ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 October, 2012

ಸಂಯಮ

ನಮ್ಮ ಶರೀರ ಮನಸ್ಸುಗಳ ಮೇಲೆ ಹತೋಟಿಯನ್ನು ಸಾಧಿಸುವುದನ್ನೇ ನಮ್ಮ ಹಿರಿಯರು ’ಸಂಯಮ’ ಎಂದು ಕರೆದರು. ಸಂಯಮವೆಂದರೆ ಇಂದ್ರಿಯ ಮನಸ್ಸುಗಳನ್ನು ನಿಷ್ಕ್ರಿಯಗೊಳಿಸುವುದು ಎಂದರ್ಥವಲ್ಲ.  ಅವಕ್ಕೆ ನಿರ್ವಹಿಸಲೇಬೇಕಾದ ಕರ್ತವ್ಯಗಳಿರುತ್ತವೆ. ಮನುಷ್ಯನ ಬದುಕು ಅರ್ಥಪೂರ್ಣವಾಗಿ, ಆಸ್ವಾದನೀಯವಾಗಿರಬೇಕಾದರೆ ಇಂದ್ರಿಯ ಮನಸ್ಸುಗಳ ತುಡಿತ, ಬಯಕೆಗಳಿಗೆ ಮಿತಿ ಔಚಿತ್ಯಗಳ ಗಡಿ ಹಾಕಿ, ಅವು ಅದನ್ನು ಮೀರದಂತೆ ನೋಡಿಕೊಳ್ಳುವುದೇ ಸಂಯಮ ಅಥವಾ ಸ್ವ-ನಿಯಂತ್ರಣ. ನೋಡಬಾರದ್ದನ್ನು  ನೋಡಬೇಕೆನ್ನುವ, ಕೇಳಬಾರದ್ದನ್ನು ಕೇಳಬೇಕೆನ್ನುವ, ಅಭಕ್ಷವಾದುದನ್ನು ಭಕ್ಷಿಸಬೇಕೆನ್ನುವ-ಇಂಥ ಎಲ್ಲ ಚಾಪಲ್ಯಗಳೂ ಮಿತಿ, ಔಚಿತ್ಯಗಳ ಎಲ್ಲೆಯನ್ನು ಅತಿಕ್ರಮಿಸದಂತೆ, ಅಗತ್ಯಕ್ಕಿಂತಲೂ ಹೆಚ್ಚು ಬೇಕೆನ್ನುವ ’ತೃಷ್ಣೆ’ಯೂ ಇದೇ ಗುಂಪಿಗೆ ಸೇರಿದುದು. ದೇಹ ಮನಸ್ಸುಗಳನ್ನು ಅಂಥ ಅತಿರೇಕಗಳಿಂದ ತಡೆಹಿಡಿಯುವುದು ಸ್ವ-ನಿಯಂತ್ರಣದ ಉದ್ದೇಶ.
ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲೂ ಬೆಳಕೊಂದನ್ನು ಭಗವಂತ ಇರಿಸಿದ್ದಾನೆ. ಅದು ಮಂಕಾಗದಂತೆ, ಆರಿಹೋಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಶುಚಿಯಾದ ಚಿಂತನೆಯ ತೈಲ ಹಾಕುತ್ತಾ, ಬತ್ತಿ ಕರಿಗಟ್ಟದಂತೆ ಸಂಯಮದ ಕಡ್ಡಿಯಿಂದ ಸ್ವಚ್ಛಗೊಳಿಸುತ್ತಿದ್ದರೆ, ಒಳಗೆ ಬೆಳಗುವ ದೀಪ ನಿರಂತರ ಬೆಳಕು ಬೀರುತ್ತದೆ.
-ವೈನತೇಯ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...