ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 November, 2012

ಹೀಗೆ.......ಮನದ ಪುಟದಲ್ಲಿ ಕಾಣಿಸಿದ್ದು!


 ಮನದೊಳು ಮೂಡಿ ಬರುವ ಭಾವಗಳ
ನಿಯಂತ್ರಣದಲ್ಲಿ ಇಡುವುದು ಕಷ್ಟಸಾಧ್ಯ

***********      **********


ವಿಧಿ ಎಂದೂ ನಮ್ಮ ಹೃದಯದ ಭಾವದ
ಬಿಸಿಗೆ ಕರಗುವುದೂ ಇಲ್ಲ, ಬಾಗುವುದೂ ಇಲ್ಲ

ಗೆಳತಿ, .ಒಂದಿಷ್ಟು ಹಗುರವಾಗಲೆನೆ......!!! (ಕತೆ)



ಗೆಳತಿ,
         ಅವನು ನನ್ನೂರಿಗೆ ಬರುವನೆಂದು ಕೇಳಿದಾಗ ಒಂದು ಕ್ಷಣ ಆನಂದನೂ ಆತಂಕವೂ ಒಟ್ಟಿಗೊಟ್ಟಿಗೆ ನನ್ನೊಳಗೆ ಕಾಣಿಸಿಕೊಂಡವು. ಮೊದಲ ಭೇಟಿ ನಮ್ಮದು... ಹೇಗಿರಬಹುದು! ಇಷ್ಟು ದಿನದ ನಮ್ಮ ನಿರೀಕ್ಷೆಗಳನ್ನು, ನಮ್ಮಿಬ್ಬರ ಭಾವಗಳನ್ನು ನಿರೂಪಿಸುವ ಅಮೃತ ಘಳಿಗೆ ಅದು. ದೂರವಿದ್ದೇ ಒಬ್ಬರ ಆತ್ಮದಲ್ಲಿ ಮತ್ತೊಬ್ಬರ ಆತ್ಮವನ್ನು ಪ್ರತಿಷ್ಠೆ ಮಾಡಿದ್ದೆವು.

        ಕವಿಗಳು, ಸಾಹಿತಿಗಳು ಬರೆದಂತೆ ನಾನೇ ನೀನು, ನೀನೇ ನಾನು ಎಂದೇ ಹೇಳಿಕೊಂಡಿದ್ದೆವು. ಕಲ್ಪನಾ ಲೋಕದಲ್ಲಿ ನಾವು ಹಕ್ಕಿಗಳಂತೆ ಹಾರಾಡಿಕೊಂಡಿದ್ದೆವು. ಈಗ ನಿಜ ಲೋಕದಲ್ಲಿ ನಮ್ಮ ಭೇಟಿ ನಡೆಯುವುದಿದೆ. ಹೇಗೆ, ಏನು... ಎಷ್ಟೆಲ್ಲಾ ಆತಂಕ, ಗಾಬರಿ ಜೊತೆಗೆ ಪುಳಕ! ಎದೆಯ ಬಡಿತ ನಿತ್ಯಕ್ಕಿಂತ ಹೆಚ್ಚು ಸಕ್ರಿಯವಾದವು!     

        ಕ್ಷಣ ಗಣನೆ ಆರಂಭವಾಯಿತು! ಅವನಿಗೋಸ್ಕರ ಮಾಡಿ ಬಡಿಸುವ ತಿಂಡಿ, ಪದಾರ್ಥಗಳ ಪಟ್ಟಿ ಮಾಡುತ್ತಾ ಹೋದೆನು. ಅಷ್ಟೊಂದು ನಾನು ಒಂದೇ ದಿನದಲ್ಲಿ ತಯಾರಿಸಬಲ್ಲೆನೆ ಅಥವಾ ಅವನಾದರೂ ಆದನ್ನೆಲ್ಲ ಒಂದೇ ಘಳಿಗೆಯಲ್ಲಿ ತಿನ್ನಲು ಸಾಧ್ಯವೇ, ಇವೆಲ್ಲ ಆಲೋಚನೆ ಆಗ ಮೂಡಲೇ ಇಲ್ಲ. ಈಗ ನೆನಪಾದರೆ ನಗು ಬರುತ್ತದೆ. ಎಷ್ಟೊಂದು ದೊಡ್ಡ ಮೂರ್ಖಿಯೇ ನಾನು ಗೆಳತಿ! ಅಂತರಂಗದ ಸಖಿಯಾದ ನಿನಗೂ ಈ ಮಾತು ಹೇಳದೆ ಗೌಪ್ಯವಾಗಿ ಇಟ್ಟೆ; ನಮ್ಮಿಬ್ಬರ ಭೇಟಿಯ ಮೇಲೆ ಯಾರ ಕಣ್ಣು ಬಿದ್ದು ಹಾಳಾಗಬಾರದೆಂದು!
       
        ಆದರೆ ಬರುತ್ತೇನೆಂದು ಹೇಳಿದವನು ಬರಲೇ ಇಲ್ಲ. ಕೇಳಿದರೆ ಅದೇನೋ ಕಾರಣದಿಂದ ಬರುವ  ದಿನವನ್ನು ಮುಂದೂಡಿದೆನೆಂದನು. ಇರಲಿ, ನಿಗದಿಯಾದ ದಿನದಂದು ನೋಡಲು ಸಾಧ್ಯವಾಗದಿದ್ದರೇನಂತೆ ಹೇಳಿದನಲ್ಲವೆ ತಾನು ಬರುವೆನೆಂದು. ನನ್ನ ಆತ್ಮಕ್ಕೆ ಸಾಂತ್ವನವಿತ್ತೆನಾದರೂ ಅದೇಕೋ ಬಲಕಣ್ಣು ಅದುರಿ ಅಪಶಕುನದ ಸೂಚನೆಯಿತ್ತಿತು. ಎಂದೂ ಇಂತಹ ಮೂಢನಂಬಿಕೆಗಳ ನಂಬದ ನಾನು ಅದೇಕೋ ಆ ದಿನ ಒಂದಿಷ್ಟು ಅಧೀರಳಾದೆ. 
   
           ಅವನು ಬರುವೆನೆಂದು ಹೇಳಿದ ಹಿಂದಿನ ದಿನ, ಸುದ್ದಿಯೇ ಇಲ್ಲ... ಆಲೋಚನೆ ಮಾಡಿ ಮಾಡಿ ತಲೆ ಕೆಟ್ಟು ಹೋಯಿತು. ಹೊತ್ತು ಮೀರಿ ಸಂದೇಶ ಬಂದಿತು-
 "ಬರಲು ಸಾಧ್ಯವಾಗುವುದಿಲ್ಲ"

         ಕಣ್ಣಲ್ಲಿನ ಸಾಗರ ಉಕ್ಕೇರಿತು! ನಾನೂ ತಡೆಯಲೆತ್ನಿಸಲಿಲ್ಲ. ಎಲ್ಲೋ ಒಳಗೆ ಸಂದೇಹವಿತ್ತಾದರೂ ಆಸೆ ಇತ್ತು, ಬಂದೇ ಬರುವನೆಂದು, ಕಾದಿರುವ ಈ ಸಖಿಯ ಓಲೈಸುವನೆಂದು. ಹ್ಞೂಂ... ವಿಧಿಯು ಬಿಡಲೇ ಇಲ್ಲ! ಎಂದಿನಂತೆ  ನನ್ನನ್ನು  ನಿರಾಸೆಯ ಮಡಿಲಲ್ಲಿ ನೂಕಿ ತಾನಂದಪಟ್ಟಿತು! 

        ಬೇಡವೇ, ನೀನೂ ಅಪಹಾಸ್ಯದ ನಗೆಯ ತೋರಬೇಡವೇ! ನಿನ್ನಲ್ಲೂ ಗುಟ್ಟಾಗಿಟ್ಟು ಈಗೇಕೆ ಹೇಳುವಿ ಅನ್ನಬೇಡವೆ! ನಿನ್ನನ್ನು ಬಿಟ್ಟು  ನನ್ನ ಮನಸ್ಥಿತಿಯ ಬಗ್ಗೆ ಮತ್ತ್ಯಾರಿಗೆ ಗೊತ್ತು. ಎಲ್ಲವೂ ತಿಳಿದ ನೀನೂ ನನ್ನಡೆ ಈ ರೀತಿಯ ಕೊಂಕು ನೋಟವ ತೂರಬೇಡವೆ. ಒಮ್ಮೆ ನಿನ್ನ ಮಡಿಲಲ್ಲಿ  ಮಲಗಿ ಅಳಲೆ ಗೆಳತಿ, ಒಂದಿಷ್ಟು ಹಗುರವಾಗಲೆನೆ...!

ವಲ್ವಲ್(ಅಡುಗೆ)



               ತೆಂಗಿನಕಾಯಿಯ ರಸದಿಂದ ಮಾಡುವ ಈ ಪದಾರ್ಥ ಹೆಚ್ಚು ಖಾರವಿರುವುದಿಲ್ಲ. ಬಹಳಷ್ಟು ತರಕಾರಿಗಳನ್ನು ಬಳಸುವುದರಿಂದಲೂ, ತುಪ್ಪದಲ್ಲಿ ಜೀರಿಗೆ ಮತ್ತು ಸಾಸಿವೆ ಒಗ್ಗರಣೆ ಕೊಡುವುದರಿಂದಲೂ  ಆರೋಗ್ಯಕ್ಕೂ ಒಳ್ಳೆಯದು.  ಕೆಲವರಿಗೆ ತೆಂಗಿನಕಾಯಿಯ ಹಾಲಿನಿಂದ ಸ್ವಲ್ಪ ಅಮಲು ಬರುವುದೆಂದು ಕೇಳಿದ್ದೇನೆ. ನನಗೂ ನನ್ನ ಮಕ್ಕಳಿಗೂ ಆ ಅನುಭವ ಸಿಕ್ಕಿಲ್ಲ. 


ಸಾಮಾಗ್ರಿಗಳು

ತೆಂಗಿನಕಾಯಿ-೧
ತರಕಾರಿ- ಕುಂಬಳ ಕಾಯಿ, ಚೀನಿಕಾಯಿ, ಅಲಸಂಡೆ, ಗೆಣಸು...ಇತ್ಯಾದಿ
ಹಸಿರು ಮೆಣಸಿನಕಾಯಿ- ೩,೪
ಅಲಂಕಾರಕ್ಕೆ ಮತ್ತು ರುಚಿಗೆ- ದ್ರಾಕ್ಷೆ ಮತ್ತು ಗೇರು ಬೀಜ
ಕರಿಬೇವು- ೬,೭ ಎಲೆ
ಜೀರಿಗೆ- ೧/೨ ಚಮಚ
ತುಪ್ಪ- ೨ಚಮಚ




ತೆಂಗಿನಕಾಯಿ ತುರಿದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಹಾಲನ್ನು ಹಿಂಡಿ ತೆಗೆಯಿರಿ. ಈ ದಪ್ಪ ಹಾಲನ್ನು ದೊಡ್ಡ ಪಾತ್ರೆಯಲ್ಲಿ ಹಾಕಿರಿ.  ಈಗ ಮತ್ತೊಮ್ಮೆ ಪಾತ್ರೆಗೆ ನೀರನ್ನು ಹಾಕಿ ಬಟ್ಟೆಯಲ್ಲಿದ್ದ ರುಬ್ಬಿದ ತೆಂಗಿನ ತುರಿಯನ್ನು ಮತ್ತೊಮ್ಮೆ ಅದ್ದಿ ಹಿಂಡಿರಿ. ಆ ತೆಳು ನೀರನ್ನು ಹಾಗೆ ಕಾದಿರಿಸಿ. 
ತರಕಾರಿಗಳನೆಲ್ಲ ಉಪ್ಪುನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ದೊಡ್ಡ ದೊಡ್ಡ ಹೋಳುಗಳನ್ನಾಗಿ ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ.  ಈ ಹೋಳುಗಳನ್ನು ದಪ್ಪ ತೆಂಗಿನ ಕಾಯಿಯ ಹಾಲಿನಲ್ಲಿ ಹಾಕಿ ಕುದಿಯಲು ಗ್ಯಾಸಿನ ಮೇಲೆ ಇಡಿರಿ. ಹಸಿರು ಮೆಣಸಿನಕಾಯಿಯನ್ನು ಅಡ್ಡ ಸೀಳಿ ಅದರಲ್ಲಿ ಸೇರಿಸಿ. ರುಚಿಗೆ ತಕ್ಕಷ್ಟು ತಕ್ಕಷ್ಟೇ ಉಪ್ಪು, ಸಕ್ಕರೆ ಹಾಕಿ.  ತೆಳ್ಳನೆಯ ಹಾಲಿಗೆ ಕೋರ್ನ್ ಫೋರ್ಲ್ ಅಥವಾ ಮೈದಾ ( ೪ ಚಮಚ) ಹಾಕಿ ಚೆನ್ನಾಗಿ ಗುಳಿ ಬರದ ಹಾಗೆ ಕಲಸಿ. ನಂತರ ಇದನ್ನು ಕುದಿ ಬರುತ್ತಿರುವ ಪದಾರ್ಥಕ್ಕೆ ಸೇರಿಸಿ. ದಪ್ಪವಾಗಿ ಬರುತ್ತಿದ್ದ ಹಾಗೆ ಗ್ಯಾಸನ್ನು ಆಫ್ ಮಾಡಿ. ಗೇರುಬೀಜ ಮತ್ತು ದ್ರಾಕ್ಷೆ ಹಣ್ಣನ್ನು ಸೇರಿಸಿ. ಈಗ ಸಣ್ಣ ಕಾವಲಿಯಲ್ಲಿ ತುಪ್ಪ ಬಿಸಿ ಮಾಡಲು ಇಡಿರಿ. ಸಾಸಿವೆ ಹಾಕಿ. ಅದು ಸಿಡಿಯುತ್ತಿರುವಾಗ ಜೀರಿಗೆ, ಕರಿಬೇವು ಸೇರಿಸಿ. ಸೌಟಿನಿಂದ ಒಮ್ಮೆ ಆಚೆ ಈಚೆ ಮಾಡಿ ಒಗ್ಗರಣೆಯನ್ನು ಪದಾರ್ಥಕ್ಕೆ ಹಾಕಿ ಬಿಡಿ. 

23 November, 2012

ಕುಂಬಳ ಕಾಯಿಯ ಹಲ್ವ( ಕಾಶಿ ಹಲ್ವ)




    ಸೆಮಿಸ್ಟರ್ ಪರೀಕ್ಷೆಯ ತಯಾರಿಗಾಗಿ ಮಗ ಮನೆಗೆ ಬಂದಿದ್ದಾನೆ.  ಅವನಿಲ್ಲದಿದ್ದಾಗ ಸ್ಪೆಷಲ್ ತಿಂಡಿ ಮಾಡಲು ಮನಸ್ಸಿರುವುದೇ ಇಲ್ಲ. ಮೊನ್ನೆ ದೀಪಾವಳಿಗೂ ಅವನಿರಲಿಲ್ಲ. ಈಗ ಏನಾದರೂ ಮಾಡಿ ಕೊಡಬೇಕೆಂದು ೩,೪ ದಿನದಿಂದ ಯೋಚನೆ ಮಾಡುತ್ತಿದ್ದೆ...ಆದರೆ ಏನು ಮಾಡಲಿ, ಕಾಲೇಜು, ಮನೆಪಾಠ, ಮನೆ ಕೆಲಸ ಇವುಗಳ ಮಧ್ಯೆ ಬಿಡುವು ಇಲ್ಲ.. ದಿನವಿಡೀ ದುಡಿತದಿಂದ ಆಯಾಸನೂ ಆಗುತ್ತದೆ.. ಹುಡುಗ ಇನ್ನೊಂದು ವರ್ಷ ಕೆಲಸಕ್ಕೆ ಅಂತ ಪರಊರಿಗೆ ಹೋಗುತ್ತಾನೆ..ಹಾಗಾಗಿ ನನ್ನೆಲ್ಲ ನೆವನಗಳನ್ನು ಬದಿಗಿಟ್ಟು ಏನಾದರೂ ಮಾಡಬೇಕೆಂದು ನಿನ್ನೆ ನಿರ್ಧರಿಸಿದೆ. ಕಾಲೇಜಿನಿಂದ ಬರುತ್ತಿರುವಾಗ ಮಾರ್ಗದ ಬದಿಯಲ್ಲಿ ಬೂದುಗುಂಬಳ ಕಾಯಿ ಮಾರಾಟಕ್ಕೆ ಇಟ್ಟುದನ್ನು ನೋಡಿ ಕೊಂಡೆ. ಇವತ್ತು ಅದರ ಸಾಂಬಾರ್ ಮಾಡಿದೆ.... ಹಾಗೆ ಹಲ್ವನೂ ಮಾಡಿದೆ.

  ಸಾಮಾಗ್ರಿಗಳು
 ೧/೨ ಕಿಲೊ ಕುಂಬಳ ಕಾಯಿ ಕಾಯಿ
 ೨ ಕಪ್ ಸಕ್ಕರೆ
 ೧ ಕಪ್ ತುಪ್ಪ
 ೧/೨ ಚಮಚ ಕೇಸರಿ
 ೪,೫ ಏಲಕ್ಕಿ
 ೮,೧೦ ಒಣಗಿದ ದ್ರಾಕ್ಷೆ ಹಣ್ಣು
 ೮,೧೦ ಗೇರುಬೀಜದ ತುಂಡುಗಳು













ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದುಬೀಜ, ತಿರುಳನ್ನು ಬೇರ್ಪಡಿಸಿ, ಸಣ್ಣ ಸಣ್ಣ ಹೋಳಾಗಿ ತುಂಡು ಮಾಡಿ ಇಡಿ.  ನಂತರ ತುರಿಯುವ ಮಣೆಯಲ್ಲಿ ತುರಿಯಿರಿ. ಹೀಗೆ ತುರಿದು ಮುಗಿಸಿದಾಗ ಕುಂಬಳಕಾಯಿ ಬಹಳಷ್ಟು ನೀರು ಬಿಡುತ್ತದೆ. ಸ್ವಲ್ಪ ಹಿಂಡಿ ತೆಗೆದು ಪ್ರೆಶರ್ ಕುಕ್ಕರಿನಲ್ಲಿ ಒಂದು ೫ ನಿಮಿಷ ಬೇಯಿಸಿ. ಅದು ಬೇಯುತ್ತಿರುವಾಗಲೇ ಅರ್ಧ ಕಪ್ ನೀರಿನಲ್ಲಿ ಸಕ್ಕರೆ ಕುದಿಯಲು ಇಡಿರಿ. ಅದು ಚೆನ್ನಾಗಿ ಕುದಿ ಬಂದು ಪಾಕವಾಗುವ ತನಕ ಹಾಗೆ ಇರಲಿ. ನಂತರ ಬೇಯಿಸಿದ ಕುಂಬಳ ಕಾಯಿಯ ತುರಿಯನ್ನು ಈ ಸಕ್ಕರೆ ಪಾಕದಲ್ಲಿ ಹಾಕಿ. ಕುಂಬಳ ಕಾಯಿ ಬೇಯಿಸಿದಾಗಲೂ ನೀರು ಬಿಡುವುದರಿಂದ ಅದನ್ನು ಸಕ್ಕರೆ ಪಾಕದಲ್ಲಿ ಹಾಕುವಾಗ ಆದಷ್ಟು ಹಿಂಡಿ ಹಾಕಿ. ಹೀಗೆ ಮಾಡಿದರೆ ಒಂದಷ್ಟು ಗ್ಯಾಸಿನ ಉಳಿತಾಯವಾಗುತ್ತದೆ.  ಒಂದರ್ಧ ಗಂಟೆ ಬೇಯಿಸಿದ ನಂತರ ತುಪ್ಪ ಸೇರಿಸಿ ಕೆದಕಿರಿ. ಕೇಸರಿಯನ್ನು ನೀರಿನಲ್ಲಿ ಕರಗಿಸಿ ಸೇರಿಸಿ. ದಪ್ಪವಾಗುತ್ತ ಬಂದಿದೆ ಎಂದೆನಿಸಿದಾಗ ಹುಡಿ ಮಾಡಿದ ಏಲಕ್ಕಿ ಸೇರಿಸಿ ಗ್ಯಾಸ್ ಆಫ್ ಮಾಡಿಬಿಡಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಬೀಜ  ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇರಿಸಿ.

20 November, 2012

ಕೊಟ್ಟೆ, ಏನು ನಿನ್ನಯ ಮಹಿಮೆ! (ಕಥೆ)

      

         "ಸುಮತಿ, ನಿನಗೆ ಕೊಟ್ಟೆ ಮಾಡಲು ಬರ್ತದಂತಲ್ಲ, ಕೇಳಿ ತುಂಬಾ ಖುಷಿಯಾಯ್ತು."  ಸುಮತಿಗೆ ಈ ವಯಸ್ಸಾದ ಹೆಂಗಸು ಯಾರೆಂದೂ, ಆಕೆ ಏನನ್ನುತ್ತಿದ್ದಾರೆಂದು ಏನೂ ಅರ್ಥ ಆಗಲಿಲ್ಲ. ಸುಮತಿಯ ಮುಖದಲ್ಲಿ ಮೂಡಿದ ಪ್ರಶ್ನೆಗಳನ್ನು ನೋಡಿ ಆ ಹೆಂಗಸು ತನ್ನ ಪರಿಚಯ ಮಾಡಿಕೊಟ್ಟರು. " ನಿಮ್ಮ ಮನೆಯ ಹತ್ತಿರವೇ ನಮ್ಮ ಮನೆ...ಹಾಗೆ ನೋಡಿದರೆ ಅದು ನಿಮ್ಮ ಮನೆನೇ. ನಮ್ಮ ಯಜಮಾನರು ನಿಮ್ಮ ಮಾವನಿಗೆ ಸಂಬಂಧಿ ಹಾಗೂ ನಿಮ್ಮ ಮಿಲ್ಲಿನಲ್ಲಿ ರೈಟರು. ನಿನ್ನ ಅತ್ತೆ ನನ್ನ ಕೈಯಲ್ಲೇ ಕೊಟ್ಟೆ ಮಾಡಿಸುತ್ತಿದ್ದರು. ಮೊನ್ನೆ ಸಿಕ್ಕಿದಾಗ ಇನ್ನು ನನ್ನ ಹೊಸ ಸೊಸೆಗೆ ಕೊಟ್ಟೆ ಮಾಡಲು ಬರುವುದರಿಂದ ಇನ್ನು ಮುಂದೆ ಅವಳೆ ಮಾಡ್ತಾಳೆ "ಅಂದರು.  ಅವರ ಮುಖದಲ್ಲಿ ಸಂತೋಷ ಎದ್ದು ತೋರುತಿತ್ತು....
     
         ಸುಮತಿಗೆ ಇದೆಲ್ಲ ಏನು ಅಂತ ಅರ್ಥವಾಗಲು ಹೆಚ್ಚು ಸಮಯ ತಾಗಲಿಲ್ಲ. ಎರಡೇ ದಿನಗಳೊಳಗೆ ಅತ್ತೆ ಕೊಟ್ಟೆಗೆ ಬೇಕಾದ ಉದ್ದು, ಅಕ್ಕಿ ನೀರಿಗೆ ಹಾಕುವಾಗಲೇ ಪುತ್ತುವಿನ ಕೈಯಲ್ಲಿ ಹಲಸಿನ ಮರದ ಗೆಲ್ಲುಗಳನ್ನು ಬಚ್ಚಲು ಕೋಣೆಯ ಬಳಿ ತಂದು ಹಾಕಲು ಹೇಳಿದನ್ನು ಸುಮತಿ ಕೇಳಿದ್ದಳು. ವಿದೇಯ ಪುತ್ತು ಕೆಲವೇ ನಿಮಿಷಗಳಲ್ಲಿ ದೊಡ್ಡ ದೊಡ್ಡ ಗೆಲ್ಲುಗಳನ್ನು ತಂದು ಹಾಕಿ, "ಅಮ್ಮ" ಅಂತ ಕರೆದುದು ಕಿವಿಗೆ ಬಿತ್ತು....ಅದೇಕೋ ಸುಮತಿಗೆ ಎರಡು ದಿನದ ಹಿಂದೆ ಸಿಕ್ಕಿದ ಆ ಮುತ್ತೈದೆಯ ನೆನಪು ಮನಪಟಲದಲ್ಲಿ ತೇಲಿ ಬಂದಿತು..."ಸುಮತೀ..." ಕರೆ ಬರಲು ಹೊತ್ತಾಗಲಿಲ್ಲ. ಕೈಯಲ್ಲಿ ಹಳೆ ರೀಡರ್ ಡೈಜೆಸ್ಟ್ ಹಿಡಿದು ಮಂಚದ ಮೇಲೆ ಕುಳಿತಿದ್ದ ಸುಮತಿ ಎದ್ದು," ಅತ್ತೇ... ಕರೆದಿರಾ?"  ಅಂದಳು. "ನಿನಗೆ ಕೊಟ್ಟೆ  ಮಾಡಲು ಬರ್ತದಂತಲ್ಲ, ನಿನ್ನ ಅಮ್ಮ ಇಲ್ಲಿಗೆ ಬಂದಾಗ ನನ್ನ ಮಗಳಿಗೆ ಅಡಿಗೆ ಮಾಡಲು ಬರುವುದಿಲ್ಲವಾದರೂ ಬಾಕಿ ಹೊರಗಿನ ಒಳಗಿನ ಕೆಲಸದಲ್ಲಿ ತುಂಬಾ ಜಾಣೆ ಎಂದಿದ್ದರು. ಯಾವಾಗಲು ನಮ್ಮ ರೈಟರ್  ಹೆಂಡತಿ ಮಾಡಿಕೊಡ್ತಿದ್ದಳು. ಇನ್ನು ಮುಂದೆ ನೀನೇ ಕೊಟ್ಟೆ ಮಾಡು" ಅಂದರು ಸುಮತಿಯ ಅತ್ತೆ ದರ್ಪದ ದನಿಯಲ್ಲಿ. ’ಅಷ್ಟೆ ತಾನೆ, ಕೊಟ್ಟೆ  ಏನು ಮಹಾ’ ಅಂದುಕೊಂಡು ಸುಮತಿ ಹಿಡಿಸೂಡಿ ಕಡ್ಡಿಗಳನ್ನು ತೆಗೆದುಕೊಂಡು ಹಿಂದೆ ಹೋದಳು. ದೊಡ್ಡ ದೊಡ್ಡ ಎಲೆಗಳನ್ನು ಆರಿಸಿ, ಪತ್ರಾವಳಿಗಳನ್ನು ಮಾಡಿಟ್ಟಳು. ಮಧ್ಯೆ ಎರಡು ಮೂರು ಸಾರಿ ಅತ್ತೆಯ ಸವಾರಿ ಇನ್ಸಪೆಕ್ಷನ್ ಮಾಡಲು ಬಂದಿತ್ತು. ೩೦ ಚಿಲ್ಲರೆ ಪತ್ರಾವಳಿ ಮಾಡಿ ಕೊಟ್ಟೆ  ಮಾಡಲು ಶುರುಮಾಡಿದಳು.  ಒಂಟಿಯಾಗಿ ಕುಳಿತು ಮಾಡುತ್ತಿರುವಾಗ ಅಮ್ಮನ ಮತ್ತು ಮನೆಯ ನೆನಪು ಬಂದು ಕಣ್ಣಾಲಿಗಳು ತುಂಬಿ ಬಂದಿದ್ದವು. ಇದೇ ಮೊದಲಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಒಬ್ಬಳೆ ಮಾಡುವುದು ಸುಮತಿ...ಅಮ್ಮನ ಮನೆಯಲ್ಲಿ ಅವಳು, ಅಮ್ಮ, ಚಿಕ್ಕಮ್ಮ, ಅಜ್ಜಿ....ಕೆಲವೊಮ್ಮೆ ಅಕ್ಕಂದಿರು( ಅಪ್ಪನ ಅಕ್ಕ, ತಂಗಿಯರು) ಹೀಗೆ ಎಲ್ಲರೂ ಕೂಡಿ ಮಾಡುತ್ತಿದ್ದರು. ಹೆಚ್ಚೆಂದರೆ ೫,೮ ಕೊಟ್ಟೆ  ಸುಮತಿಯ ಕೈಯಲ್ಲಿ ತಯಾರಾಗುತಿತ್ತು. ಬೆನ್ನಲ್ಲಿ ಹೊಗೆ ಬರಲು ಪ್ರಾರಂಭವಾಯಿತು....ಈಗಾಗಲೇ ೨ಗಂಟೆಗೂ ಮೀರಿ ಹೆಚ್ಚು ಹೊತ್ತು ಕಳೆದಿತ್ತು. ಸರಿ. ಕೊನೆಗೂ ಮುಗಿಯಿತು ಎಂದು ಸುಮತಿ ಅಂದುಕೊಂಡು ಏಳಲು ಯತ್ನಿಸುತ್ತಿರುವಾಗಲೇ ಅತ್ತೆ ಮತ್ತು ಅವಳ ಓರಗಿತ್ತಿ ಅಲ್ಲಿಗೆ ಬಂದರು. ಸುಮತಿಯ ಓರಗಿತ್ತಿ ಬಂದವಳೇ ಕೊಟ್ಟೆಗಳನ್ನು ಲೆಕ್ಕಮಾಡಲು ಕುಳಿತಳು. ಅತ್ತೆ ಏನೋ ಮಣಮಣ ಅನ್ನುತ್ತಿದ್ದರು. "ಅತ್ತೆ, ಬರೇ ೩೪ ಅಷ್ಟೇ" ಅಕ್ಕನ ಬಾಯಿಯಿಂದ ಬರೇ ಅಂತ ಕೇಳಿ ಸುಮತಿಗೆ ಮಿಂಚು ಹೊಡೆದಂತಾಯಿತು. "ಇದು ಸಾಕಾಗೊಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಾಡು. ಕಡಿಮೆ ಪಕ್ಷ ೫೦ ಆದರೂ ಬೇಕು. ನಾಳೆ ಹಿಟ್ಟು ಹಾಕುವಾಗ ಸಾಕಾಗದಿದ್ದರೆ ಮತ್ತೆ ಮಾಡಿಕೊಡು." ಒಂಚೂರು ದಯೆ ದಾಕ್ಷಿಣ್ಯವಿಲ್ಲದೆ ಅತ್ತೆಯ ಬಾಯಿಯಿಂದ ಮಾತುಗಳು ಉದುರಿತು. 

         ತನ್ನ ಕತೆ ಮುಗಿಯಲು ಹೆಚ್ಚು ಹೊತ್ತು ಬೇಕಾಗಿಲ್ಲ ಇನ್ನು ಅಂತ ಸುಮತಿಗೆ ಅನಿಸಿತು. ಏನೇ ಆದರು ಇನ್ನು ಅಲ್ಲಿ ಕೂರುವುದು ಅವಳಿಗೆ ಸಾಧ್ಯವಾಗಲಿಲ್ಲ. ಸೀದ ಎದ್ದು ತನ್ನ ಕೋಣೆಗೆ ಬಂದವಳೇ ಮಂಚದ ಮೇಲೆ ಬೋರಲಾಗಿ ಬಿದ್ದಳು. ಅವಳಿಗೆ ಅರಿವಿಲ್ಲದೆ ಕಣ್ಣಿನಿಂದ ಹನಿಗಳು ಹೊರನುಗ್ಗಿದವು. ಮೊದಲಬಾರಿಗೆ ಅಮ್ಮನ ಮೇಲೆ ಕೆಂಡದಂತ ಕೋಪ ಬಂದಿತು. ’ಬಡವನ ಕೋಪ ದವಡೆಗೆ ಮೂಲ’  ಏನೇ ಆದರು ತಾನು ಕೊಟ್ಟೆ ಮಾಡುವುದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದನ್ನು ಕೂಡಲೇ ಅರಿತಳು. ತನ್ನ ಪ್ರಿಯ ದೇವರ ನಾಮ ಸ್ಮರಣೆ ಮಾಡಿ ಒಂದಿಷ್ಟು ಶಕ್ತಿ, ಧೈರ್ಯವನ್ನು ಪಡೆದು ಅಲ್ಲಿಂದ ಎದ್ದು ಮುಖವನ್ನು ತೊಳೆದು ಕೊಟ್ಟೆ ಮಾಡುವ ಕಾಯಕ ಮುಂದುವರಿಸಿದಳು. ಇವಳ ಮನದಲ್ಲಿದ್ದುದು ಅತ್ತೆಗೆ ಮತ್ತು ಓರಗಿತ್ತಿಗೆ ಅರಿವಾಗಿತ್ತು. ಅವರಿಬ್ಬರು ಏನೊ ಮಾತಾಡಿಕೊಂಡರು ಕಾಣುತ್ತದೆ. ಸ್ವಲ್ಪ ಹೊತ್ತಿಗೆ ಓರಗಿತ್ತಿ ಅಲ್ಲಿಗೆ ಬಂದು ಪತ್ರಾವಳಿ ಹೇಗೆ ಮಾಡುವುದೆಂದು ಕಲಿಸಲು ಹೇಳಿದಳು. ಹೀಗೆ ಇಬ್ಬರು ಕೂಡಿ ೫೦ ಚಿಲ್ಲರೆಯಷ್ಟು ಮಾಡಿ ಮುಗಿಸುವಾಗ ರಾತ್ರಿ ೮.೩೦ ಕಳೆದಿತ್ತು.  ಪತಿ ಮತ್ತು ಮೈದುನರ ಸವಾರಿ ಅಂಗಡಿಯಿಂದ ಬಂದು ಟಿ. ವಿಯೆದರು ವಕ್ಕರಿಸಿತ್ತು. ಕೈತೊಳೆದು ಬಂದವಳಿಗೆ ಆರ್ಡರ್..೪ ಕಪ್ ಚಾ!  ಓರಗಿತ್ತಿ ತನ್ನ ಮಗುವಿನ ಗದ್ದಲ ಕೇಳಿ ಆಚೆ ನಡೆದಿದ್ದಳು. ಸುಮತಿ ಮುಖ ಊದಿಸಿ ಅಡಿಗೆ ಕೋಣೆಗೆ ನಡೆದಿದ್ದಳು. ತನ್ನ ಮನೆಯಲ್ಲಿ ಇಷ್ಟು ಹೊತ್ತಿಗೆ ಅಮ್ಮ ರಾತ್ರಿ ಊಟಕ್ಕೆ ತಮ್ಮನ್ನು ಕರೆಯುತ್ತಿದ್ದಳು. ಇಲ್ಲಿ ಇದೆಂತ ವಿಚಿತ್ರ...ರಾತ್ರಿ ೯ಗಂಟೆಗೆ ಚಾ..ಊಟ ೧೦.೩೦, ೧೧ ಗಂಟೆಗೆ! ಬಹಳ ಕಷ್ಟವಾಗುತಿತ್ತು ಹೊಂದಿಕೊಳ್ಳಲು.  ಆದರೆ ಬೇರೆ ದಾರಿಯಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ!

       ಈಗ ಅವಳಿಗೆ ಅರ್ಥವಾಯಿತು; ಆ ಹೆಂಗಸಿನ ಮುಖದಲ್ಲಿ ಕಂಡ ಸಂತೋಷದ  ಕಾರಣ! ಕೊಟ್ಟೆ ಏನು ನಿನ್ನಯ ಮಹಿಮೆ! ಅವಳು ಬಚಾವಾದಳು, ನಾನು ಸಿಕ್ಕಿ ಬಿದ್ದೆ ಅಂತ ಸುಮತಿಯ ಮುಖದಲ್ಲಿ ಒಂದು ವ್ಯಂಗ ನಗೆ ಮೂಡಿತು.!

18 November, 2012

ನನ್ನ ಪಿಕಾಸು ರಚಿಸಿದ ಲೊಗೊ.....


ನನ್ನ ಪಿಕಾಸು ರಚಿಸಿದ ಲೊಗೊ.....ನನ್ನ ಮಗಳ ಮುಖಪುಟ ಸ್ನೇಹಿತ, ನಾನು ನನ್ನ ಫೇಸ್ ಬುಕ್‍ನಲ್ಲಿ ಹಾಕಿದ, ಪಿಕಾಸು ರಚಿಸಿದ ಗಣಕ ಚಿತ್ರಗಳನ್ನು ನೋಡಿ ಪ್ರಭಾವಿತನಾಗಿ ತನ್ನ ವೆಬ್ ಜಾಲದ ಉಪಹಾರ ಗೃಹಕ್ಕೆ ಒಂದು ಲೊಗೊ ರಚಿಸುವಂತೆ ಹೇಳಿದಾಗ ನನ್ನ ಮಗನಿಗೆ ಪರೀಕ್ಷೆ ಹೊತ್ತು..ಆದರೂ ತಯಾರಿಸಿದ..ಅದು ಅವರಿಗೆ ಮೆಚ್ಚುಗೆಯಾಗಿ ಅವನಿಗೆ ಅವನ ಮೊದಲ ಸಂಪಾದನೆ ಸಿಗುವುದರಲ್ಲಿದೆ..ಅಮ್ಮನಿಗೆ ಇದಕ್ಕಿಂತ ಮತ್ತೇನು ಬೇಕು!  ವರುಷಗಳ ತಪಸ್ಸಿನ  ಸಾರ್ಥಕ ಭಾವ!!!

    ಅವನು ಮೊದಲು ರಚಿಸಿದ ಚಿತ್ರ ಅವರಿಗೆ ಹಿಡಿಸಿತಾದರೂ ಅದನ್ನು ವೆಬ್ ಜಾಲಕ್ಕೆ ಉಪಯೋಗಿಸುವ ಹಾಗಿರಲಿಲ್ಲ..ನಂತರ ಮಾಡಿದ ಚಿತ್ರ ನಿಜಕ್ಕೂ ಸೂಪರ್ ಅಂದ್ರು!

14 November, 2012

ಅವಳ ಗೊಂದಲ- ಸಣ್ಣ ಕತೆ!


      ಬಹಳ ಸಮಯದ ನಂತರ ಅತ್ತೆ ಮನೆಗೆ ಅವಳ ಭೇಟಿ. ಮನೆಯಲ್ಲಿ ಮೈದುನನ ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸಿಲ್ಲ. ಎಲ್ಲರ ಮುಖದಲ್ಲಿ ಎಂದೂ ಕಾಣದ ನಿರಾಳತೆ.. ಅತ್ತೆಯ ಗೈರುಹಾಜರಿಯ ಪರಿವೆ ಯಾರಿಗೂ ಇದ್ದಂತೆ ಕಾಣಲಿಲ್ಲ. ಸಂಜೆ ಎಲ್ಲರೂ ಹಾಲಿನಲ್ಲಿ ಸೇರಿ ಟಿ ವಿಯಲ್ಲಿ ಏನೋ ನೋಡುತ್ತಿದ್ದಾರೆ.. ಮೈದುನ ತಯಾರಾಗಿ ಬಂದುದನ್ನು ನೋಡಿದಳು. ಅವಳ ಬಳಿಯಲ್ಲಿ ಕುಳಿತ್ತಿದ್ದ ತನ್ನ ಹೆಂಡತಿಯನ್ನು ಸನ್ನೆಯಲ್ಲೇ ಕರೆಯುತ್ತಿದ್ದಾನೆ. ಅವಳ ಓರಗಿತ್ತಿಯಾದರೋ ನಾಚಿಕೆ ಗೀಚಿಕೆ ತೋರ್ಪಡಿಸದೇ ಕೂಡಲೇ ಎದ್ದು ತಯಾರಾಗಲಿಕ್ಕೆ ಹೋದಳು. ಅವಳು ಬಿಟ್ಟಬಾಯಿ ಮುಚ್ಚದೇ ಅದನ್ನು ನೋಡುತ್ತ ೩ವರ್ಷದ ಹಿಂದಿನ ತನ್ನ ಮದುವೆಯ ದಿನಗಳ ಕಾಲಕ್ಕೆ ಹೋದಳು.... 
                       

         ಮದುವೆ ಆಗಿ ೩ ದಿನ ಕಳೆದಿದ್ದರೂ ಅವಳ ಕೈಯ ಮದರಂಗಿಯ ಬಣ್ಣ ಮಾಸಿರಲಿಲ್ಲ..ಬದಲು ಮತ್ತಷ್ಟು ಗಾಢವಾಗಿ ಎದ್ದು ಕಾಣುತಿತ್ತು..ಎಲ್ಲರೂ ರಂಗು ಗಾಢವಾದುದನ್ನು ನೋಡಿ ಇವಳನ್ನು ಛೇಡಿಸುತ್ತಿದ್ದರು. ಇವಳೊ ನಾಚಿಕೆಯ ನಟನೆಯನ್ನು ತೋರಿಸುತ್ತಿದ್ದಳು. ಸಂಜೆ ಸರಿಸುಮಾರು ೭ಗಂಟೆ.. ಅತ್ತೆ ಕೆಸುವಿನ ಎಲೆಗಳನ್ನು ತೊಳೆಯಲು ನವವಧುವಿಗೆ ಅಪ್ಪಣೆ ಕೊಟ್ಟಿದ್ದರು. ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ, ಮಿಣಿ ಮಿಣಿ ಮಿಂಚುವ ಜಿರೋ ವೊಲ್ಟ್ ಬಲ್ಬಿನ ಬೆಳಕಿನಲ್ಲಿ  ಭಾವರಹಿತಳಾಗಿ ತೊಳೆಯುತ್ತಿದ್ದ ಅವಳಿಗೆ,"ನಾನು ಹೊರಗೆ ಹೋಗಿ ಬರುತ್ತೇನೆ."  ಹೇಳಿದ್ದು ಕೇಳಿಸಿತು.. ತಲೆ ಎತ್ತಿ ನೋಡಿದಾಗ ಪತಿ ಹೊಸ ಧಿರಿಸುಗಳನ್ನು ಹಾಕಿ ಹೊರಹೋಗಲು ತಯಾರಾಗಿದ್ದಾನೆ. ಮನಸ್ಸಿಗೆ ಪಿಚ್ಚೆನಿಸಿತು. ಸುಮ್ಮನೆ ತಲೆ ಆಡಿಸಿದಳು.. ಮತ್ತೇನಾದರು ಹೇಳಲು ಸಾಧ್ಯವಿತ್ತಾ ಅವಳಿಗೆ!  

                        ಹತ್ತಿರ ಕುಳಿತ ಓರಗಿತ್ತಿಯ ಮಗ ಏನೋ ಕೇಳಿದಾಗ ಮತ್ತೆ ಈ ಲೋಕಕ್ಕೆ ಬಂದಳು. ಹುಂ, ಒಂದು ನಿಟ್ಟುಸಿರು ತಂತಾನೆ ಹೊರಬಂತು. ರಾತ್ರಿ ಅಡಿಗೆ ಕೋಣೆಯಲ್ಲಿ ಓರಗಿತ್ತಿಯನ್ನು ಯಾರೋ ಛೇಡಿಸುತ್ತಿದ್ದರು..ಅಣ್ಣನಿಗೆ ಬಾಟ್ಲಿ ತರಲು ಹೋಗುವಾಗ ಸಹ ಅತ್ತಿಗೆ ಜೊತೆಗೇ ಬೇಕು.. ಆಗ ಅವಳಿಗರ್ಥವಾಯಿತು.  ಸಂಜೆ ಮೈದುನನ ಸವಾರಿ ಹೋದದ್ದು ಎಲ್ಲಿಗೆ ಅಂತ. ಮತ್ತೆ ತಲೆಯಲ್ಲಿ ತಳಮಳ,"ಅಲ್ಲ ನಿನಗೂ ಸಹ ನಿನ್ನ ಪತಿ ಇದೇ ರೀತಿ ಬಾಟ್ಲಿ ತರಲು ಹೋಗುವಾಗ ಕರೆದಿದ್ದರೆ ಖುಷಿಯಾಗುತ್ತಿತ್ತಾ. ಅರೇ, ತನ್ನ ಪತಿಗೆ ಈ ಅಭ್ಯಾಸ ಇಲ್ಲದಿದುದರಿಂದ ತಾನೆ ಇಷ್ಟಾದರು ಆರಾಮವಾಗಿರುವುದು... ಇಲ್ಲ ಅಂದರೆ ತಾನು ಅವನ ಜೊತೆ ಇರುತ್ತಿದ್ದೆನಾ? ಬೇಡಪ್ಪಾ ಬೇಡ... ಅವನು ಹೇಗಿದ್ದಾನೋ ಹಾಗೆ ಇರಲಿ." ನೆನಪಿಗೆ ಬಂದ ದೇವರಿಗೆಲ್ಲಾ ಕೈ ಮುಗಿದು ಕಟೀಲು ಶ್ರೀ ದುರ್ಗಾಪರಮೇಶ್ವರಿಗೆ ಹೂಪೂಜೆಯ ಹರಕೆ ಹೊತ್ತಳು ಅವಳು!

13 November, 2012

ಮಗಳ ಘನಕಾರ್ಯ....

ಮಗಳ ಘನಕಾರ್ಯ....




 ಅದೇನೋ ನಿನ್ನೆ ಬೆಳಿಗ್ಗೆಯಿಂದ ಬಿಡಿಸುತ್ತಾ ಕೂತಿದ್ದಾಳೆ ನನ್ನ ಮಗಳು...ಅಪರೂಪವಾದ ಈ ನೋಟ....ಕೇಳಿದೆ ಮಗಳ ಬಳಿ....ಹುಂ, ಏನು ಚಿತ್ರ ಗಿತ್ರ...ಏನು ವಿಶೇಷ???? ನಿಧಾನವಾಗಿ ಬಾಯಿಬಿಟ್ಟಳು, ತನ್ನ ಸ್ನೇಹಿತನ ಜಾಲದಲ್ಲಿ ಹಾಕಲು ಚಿತ್ರ ಮಾಡ್ತಿದ್ದೇನೆ..ಕೇಳಿದ ತಪ್ಪಿಗೆ ಒಂದಿಷ್ಟು ಸಲಹೆನೂ ಉಚಿತವಾಗಿ ಕೊಡಬೇಕಾಯಿತು. ಸ್ಕಾನಿಂಗ್ ಕೆಲಸನೂ ಅಮ್ಮನಿಗೇ ಅಂಟಿಸಿದಳು...ಜೊತೆಗೆ ವಾರ್ನಿಂಗ್- ಫೇಸ್ ಬುಕ್ಕಿನಲ್ಲಿ ಹಾಕಿದರೆ ನೋಡು!!! ಹೋಗೆ ನಿಂಗೆ ಹೆದರ್ತೇನೆಯಾ ...ಆದರೂ ಹಾಕಲಿಕ್ಕೆ ಹೋಗಲಿಲ್ಲ...ನನ್ನ ಬ್ಲಾಗ್ ಇದೆಯಲ್ಲವಾ...ಅದರಲ್ಲಿ ಹಾಕ್ತೇನೆ...{ ನನ್ನ ಮಕ್ಕಳು ಏನು ಮಾಡಿದರು ನನಗದು ಘನಕಾರ್ಯನೇ...:-)}

 ಅಂದ ಹಾಗೆ ಈ Beat Beans....ಈ ಲೋಗೋ ಮಾಡಿದ್ದು ಕೂಡ ನನ್ನ ಮಗ ಪಿಕಾಸು!

ಇಲ್ಲಿ ವಿಶೇಷವೇನೆಂದರೆ ನೋಡಲು ಚಿತ್ರ ಕಡ್ಡಿ ಮನುಷ್ಯರಂತೆ ಕಂಡರೂ..ಇದೆಲ್ಲಾ ಕಾಪಿ ಮಾಡಿದಲ್ಲ..ಅವಳದೇ ಐಡಿಯಾ!!! ಅದು ನನಗೆ ಬಹಳ ಖುಶಿ ಕೊಟ್ಟಿತು.

12 November, 2012

ಸ್ವಗತ!


ಭಾವಜೀವಿ-ಕರೆಯುವರೆನ್ನನವರು
ನಗೆಬರುವುದೆನಗೆ ಏಕೆನ್ನುವಿರಾ
ವ್ಯತ್ಯಾಸವಿಷ್ಟೇ;
ಅವರು ಇಂದ್ರಿಯಗಳಿಂದ ಸ್ಪಂದಿಸುವವರಾದರೆ,
ನಾನು ಹೃದಯದಿಂದ...

**************************



ಎಲ್ಲೆಲ್ಲೋ ಹುಡುಕಾಡುತ್ತ ಅಲೆಯುತ್ತಿದ್ದೆನಲ್ಲ
ವ್ಯರ್ಥವಾಗಿ ಕಳೆದೆ ಅಮೂಲ್ಯ ಸಮಯವನ್ನೆಲ್ಲ
ಕೊನೆಗೂ ನೀನು ಸಿಕ್ಕಿದೆಯಲ್ಲ
ಎಲ್ಲಿ ಎಂದು ಕೇಳಿದೆಯಲ್ಲ
ಇಲ್ಲೇ ನನ್ನ ಮನದಲ್ಲೇ ಎಂದೆ ನಲ್ಲ!

********************************
ಒಲವೇ,

ನನ್ನೆದೆಯಲಿ ಚಿಗುರುವ 
ಭಾವಗಳಿಗೆ ಹನಿಯುಣಿಸುವನು ನೀನೇ
ನನ್ನಾತ್ಮದ ಒಡೆಯನು ನೀನೇ
ನಿನ್ನರಮನೆಯ ಬಾಗಿಲಲಿ ನಿಂತಿದವಳ 
ಮೇಲೆ ಕೃಪಾದೃಷ್ಟಿ ತೋರುವವನು ನೀನೇ
ನನ್ನೆಲ್ಲ ಭಾವಗಳಿಗೆ ಮಾರ್ದನಿಗೊಡುವವನು ನೀನೇ
ಇಷ್ಟೆಲ್ಲ ಆದರೂ, 
ಒಮ್ಮೊಮ್ಮೆ ಅದೇಕೆ ನಿನ್ನ ಕರೆಗೆ ಓಗೊಡುತ್ತಿಲ್ಲ ನಾನು?


ನಮ್ಮೆಲ್ಲರ ಬಾಳು ಬೆಳಗಲಿ!





ನಮ್ಮ ಮನೆ ಮನಗಳನ್ನು ಸದಾ ಬೆಳಗಲಿ 
ಸಾಲು ಸಾಲಾಗಿ ಹಚ್ಚಿಟ್ಟ ಹಣತೆಗಳು!
ಸುಖ, ಶಾಂತಿ, ಸಮೃದ್ಧಿಗಳ ಬದುಕು ನಮ್ಮೆಲ್ಲರದಾಗಲಿ! 
ಸವಿನಯದ ಪ್ರಾರ್ಥನೆ ಆ ಪರಮಾತ್ಮನಲಿ!


ಮಿತ್ರವೃಂದಕ್ಕೆಲ್ಲಾ ಬೆಳಕಿನ ಹಬ್ಬದ ಶುಭ ಹಾರೈಕೆಗಳು!

10 November, 2012

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!


             ರೂಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......
      
         ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ ಕುಣಿಯುವ ಶಬ್ದ, ಕಪ್ಪೆಗಳ ವಟರ್ ವಟರ್ ಗಾಯನ, ಗುನುಗು ಹಕ್ಕಿಯ ಗೊಣಗಾಟ, ಕೋಗಿಲೆಗಳ ಮಂದರಾಗ, ರಾಬಿನ್‍ಗಳ ಚಿಲಿಪಿಲಿ, ಬುಲ್ ಬುಲ್‍ಗಳ ಗುಣು ಗುಣು ಹಾಡು ಜೊತೆಗೆ ಮಂದವಾಗಿ ಬೀಸುವ ಮರುತನ ಮೌನ ತರಂಗಗಳ ಉದಯರಾಗಗಳು ನನ್ನನ್ನು ಕಚುಕುಳಿಯಿಡುತ್ತಾ ಎಬ್ಬಿಸುತ್ತವೆ.  ಈ  catalystಗಳು ನನ್ನ ನಿತ್ಯದ otherwise same old boring ಕೆಲಸಗಳಿಗೆ ಹೊಳಪನ್ನು ಕೊಡುತ್ತವೆ. ಬಿಸಿಲೇರುವ ಮೊದಲೇ ಮತ್ತೊಮ್ಮೆ ತೋಟದ ಗಿಡಗಳ ಜೊತೆ ಒಂದಿಷ್ಟು ಪಂಚಾದಿಕೆ( ನಮ್ಮ ಕೊಂಕಣಿಯಲ್ಲಿ ಸುಮ್ಮಸುಮ್ಮನೆ ಮಾತನಾಡುವುದಕ್ಕೆ ಹೀಗೆನ್ನುತ್ತಾರೆ) ನಡೆಸಿ, ಹೆಚ್ಚು ಕಡಿಮೆ ಪ್ರತಿದಿನ ಕಾಣಿಸುವ ಹೊಸ ಹೊಸ ಕೀಟ, ಜೇಡಗಳ ವೀಕ್ಷಣೆ, ಬೆಕ್ಕಿನ ಮರಿಯೊಡನೆ ತೊದಲಾಟ, ಚಿಟ್ಟೆಗಳ ಜೊತೆ ಒಂದಿಷ್ಟು ಹಾರಾಟ ( ಕೆಮರಾ ತೆಗೆದುಕೊಂಡು ಹಾರಾಟನೇ ಮಾಡಬೇಕಾಗುತ್ತೆ) ಇವೆಲ್ಲಾ ನಡೆಸಿದರೆ ಆ ದಿನದ ನೇಚರ್ ವಾಕ್ ಮುಗಿಯುತ್ತದೆ. 









ಮತ್ತೆ ನಾಲ್ಕು ಗೋಡೆಯೊಳಗೆ ಬದುಕು.. ಮಧ್ಯ ಮಧ್ಯದಲ್ಲಿ ಅಂತರ್ಜಾಲವೆಂಬ ಕಿಟಿಕಿಯಿಂದ ಪ್ರಪಂಚದ ಕಿರುನೋಟದ ವೀಕ್ಷಣೆ... ನೆವನದಲ್ಲಿ ಸಿಗುವ ಮಕ್ಕಳ ಒಡನಾಟ... ಆಗಾಗ ಕುಂಚ ರಂಗಿನಲ್ಲಿ ಅದ್ದಿ ಗೋಡೆಗಳ ಮೇಲೆ, ಕ್ಯಾನ್‍ವಾಸಿನ ಮೇಲೆ ಚೆಲ್ಲುವ ಆಟ ಪಾಠ! ಇಲ್ಲೆಲ್ಲಾ ನಾನು ರೂಮಿಯನ್ನು ನೋಡುತ್ತಿರುತ್ತೇನೆ. ಪ್ರಕೃತಿ ತೆರೆದುಕೊಳ್ಳುವ ವಿಸ್ಮಯಗಳನ್ನು ನೋಡಬೇಕಾದರೆ ನಮ್ಮ ಹೊರಕಣ್ಣಿನ ಜೊತೆ ಒಳಗಿನ ಕಣ್ಣನ್ನೂ ವಿಶಾಲವಾಗಿ ತೆರೆದಿರಿಸಬೇಕು. ಆಗ ಮಾತ್ರ ಜೇನಿಗಿಂತ ಸ್ವಾದಿಷ್ಟವಾಗಿರುವ-ಪ್ರಕೃತಿಯಲ್ಲಿ ಅಡಗಿರುವ ಒಲವಿನ ಸಾಗರದಲ್ಲಿ ಮುಳುಗು ಹಾಕಿ ಪ್ರೇಮವೆಂಬ ಅಮೃತದ ರುಚಿಯನ್ನು ಆಸ್ವಾದಿಸಬಹುದು.  
************           ************              ************


ನನ್ನಾತ್ಮವೇ, ರಹಸ್ಯವೊಂದನ್ನು ಅರುಹುವೆ
ಆಲಿಸುವವಳಾಗು...
ಈ ಒಲವೆಂಬ  ತರುವಿನ ಸಂಗವನೆಂದಿಗೂ ಬಿಡದಿರು-
ಸದಾ ಬಾಡದ, ಕಂಪನ್ನೀವ ಕುಸುಮಗಳ ವರ್ಷವನ್ನೇ ಸುರಿಸುವುದದು.

03 November, 2012

ನನ್ನೊಳಗಿನ ರುಮಿ ಹೀಗನ್ನುತ್ತಾನೆ!





ನನ್ನೊಲವೆ, 
ಅದೇನೋ ಹಾಡು ಗೊಣಗುತ್ತಾ, ಕುಣಿಯುತ್ತಾ ಹೋಗುತ್ತಿದ್ದಿಯಾ...
ಅರೆ, ಅದೇಕೆ ಈ ಮೊದಲು ನಾ ನಿನ್ನ ನೋಡಿಲ್ಲ!
ನೋಡ ನೋಡುತ್ತಲೇ... ಕುಣಿಯತೊಡಗಿದೆ ನಿನ್ನ ಸುತ್ತಲೂ ನಾನೂ...
ಆಹಾ! ಲೋಕವೆಲ್ಲಾ ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದೆಯಲ್ಲಾ...
ಎಂದೂ ಮುಗಿಯದಿರಲಿ ಈ ಅಲೌಕಿಕ ಆನಂದ!

*****************************
ಒಲವೇ,

ಸಂಪೂರ್ಣವಾಗಿ ನಾನು ನಿನ್ನವಳೋ..
ಹಿಂದಿರುಗಿಸಬೇಡವೋ ಮತ್ತೆ ನನ್ನನ್ನು ನನಗೇ!

*****************************


 ಕೇಳುತ್ತಿದೆಯಾ... 
 ದಶ ದಿಕ್ಕುಗಳಿಂದಲೂ 
 ಪ್ರೀತಿಯು ನಿನ್ನನ್ನು  ಕರೆಯುತ್ತಲೇ ಇದೆ... 
 ಯಾವಾಗಲೂ...
 ಇನ್ನಾದರೂ ಬರುವಿಯಲ್ಲಾ ನೀನು...
 ಹೆಚ್ಚು ಕಾಯಿಸಬೇಡವೋ!

****************************

ಒಲವೇ,
ನಿನ್ನ ಹಾದಿಯಲಿ ಪಯಣಿಗಳಾಗಲು... 
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ.
ಸದಾ ತಗ್ಗಿ ಬಗ್ಗಿಯೇ ನಡೆವೆನೆಂದರೆ 
ನಂಬುವೆ ತಾನೆ!
 **************************************

ಒಲವೇ, 
ನೀನೆಷ್ಟು ನಿಕಟವಾಗಿರುವಿ ನನಗೆ?
ಖಂಡಿತವಾಗಿ ನನಗೊತ್ತು ನಿನಗಿದು ತಿಳಿದಿರಲಿಕ್ಕಿಲ್ಲವೆಂದು
ಹೇಳಲೇ, ಕೇಳುವೆಯಾ...

ನನ್ನ ಕನಸುಗಳನ್ನೆಲ್ಲ ಕಳೆದುಕೊಳ್ಳುವಷ್ಟು...
ನನ್ನಾತ್ಮವನ್ನೂ ಮರೆಯುವಷ್ಟು...
ಎಲ್ಲರಲ್ಲೂ ನಿನ್ನನ್ನೇ ಕಾಣುವಷ್ಟು...

ಆ ಸತ್ಯವ ತೋರಿಸಿದ್ದು
ಕನ್ನಡಿಯೊಳಗೆ ಕಂಡ 
ಕಣ್ಣಲಿ ನಿನ್ನ ಬಿಂಬ!


************************************


ನಿಸರ್ಗ ನನ್ನೊಳು ಹುಟ್ಟಿಸಿತು 
ಅನುರಾಗ ಭಾವವನ್ನು...
ಆ ಭಾವವೇ ಕವಿತೆಗಳ  
ಹುಟ್ಟಿಗೆ ಪ್ರೇರಣೆಯಂತೆ!

*********************************


ಒಲವಿನ ಹೃದಯದ 
ಆಳದ ಪರೀಕ್ಷೆ 
ಮಾಡಲು ಹೊರಟು 
ಇವಳು ತನ್ನನ್ನೇ 
ತಾನು ಕಳಕೊಂಡಳಂತೆ!

*****************************

ಒಲವೇ...
ಹೇಳಲೇನೋ ಕಾತರಿಸಿದೆ...
ಕ್ಷಣದಲ್ಲೇ ತನ್ನ ತೆಕ್ಕೆಗೆ ಸೆಳೆಯಿತು...
ಮಾತ ಮರೆತು ಮೌನಿಯಾದೆ....
ಅದರ ಆಲಿಂಗದಲ್ಲಿ!

**************************

ಒಲವೇ,
ನಿನ್ನ ನೋಟ ಚೆಲ್ಲಿದ ಕಿರಣ
ನನ್ನೆದೆಯ ಹಣತೆಯ ಬೆಳಗಿಸಿದೆ!
**********************************







ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...