೆ ಬಿಡುವು ಇಲ್ಲ.. ದಿನವಿಡೀ ದುಡಿತದಿಂದ ಆಯಾಸನೂ ಆಗುತ್ತದೆ.. ಹುಡುಗ ಇನ್ನೊಂದು ವರ್ಷ ಕೆಲಸಕ್ಕೆ ಅಂತ ಪರಊರಿಗೆ ಹೋಗುತ್ತಾನೆ..ಹಾಗಾಗಿ ನನ್ನೆಲ್ಲ ನೆವನಗಳನ್ನು ಬದಿಗಿಟ್ಟು ಏನಾದರೂ ಮಾಡಬೇಕೆಂದು ನಿನ್ನೆ ನಿರ್ಧರಿಸಿದೆ. ಕಾಲೇಜಿನಿಂದ ಬರುತ್ತಿರುವಾಗ ಮಾರ್ಗದ ಬದಿಯಲ್ಲಿ ಬೂದುಗುಂಬಳ ಕಾಯಿ ಮಾರಾಟಕ್ಕೆ ಇಟ್ಟುದನ್ನು ನೋಡಿ ಕೊಂಡೆ. ಇವತ್ತು ಅದರ ಸಾಂಬಾರ್ ಮಾಡಿದೆ.... ಹಾಗೆ ಹಲ್ವನೂ ಮಾಡಿದೆ.

  ಸಾಮಾಗ್ರಿಗಳು
 ೧/೨ ಕಿಲೊ ಕುಂಬಳ ಕಾಯಿ ಕಾಯಿ
 ೨ ಕಪ್ ಸಕ್ಕರೆ
 ೧ ಕಪ್ ತುಪ್ಪ
 ೧/೨ ಚಮಚ ಕೇಸರಿ
 ೪,೫ ಏಲಕ್ಕಿ
 ೮,೧೦ ಒಣಗಿದ ದ್ರಾಕ್ಷೆ ಹಣ್ಣು
 ೮,೧೦ ಗೇರುಬೀಜದ ತುಂಡುಗಳು













ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದುಬೀಜ, ತಿರುಳನ್ನು ಬೇರ್ಪಡಿಸಿ, ಸಣ್ಣ ಸಣ್ಣ ಹೋಳಾಗಿ ತುಂಡು ಮಾಡಿ ಇಡಿ.  ನಂತರ ತುರಿಯುವ ಮಣೆಯಲ್ಲಿ ತುರಿಯಿರಿ. ಹೀಗೆ ತುರಿದು ಮುಗಿಸಿದಾಗ ಕುಂಬಳಕಾಯಿ ಬಹಳಷ್ಟು ನೀರು ಬಿಡುತ್ತದೆ. ಸ್ವಲ್ಪ ಹಿಂಡಿ ತೆಗೆದು ಪ್ರೆಶರ್ ಕುಕ್ಕರಿನಲ್ಲಿ ಒಂದು ೫ ನಿಮಿಷ ಬೇಯಿಸಿ. ಅದು ಬೇಯುತ್ತಿರುವಾಗಲೇ ಅರ್ಧ ಕಪ್ ನೀರಿನಲ್ಲಿ ಸಕ್ಕರೆ ಕುದಿಯಲು ಇಡಿರಿ. ಅದು ಚೆನ್ನಾಗಿ ಕುದಿ ಬಂದು ಪಾಕವಾಗುವ ತನಕ ಹಾಗೆ ಇರಲಿ. ನಂತರ ಬೇಯಿಸಿದ ಕುಂಬಳ ಕಾಯಿಯ ತುರಿಯನ್ನು ಈ ಸಕ್ಕರೆ ಪಾಕದಲ್ಲಿ ಹಾಕಿ. ಕುಂಬಳ ಕಾಯಿ ಬೇಯಿಸಿದಾಗಲೂ ನೀರು ಬಿಡುವುದರಿಂದ ಅದನ್ನು ಸಕ್ಕರೆ ಪಾಕದಲ್ಲಿ ಹಾಕುವಾಗ ಆದಷ್ಟು ಹಿಂಡಿ ಹಾಕಿ. ಹೀಗೆ ಮಾಡಿದರೆ ಒಂದಷ್ಟು ಗ್ಯಾಸಿನ ಉಳಿತಾಯವಾಗುತ್ತದೆ.  ಒಂದರ್ಧ ಗಂಟೆ ಬೇಯಿಸಿದ ನಂತರ ತುಪ್ಪ ಸೇರಿಸಿ ಕೆದಕಿರಿ. ಕೇಸರಿಯನ್ನು ನೀರಿನಲ್ಲಿ ಕರಗಿಸಿ ಸೇರಿಸಿ. ದಪ್ಪವಾಗುತ್ತ ಬಂದಿದೆ ಎಂದೆನಿಸಿದಾಗ ಹುಡಿ ಮಾಡಿದ ಏಲಕ್ಕಿ ಸೇರಿಸಿ ಗ್ಯಾಸ್ ಆಫ್ ಮಾಡಿಬಿಡಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಬೀಜ  ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇರಿಸಿ.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...