ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

25 December, 2012

ನಾವ್ಯಾಕೆ ನಮ್ಮ ನಮ್ಮ ಊರಿನಲ್ಲಿ helping networks ಮಾಡಿಕೊಳ್ಳಬಾರದು!

   
        ಏನಾದರೂ ಮಾಡಬೇಕು...ಹೌದು, ನಾನು ಈ ನಿಟ್ಟಿನಲ್ಲಿ ವಿಫಲಳಾಗಲೂಬಹುದು..ಆದರೂ ಏನಾದರೂ ಮಾಡಿ ಒಂದಿಷ್ಟು ಬದಲಾವಣೆ ತರಲೇಬೇಕು..ಇಂತಹ ದುರ್ಘಟನೆಗಳ ಸಂಖ್ಯೆಯಾದರೂ ಕಡಿಮೆಯಾಗಬೇಕು....ಇದೇ ಆಲೋಚನೆ ರಾತ್ರಿ ಮಲಗಿದವಳಿಗೆ...ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿಬಂತು. ಬೆಳಿಗ್ಗೆ ತಿಂಡಿ ತಿನ್ನುವಾಗ ಮಕ್ಕಳೊಂದಿಗೆ ಆ ವಿಷಯವನ್ನು ಪ್ರಸ್ಥಾವಿಸಿದೆ...ಉತ್ತೇಜಿತ ಉತ್ತರ ಬರಲಿಲ್ಲ. ಅವರಿಬ್ಬರು ಹೇಳಿದ್ದೂ ಸರಿಯೇ ಆಗಿತ್ತು..ಆದರೂ ಇಂತಹ ಪ್ರಯತ್ನಗಳು ಒಂದಿಷ್ಟು ಕ್ರೌರ್ಯತಡೆಗೆ ಸಹಾಯಕವಾಗುವುದೆಂದು ನನ್ನ ಅಭಿಪ್ರಾಯ.

      ಹೌದು, ಈಗ ನಮ್ಮ ನಮ್ಮ ಜಂಗಮವಾಣಿ, ಸಾಮಾಜಿಕ ಜಾಲತಾಣಗಳು, ನಮ್ಮ ಸ್ನೇಹಿತರ ನಿಜವಾದ ಉಪಯೋಗವಾಗುವುದು..ನಾವ್ಯಾಕೆ ನಮ್ಮ ನಮ್ಮ ಊರಿನಲ್ಲಿ ಒಂದು helping network ಮಾಡಿಕೊಳ್ಳಬಾರದು. ಒಂದು ವೇಳೆ ಯಾವುದೇ ಹೆಣ್ಣು ಮಗಳು, ಅಥವಾ ಹುಡುಗನೇ ಬೇಕಾದರೂ ಇರಲಿ, ರಾತ್ರಿ ಹೊತ್ತು ಒಂಟಿಯಾಗಿ ಬರಬೇಕಾದ ಪ್ರಸಂಗ ಒದಗಿದರೆ ಅವರು ಆಯಾಯ ಸ್ಥಳದಲ್ಲಿರುವ ನಮ್ಮ ಜಾಲದಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಸಹಾಯಪಡಕೊಳ್ಳಬಹುದಲ್ಲವೆ! ಹಲವು ಸಾರಿ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಪ್ರಯಾಣ ಮಾಡಿ, ತಾವು ತಲುಪಬೇಕಾದ ಸ್ಥಳವನ್ನು ಮುಂಜಾನೆ ಇನ್ನೂ ಕತ್ತಲಿರುವಾಗ ತಲುಪಿದರೆ, ಅವರನ್ನು ಅವರ ಹಾಸ್ಟೆಲಿಗೋ ಅಥವಾ ಅವರ ರೂಮಿಗೋ ತಲುಪಿಸಬಹುದು. ( ರಿಕ್ಷಾದವರನ್ನೂ, ಪೋಲಿಸರನ್ನೂ ನಂಬಲು ಸಾಧ್ಯವಿಲ್ಲವಲ್ಲ.)

      ನನ್ನ ಮಗ- ಅಮ್ಮ ಅವರೇ kidnap ಮಾಡಿಬಿಟ್ಟರೆ! ನನ್ನ ಮಗನಿಗೂ ಆ ಶಬ್ದದ ಅಲರ್ಜಿ!
   ಮಗಳೂ ಧ್ವನಿಗೂಡಿಸಿದಳು- ಅಮ್ಮ, ನೀನೇನೋ ಟೀಮ್ ಅಂತ ಮಾಡ್ತಿ..ಅದರಲ್ಲಿ ಇದ್ದವರೆಲ್ಲ ಒಳ್ಳೆಯವರೇ ಅಂತ ಗ್ಯಾರಂಟಿ ಏನು?

ಅವರಿಬ್ಬರು ಹೇಳುವುದು ಸರಿಯೇ...ಇಂತಹ ಕೆಲಸಗಳಿಗೆ ಮುಂದೆ ಬರುವವರು ಕಡಿಮೆಯೇ...ಯಾರಿಗೆ ಬೇಕು ಇಂತಹ ಜವಾಬ್ದಾರಿ! ನಾನು ನನ್ನ ಮಗನಿಗೆ ಕೇಳಿದೆ...ಒಂದು ವೇಳೆ ನಿನಗೆ ನಾನು ಯಾರಿಗಾದರು ಸಹಾಯ ಮಾಡಲು ಹೋಗು ಅಂದರೆ ಹೋಗುವಿಯಾ? ಮಾತೇ ಇಲ್ಲ..ಆದರೂ ನನಗೊತ್ತು  ಅವನು ಆ ಹೊತ್ತಿನಲ್ಲಿ ಹೋಗದೇ ಇರಲಾರ....ಅವನು ಸಹಾಯ ಮಾಡಿದ ಜನರ ಪಟ್ಟಿ ನನ್ನಲ್ಲಿದೆಯಲ್ಲವ!

______________________________________________
 
     ದಯಮಾಡಿ ಒಂಟಿಯಾಗಿರುವಾಗ ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ. ಹಲವು ಸಾರೆ ಪುರುಷನ "ಹಮ್" ಕೆಣಕಿದರೆ ಅಪಾಯ ತಪ್ಪಿದಲ್ಲ.. ಅವನು ಕಾಮುಕನಾಗಿರದಿದ್ದರೂ ನಿಮ್ಮ ಮೇಲೆ ಎರಗಬಹುದು...ಅಲ್ಲಿ ಅವನಿಗೆ ನಿಮಗೆ ಬುದ್ಧಿ ಕಲಿಸಬೇಕು ಎಂಬ ಹವಣಿಕೆ. ಯಾಕೆಂದರೆ ಹೆಣ್ಣಿಗೆ ಮಾನ ಮುಖ್ಯ..ಅದೇ ಪುರುಷನು ನಿಮ್ಮನ್ನು ಸೋಲಿಸಲು ಇರುವ ಮುಖ್ಯ ಆಯುಧ! ಅನೇಕ ಅತ್ಯಾಚಾರಗಳಿಗೆ ಈ "ಅಹಂ"ವೇ ಮುಖ್ಯ ಕಾರಣವಾಗಿದೆ.

ಕಿವಿಗೊಟ್ಟು ಕೇಳಿ, ಅವಳೇನೋ ಹೇಳುತ್ತಿರುವಳು.......ಅವನೂ ಜೊತೆಗೂಡಿದ್ದಾನೆ...ಮತ್ತೆ ನೀವೇನು ಮಾಡುತ್ತಿರುವಿರಿ???????

      ಎಂದಿನ ಹಾಗೆ ದೆಹಲಿಯ ಘಟನೆ ಬರೇ ಸುದ್ದಿಯಾಗಿ ಉಳಿಯಲಿಲ್ಲ..ಅವಳು ಧ್ವನಿಯೆತ್ತಿದಳು...ಅವಳ  ಧ್ವನಿಗೆ ಇನ್ನೊಬ್ಬಳು...ಹೀಗೆ ಹತ್ತು ಹಲವು ಧ್ವನಿಗಳು ಕೂಡಿಕೊಂಡಿವೆ....ಮತ್ತೆ ಮಾನವತೆಯ ಗಂಟೆ ಬಾರಿಸುತ್ತಿದೆಯೆ! ಆಶಾಕಿರಣಗಳು ಕಾಣುತ್ತಿವೆ!

     ಅಂದ ಹಾಗೆ ಆ ಹುಡುಗಿಯು ಧೈರ್ಯವಂತೆ! ಇಂತಹ ಘಟನೆಗಳಿಗೆ ಬಲಿಯಾದವರು ತಾವೇ ತಪ್ಪೆಸೆದಂತೆ ಮುಖ ಮುಚ್ಚಿ ಹೇಳಿಕೆಗಳನ್ನು ನೀಡುವಂತೆ ಈ ಹುಡುಗಿ ಮಾಡಲಿಲ್ಲ. ತನ್ನ ಮೇಲೆ ದೌರ್ಜನ್ಯವೆಸೆಗಿದವರಿಗೆ ಶಿಕ್ಷೆ ಕೊಡಿಸುವಂತೆ ಜನರನ್ನು ಕೇಳಿಕೊಂಡಳು. ಹೌದು ಸಮಾಜವು ಬದಲಾಗಬೇಕು..ಮಾನವತೆಯೇ ನಮ್ಮೆಲ್ಲರ ಗುರಿಯಾಗಬೇಕು.





ಈ ನಿಟ್ಟಿನಲ್ಲಿ ಫೇಸ್ ಬುಕ್, ಬ್ಲಾಗ್, ಅವಧಿಯಂತಹ ಜಾಲತಾಣಗಳು ಪ್ರಶಂಸನೀಯ ಕಾರ್ಯವನ್ನು ಹಮ್ಮಿಕೊಂಡಿದೆ. ಫೇಸ್ ಬುಕ್ ಗೆಳತಿ, ರಂಗ ಮತ್ತು ದೂರದರ್ಶನದ ಪ್ರತಿಭಾವಂತೆ ನಟಿ ಜಯಲಕ್ಷ್ಮಿ ಪಾಟೀಲರು ಮೊದಲಾಗಿ ತಮ್ಮ ಧ್ವನಿಯೆತ್ತಿದರು..ಅದಕ್ಕೆ ನಮ್ಮ ಅಂತಪುರದ ಸಖಿಯರೆಲ್ಲ...ಅಲ್ಲದೆ ಲೇಖಕಿಯರು, ಪತ್ರಕರ್ತರು...ಅವರ ಜೊತೆಗೆ ನಮ್ಮ ಪುರುಷ ಗೆಳೆಯರೂ ತಮ್ಮಸ್ವರ  ಕೂಡಿಸಿ ನಮ್ಮ ಹೋರಾಟಕ್ಕೆ ಬೆಂಬಲವಿತ್ತರು. ಹೀಗೆ ಮಾರ್ದನಿಗೊಂಡ  ಹಲವು ಸ್ವರಗಳಲ್ಲಿ ಕೆಲವನ್ನು ಇಲ್ಲಿ ಹಾಕಿದ್ದೇನೆ.

    ಈ ಹೋರಾಟವು ಕೆಲವೇ ದಿನಗಳಲ್ಲಿ ತನ್ನ ಸದ್ದು ಕಳೆದುಕೊಳ್ಳದಿರಲಿ ಮತ್ತು ಯಾವುದೇ ಜೀವಿ ( ಮಹಿಳೆ ಮಾತ್ರವಲ್ಲ ಪುರುಷರು ಸಹ) ಆ ಕ್ರೌರ್ಯವನ್ನು ತನ್ನ ಬಾಳಿನಲ್ಲಿ ಅನುಭವಿಸದಿರಲಿ ಎಂಬ ಆಶಯವು ನನ್ನದು.


                                          ___________________________________________________         


ಜಯಶ್ರಿ ಕಾಸರವಳ್ಳಿ-
"ಇಲ್ಲೊಂದು ನಾನು ಮದರಾಸಿನಲ್ಲಿದ್ದಾಗ ನಡೆದ ಒಂದು ಸಣ್ಣ ಪ್ರಸಂಗವನ್ನು ಪ್ರಸ್ತಾಪಿಸುವುದು ಒಳಿತು. ನಾವು ಮದರಾಸಿಗೆ ಹೋದ ಹೊಸತರಲ್ಲಿ ಪರಿಚಯವಾದ ಕನ್ನಡ ಕುಟುಂಬವಿದ್ದ ಒಂದು ಅಪಾರ್ಟ್ ಮೆಂಟ್ನಲ್ಲಿ, ಅವರ ಫ್ಲಾಟ್ ಪಕ್ಕದ ಮನೆಯಲ್ಲಿ ಹದಿನೈದು ವರುಷದ ಹುಡುಗಿ ಒಬ್ಬಳಿದ್ದಳು. ಹನ್ನೆರಡು ವರುಷವಿರುವಾಗ ಆ ಹುಡುಗಿ ರೇಪ್ಗೆ ಒಳಗಾಗಿ ಸುದ್ದಿಮಾದ್ಯಮಗಳಲ್ಲಿ ಸಾಕಷ್ಟು ಪ್ರಚಾರವಾಗಿತ್ತು.ಇಡೀ ಅಪಾರ್ಟ್ ಮೆಂಟ್ನಲ್ಲಿ ಆ ಹುಡುಗಿಯನ್ನು ‘ರೇಪ್ ಹುಡುಗಿ’ ಎಂದೇ ಕರೆಯುತ್ತಿದ್ದರು. ‘ಎಂತಹ ಅನ್ಯಾಯ! ಇದರಲ್ಲಿ ಆ ಹುಡುಗಿಯ ತಪ್ಪೇನಿದೆ? ನೀವಾದರೂ ನಿಮ್ಮ ಅಸೋಷಿಯೇಶನ್ನಲ್ಲಿ ಈ ವಿಷಯ ಎತ್ತಿ ಆ ಹುಡುಗಿಯನ್ನು ಎಲ್ಲರ ಹಾಗೆ ಕರೆಯುವ ಹಾಗೆ ಮಾಡಿ’. ಎಂಬ ಅಭಿಪ್ರಾಯವನ್ನ ಆ ಕನ್ನಡದ ಹೆಣ್ಣಿಗೆ ನೀಡಿದೆ. ‘ಅಯ್ಯೋ, ಆಕೇನ ಎಲ್ಲಾ ಗುರಿತಿಸೋದೇ ಹಾಗೆ.ಯಾವಾಗ ನೋಡಿದರೂ ಆ ಹುಡುಗಿ ನಗುತ್ತಾನೇ ಇರುತ್ತೆ.ಅದಕ್ಕಿಲ್ಲದ ಫೀಲಿಂಗ್ ನಿಮಗ್ಯಾಕೆ?’ ಎಂದರು ಆ ಮಹಾತಾಯಿ!"

******************************************************
ಜಯಲಕ್ಷ್ಮಿ ಪಾಟೀಲ್-
ಯಾಕೆ ಹೀಗಾಗುತ್ತದೆ? ಯಾಕೆ ಗಂಡಸರೇ ಹೆಚ್ಚಾತೀ ಹೆಚ್ಚಿನ ಪ್ರಮಾಣದಲ್ಲಿ ಇಂಥ ವಿಕೃತಿಗಿಳಿಯುತ್ತಾರೆ? ಅವರ ದೇಹದಲ್ಲಿ ಅಂಥ ಯಾವ ಹಾರ್ಮೋನ್ ಈ ಪರಿಯ ವಿಕೃತಿಗಳನ್ನು ಪ್ರಚೋದಿಸುತ್ತಿರುತ್ತದೆ?! ದಡಾರ ಚುಚ್ಚು ಮದ್ದು, ಪೋಲಿಯೊ, ಬಿಸಿಜಿ ಲಸಿಕೆ ಮುಂತಾದವುಗಳನ್ನು ಕಂಡು ಹಿಡಿದು ಮಗು ಹುಟ್ಟುತ್ತಲೇ ಅವೆಲ್ಲವನ್ನೂ ಮಗುವಿನ ದೇಹದೊಳಗಿಳಿಸಿ ಮುಂಬರುವ ಭಯಂಕರ ವ್ಯಾಧಿಗಳನ್ನು ಬರದಂತೆ ತಡೆಯಲು ಸಾಧ್ಯವಿರುವಾಗ, ಗಂಡಿನಲ್ಲಿ ಹುಟ್ಟುವ ಈ ವಿಕಾರವನ್ನು ತಡೆಗಟ್ಟಲು ಯಾಕೆ ವಿಜ್ಞಾನಿಗಳು ಪ್ರಯತ್ನಿಸಿಲ್ಲ? ನನಗ್ಯಾಕೋ ಇದು ಬರೀ ಮಾನಸಿಕ ಸಮಸ್ಯೆ, ಅವರು ಬೆಳೆದ ವಾತಾವರಣದ ಹಿನ್ನೆಲೆ, ಅನುಭವಿಸಿದ ಅವಮಾನಗಳ ಪ್ರತಿಕಾರ ಮುಂತಾಗಿ ಅನಿಸುವುದಿಲ್ಲ. ಬದಲಿಗೆ ಹಾರ್ಮೋನ್ ಗಳ ಏರುಪೇರಿನ ಜೊತೆಗೆ ಮನಸಿನ ವಿಕಾರವೂ ಸೇರಿ ಅವರುಗಳು ಈ ಪರಿಯ ಹೇಸಿಗಳಾಗುತ್ತಾರೆ ಅನ್ನಿಸುತ್ತದೆ. ಇಂಥ ವಿಕೃತರ ದೆಸೆಯಿಂದಾಗಿ ಸಭ್ಯ ಗಂಡಸರನ್ನೂ ಒಂದು ಅನುಮಾನದ ಕಿರುಗಣ್ಣಿನಿಂದ ಹೆಣ್ಣುಮಕ್ಕಳು ನೋಡುವಂತಾಗಿರುವುದು ವಿಪಯರ್ಾಸವಾದರೂ ತನ್ನ ಸುರಕ್ಷೆಗಾಗಿ ಅದು ಅನಿವಾರ್ಯ ಎಂಬಷ್ಟು ಹೆಣ್ಣು ಅದಕ್ಕೆ ಒಗ್ಗಿ ಹೋಗಿದ್ದಾಳೆ!!
******************************************************್

ಜಿ.ಎನ್ ಮೋಹನ್- ಅವಧಿ ಪ್ರಧಾನ ಸಂಪಾದಕರು
‘ಈ ರಾತ್ರಿ ಎಚ್ಚರಾಗಿರೋಣ..’ ಎನ್ನುವ ನಾಟಕ ನೆನಪಾಗುತ್ತಿದೆ. ಕೋಮುವಾದಕ್ಕೆ ತಡೆ ಹಾಕುವ ಬಗೆಗಿನ ನಾಟಕ ಅದು. ಪ್ರತೀ ಹೆಂಗಸೂ ನ್ನಿರ್ಧಾರ ಮಾಡುತ್ತಾಳೆ – ಈ ರಾತ್ರಿ ಎಚ್ಚರಾಗಿರೋಣ, ನನ್ನ ಗಂಡನನ್ನ, ನನ್ನ ಸಹೋದರನನ್ನ, ನನ್ನ ಬಂಧುವನ್ನ ಹೊರಗೆ ಹೋಗಲು ಬಿಡದಂತೆ ಈ ರಾತ್ರಿ ಎಚ್ಚರಾಗಿರೋಣ ಎಂದು. ಮನೆಗೆ ಬೆಂಕಿ ಹಚ್ಚುವ, ಪೆಟ್ರೋಲ್ ಸೀಮೆ ಎಣ್ಣೆ ಸುರಿಯುವ, ಇರಿದು ಕೊಲ್ಲುವ, ಲೂಟಿ ಮಾಡುವ ನನ್ನ ಗಂಡ, ನನ್ನ ಸಹೋದರ, ನನ್ನ ಬಂಧು ಈ ರಾತ್ರಿ ಆಚೆ ಹೋಗದಂತೆ ಎಚ್ಚರಾಗಿರೋಣ. ಹಾಗಾದಲ್ಲಿ ಕೋಮು ಗಲಭೆಗಳು ನಡೆಯುವುದಾದರೂ ಹೇಗೆ ಎನ್ನುವುದು ಈ ಎಲ್ಲರ ಆಲೋಚನೆ.
ಹೌದಲ್ಲ, ಅತ್ಯಾಚಾರದ ಮಾತು ಬಂದಾಗಲೂ ಇದು ಸರಿ. ಈ ರಾತ್ರಿ ಮಾತ್ರವಲ್ಲ, ಈ ಹಗಲು, ಈ ರಾತ್ರಿ- ಈ ಹಗಲು ಮಾತ್ರವಲ್ಲ, ಪ್ರತಿ ಹಗಲು ರಾತ್ರಿ ನನ್ನ ಗಂಡ, ನನ್ನ ಸಹೋಧರ, ನನ್ನ ಬಂಧು ಪುರುಷ ಮೃಗವಾಗಿ ಬದಲಾಗದಿರುವಂತೆ ಎಚ್ಚರಾಗಿರೋಣ.
ಹೀಗೆಲ್ಲ ಆಗುವಾಗಲೇ ದೆಹಲಿಯಲ್ಲಿ ಆ ಪ್ರತಿಭಟನಾಕಾರರು ಹಿಡಿದಿದ್ದ ಆ ಫಲಕ ನೆನಪಿಗೆ ಬರುತ್ತಿದೆ. ‘Dont teach me what to wear, Teach ur son not to rape’  ಈ ರಾತ್ರಿ, ಈ ಹಗಲು, ಪ್ರತಿ ರಾತ್ರಿ, ಪ್ರತಿ ಹಗಲೂ Dont Rape ಎನ್ನುವುದನ್ನು ಕಲಿಸುತ್ತಲೇ ಇರೋಣ..
ಮುಂದೊಂದು ದಿನ..
ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.

*****************************************************
ಕೆ.ವಿ ತಿರುಮಲೇಶ್-
ನಿಮ್ಮ ಈ ವಿಶೇಷ ಸಂಚಿಕೆ ಅತ್ಯಾಚಾರ ವಿರುದ್ಧದ ಜನಾಂದೋಲನಕ್ಕೆ ಒಂದು ಕೊಡುಗೆ. ಈ ಅತ್ಯಾಚಾರವನ್ನು ಮೂಲದಿಂದಲೇ ಕಿತ್ತೊಗೆಯುವುದಕ್ಕೆ ಏನು ಮಾಡಬಹುದು? ನಮಗೆ ಬೇಕಾದ್ದು ಅರಿವು ಮತ್ತು ಕಾರ್ಯಕ್ರಮ.
ಅತ್ಯಾಚಾರದಲ್ಲಿ ಸಾಮೂಹಿಕ ಘೋರ, ಏಕಾಕಿ ಸಹ್ಯ ಎನ್ನುವ ಮಾತು ಸರಿಯಲ್ಲ. ಹೆಣ್ಣಿನ ಮೇಲೆ ನಡೆಯುವ ಯಾವುದೇ ಲೈಂಗಿಕ ಅತ್ಯಾಚಾರವೂ ಒಂದೇ: ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಮರಣದಂಡನೆಗೆ ನಮ್ಮ ಬುದ್ಧಿಜೀವಿಗಳು ಬಿಡುವುದಿಲ್ಲ!
ಒಂದೆರಡು ಸೂಚನೆಗಳು:
ಪೋಲೀಸರಿಗೆ ನಮ್ಮ ಜನತೆ ಸಹಕರಿಸುವುದಿಲ್ಲ; ಪೋಲೀಸರನ್ನು ನಮ್ಮ ವಿರೋಧಿಗಳಂತೆ ತಿಳಿಯುವ ಮನೋವೃತ್ತಿ ಹೋಗಬೇಕು. ಪೋಲೀಸರಿಗೂ ಜನರ ಜತೆ ಸರಿಯಾಗಿ ವರ್ತಿಸುವಂತೆ ತರಬೇತಿ ಸಿಗಬೇಕು.
ಪ್ರತಿಯೊಬ್ಬ ನಾಗರಿಕನೂ ಪೋಲೀಸ್ ಸ್ಟೇಷನಿನಲ್ಲಿ ರೆಜಿಸ್ಟರ್ಡ್ ಮಾಡಿಕೊಳ್ಳಬೇಕು–Know Your Citizen ಎಂಬ ರೀತಿಯಲ್ಲಿ. ಹೀಗೆ ರೆಜಿಸ್ಟರ್ಡ್ ಅದಾಗ ಒಂದು ನಂಬರ್ ಸಿಗಬೇಕು; ವ್ಯಕ್ತಿ ಕೆಲಸಕ್ಕೆ ಸೇರಿದಾಗ, ಕೆಲಸ ಬದಲಾಯಿಸಿದಾಗ, ಪರವೂರಿಗೆ ಹೋಗಿ ನೆಲಸಿದಾಗ, ಬಾಡಿಗೆ ಮನೆ ಹಿಡಿದಾಗ ಈ ನಂಬರ (ಕಾರ್ಡು) ತೋರಿಸಲೇಬೇಕು. ಹಾಗೂ ಇದು ಅತ್ಯಾಚಾರದ ವಿರುದ್ಧದ ಕಾರ್ಯಕ್ರಮ ಎನ್ನುವುದು ಎಲ್ಲ್ರರಿಗೂ ಗೊತ್ತಿರಬೇಕು. ಇದರಿಂದ ನೇರ ಪರಿಣಾಮ ಇಲ್ಲದೆ ಇದ್ದರೂ ಜನರಲ್ಲಿ ಒಂದು ಅರಿವು ಮೂಡಲು ಸಹಾಯಕವಾದೀತು.
ಶಾಲೆಯಿಂದ, ಕಾಲೇಜಿನಿಂದ, ಯಾವುದೇ ತರಬೇತಿಯಿಂದ ಹೊರಬರುವ ವಿದ್ಯಾರ್ಥಿಗಳು ಅತ್ಯಾಚಾರ ವಿರುದ್ಧದ ಹಾಗೂ ಮಹಿಳಾ ರಕ್ಷಣೆಯ ಪರವಾದ ಹೇಳಿಕೆಯೊಂದಕ್ಕೆ ಸಹಿ ಮಾಡಿದರೇನೇ ಆತನಿಗೆ ಸರ್ಟಿಫಿಕೇಟು ಸಿಗುವಂತಾಗಬೇಕು.
ಇಂಥ ಇತರ ಕಾರ್ಯಕ್ರಮಗಳನ್ನು ಎಲ್ಲರೂ ಯೋಚಿಸಬೇಕಾಗಿದೆ.
ಕೆ.ವಿ.ತಿರುಮಲೇಶ್
******************************************************್

ಪುರುಷೋತ್ತಮ ಬಿಳಿಮಳೆ-
ನನಗೆ ಜನುಮ ನೀಡಿದ ತಾಯಿ, ಕಿಡ್ನಿ ಕೊಟ್ಟು ಪುನರ್ಜನ್ಮ ನೀಡಿದ ಪತ್ನಿ, ವಿನಾಕಾರಣ ಸುಮ್ಮನೆ ಪ್ರೀತಿಸುವ ತಂಗಿಯರು, ಬದುಕಿನಲ್ಲಿ ಉತ್ಸಾಹ ಬತ್ತದಂತೆ ನೋಡಿಕೊಳ್ಳುವ ಗೆಳತಿಯರು–ನೀವೆಲ್ಲ ಬೆಳಕಿನ ಬೀಜಗಳು..

*****************************************************

ಉಷಾ ಕಟ್ಟೆಮನೆ-
ನಾನು ಮತ್ತೆ ಮತ್ತೆ ನಂಬುವುದು ’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂಬುದನ್ನು. ನಾವು ನಮ್ಮ ಮಕ್ಕಳನ್ನು ಅವರ ಹದಿಹರೆಯದ ತನಕ ಯಾವ ಪರಿಸರದಲ್ಲಿ, ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪೋಷಕರು ಸ್ವತಃ ಮಾದರಿಯಾಗಿರದಿದ್ದಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಮಕ್ಕಳು ಬಹುಬೇಗನೆ ಎಲ್ಲವನ್ನೂ ಗ್ರಹಿಸಿಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಜೊತೆಗೆ ಆತ್ಮರಕ್ಷಣೆಯ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಹೇಳಿಕೊಡಬೇಕು. ಹಾಗೆಯೇ ಗಂಡು ಮಕ್ಕಳಿಗೂ ಸ್ತ್ರೀಯರನ್ನು ಗೌರವದಿಂದ ಕಾಣುವುದನ್ನು ಅವರಿಗೆ ಅರಿವಿಲ್ಲದಂತೆ ಮನಗಾಣಿಸುತ್ತಿರಬೇಕು. ಯಾಕೆಂದರೆ ಪುರುಷ ಪ್ರಧಾನ ಯೋಚನೆಯನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.

     ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರವಾದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಂತ ಧಾರುಣವಾಗಿ ಸಾಮೂಹಿಕ ಅತ್ಯಚಾರ ನಡೆಯಿತು. ಆಕೆಯ ದೇಹದ ಮೇಲೆ ಮೃಗೀಯವಾಗಿ ವರ್ತಿಸಿದ ಪುರುಷಪುಂಗವರ ಆಟಾಟೋಪವನ್ನು ಮಾಧ್ಯಮಗಳಲ್ಲಿ ಓದಿದಾಗ, ಕೇಳಿದಾಗ ನನಗೆ ತಕ್ಷಣಕ್ಕೆ ಅನ್ನಿಸಿದ್ದು ಅವರಿಗೆ ಅತ್ಯುಗ್ರವಾದ ಶಿಕ್ಷೆ ನೀಡಬೇಕೆಂದು. ಹಾಗಾಗಿ ನನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ನಾನು ಹೀಗೆ ಬರೆದೆ;
”ದೆಹಲಿಯಲ್ಲಿ ವಿದ್ಯಾರ್ಥಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಧಾರುಣವಾಗಿ ಗ್ಯಾಂಗ್ ರೇಪ್ ಮಾಡಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…
ಆದರೆ.. ಸಾಮೂಹಿಕ ಅತ್ಯಾಚಾರಿಗಳಿಗೆ ಕೊಡುವ ಅತ್ಯುಗ್ರ ಶಿಕ್ಷೆಯೆಂದರೆ ಅವರ ಪುರುಷತ್ವ ಹರಣವಾಗಬೇಕು. ಅವರ ಆಯುಧವನ್ನು ನಿಷ್ಕ್ರೀಯಗೊಳಿಸಬೇಕು; ಅವರು ಬದುಕಬೇಕು; ಬದುಕಿಯೂ ಸತ್ತಂತಿರಬೇಕು; ಪ್ರತಿ ಕ್ಷಣವೂ ಅವರ ಸಾವು ಜಗಜ್ಜಾಹೀರಾಗುತ್ತಲಿರಬೇಕು…”
ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಹಾಗೂ ಅಂತರ್ಜಾಲದಲ್ಲಿ ಈ ಘಟನೆಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಅನ್ನಿಸಿಕೆಗಳನ್ನು ಗಮನಿಸಿದಾಗ ನನಗನ್ನಿಸಿದ್ದು ಪುರುಷರ ಮತ್ತು ಮಹಿಳೆಯರ ಅಭಿವ್ಯಕ್ತಿಯಲ್ಲಿನ ಭಾಷಾ ಬಳಕೆಯ ಬಗೆಗಿನ ವ್ಯತ್ಯಾಸ.
ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಚಾರ ನಡೆದಾಗ ಪುರುಷರಂತೆ ಯೋಚಿಸುವ ಮಹಿಳೆಯರನ್ನೂ ಒಳಗೊಂಡಂತೆ, ಇಡೀ ಪುರುಷ ಜಗತ್ತು ಅದನ್ನು ಬಣ್ಣಿಸುವುದು ’ಶೀಲ ಕಳೆದುಕೊಳ್ಳುವುದು’ ಆದರೆ ಸ್ತ್ರೀ ಮನಸ್ಸು ಗ್ರಹಿಸುವುದು ’ಬದುಕು ಕಳೆದುಕೊಳ್ಳುವುದು’ ಗಂಡಿನ ದೃಷ್ಟಿಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯಲಾಗದು. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳಬಹುದು.
******************************************************

ಸುಧಾ ಚಿದಾನಂದ ಗೌಡ-
ಇಷ್ಟಕ್ಕೂ ಹುಷಾರಾಗಿರುವುದು ಎಂದರೇನು..?
ನಮ್ಮನ್ನು ನಾವು ನಾಲ್ಕು ಗೋಡೆಯ ಮಧ್ಯೆ ಬಂಧಿಸಿಟ್ಟುಕೊಳ್ಳುವುದಾ?
ಹೊರಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಳ್ಳುವುದಾ?
ಎಲ್ಲ ಅವಕಾಶಗಳನ್ನು ಬಿಟ್ಟುಕೊಟ್ಟು, ತಮ್ಮದಲ್ಲದ ತಪ್ಪಿಗೆ ತಾವೇ ಶಿಕ್ಷೆ ವಿಧಿಸಿಕೊಳ್ಳುವುದಾ?
ಗೋಡೆಗಳ ಮಧ್ಯೆಯಾದರೂ ಮಹಿಳೆ ಎಲ್ಲಿ ಸುರಕ್ಷಿತವಾಗಿದ್ದಾಳೆ? ಮನೆಯೊಳಗಿನ ದೌರ್ಜನ್ಯಗಳಿಗೆ ಕಡಿವಾಣವಿದೆಯೇ? ಇಲ್ಲವಲ್ಲ..! ತಂದೆ, ಗಂಡ, ಸೋದರ, ಕೊನೆಗೆ ತಾತನಾಗಿ ಕೂಡ ಕಾಡಿದ ಉದಾಹರಣೆಗಳೇ ದು:ಸ್ವಪ್ನವಾಗಿ ಕಾಡುತ್ತವೆ..ಇವೆಲ್ಲವುಗಳ ಮಧ್ಯೆಯೂ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವವರಿಗೆ ಸಾಮಾಜಿಕ ಕಳಂಕಗಳ ಭಯ, ಯಾರೇನೆನ್ನುತ್ತಾರೊ ಎಂಬ ಭಯ, ಸಹಾನುಭೂತಿಯ ಅಗತ್ಯವಿರುವಾಗಲು ನಿನ್ನದೆ ತಪ್ಪು ಎಂಬಂಥಾ ವಾತಾವರಣ..
ಈ ಪೂರ್ವಾಗ್ರಹಗಳೆಲ್ಲ ಬದಲಾಗುವ ಹೊತ್ತಿಗೆ ಎಷ್ಟು ಯುವತಿಯರು ಬಲಿಯಾಗಬೇಕೋ. . .
ಸ್ತ್ರೀಸಹಜ ಸ್ವಭಾವ ಎಂಬುದೂ ಈಗ ವಿಶ್ಲೇಷéಣೆಗೊಳಪಡಬೇಕಾದ ಸಂಗತಿಯೇ ಎನಿಸುತ್ತದೆ.
ಬಿಹಾರದ ಈ ಘಟನೆಯ ವರದಿ ನೆನಪಾಗುತ್ತಿದೆ..
ಹದಿನೈದು ವರ್ಷದ ಬಾಲಿಕೆಯೊಬ್ಬಳನ್ನು ಅವಳ ತಂದೆ ಒಂದು ವರ್ಷದಿಂದಲೂ ಅತ್ಯಾಚಾರವೆಸಗುತ್ತಿದ್ದ. ಆ ಬಾಲಕಿ ಕೊನೆಗೂ ಬಾಯಿಬಿಟ್ಟಿದ್ದಕ್ಕೆ ಕಾರಣವೇನೆಂದರೆ ಆ ತಂದೆ ಇನ್ನೊಬ್ಬ ಮಗಳನ್ನೂ ಅದೇರೀತಿ ಬಲಾತ್ಕರಿಸಲು ಯತ್ನಿಸಿದಾಗ..! ತಂಗಿಗೂ ತನ್ನ ಸ್ಥಿತಿ ಬರಬಾರದೆಂಬ ಉದ್ದೇಶಕ್ಕೆ ಅವಳು ಪೊಲೀಸ್ ಸ್ಟéೇಷನ್ನಲ್ಲಿ ದೂರು ದಾಖಲಿಸಿದಳೇ ಹೊರತು ತಾನಾಗಿ ಅಲ್ಲ. ಆ ಇಬ್ಬರೂ ಮಕ್ಕಳ ತಾಯಿ ಆರ್ಥಿಕ ಪರಾವಲಂಬಿಯಾಗಿ ಪತಿ ಮಾಡುವ ಅನಾಚಾರಕ್ಕೆ ಸಾಕ್ಷಿಯಾಗಿ, ಬದುಕುತ್ತಿದ್ದಳು. ಇದು ಸ್ವಯಂಕೃತ ಅಪರಾಧವಲ್ಲದೇ ಇನ್ನೇನು? ಅದೆಂಥ ಪರಿಸ್ಥಿತಿಯಲ್ಲಾದರೂ ಎದುರಿಸಿ ನಡೆವುದು ಹೇಳಿದಷ್ಟು ಸುಲಭವಲ್ಲ, ನಿಜ. ಆದರೆ ಅತ್ಯಾಚಾರ ಸಹಿಸುವುದಕ್ಕಿಂತ ಎದುರಿಸುವುದೇ ಸಹ್ಯವಲ್ಲವೇ? ಇಲ್ಲಿ ಸಂಕೋಚ, ಭಯ, ಹಿಂಜರಿಕೆಗಳು ಇರಬಾರದ ಸ್ವಭಾವವೆಂದೇ ತೋರುತ್ತವೆ.

     ಉದ್ಯೋಗಕ್ಕಾಗಿ ತುಡಿಯುವ, ಸ್ವಾವಲಂಬನೆಗಾಗಿ ಮಿಡಿಯುವ ಮನ ಮಹಿಳೆಯನ್ನು ಇಂದು ಹೊರಹೋಗುವ ದಾರಿಯಲ್ಲಿ ತಂದು ನಿಲ್ಲಿಸಿದೆ. ಸದಾಕಾಲವೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿಲ್ಲ. ಹಾಗೇ ಅಗತ್ಯವೆನಿಸಿದಾಗ ಜೊತೆಗಿರಲು ಯಾರಾದರೊಬ್ಬರು ಬೇಕೆಂದು ನಿರೀಕ್ಷಿಸುವುದು ಹಾಸ್ಯಾಸ್ಪದವೇ. ಹಾಗಾಗಿ ಒಂಟಿಯಾಗಿ ಪ್ರಯಾಣ ಮುಂದುವರಿಸುವ ಅಗತ್ಯವಿದ್ದೇ ಇದೆ. ಆ ಛಾತಿ ಅವರಿಗೆ ಇದ್ದೇ ಇದೆ. ಆದರೆ ಮಧ್ಯದಲ್ಲಿನ ಗ್ಯಾಂಗ್ ರೇಪ್ನಂಥಾ ಪ್ರಕರಣಗಳು ಥಂಡಾ ಹೊಡೆಸಿಬಿಡುತ್ತವೆ.
ಆಗೆಲ್ಲ ಹಾಗೆ ಕುಸಿದು ಬೀಳಲಿದ್ದವರನ್ನು ಸಂಭಾಳಿಸುವ ಕೆಲಸ ಸಮಾಜ ತಾನೇ ಮಾಡಬೇಕು ಕಣ್ಣು, ಕರುಳುಗಳಿರುವ ಪ್ರಭುತ್ವವು ಅತ್ಯಾಚಾರದಂತಹ ಭೀಕರ ಸನ್ನಿವೇಶ ಬಾರದಿರುವಂತೆಯೇ ಸರ್ಕಾರ ನೋಡಿಕೊಳ್ಳಬಹುದು, ಬಿಗಿಕಾನೂನುಗಳಿಂದ. ನೈತಿಕಶಿಕ್ಷಣದಿಂದ. ಇದು ಸಾಧ್ಯವಾದಾಗ, ಅವರ ನೋವಿಗೆ ನಾವು ನರಳುತ್ತೇವೆಂಬ ಭಾವನೆಯೇ ಆಪ್ತವಾದೀತು. ಹಾಗಾದಾಗ ಸಾವಿನಿಂದ ಪಾರಾಗಿ ಬದುಕುಳಿಯಬಹುದು. ಕ್ರೌರ್ಯಕ್ಕೆ ಧಿಕ್ಕಾರ ಹೇಳಬೇಕಾಗಿರುವುದು ಖಚಿತ.
 ********************************************************************************************************

ಹೆಸರು ಹೇಳಲಿಚ್ಛಿಸದ ಲೇಖಕಿ-

ಪ್ರತಿಭಟಿಸಿ ಹೊಡೆದ ಕಲ್ಲುಗಳೆಲ್ಲ ತಾಗಿದ್ದೆಲ್ಲ ನನಗೇ! ಹೆಣ್ಣಿಗೇ ಈ ಥರದ ಮರೆಯದ ಗಾಯಗಳು…! ಯಾಕೆ? ನಮ್ಮದೇನು ತಪ್ಪು..? ಇಂಥ ಕಹಿ ಅನುಭವಗಳನ್ನು ದಾಟಿಯೂ ನಾವು ಮನುಷ್ಯರನ್ನು ಪ್ರೀತಿಸುತ್ತೇವೆ! ನಮಗೆ ಬದುಕು ಬದುಕುವ, ಅದನ್ನು ಪ್ರೀತಿಸುವ, ನಿರಮ್ಮಳವಾಗಿ ಅದನ್ನಪ್ಪುವ ಸ್ವಾತಂತ್ರ್ಯವಿಲ್ಲವೇ? ಇಂತಹ ಸಮಾಜದಲ್ಲಿ ನಮಗೆ ನಿಜವಾಗಿಯೂ ಗೌರವವಿದೆಯೇ? ರಕ್ಷಣೆಯಿದೆಯೇ?ಉತ್ತರಿಸುವವರು ಯಾರು??

******************************************************

ಆತ್ರಾಡಿ ಸುರೇಶ್ ಹೆಗ್ಡೆ-

ಉಗ್ರವಾದಿಗಳಲ್ಲಿ, ಭಯೋತ್ಪಾದಕರಲ್ಲಿ ಯಾವ ರೀತಿಯಾಗಿ ಜಾತಿ, ಮತ, ಪಂಗಡಗಳ ಭೇದಭಾವವನ್ನು ತೋರಲಾಗುವುದಿಲ್ಲವೋ, ಅದೇತರಹ ಅತ್ಯಾಚಾರಿಗಳನ್ನು ಅವರದೇ ಒಂದು ವರ್ಗವನ್ನಾಗಿ ಕಾಣಬೇಕಾದ ಅಗತ್ಯ ಇದೆ. ಅತ್ಯಾಚಾರಿಗಳ ಮೇಲಿನ ಕೋಪವನ್ನು ಒಟ್ಟಾರೆ ಪುರುಷವರ್ಗದ ಮೇಲೆ ತೋರಿಸಿಕೊಳ್ಳುವುದು ಅಸಹನೀಯ. ಇಂಥ ದುರ್ಘಟನೆಗಳಿಗೆ, ದುರಂತಗಳಿಗೆ ನಮ್ಮ ಈ ಸಮಾಜವೇ ಕಾರಣವಾಗಿದೆ ಅನ್ನುವ ಸತ್ಯವನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದೇ ಹೋದರೆ, ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಇಲ್ಲಿ ಲಿಂಗಭೇದ ತೋರುವುದು ಅಸ್ವೀಕಾರಾರ್ಹ. ಅತ್ಯಾಚಾರಿಗಳು ಪುರುಷರೂ ಅಲ್ಲ, ಮಹಿಳೆಯರೂ ಅಲ್ಲ. ಅವರು ರಾಕ್ಷಸರು, ದಾನವರು. ಅವರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವುದು ಮಹಿಳೆಯರಷ್ಟೇ ಅಲ್ಲ. ಬಲಿಯಾಗುತ್ತಿರುವುದು ಒಟ್ಟಾರೆ ಮಾನವೀಯತೆ. ಹಿಂದಿನ ಪುರಾಣ ಕತೆಗಳಲ್ಲಿ ವಿಚಿತ್ರವಾಗಿ ಚಿತ್ರಿಸಿ ನಮ್ಮ ಕಣ್ಮುಂದೆ ಕಟ್ಟಿಕೊಡುತ್ತಿದ್ದ ಆ ಕೆಟ್ಟ, ಕ್ರೂರ, ದುರುಳ ದಾನವರ ವಂಶಸ್ಥರೇ ಇಂದಿನ ಈ ಅತ್ಯಾಚಾರಿಗಳು. ಅವರ ನಡವಳಿಕೆಯೇ ಅವರನ್ನು ರಾಕ್ಷಸರನ್ನಾಗಿ ವರ್ಗೀಕರಿಸುವಲ್ಲಿ ಮಾನದಂಡವಾಗುತ್ತದೆ. ಅದಿಲ್ಲವ್ವಾಗಿದ್ದರೆ, ರಾವಣ ಹಾಗೂ ವಿಭೀಷಣ ಸಹೋದರರೇ ತಾನೆ? ಆದರೆ ವಿಭೀಷಣನನ್ನು ಯಾರೂ ರಾಕ್ಷಸ ಎನ್ನುವುದೇ ಇಲ್ಲ.
   
      ಕಳೆದ ನಾಲ್ಕೈದು ದಶಕಗಳಿಂದೀಚೆಗೆ ನಮ್ಮ ನಾಡಿನ ಚಿತ್ರರಂಗದವರು ಹಾಗೂ ಮಾಧ್ಯಮದವರು ಮಹಿಳೆಯರನ್ನು ಬಳಸಿಕೊಂಡ ಪರಿಯೇ ಒಂದು ರೀತಿಯಲ್ಲಿ ಸತತ ಅತ್ಯಾಚಾರ ನಡೆಸುತಿರುವಂತಿತ್ತು ಹಾಗೂ ಇನ್ನೂ ಇದೆ. ನೃತ್ಯಗಳು, ಸಿನಿಮಾಗಳಲ್ಲಿ ಜಾಸ್ತಿಯಾಗುತ್ತಾ ಬಂದಂತೆ, ಕಲಾವಿದೆಯರು ತೊಡುವ ಬಟ್ಟೆಗಳು ಕಡಿಮೆಯಾಗುತ್ತಾ ಬಂದವು. ಅವುಗಳನ್ನು ಚಿತ್ರಮಂದಿರದ ಪರದೆಯ ಮೇಲಷ್ಟೇ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಎರಡು – ಎರಡೂವರೆ ದಶಕಗಳಿಂದೀಚೆಗೆ ಯಾವುದೇ ನಿರ್ಬಂಧವಿಲ್ಲವೇ, ಆ ನಗ್ನ ಚಿತ್ರಗಳು ಸುದ್ದಿಮಾಧ್ಯಮಗಳಲ್ಲೂ ಪ್ರಕಟಗೊಳ್ಳತೊಡಗಿದವು. ಮನೆಮನೆಗೂ “ಟಿವಿ”ಗಳು ಬಂದವು. ಅವುಗಳ ಜೊತೆಗೆ, ಗಂಡು ಹೆಣ್ಣುಗಳೆನ್ನುವ ಭೇದ ಇಲ್ಲದೆಯೇ ನಿರ್ಲಜ್ಜೆಯಿಂದ ಮೈಮಾಟಗಳನ್ನು ಪ್ರದರ್ಶಿಸುವ ಎಲ್ಲರ ಚಿತ್ರಗಳೂ, ದೃಶ್ಯಗಳೂ ಮನೆಮನೆಗಳಿಗೆ ಬಂದವು. ನಾಚಿಕೆ, ಮಾನ ಮರ್ಯಾದೆ ಎನ್ನುವುದು ಎಲ್ಲೆಂದರಲ್ಲಿ ಮೂರಾಬಟ್ಟೆಯಾಗತೊಡಗಿದವು. ಇವುಗಳಿಗೆಲ್ಲಾ ಅನ್ಯರಷ್ಟೇ ನಾವೂ ಜವಾಬ್ದಾರರು. ಜಾಸ್ತಿ ಅಂಗ ಪ್ರದರ್ಶನಮಾಡಿದವರು ವಿಶ್ವ, ಭುವನ ಸುಂದರಿಗಳೆಂಬ ಪ್ರಶಸ್ತಿಗಳಿಗೆ ಭಾಜನರಾದರು. ಮುಂದೆ ಅವರೇ ಚಲನಚಿತ್ರಗಳಲ್ಲಿ ಬೇಕಾಬಿಟ್ಟಿ ನೃತ್ಯಗಳಿಗೆ, ಕಾಮೋತ್ತೇಜಕ ದೃಶ್ಯಗಳಿಗೆ ತಮ್ಮ ಅಂಗಾಂಗಗಳ ಕೊಡುಗೆ ನೀಡತೊಡಗಿದರು. ಉಳಿದ ಕಲಾವಿದರಿಗೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಎದುರಾಯಿತು. ಹಾಗಾಗಿ ಅನ್ಯರೂ ನಿರ್ಲಜ್ಜರಾದರು.

ಹೀಗಿರುವಾಗ, ಮದ್ಯಪಾನದ ಹಾಗೂ ತಂಬಾಕಿನ ಉತ್ಪನ್ನಗಳ ಮಾರುಕಟ್ಟೆ ಈ ದೇಶದ ಆರ್ಥಿಕ ಸ್ಥಿಯನ್ನು ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ದುಶ್ಚಟಗಳಿಗೆ ಬಲಿಯಾದವರು ಹಾಗೂ ವ್ಯಸನಿಗಳಾದವರು, ಇಂತಹ ಕಾಮೋತ್ತೇಜಕ ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ತಮ್ಮ ತೀಟೆ ತೀರಿಸಿಕೊಳ್ಳಲು ಬೇಟೆಯನ್ನು ಅರಸುವಾಗ, ಅನಾಯಾಸವಾಗಿ ದಕ್ಕುವ, ನಿಸ್ಸಹಾಯಕ ಹೆಣ್ಣುಮಕ್ಕಳು ಇವರಿಗೆ ಬಲಿಯಾಗತೊಡಗಿದರು. ಒಂದು ಘಟನೆ ಇನ್ನೊಂದು ಘಟನೆಗೆ, ಒಂದು ಅಪರಾಧ ಇನ್ನೊಂದು ಅಪರಾಧಕ್ಕೆ ಸ್ಪೂರ್ತಿ ನೀಡುತ್ತಾ ಬಂದಿತು. ಏಕೆಂದರೆ, ಅಪರಾಧಿಗಳು ಕಠಿಣ ಶಿಕ್ಷೆಗೆ ಒಳಗಾಗುವುದಿಲ್ಲ. ಒಂದು ವೇಳೆ ಅಂಥ ಶಿಕ್ಷೆಗೆ ಒಳಗಾದರೂ, ಆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಾಮುಖ್ಯ ಪಡೆಯುವುದೇ ಇಲ್ಲ.

ಈ ಸಮಾಜ, ಲಿಂಗ ಭೇದ ಮರೆತು ತನ್ನ ಒಳಗಣ್ಣನ್ನು ತೆರೆದುಕೊಳ್ಳಬೇಕಿದೆ. ತಡವಾಗಿಯಾದರೂ, ಇಂತಹ ಅಪರಾಧಗಳ ನಿಯಂತ್ರಣೆಗಾಗಿ ತಾನೇ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರಲ್ಲಿ ಈ ಸಮಾಜದ ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿ ಮುಖ್ಯವಾಗಿರುವಂತೆಯೇ, ಮುದ್ರಣ ಹಾಗೂ ದೃಶ್ಯಮಾಧ್ಯಮಗಳ ಜವಾಬ್ದಾರಿಯೂ ಬಹು ಮುಖ್ಯವಾಗಿದೆ.




24 December, 2012

ಛಲವಿದ್ದಲ್ಲಿ ಬಲಕ್ಕೆ ಬರವಿಲ್ಲ!

    
       "ಮೇಡಂ, ಭಗತ್ ಚೇತನ್ ಹೇಳಿದ ಹಾಗೆ ಜೀವನದ ಎಲ್ಲಾ ಹಾಳೆಗಳಲ್ಲಿ ಎ ಪ್ಲಸ್ ಬೇಕೆಂದು ನಿರೀಕ್ಷೆ ಮಾಡಬೇಡಿ. ನೀವು ಪರೀಕ್ಷೆಗೆ ಕುಳಿತುಕೊಳ್ಳುತ್ತಿಲ್ಲ. ನಿಮಗೆ..ನಿಮಗೇನೂ ಯಾರಿಗೂ ನೂರಕ್ಕೆ ನೂರು ಗಳಿಸಲು ಸಾಧ್ಯವೂ ಇಲ್ಲ. ಈ ಸತ್ಯವನ್ನು ಸಂತೋಷದಿಂದ ಒಪ್ಪಿಕೊಳ್ಳಿ. ರಾತ್ರಿ ಊಟಕ್ಕೆ ನಾಲ್ಕು ಬಗೆ ಮಾಡಲಾಗದಿದ್ದರೆ ಪರವಾಗಿಲ್ಲ..ಒಂದರಲ್ಲಿ ಖಂಡಿತಾ ಹೊಟ್ಟೆ ತುಂಬಿಸಿಕೊಳ್ಳಬಹುದಲ್ವಾ? ರಾತ್ರಿವರೆಗೆ ಕೆಲಸ ಮಾಡಲಾಗದೆ ಪ್ರಮೋಶನ್ ಸಿಕ್ಕಿಲ್ಲವಾ.. ಅದೂ ಪರವಾಗಿಲ್ಲ...ಜೀವನದ ಎಲ್ಲಾ ಹಂತಗಳಲ್ಲೂ ಹುದ್ದೆಗಳು ಯಾರಿಗೂ ನೆನಪಾಗದು.....ಸಾಧ್ಯವಾದಷ್ಟುಮಟ್ಟಿಗೆ ಉತ್ತ ಮವಾದುದನ್ನು ಕೊಡಲು ಪ್ರಯತ್ನಿಸಿ...ಆದರೆ ರಿಪೋರ್ಟ್ ಕಾರ್ಡ್ ನೋಡುತ್ತಾ ಕೂಡಬೇಡಿ. ಕ್ಲಾಸಿನಲ್ಲಿ ಮೊದಲ ರ್ಯಾಂಕು ಖಂಡಿತಾ ನಿರೀಕ್ಷಿಸಬೇಡಿ....." ಹೇಳುತ್ತಾ ಹೋದಂತೆ ದೇವಕಿಗೆ ತಾನು ತನ್ನನ್ನೇ ಉದ್ದೇಶಿಸುತ್ತಾ ಹೋದಂತೆ ಅನಿಸತೊಡಗಿತು."-----------------

    -ನವೆಂಬರ್ ತಿಂಗಳ ತರಂಗದಲ್ಲಿ "ಪೂಂಗಡಿ"- ಭಾಗ್ಯಶ್ರಿ ಶರತ್ ಬರೆದಿರುವ ಕತೆಯಲ್ಲಿ ಬರುವ ದೇವಕಿ ಉಡುಪಳ ಮಾತಿದು. ಅದೇಕೋ ಓದುತ್ತಿದ್ದಂತೆ ದೇವಕಿ ನನ್ನಲ್ಲಿ ಆವ್ಹಾನಿತಳಾದ ಹಾಗೆ ಅನಿಸತೊಡಗಿತು...ನನ್ನ ಮಾತನ್ನೇ ಹೇಳುತ್ತಿದ್ದಾಳೆ  ಆಕೆ....ಹೌದು, ಒಂದು ಕಾಲದಲ್ಲಿ, ಅದೇ ೧೫ ವರ್ಷದ ಕೆಳಗೆ ಏನೂ ಅಲ್ಲದವಳಾಗಿದ್ದೆ...ಬರೇ ಧೂಳು ಹೊಡೆಯುವುದು, ಮನೆಯನ್ನು ಚೊಕ್ಕವಾಗಿಡುವುದು, ಬಂದವರಿಗೆಲ್ಲ ನಗು ಮುಖವನ್ನು ತೋರುತ್ತಾ ಉಪಚಾರ ಮಾಡುತ್ತಾ ಅವರ ಮಾತಿಗೆಲ್ಲ ಹೂಂಗುಟ್ಟುವುದು...ಮಕ್ಕಳ  ಶಾಲೆ, ಊಟ, ತಿಂಡಿ...ಎಲ್ಲೋ ಕಳೆದು ಹೋಗಿದ್ದೆ...perfectionist- ಬಿರುದು ಹೊತ್ತು ನಾನಲ್ಲದ ನನ್ನನ್ನು ಕನ್ನಡಿಯಲ್ಲಿ ನೋಡುತ್ತಿದ್ದೆ..ನನಗೆ ನನ್ನದೇ ಆದ ವ್ಯಕ್ತಿತ್ವವಿತ್ತೇ...ಒಂದೊಮ್ಮೆ ಸ್ತ್ರೀ ಶಕ್ತಿಯ ಬಗ್ಗೆ ದೊಡ್ಡ ದೊಡ್ಡಮಾತುಗಳನ್ನು ಆಡುತ್ತಿದ್ದವಳು ನಾನೆ! ಖಾಲಿಯಾಗಿದ್ದೆ...ನನ್ನಲ್ಲಿ ನನಗೇ ನಂಬಿಕೆಯಿರಲಿಲ್ಲ...ಏನೂ ಗೊತ್ತಿಲ್ಲವೆಂಬ ಕೀಳುರಿಮೆ ಕಾಡುತಿತ್ತು...

   ಆದರೆ, ಕೊನೆಗೂ ಆ  miracle....happened in my life too. ಕೊನೆಗೂ  ನನ್ನನ್ನು ನಾನು ಕಂಡುಕೊಂಡೆ. ಆತ್ಮವು ಜಾಗ್ರತವಾಯಿತು. ಹಳೆಯ ಛಲ ಮತ್ತೆ ನನ್ನೊಳು ಮೂಡಿತು. ಆ ಹಳೆಯ ದಿನಗಳು- ಹೌದು ಬರೇ a for apple, b for ball...ಕಲಿಯುತ್ತಿದ್ದಾಗ ಹಠ ಮಾಡಿ  ನನ್ನತ್ತೆಯಂದಿರ, ಚಿಕ್ಕಪ್ಪಂದಿರ, ಮಾಮಂದಿರ ಮಕ್ಕಳ ಹಾಗೆ ಆರನೆಯ ತರಗತಿಗೆ ಇಂಗ್ಲಿಷ್ ಮಾಧ್ಯಮ ಸೇರಿಕೊಂಡ ದಿನಗಳವು.  ಕಲಿತ ಚಿಕ್ಕಪ್ಪನು ಅದ್ಯಾವುದೋ ಹಿಂದಿನ ದ್ವೇಷದ ಕಾರಣಕ್ಕಾಗಿ ಸಹಾಯ ಮಾಡಲು ತಯಾರಿರಲಿಲ್ಲ...ಅಮ್ಮ ಅಪ್ಪನಿಗೆ ಕಲಿಸುವ ಸಾಮರ್ಥ್ಯವಿರಲಿಲ್ಲ..ಮಾಮಂದಿರು ದೂರವಿದ್ದರು..ಆಗ ಏಕಲವ್ಯನಂತೆ ಗುರುಗಳಿಲ್ಲದೆ ಕಲಿತ ದಿನಗಳು....ಅರ್ಥ ಗೊತ್ತಿಲ್ಲದೆ ತಿಣುಕಾಡಿದ, ಶಾಲೆಯಲ್ಲಿ ಅವಮಾನದಿಂದ ಅತ್ತ ದಿನಗಳು....ಬೇಕಂತಲೇ ಇಂಗ್ಲಿಷ್‍ನಲ್ಲಿ ಮಾತನಾಡಿಸಿ ಹೀಯಾಳಿಸುವ ಸಹಪಾಠಿಗಳು..ಮರೆಯಲಾರೆ ಆ ದಿನಗಳನ್ನು... ಹೌದು, ದೈವದ ಬೆಂಬಲ, ಮನದಲ್ಲಿ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಏಕಾಂಗಿಯಾಗಿದ್ದರೂ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬಹುದು..

   ಹುಂ, ಕತೆಯಲ್ಲಿ ಭಾಗ್ಯಶ್ರಿ ಬರೆದಂತೆ ನನಗೀಗ ಧೂಳು ಹೊಡೆಯಲು ಪುರುಸೊತ್ತು ಇಲ್ಲ....ನಾನೇ ಬೆಳೆಸಿದ ಹೂಗಿಡದಲ್ಲಿ ಆದ ಹೂಗಳನ್ನು ನೆರೆಮನೆಯವರು ಒಯ್ದರೆ ಅವರ ಜೊತೆ ಜಗಳವಾಡುವಷ್ಟು ತಾಳ್ಮೆನೂ ಇಲ್ಲ.....ನೆಂಟರು ಸಮಾರಂಭಗಳಿಗೆ ಕರೆಯದಿದ್ದರೂ ತಲೆಬಿಸಿ ಇಲ್ಲ..ಆಗಾಗ ಮನೆಗೆ ಬಂದು, ತಿಂದು ಮತ್ತೆ ಮರುದಿನ ಕಿರಿಕಿರಿ ಮಾಡುತ್ತಿದ್ದ ಅತ್ತೆ ಮನೆಯವರು ಈಗ ನನಗೆ, ನಾನು ಗಳಿಸಿದ ಹೆಸರಿಗೆ ಹೆದರುತ್ತಿದ್ದಾರೆ......ಹೊರಗಿನ ಚಲವಲನ ಒಳಗೂ ಸಂಚಲನವನ್ನು ಉಂಟುಮಾಡಿದೆ. ನನ್ನಲ್ಲಿ ಮತ್ತೆ ಜೀವ ಸಂಚಾರವಾಗಿದೆ!

22 December, 2012

ಶಿಲೆಯಾದಳು ಸುಜಾತ!

 


         ಇವತ್ತೇ ನನ್ನ ತಿಥಿ ಮಾಡಿ ಮುಗಿಸ್ತಾರೆ ಕಾಣ್ತದೆ ಈ ಅತ್ತೆ....ಬಾಯಿ ತೆರೆದು ಹೇಳುವ ಧೈರ್ಯವಿಲ್ಲದೆ ಮನಸ್ಸಿನಲ್ಲೇ ಅತ್ತೆಯನ್ನು ಶಪಿಸುತ್ತಾ ಸುಜಾತ ಊಟದ ಮೇಜನ್ನು ಶುದ್ಧಮಾಡುತ್ತಿದಳು....ಇವಳು ಒರೆಸುವುದು, ಅತ್ತೆ ದೊಡ್ಡ ಪಾತ್ರೆಯಿಂದ ಚಿಕ್ಕ ಪಾತ್ರೆಗೆ ಪದಾರ್ಥಗಳನ್ನು ವರ್ಗಾಯಿಸುವುದು, ಒಂದಿಷ್ಟು ಸುಮ್‍ಸುಮ್ಮನೆ ಮೇಜಿನ ಮೇಲೆ ಚೆಲ್ಲುವುದು..ಇವಳಿಗೆ ಒರಸಲು ಹೇಳುವುದು..ಇದು ಸುಮಾರು ಹದಿನೈದು ನಿಮಿಷಗಳಿಂದ ನಡೆಯುತ್ತಲೇ ಇತ್ತು. ಅತ್ತೆಗೆ ಇವಳನ್ನು ಆಚೆ ಕಳುಹಿಸಲು ಮನಸಿರಲಿಲ್ಲ..ಎಲ್ಲಿಯಾದರು ಕೋಣೆಗೆ ಹೋದರೆ ಮತ್ತೆ ಇವಳಿಂದ ಕೆಲಸ ಮಾಡಿಸಲಾಗುವುದಿಲ್ಲವೆಂದು ಗೊತ್ತಿತ್ತು..ಇವತ್ತು ಭಾನುವಾರ,  ಅಪರೂಪವಾಗಿ ಪತಿ ಎಲ್ಲಿಗೂ ಹೋಗದೆ ಮನೆಯಲ್ಲೇ ಇದ್ದಾನೆ..ಸಹಜವಾಗಿ ಅವಳಿಗೆ ಪತಿಯೊಂದಿಗೆ ಹೊತ್ತು ಕಳೆಯುವ ಆಸೆ ಇತ್ತು.  ಆದರೆ ಬೆಳಿಗಿನಿಂದ ಅತ್ತೆ ಏನಾದರೂ ಕೆಲಸ ಹೇಳುತ್ತಲೇ ಇದ್ದರು. ಮೊದಮೊದಲು ಉತ್ಸಾಹದಿಂದ ಮಾಡಿದ ಅವಳಿಗೆ ಅಲ್ಲಾವುದ್ದಿನ್‍ನ ಭೂತದಂತೆ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು. ಅಮ್ಮನ ಮನೆಯಲ್ಲಿ  ಹೀಗೆ ಕೆಲಸ ಮಾಡಿ ರೂಢಿ ಇಲ್ಲದ ಅವಳಿಗೆ ಇಲ್ಲಿ ದಿನಕಳೆದಂತೆ ಅತ್ತೆ ಬೇಕಂತೆಲೇ ತನ್ನಿಂದ ಹೆಚ್ಚು ಕೆಲಸ ಮಾಡಿಸ್ತಾಳೆ ಅಂತ ಅನಿಸುತ್ತಿತ್ತು.  ಇವತ್ತಂತೂ ಒಂದಿಷ್ಟು ಹೆಚ್ಚೇ ಕೆಲಸ ಹೇಳುತ್ತಿದ್ದಾರೆ.....
   
        ಕೊನೆಗೂ ಅತ್ತೆಯ ಪದಾರ್ಥ ವರ್ಗಾವಣೆಯ ಕೆಲಸ ಮುಗಿಸಿ ಕೋಣೆಗೆ ಹೋದ ಅವಳಿಗೆ ಪತಿಯು ಕೋಣೆಯಲ್ಲಿ ಕಾಣಲಿಲ್ಲ. ನಿರಾಶಳಾಗಿ ಮಂಚದ ಮೇಲೆ ಬಿದ್ದಿದ್ದ ಬಟ್ಟೆಯ ರಾಶಿಯನ್ನು ಮಡಚಿಡುವ ಕೆಲಸ ಮಾಡಲು ಶುರು ಮಾಡಿದಳು. ಕಪಾಟಿನಲ್ಲಿ ಜೋಡಿಸಿಡುತ್ತಿರುವಾಗ ಹಿಂದಿನಿಂದ ಬಂದ ಕೈಯೊಂದು ಸೊಂಟವನ್ನು ಬಳಸಿದಾಗ ಮೈಮನವೆರಡೂ ಅರಳಿತು.  ನಿಧಾನವಾಗಿ ಪತಿಯತ್ತ ತಿರುಗಿದ ಸುಜಾತಳ ಕಿವಿಗೆ ಪತಿಯ ನುಡಿ ಅಪ್ಪಳಿಸಿತು!
"ಎಷ್ಟು ಕಪ್ಪಗೆ ಕಾಣುತ್ತಿಯಾ!"
 ಅಲ್ಲೇ ಶಿಲೆಯಾದಳು ಸುಜಾತ!

********                                                          ************                                                    ******

     


         

ನಾನು ಅಸಹಾಯಕಿ...ಹೀಗೆ ಪತ್ರ ಬರೆದು ಅಂತರಂಗವ ತೋಡಿಕೊಳ್ಳುವೆ!

  ಗೆಳೆಯ,

      ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರಹಸನವನ್ನು ನೀನು ನೋಡುತ್ತಿರಬಹುದು. ಇಂತಹದೆಲ್ಲಾ ನಾಟಕವನ್ನು ನೋಡಿದಾಗ ನನಗೆ ಮೈಯೆಲ್ಲ ಉರಿಯುತ್ತದೆ. ಈ ಫೇಸ್ ಬುಕ್ಕಿನಲ್ಲಿ ಎಲ್ಲರೂ ಅನುಕಂಪದ, ದೊಡ್ಡ ದೊಡ್ಡ   ಮಾತಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರಲ್ಲಿ ಅನೇಕ ಮಂದಿ ಗೋಮುಖ ವ್ಯಾಘ್ರರಿದ್ದಾರೆಂಬು ನಿನಗೂ ಗೊತ್ತು ತಾನೆ!

   " ------ "   ನಾನು ಹಿಂದಿನಿಂದಲೂ ಈ ಶಬ್ದವನ್ನು ಬಳಸುತ್ತಿರಲಿಲ್ಲ...ನನಗೆ ಇನ್ನೂ ನೆನಪಿದೆ, ನಾವೆಲ್ಲ ( ನನ್ನ ಅಪ್ಪ, ಅಮ್ಮ...ನನ್ನ ತಮ್ಮಂದಿರು ) ಒಟ್ಟಿಗೆ ಸಿನೆಮಾ ನೋಡುವಾಗ ಇಂತಹ ದೃಶ್ಯ ಬಂದಾಗಲೆಲ್ಲಾ ನನಗೆ ನೋಡಲು ಆಗುತ್ತಿರಲಿಲ್ಲ. ಎದ್ದು ಹೋಗುತ್ತಿದ್ದೆ...ಸ್ವಲ್ಪ ಸಮಯಕ್ಕಾದರೂ ಟಿವಿ ಆಫ್ ಮಾಡಬಹುದಿತ್ತು ಅಂತ ಅನಿಸುತ್ತಿತ್ತು. ಆದರೆ ನನ್ನ ಅಪ್ಪನಾಗಲಿ, ಅಮ್ಮನಾಗಲಿ ಎದ್ದು ಆಫ್ ಮಾಡುತ್ತಿರಲಿಲ್ಲ. ಸುಮ್ಮನೆ ಕುಳಿತು ನೋಡುತ್ತಿದ್ದರು.  ಯಾರು ಆ ಬಗ್ಗೆ ಮಾತನಾಡುತ್ತಿರಲಿಲ್ಲ. ನನಗೆ ಅಮ್ಮನಾದರೂ ಅಪ್ಪನಿಗೆ ಹೇಳಿ ಪ್ರತಿಭಟಿಸಬಹುದಿತ್ತು ಅಂತ ಎಷ್ಟೋ ಸಲ ಅನಿಸುತ್ತಿತ್ತು. ಮುಂದೆನೂ ಆ ಬಗ್ಗೆ ಪೇಪರಿನಲ್ಲಿ ಅಥವಾ ಟಿವಿಯಲ್ಲಿ ಅದರ ಬಗ್ಗೆ ಮಾಹಿತಿ ಕೊಟ್ಟಾಗ ನನ್ನ ಒಳ ಮನಸ್ಸು ತುಂಬಾ ಅಳುತಿತ್ತು. ಈ ಒಂದು ವಿಷಯಕ್ಕೆ ನಾನು ನನ್ನೊಡೆಯನ ಮೇಲೆ ಬಹಳ ಸಿಟ್ಟುಗೊಂಡಿದ್ದೆ.  ಮೊದಲೇ ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮ, ದೈಹಿಕ ಬಲನೂ ಕಡಿಮೆ...ಅದರ ಮೇಲೆ ಈ ಅತ್ಯಾಚಾರ! ಯಾಕೆ ಹೀಗೆ ಬೇಧಭಾವ ನನ್ನೊಡೆಯ?

       ಏನಾದರೂ ಸಹಿಸಬಹುದು...ಆದರೆ ಇಷ್ಟಕ್ಕೆ ವಿರುದ್ಧವಾಗಿ ಪುರುಷನು ಸ್ತ್ರೀಯ ಮೇಲೆ ತನ್ನ ಪ್ರತಾಪವನ್ನು ತೋರಿಸುವುದು ಎಷ್ಟು ಸರಿ! ಒಂದು ಗಂಡು ಹೆಣ್ಣಿನ ಸಂಗಮವೆಂದರೆ ಅದೊಂದು ಅಮೃತಕ್ಕೆ ಸಮಾನವಾದ ಭಾವ.....ಒಬ್ಬರಿಗೊಬ್ಬರು ಒಲಿದು ದೇಹದ ಜೊತೆ ಮಾನಸಿಕವಾಗಿ ಸಮಾಗಮ ಹೊಂದಿದರೆ ಆ ಸುಖವನ್ನು ಹೋಲಿಸಲು ಉಪಮೆಗಳೇ ಇಲ್ಲವಾಗಬಹುದು.  ಸ್ತ್ರೀ ಅಂದರೆ ಕೇವಲ ಭೋಗದ ವಸ್ತುವೇ? ಅಥವಾ ಬರೇ ಪುರುಷನ ಸೇವೆ ಮಾಡಲು ಬ್ರಹ್ಮನು ಸೃಷ್ಟಿಸಿದನೆ!  ಮಹಾಲಕ್ಷ್ಮಿ, ದುರ್ಗಾ ಸ್ತೋತ್ರ, ಹೀಗೆ ಹಲವಾರು ದೇವಿಯಂದಿರ ಉಪಾಸನೆ ಮಾಡುವ ಪೂಜಾರಿ ಉಳಿದ ಸ್ತ್ರೀಯರನ್ನು ಯಾವ ದೃಷ್ಟಿ ಕೋನದಿಂದ ನೋಡಬಹುದು! ತನ್ನ ಸ್ತ್ರೀ ಮೇಲಧಿಕಾರಿಯ ಎದುರು "ಮೇಡಂ" ಎಂದು ಕರೆಯುವವನು ಆಕೆಯನ್ನು ಹಿಂದಿನಿಂದ ಕರೆಯುವ ಭಾಷೆಯನ್ನು ನಾನು ಕೇಳಿಬಲ್ಲೆ.  ದೇವರು ಸ್ತ್ರೀಗೆ ಪುರುಷರಿಗಿಂತ ಬೇರೆ ರೀತಿಯ ರೂಪ ಕೊಟ್ಟ....ಅದನ್ನು ಸೌಂದರ್ಯದ ದೃಷ್ಟಿಯಿಂದ ನೋಡಬೇಕೆ ಹೊರತು ಕಾಮುಕ ದೃಷ್ಟಿಯಿಂದ ನೋಡುವುದೇ...ನಾನು ಕಲಾರಾಧಕಿ. ನನಗಿನ್ನೂ ಸರಿಯಾಗಿ ನೆನಪಿದೆ, ೧೯೮೯ರಲ್ಲಿ  ನನ್ನ ಮಾಸ್ತ್ರರರು ಶಿಲಾ ಬಾಲಿಕೆಯ ಚಿತ್ರ ಚಾರ್ಕೋಲಿನಲ್ಲಿ ಬಿಡಿಸಲು ಹೇಳಿದಾಗ.....ನನಗೆ ಮೊದಲು ಮುಜುಗರವಾಗಿತ್ತು..ಆದರೆ ಚಿತ್ರ ಬಿಡಿಸುತ್ತಿದ್ದಂತೆಯೇ ನಾನು ಬರೇ ಕಲಾಕಾರಳಾಗಿದ್ದೆ...ಹೆಣ್ಣು ಗಂಡಿನ ಬೇಧ ಭಾವವೇ ನನಗಿರಲಿಲ್ಲ....ಇಂದಿಗೂ ಆ ಚಿತ್ರ ನನ್ನ ಅತ್ತ್ಯುತ್ತಮ ಚಿತ್ರದಲ್ಲಿ ಒಂದಾಗಿದೆ. 

      ಹುಂ, ನನಗಿನ್ನೂ ಚೆನ್ನಾಗಿ ನೆನಪಿದೆ...ನೀನು ಒಮ್ಮೆ ನನ್ನೊಡನೆ ಈ ವಿಷಯ ಚರ್ಚೆ ಮಾಡಲು ಬಯಸಿದ್ದಿ..ಆದರೆ ನನಗಿಷ್ಟವಿರಲಿಲ್ಲ. ಇಂದಿಗೂ ನನಗೆ ಈ ಬಗ್ಗೆ..ಗಂಡಸ್ಯಾಕೆ ಯಾವ ಹೆಣ್ಣಿನ ಜೊತೆಗೂ ಮಾತನಾಡಲು ಆಗುವುದಿಲ್ಲ. ಮತ್ತೆ ಇವತ್ಯಾಕೆ ಈ ಬಗ್ಗೆ ನನಗೆ ಬರೆಯುತ್ತಿರುವಿ ಅಂತ ನಿನಗೆ ಅನಿಸಬಹುದು..ಹೌದು, ಅದಕ್ಕೂ ಕಾರಣವುಂಟು. - ನನ್ನ ಮಗಳು! ದೆಹಲಿಯಲ್ಲಿ  ಬಸ್ಸಿನಲ್ಲಿ ನಡೆದ ಆ ದುರ್ಘಟನೆಯ ಬಗ್ಗೆ ಪೇಪರಿನಲ್ಲಿ ಓದಿ ನನಗೆ ಆಶ್ಚರ್ಯವಾಯಿತು....ಯಾವಾಗಲೂ ಈ ಬಗ್ಗೆ ಮಾತನಾಡದ ನಾನು ಆವತ್ತು ನನ್ನ ಮಗಳಿಗೆ ಕೇಳಿದೆ... ಅವಳಿಗೆ ಈ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. ( ಅಷ್ಟರ ತನಕ ಫೇಸ್ ಬುಕ್ಕಿನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಹರಿಯುತ್ತಿರಲಿಲ್ಲ....whats appನಲ್ಲೂ)  ಪೇಪರಿನಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ...ಓದಿ ಆಶ್ಚರ್ಯ  ಪಡುವ ಹಾಗೆ ಇತ್ತು...ಅನೇಕ ಪ್ರಶ್ನೆಗಳು...ಮನಸ್ಸೊಳಗೆ ಹುಟ್ಟಿದವು. ಆದರೂ ಒಬ್ಬ ಅಸಹಾಯಕ, ಬಲಹೀನ ಹೆಣ್ಣಿನ ಮೇಲೆ ಅನೇಕ ಬಲವಂತ ಗಂಡು ಪ್ರಾಣಿಗಳು ಸವಾರಿ ಮಾಡಿ ತಮ್ಮ ಗಂಡಸುತನವನ್ನು ಸಾಬೀತು ಪಡಿಸುವುದನ್ನು ಓದಿ ಮನ ನಿಸ್ಸಾಹಾಯಕವಾಗಿ ಬಳಲಿತು. ನಾನು ಮಗಳೊಡನೆ ಮೊದಲ ಬಾರಿಗೆ ಮನ ಬಿಚ್ಚಿ, ಮುಜುಗರ ಪಡದೆ ಆ ಬಗ್ಗೆ ಅವಳ ಅಭಿಪ್ರಾಯ ಕೇಳಿದೆ.  ಶಾಲಾ ದಿನಗಳಿಂದಲೂ ಅವಳಿಗೆ  ಹುಡುಗರ ಮತ್ತು ಹುಡುಗಿಯರ ಜೊತೆ ಸಮನಾದ ಸ್ನೇಹವಿತ್ತು. ಅವಳು ತನ್ನ ಎಲ್ಲಾ ಸ್ನೇಹಿತ ಮತ್ತು ಸ್ನೇಹಿತೆಯರ ಬಗ್ಗೆ ನನಗೆ ಮಾಹಿತಿ ಕೊಡುತ್ತಿದ್ದಳು. ಫೇಸ್ ಬುಕ್ಕಿನಲ್ಲೂ ಅಷ್ಟೇ! ಆದರೂ ನಾನು ಅವಳು  ಕಾಲೇಜಿನಲ್ಲಿ ರಾತ್ರಿ ಹೊತ್ತು ಕಾರ್ಯಕ್ರಮವಿದ್ದಾಗ  ತಡವಾಗಿ ಬರುವುದನ್ನು ಆಕ್ಷೇಪಿಸುತ್ತಿದ್ದೆ...." ಅದ್ಯಾಕೆ ನನಗೆ ಮಾತ್ರ ಈ ರೂಲ್..." ಸೂಕ್ಷ್ಮವಾಗಿ ತಿಳಿ ಹೇಳಿದರೂ ಕೇಳುತ್ತಿರಲಿಲ್ಲ. ಮೊನ್ನೆ ದಾರಿಯಲ್ಲಿ ಮಧ್ಯಾಹ್ನದ ಹೊತ್ತು ಒಂಟಿಯಾಗಿ ಬರುವಾಗ ಯಾರೋ ಹುಡುಗ ಬೈಕಿನಲ್ಲಿ ಹೋಗುತ್ತಾ ಇವಳಿಗೆ ಏನೋ ಅಂದನಂತೆ..ಇವಳು ಅವನಿಗೆ ಏನೋ ಹೇಳಬೇಕೆಂದುಕೊಂಡಳಂತೆ..ಮತ್ತೆ ತಾನು ಒಂಟಿಯಾಗಿದ್ದೇನೆಂದು ನೆನಪಾಗಿ ಸುಮ್ಮನಾದಳಂತೆ. ಬಸ್ಸಿನಲ್ಲಿ ಪಾಸ್ ತೋರಿಸಿದಕ್ಕೆ ಕಂಡಕ್ಟರ್ ಬೈದನೆಂದು ಕೋಪಕ್ಕೆ ಅವನಿಗೂ ಇಡಿಯಟ್ ಅನ್ನಲು ಹೋಗಿದ್ದಳು...ಇದೆಲ್ಲಾ ನನಗೆ ಮತ್ತೆ ನೆನಪಿಗೆ ಬಂದು ಇದು ಸರಿಯಾದ ಸಂದರ್ಭ..ಗಂಡಸು ಏನೇನು ಮಾಡಬಲ್ಲ..ಮತ್ತು ನಾವು ಬಲಹೀನ, ಬುದ್ಧಿಹೀನ ಹೆಂಗಸರು ಹೇಗೆ ನಿಸ್ಸಹಾಯಕರಾಗುವ ಸಂದರ್ಭ ಸೃಷ್ಟಿಯಾಗುತ್ತದೆ....ಎಂದೆಲ್ಲ ಹೇಳಿದೆ. "ನೋಡು, ಅತ್ಯಾಚಾರವೆಂದರೆ ದೇಹ ಮಾತ್ರವಲ್ಲ ಮನಸ್ಸಿನ ಮೇಲೂ ಇದರ ಪರಿಣಾಮ ಬೀರುತ್ತದೆ. ನಿಜ, ಕಾಲ ಕಳೆದಂತೆ ದೇಹದ ಮೇಲಿನ ಗಾಯ ಮಾಗುತ್ತದೆ. ಆದರೆ, ಮನಸ್ಸು...ಅದಕ್ಕೆ ತಡೆಯಲಾಗುವುದಿಲ್ಲ." 

        "ಅಮ್ಮ, ಅನೇಕ ಮಂದಿ ಗಂಡಸರು ಹೇಳುತ್ತಾರೆ..ಇದಕ್ಕೆಲ್ಲಾ ನಾವು ಹಾಕುವ ಡ್ರೆಸ್‍ಗಳೇ ಕಾರಣವಂತೆ. ನೀನೇನು ಹೇಳುತ್ತಿಯಾ?" 
   
    " ಅದೂ ಹೌದು..ಆದರೆ ಅದು ಗಂಡಸಿಗೆ ತಾನು ತೋರಿಸುವ ಪೌರುಷ ಸರಿಯೆಂದು ಹೇಳಲು ಇರುವ ಒಂದು ನೆವ. ಬುರ್ಕ ಹಾಕುವ ಮುಸ್ಲಿಮ್ ಹೆಂಗಸರು ಬಲಿಯಾಗಿಲ್ಲವೇನು? ಹೋಗಲಿ, ೩ ವರ್ಷದ ಮಗು..ಅದನ್ನೂ ಬಿಡುವುದಿಲ್ಲವಲ್ಲ ಈ ಗಂಡು...ಅದೆಲ್ಲ ಹೋಗಲಿ, ತನ್ನ ಮಗಳ ಮೇಲೆ, ತನ್ನದೇ ತಂಗಿ ಅಕ್ಕನ ಮೇಲೆ ಪೌರುಷ ಮೆರೆಸುತ್ತಿರುವ ಗಂಡಸನ್ನು ಏನೆಂದು ಕರೆಯೋಣ! ಅದಕ್ಕೆಲ್ಲ ಕುಮ್ಮತ್ತು ನೀಡುವ, ಹಣ ದಾಹಕ್ಕೆ ಬಲಿಯಾಗಿರುವ ತಾಯಂದಿರನ್ನು ಏನೆಂದು ಅನ್ನೋಣ!   ಚಲಚಿತ್ರದಲ್ಲಿ, ಜಾಹಿರಾತಿನಲ್ಲಿ, ಕಲಾತ್ಮಕ ಚಿತ್ರವೆಂಬ ಹೆಸರಿನಲ್ಲಿ..ಹೀಗೆ ಅನೇಕ ರೀತಿಯಲ್ಲಿ ತನ್ನ ಅಂಗಾಂಗಳ ಪ್ರದರ್ಶನ ಮಾಡಿ ಹಣ ಸಂಪಾದಿಸುತ್ತಿರುವ ಸಮಾಜದ ಮೇಲ್ವರ್ಗದ ಜನರನ್ನು ಈ ಕೆಟ್ಟ ವರ್ಗದ ಪಟ್ಟಿಯಲ್ಲಿ ಹಾಕಿದ್ದೇನೆ ನಾನು. 

         ಬಿಡು, ಫೇಸ್ ಬುಕ್ಕಿನಂತ ಸಾಮಾಜಿಕ ತಾಣದಲ್ಲೇ ನಿನಗೆ ಇಂತಹ ಸಾವಿರಾರು ಉದಾಹರಣೆ ಸಿಗುತ್ತದೆ. ನೋಡಿದಿಯಾ ಇಂದು ಹುಡುಗಿ..ಫೋಟೊ ಹಾಕಿದ ಕೂಡಲೇ...ಲೈಕುಗಳ ಮಳೆ ಬರಲು ಆರಂಭವಾಗುತ್ತದೆ....
ಹೋಗಲಿ, ಹುಡುಗಿಯರಿಗೆ ಹೀಗೆ subscription ಹಾಗೂ ಲೈಕುಗಳು ಸಿಗುವುದು ಸಹಜ...ಆದರೆ, ನಾನು ಗಮನಿಸಿದ ಹಾಗೆ ಅನೇಕ ಮದುವೆಯಾದ ಹೆಂಗಸರಿಗೂ ಹೀಗೆ ಲೈಕುಗಳ ಮಳೆ ಸಿಗುವುದುಂಟು. ಅರೇ, ನನಗೆ ಸಿಗುವುದಿಲ್ಲವೇ ಹಾಗೆ...ಯಾಕೆಂದರೆ ನನ್ನ ಸ್ನೇಹಿತರ ವೃತ್ತವನ್ನೇ ಹಾಗಿಟ್ಟಿದ್ದೇನೆ.  ಮತ್ತೆ...ಇರು, ನಿನಗೆ ಕೆಲವರು ಈ ಹೆಂಗಸರಿಗೆ ಲೈಕು ಮಾತ್ರವಲ್ಲ ಕಮೆಂಟು ಹಾಕಿದನ್ನೂ ತೋರಿಸಿತ್ತೇನೆ- nice, beautiful, awesome....smile...ಚೆನ್ನಾಗಿದೆ. ಎಷ್ಟು ಚಂದ ಕಾಣ್ತಿರಾ!  ಇವರು ಮನೆಯಲ್ಲಿ ತಮ್ಮ ಹೆಂಡತಿಯರನ್ನು ಸರಿಯಾಗಿ ನೋಡ್ತಾರೋ ಇಲ್ಲವೋ ಅಂತ ನನಗೆ ಸಂಶಯ. ಇನ್ನು ಕೆಲ ಗಂಡಸರಿಗೆ ಫಿಲ್ಮ್ ಆಕ್ಟರ್ ಅಂದ್ರೆ ಜೀವ..ಮನೆಯಲ್ಲಿ ಯಾವ ಹೆದರಿಕೆ ಇಲ್ಲದೆ ಅವಳ ಅರೆ ಬೆತ್ತಲೆ ಚಿತ್ರ ನೋಡಿ ಆನಂದ ಪಡುತ್ತಾರೆ........" 

    ಗೆಳೆಯ, ಹೀಗೆಲ್ಲ ನನ್ನ ಮಗಳ ಜೊತೆ ಮಾತನಾಡಿದ ನಂತರ ನನಗೆ ನಿನ್ನ ನೆನಪಾಯಿತು. ಇಷ್ಟು ದಿನವೂ ಆ ವಿಷಯ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ತಳಮಳ, ಆತಂಕ, ಮತ್ತಿನ್ನೇನೋ ಎಲ್ಲವನ್ನೂ ನಿನ್ನೊಡನೆ ಹಂಚಬೇಕೆಂದೆನಿಸಿತು. ಹೌದೋ, ನೀನೊಬ್ಬನೇ ನನ್ನ ಮಾತಿಗೆಲ್ಲಾ ಕಿವಿಯಾಗ್ತಿಯಾ...೩ದಿನದಿಂದ ಅದೇ ಸುದ್ದಿಗಳನ್ನು ಕೇಳುತ್ತಿರುವಾಗ, ಏನೂ ಮಾಡಲು ಸಾಧ್ಯವಾಗದ ಅಸಹಾಯಕತೆ ನನ್ನನ್ನು ಹಿಂಡಿ ಬಿಡುತ್ತದೆ...ಒಂಟಿಯಾಗಿದ್ದಾಗಲೆಲ್ಲಾ ನಾನೇ ಆ ಬಲಿಪಶು ಎಂದು ಭಾವನೆ ನನಗೆ ಬರುತ್ತದೆ....

 ಹೇಳೋ, ಇದನೆಲ್ಲಾ ತಡೆಯಲು ಉಪಾಯವುಂಟೇ? ಹೇಳು, ಈಗ ಚರ್ಚೆ ನಡೆಯುತ್ತಿರುವಂತೆ ನೇಣು ಹಾಕಿದರೆ ಇನ್ನು ಮುಂದೆ ಗಂಡಸರು ತಮ್ಮನ್ನು ಸುಧಾರಿಸಿಕೊಳ್ಳುತ್ತಾರೊ..ಅಥವಾ ಅವರನ್ನು ನಪುಂಸಕರನ್ನಾಗಿ ಮಾಡಿದರೆ ಇಂತಹ ಘಟನೆಗಳು ಜರುಗಲಾರವೋ? 

     ಮನೆ ಮನೆಯಲ್ಲೂ, ಮನಮನದಲ್ಲೂ ಸುಧಾರಣೆ ನಡೆಯಬೇಕೋ...ನಮ್ಮ ಮಕ್ಕಳಲ್ಲಿ ಸದಾಚಾರದ ಭಾವವನ್ನು, ನೀತಿಯನ್ನು ಬಿತ್ತಬೇಕೋ...

     ಆದರೆ ಎಲ್ಲಿಯ ತನಕ ನಮ್ಮ ಮನೆ ಮನದಲ್ಲಿ ನೈತಿಕ ಮೌಲ್ಯಗಳ ಬಿತ್ತನೆ ನಡೆಯುವುದಿಲ್ಲವೋ ಅಲ್ಲಿಯ ತನಕ ಯಾವುದು ಬದಲಾಗುವುದಿಲ್ಲ. ನೀತಿ ಪರರಿಗೆ...ತನಗೆ ಯಾವುದೇ ಅನ್ವಯವಾಗುವುದಿಲ್ಲವೆಂಬ ಭಾವವು ನಮ್ಮ ರಕ್ತದಲ್ಲಿ ಹರಿಯುವುದೋ ಅಲ್ಲಿಯ ತನಕ ರಾಮ ರಾಜ್ಯವು ಬರೇ ಕನಸಾಗಿ ಉಳಿಯುವುದು. ಗಂಡು ಹೆಣ್ಣು ಜಾತಿಗಳು ಪರಸ್ಪರ ಗೌರವದಿಂದ ಸಹಮತದಿಂದ ಬಾಳುವೆಯನ್ನು ಪ್ರಾರಂಭಿಸುತ್ತಾರೋ ಅಂದೇ ಮನು ಕುಲ ನಿಜವಾಗಿ ಸ್ವಾತಂತ್ರವನ್ನು ಪಡೆದ ದಿನವೆಂದು ಹೇಳಬಹುದು. 

06 December, 2012

ಭಾವಾನುವಾದ!

   ನನ್ನ ಪ್ರಿಯ ಹಾಡಿನ ಭಾವಾನುವಾದದ ಯತ್ನ.  
https://www.youtube.com/watch?v=SR1y3CYDTG4
ಕೊಯಿ ಹಮ್‍ದಮ್ ನಾ ರಹಾ, ಕೊಯಿ ಸಹಾರ  ನಾ ರಹಾ!




ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು, ನನ್ನವರಾಗಿಯೂ ಯಾರೂ ಇಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!

ಒಂಟಿಯಾಗಿವೆ ನನ್ನೀ ಮುಸ್ಸಂಜೆಗಳು, ಮತ್ತೆ ಗುರಿಗಳು ಇನ್ನೆಲ್ಲಿ,
ಹಾದಿಯ ತೋರುತ ಬೆಳಗುತ್ತಿದ್ದ ಆ ಚುಕ್ಕಿಯೇ ಕಣ್ಮರೆಯಾದ ಮೇಲೆ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ  ನನಗಿಲ್ಲ!

ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು, ನನ್ನವರಾಗಿಯೂ ಯಾರೂ ಇಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!

ಗೇಲಿಮಾಡದಿರಿ ನಯನಗಳೇ, ನಿಮ್ಮನ್ನೆದುರಿಸಲಾರೆ!
ನನ್ನವಳಾಗಲಿಲ್ಲ ಅವಳು, ನಿನ್ನವನಾಗಲಿಲ್ಲ ನಾನೂ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ಇಲ್ಲ!

ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು,  ನನ್ನವರಾಗಿಯೂ ಯಾರೂ ಇಲ್ಲ.
ಯಾರ  ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!

ಹೇಳಲೇನು ಉಳಿದಿಲ್ಲ ನನಗೆ, ಹೀಗೇ ಸಾಗುವೆ ಕೊನೆಗೆ.
ಹಿಂದಿರುಗಿ ಬಾ ಎನ್ನುವ ಆ ಸುಳಿವೂ ಇನ್ನಿಲ್ಲವಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ಇಲ್ಲ!

ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು, ನನ್ನವರಾಗಿಯೂ ಯಾರೂ ಇಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!


02 December, 2012

ಸಾರ್ಥಕ ಕ್ಷಣ!

      ಒಂದು ವಾರದಿಂದ ಸ್ತಬ್ಧವಾಗಿದ್ದ ನನ್ನ ಮೊಬೈಲ್ ಮೊನ್ನೆ ರಾತ್ರಿ ರಿಂಗುಟ್ಟಿತು. ಸಿಕ್ಕಾಪಟ್ಟೆ ಖುಷಿಯಾಗಿ ಯಾರು ಅಂತ ನೋಡಿದರೆ ಸಯ್ಯದ್ ಸರ್! ಅರೆ ಮಕ್ಕಳು ಆಗಲೇ ಮನೆಗೆ ಹೋದ್ರಲ್ವಾ...ಮತ್ತೆ ಏನಾಯ್ತೊ ಅಂತ ಹಿಂಜರಿಯುತ್ತಲೇ ಸ್ಲೈಡ್ ಮಾಡಿ,
  "ಹಲೋ..."  ಕ್ಷೀಣ ಸ್ವರದಲ್ಲಿ ಅಂದೆ.
 " ಮೇಡಮ್, ನಮ್ಮ ಅಮ್ಮ ಮನೆಗೆ ಬಂದಿದ್ದಾರೆ. ಅವರಿಗೆ ನಿಮ್ಮನ್ನು ಒಮ್ಮೆ ನೋಡಬೇಕಂತೆ. ನಾಳೆ ಹೇಗೂ ಕಾಲೇಜಿಗೆ ರಜೆ. ನಿಮಗೆ ಬರಲಿಕ್ಕಾಗ್ತದಾ  ಮೇಡಂ?...ಅಲ್ಲ ಮೇಡಂ ನೀವು ಕಾಲೇಜಿಗೂ ಬರದೇ ತುಂಬಾ ದಿನವಾಯ್ತು...ಏನು?" ಬಡ ಬಡ ಮಾತಾಡಿಬಿಟ್ರು.

 "ಸರ್, ನಿಮ್ಮ ಅಮ್ಮನೇ ನಮ್ಮ ಮನೆಗೆ ಬರ್ಬಹುದಿತ್ತು. ಆದರೆ ಅವರಿಗೆ ನಡೆಯಲಿಕ್ಕಾಗೊಲ್ಲ ಅಂತ ಮಕ್ಕಳು ಹೇಳಿದ್ದಾರೆ. ಸರಿ ಸರ್,  ಭಾನುವಾರ ಸಂಜೆ ಆದ್ರೆ ಬರ್ತೇನೆ. ಆದರೆ ನಿಮ್ಮ ಮಿಸ್ಸೆಸ್ಸಿಗೆ ಹೇಳಿ ಏನು ಸ್ಪೆಷಲ್ ಮಾಡ್ಬಾರದಂತ. ಸರ್, ಮಗ ಮನೆಗೆ ಬಂದಿದ್ದಾನೆ. ಅಲ್ಲದೆ ಗ್ಲಾಸ್ ಪೈಂಟಿಂಗ್  ಆರ್ಡರ್ ಒಂದು ಮಾಡಿಕೊಡುವ ಬರದಲ್ಲಿ ಹೆಬ್ಬೆರಳಿಗೆ ಗಾಯವಾಗಿದೆ. ಮನೆಯಲ್ಲಿ ಕೆಲಸನೂ ಹೆಚ್ಚು... ಹೀಗೆಲ್ಲ ಆದಾಗ ನಾನು ಕಾಲೇಜಿಗೆ ಬಂದು ಏನು ಪ್ರಯೋಜನ.. ಚಿತ್ರ ಬಿಡಿಸುವಷ್ಟು ತ್ರಾಣ ಇರದಿದ್ರೆ? "

 "ಸರಿ ಮೇಡಂ ಆದ್ರೆ ಮನೆಗೆ ಬನ್ನಿ" ಎಂದು ಹೇಳಿ ಫೋನು ಇಟ್ರು.

    ನನಗೆ ಕೆಲವು ಕ್ಷಣ ಹೇಗೆ ಪ್ರತಿಕ್ರಿಯಿಸುವುದು ಅಂತ ತಿಳಿಯಲಿಲ್ಲ.. ಅಲ್ಲ ನನ್ನ ಕಾಲೇಜಿನ ಸರ್.. ಅವರ ಅಮ್ಮ ಯಕ್ಷಿತ್, ಸಾಮಾನ್ಯರಲ್ಲಿ ಸಾಮಾನ್ಯಳಾದ ನನ್ನಲ್ಲಿ ಏನು ನೋಡಿದ್ದಾರೆ.. ನನಗೊತ್ತು.. ನನ್ನಲ್ಲಿ ಮನೆ ಪಾಠಕ್ಕೆ ಬರುವ ಅನೇಕ ಮಕ್ಕಳು ನಾನು ಅವರ ಜೊತೆ ವ್ಯವಹರಿಸುವ ರೀತಿ ನೋಡಿ ಮೆಚ್ಚಿದ್ದಾರೆ ಅಂತ.. ಆದರೆ ಕೆಲವೇ ಕೆಲವು ಆಮಂತ್ರಣ ಬಿಟ್ಟರೆ ಮತ್ತೆಲ್ಲ ಮನೆಯವರು ಅತೀ ಆತ್ಮೀಯತೆಯಿಂದ ನನ್ನ ಜೊತೆ ವ್ಯವಹರಿಸಿರಲಿಲ್ಲ.... 


 ಅದೇ ಅನುಭವವನ್ನು ಮತ್ತೆ ಇವತ್ತಿನ RX LIFE CYCLE RALLY ಯಲ್ಲೂ ಪಡೆದಾಗ ಮನ ತುಂಬಿ ಬಂತು.  ನಿನ್ನೆ ಡಾ. ಗಾಯತ್ರಿ ಅವರ ಫೋನು ಬಂದಿತು.

"ಶೀಲಾ, ನಾಳೆ ನೀನು ಕಾಪಿಕಾಡ್ ಶಾಲೆಗೆ ಬಂದು ನಮಗೆ ಸಹಾಯ ಮಾಡಬೇಕು.  ನೀನು ಬೆಳಿಗ್ಗೆ rally ಪ್ರಾರಂಭವಾಗುವಾಗಲೇ ಬರ್ತಿಯಾ?"

"ಇಲ್ಲ ಗಾಯತ್ರಿ, ನನಗೆ ೬ಗಂಟೆಗೆ ಬರ್ಲಿಕ್ಕಾಗೊಲ್ಲ..ನಾನು ಮತ್ತೆ ಸೀದ ಶಾಲೆಗೆ ಬರ್ತೇನೆ."

"ಸರಿ ವಂದನಾ ನಿನಗೆ ನಿನ್ನ ಕೆಲಸ ಏನು ಅಂತ ಹೇಳ್ತಾಳೆ.. ನೀನು ನಮ್ಮ ಮೀಟಿಂಗಿಗೂ ಬರ್ಲಿಲ್ಲ.." 

"ಅರೇ ಗಾಯತ್ರಿ, ನಿನಗೆ ಗೊತ್ತುಂಟಲ್ವಾ.. ನನಗೆ ತರಗತಿಗಳು ಇವೆ ಅಂತ... "

"ಹೌದು... ಅದನ್ನು ನನಗೆ ವಂದನಾನೂ ಹೇಳಿದ್ಳು... ಆದರೂ ನೀನು ಬಂದ್ರೆ ಒಳ್ಳೆದಿತ್ತು."

ನಮ್ಮ ಮಾತುಕತೆ ಹೀಗೆ ನಡೆದಿತ್ತು. ಮತ್ತೆ ವಂದನಾಳ ಫೋನು ಬಂದು ನಾನು ಇವತ್ತು ಬೆಳಿಗ್ಗೆ ತಿಂಡಿ ( ಉದ್ದಿನ ಅಪ್ಪ), ಚಟ್ನಿ ತಯಾರಿಸಿ ೭.೪೫ಕ್ಕೆ ಕಾಪಿಕಾಡ್ ಶಾಲೆಗೆ ಹೋಗಿ ತಲುಪಿದೆ. (ರಿಕ್ಷಾ ಏರುವ ಮೊದಲೇ ಡ್ರೈವರನ್ನು ಕೇಳಿಯೇ ಹತ್ತಿದೆ.. ಮಂಗಳೂರಿನಲ್ಲಿದ್ದು ೪೪ ವರ್ಷವಾದರೂ ಸರಿಯಾಗಿ ಏನೂ ಪರಿಚಯವಿಲ್ಲ.. ಅಲ್ಲದೆ ಈಗ ಹೊಸ ಹೊಸ ಬಿಲ್ಡಿಂಗುಗಳು ಮೇಲೆದ್ದು ಇದ್ದ ಸ್ವಲ್ಪ ಪರಿಚಯನೂ ಹೊರಟು ಹೋಗಿದೆ) ಅಲ್ಲಿ ನನಗೆ ಬೂತ್ ನಂಬ್ರ ೪ರಲ್ಲಿ ಕೆಲಸ. ಅರುಣಳ ಪರಿಚಯ ಅಲ್ಲಿಯೇ ಆದದ್ದು... ಮಾತನಾಡುತ್ತ,

"ನಿಮ್ಮ ಬಗ್ಗೆ ವಂದನಾಳು ತುಂಬನೇ ಹೇಳ್ತಾಳೆ... ಒಳ್ಳೆ ಕಲಿಸ್ತಿರಂತೆ."

"ಅರೇ, ಎಲ್ಲರೂ ಒಳ್ಳೆ ಕಲಿಸ್ತಾರಪ್ಪ..ಅಂತಹುದೇನೆ ನಾನೇನು ಮಾಡಿಲ್ಲ"

"ಅಲ್ಲ, ನೀವು ಬರೇ ಕಲಿಸುವುದು ಮಾತ್ರವಲ್ಲವಂತೆ.. ಏನೇನೋ ಒಳ್ಳೆ ಮಾತು ಸಹ ಹೇಳ್ತಿರಂತೆ.. ಅಲ್ಲದೆ ನೀವು ಹಾಗೆ ನಿಮ್ಮ ಜೀವನ ಸಹ ನಡೆಸುವುದಂತೆ... "
ಕೇಳಿ ದಂಗಾದೆ. 
ಅಲ್ಲ, ಅದೇನೋ ಹೌದು.. ನಾನು ಇವರೆಲ್ಲರಿಗಿಂತ ಭಿನ್ನವಾದ ಜೀವನ ನಡೆಸುತ್ತೇನೆ..  ಆದರೆ ಅದರ ಬಗ್ಗೆ ಪ್ರಚಾರಮಾಡೊಲ್ಲ.. ಬಹುಶಃ ನನ್ನಲ್ಲಿ ಬರುವ ಮಕ್ಕಳು ಎಲ್ಲ ಮನೆಗೆ ಹೇಳಿರ್ಬೇಕೇನೋ...." 
ನನ್ನ ಮುಖದಲ್ಲಿ ತೃಪ್ತಿಯ ಮಂದಹಾಸ! 

28 November, 2012

ಹೀಗೆ.......ಮನದ ಪುಟದಲ್ಲಿ ಕಾಣಿಸಿದ್ದು!


 ಮನದೊಳು ಮೂಡಿ ಬರುವ ಭಾವಗಳ
ನಿಯಂತ್ರಣದಲ್ಲಿ ಇಡುವುದು ಕಷ್ಟಸಾಧ್ಯ

***********      **********


ವಿಧಿ ಎಂದೂ ನಮ್ಮ ಹೃದಯದ ಭಾವದ
ಬಿಸಿಗೆ ಕರಗುವುದೂ ಇಲ್ಲ, ಬಾಗುವುದೂ ಇಲ್ಲ

ಗೆಳತಿ, .ಒಂದಿಷ್ಟು ಹಗುರವಾಗಲೆನೆ......!!! (ಕತೆ)



ಗೆಳತಿ,
         ಅವನು ನನ್ನೂರಿಗೆ ಬರುವನೆಂದು ಕೇಳಿದಾಗ ಒಂದು ಕ್ಷಣ ಆನಂದನೂ ಆತಂಕವೂ ಒಟ್ಟಿಗೊಟ್ಟಿಗೆ ನನ್ನೊಳಗೆ ಕಾಣಿಸಿಕೊಂಡವು. ಮೊದಲ ಭೇಟಿ ನಮ್ಮದು... ಹೇಗಿರಬಹುದು! ಇಷ್ಟು ದಿನದ ನಮ್ಮ ನಿರೀಕ್ಷೆಗಳನ್ನು, ನಮ್ಮಿಬ್ಬರ ಭಾವಗಳನ್ನು ನಿರೂಪಿಸುವ ಅಮೃತ ಘಳಿಗೆ ಅದು. ದೂರವಿದ್ದೇ ಒಬ್ಬರ ಆತ್ಮದಲ್ಲಿ ಮತ್ತೊಬ್ಬರ ಆತ್ಮವನ್ನು ಪ್ರತಿಷ್ಠೆ ಮಾಡಿದ್ದೆವು.

        ಕವಿಗಳು, ಸಾಹಿತಿಗಳು ಬರೆದಂತೆ ನಾನೇ ನೀನು, ನೀನೇ ನಾನು ಎಂದೇ ಹೇಳಿಕೊಂಡಿದ್ದೆವು. ಕಲ್ಪನಾ ಲೋಕದಲ್ಲಿ ನಾವು ಹಕ್ಕಿಗಳಂತೆ ಹಾರಾಡಿಕೊಂಡಿದ್ದೆವು. ಈಗ ನಿಜ ಲೋಕದಲ್ಲಿ ನಮ್ಮ ಭೇಟಿ ನಡೆಯುವುದಿದೆ. ಹೇಗೆ, ಏನು... ಎಷ್ಟೆಲ್ಲಾ ಆತಂಕ, ಗಾಬರಿ ಜೊತೆಗೆ ಪುಳಕ! ಎದೆಯ ಬಡಿತ ನಿತ್ಯಕ್ಕಿಂತ ಹೆಚ್ಚು ಸಕ್ರಿಯವಾದವು!     

        ಕ್ಷಣ ಗಣನೆ ಆರಂಭವಾಯಿತು! ಅವನಿಗೋಸ್ಕರ ಮಾಡಿ ಬಡಿಸುವ ತಿಂಡಿ, ಪದಾರ್ಥಗಳ ಪಟ್ಟಿ ಮಾಡುತ್ತಾ ಹೋದೆನು. ಅಷ್ಟೊಂದು ನಾನು ಒಂದೇ ದಿನದಲ್ಲಿ ತಯಾರಿಸಬಲ್ಲೆನೆ ಅಥವಾ ಅವನಾದರೂ ಆದನ್ನೆಲ್ಲ ಒಂದೇ ಘಳಿಗೆಯಲ್ಲಿ ತಿನ್ನಲು ಸಾಧ್ಯವೇ, ಇವೆಲ್ಲ ಆಲೋಚನೆ ಆಗ ಮೂಡಲೇ ಇಲ್ಲ. ಈಗ ನೆನಪಾದರೆ ನಗು ಬರುತ್ತದೆ. ಎಷ್ಟೊಂದು ದೊಡ್ಡ ಮೂರ್ಖಿಯೇ ನಾನು ಗೆಳತಿ! ಅಂತರಂಗದ ಸಖಿಯಾದ ನಿನಗೂ ಈ ಮಾತು ಹೇಳದೆ ಗೌಪ್ಯವಾಗಿ ಇಟ್ಟೆ; ನಮ್ಮಿಬ್ಬರ ಭೇಟಿಯ ಮೇಲೆ ಯಾರ ಕಣ್ಣು ಬಿದ್ದು ಹಾಳಾಗಬಾರದೆಂದು!
       
        ಆದರೆ ಬರುತ್ತೇನೆಂದು ಹೇಳಿದವನು ಬರಲೇ ಇಲ್ಲ. ಕೇಳಿದರೆ ಅದೇನೋ ಕಾರಣದಿಂದ ಬರುವ  ದಿನವನ್ನು ಮುಂದೂಡಿದೆನೆಂದನು. ಇರಲಿ, ನಿಗದಿಯಾದ ದಿನದಂದು ನೋಡಲು ಸಾಧ್ಯವಾಗದಿದ್ದರೇನಂತೆ ಹೇಳಿದನಲ್ಲವೆ ತಾನು ಬರುವೆನೆಂದು. ನನ್ನ ಆತ್ಮಕ್ಕೆ ಸಾಂತ್ವನವಿತ್ತೆನಾದರೂ ಅದೇಕೋ ಬಲಕಣ್ಣು ಅದುರಿ ಅಪಶಕುನದ ಸೂಚನೆಯಿತ್ತಿತು. ಎಂದೂ ಇಂತಹ ಮೂಢನಂಬಿಕೆಗಳ ನಂಬದ ನಾನು ಅದೇಕೋ ಆ ದಿನ ಒಂದಿಷ್ಟು ಅಧೀರಳಾದೆ. 
   
           ಅವನು ಬರುವೆನೆಂದು ಹೇಳಿದ ಹಿಂದಿನ ದಿನ, ಸುದ್ದಿಯೇ ಇಲ್ಲ... ಆಲೋಚನೆ ಮಾಡಿ ಮಾಡಿ ತಲೆ ಕೆಟ್ಟು ಹೋಯಿತು. ಹೊತ್ತು ಮೀರಿ ಸಂದೇಶ ಬಂದಿತು-
 "ಬರಲು ಸಾಧ್ಯವಾಗುವುದಿಲ್ಲ"

         ಕಣ್ಣಲ್ಲಿನ ಸಾಗರ ಉಕ್ಕೇರಿತು! ನಾನೂ ತಡೆಯಲೆತ್ನಿಸಲಿಲ್ಲ. ಎಲ್ಲೋ ಒಳಗೆ ಸಂದೇಹವಿತ್ತಾದರೂ ಆಸೆ ಇತ್ತು, ಬಂದೇ ಬರುವನೆಂದು, ಕಾದಿರುವ ಈ ಸಖಿಯ ಓಲೈಸುವನೆಂದು. ಹ್ಞೂಂ... ವಿಧಿಯು ಬಿಡಲೇ ಇಲ್ಲ! ಎಂದಿನಂತೆ  ನನ್ನನ್ನು  ನಿರಾಸೆಯ ಮಡಿಲಲ್ಲಿ ನೂಕಿ ತಾನಂದಪಟ್ಟಿತು! 

        ಬೇಡವೇ, ನೀನೂ ಅಪಹಾಸ್ಯದ ನಗೆಯ ತೋರಬೇಡವೇ! ನಿನ್ನಲ್ಲೂ ಗುಟ್ಟಾಗಿಟ್ಟು ಈಗೇಕೆ ಹೇಳುವಿ ಅನ್ನಬೇಡವೆ! ನಿನ್ನನ್ನು ಬಿಟ್ಟು  ನನ್ನ ಮನಸ್ಥಿತಿಯ ಬಗ್ಗೆ ಮತ್ತ್ಯಾರಿಗೆ ಗೊತ್ತು. ಎಲ್ಲವೂ ತಿಳಿದ ನೀನೂ ನನ್ನಡೆ ಈ ರೀತಿಯ ಕೊಂಕು ನೋಟವ ತೂರಬೇಡವೆ. ಒಮ್ಮೆ ನಿನ್ನ ಮಡಿಲಲ್ಲಿ  ಮಲಗಿ ಅಳಲೆ ಗೆಳತಿ, ಒಂದಿಷ್ಟು ಹಗುರವಾಗಲೆನೆ...!

ವಲ್ವಲ್(ಅಡುಗೆ)



               ತೆಂಗಿನಕಾಯಿಯ ರಸದಿಂದ ಮಾಡುವ ಈ ಪದಾರ್ಥ ಹೆಚ್ಚು ಖಾರವಿರುವುದಿಲ್ಲ. ಬಹಳಷ್ಟು ತರಕಾರಿಗಳನ್ನು ಬಳಸುವುದರಿಂದಲೂ, ತುಪ್ಪದಲ್ಲಿ ಜೀರಿಗೆ ಮತ್ತು ಸಾಸಿವೆ ಒಗ್ಗರಣೆ ಕೊಡುವುದರಿಂದಲೂ  ಆರೋಗ್ಯಕ್ಕೂ ಒಳ್ಳೆಯದು.  ಕೆಲವರಿಗೆ ತೆಂಗಿನಕಾಯಿಯ ಹಾಲಿನಿಂದ ಸ್ವಲ್ಪ ಅಮಲು ಬರುವುದೆಂದು ಕೇಳಿದ್ದೇನೆ. ನನಗೂ ನನ್ನ ಮಕ್ಕಳಿಗೂ ಆ ಅನುಭವ ಸಿಕ್ಕಿಲ್ಲ. 


ಸಾಮಾಗ್ರಿಗಳು

ತೆಂಗಿನಕಾಯಿ-೧
ತರಕಾರಿ- ಕುಂಬಳ ಕಾಯಿ, ಚೀನಿಕಾಯಿ, ಅಲಸಂಡೆ, ಗೆಣಸು...ಇತ್ಯಾದಿ
ಹಸಿರು ಮೆಣಸಿನಕಾಯಿ- ೩,೪
ಅಲಂಕಾರಕ್ಕೆ ಮತ್ತು ರುಚಿಗೆ- ದ್ರಾಕ್ಷೆ ಮತ್ತು ಗೇರು ಬೀಜ
ಕರಿಬೇವು- ೬,೭ ಎಲೆ
ಜೀರಿಗೆ- ೧/೨ ಚಮಚ
ತುಪ್ಪ- ೨ಚಮಚ




ತೆಂಗಿನಕಾಯಿ ತುರಿದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಹಾಲನ್ನು ಹಿಂಡಿ ತೆಗೆಯಿರಿ. ಈ ದಪ್ಪ ಹಾಲನ್ನು ದೊಡ್ಡ ಪಾತ್ರೆಯಲ್ಲಿ ಹಾಕಿರಿ.  ಈಗ ಮತ್ತೊಮ್ಮೆ ಪಾತ್ರೆಗೆ ನೀರನ್ನು ಹಾಕಿ ಬಟ್ಟೆಯಲ್ಲಿದ್ದ ರುಬ್ಬಿದ ತೆಂಗಿನ ತುರಿಯನ್ನು ಮತ್ತೊಮ್ಮೆ ಅದ್ದಿ ಹಿಂಡಿರಿ. ಆ ತೆಳು ನೀರನ್ನು ಹಾಗೆ ಕಾದಿರಿಸಿ. 
ತರಕಾರಿಗಳನೆಲ್ಲ ಉಪ್ಪುನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ದೊಡ್ಡ ದೊಡ್ಡ ಹೋಳುಗಳನ್ನಾಗಿ ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ.  ಈ ಹೋಳುಗಳನ್ನು ದಪ್ಪ ತೆಂಗಿನ ಕಾಯಿಯ ಹಾಲಿನಲ್ಲಿ ಹಾಕಿ ಕುದಿಯಲು ಗ್ಯಾಸಿನ ಮೇಲೆ ಇಡಿರಿ. ಹಸಿರು ಮೆಣಸಿನಕಾಯಿಯನ್ನು ಅಡ್ಡ ಸೀಳಿ ಅದರಲ್ಲಿ ಸೇರಿಸಿ. ರುಚಿಗೆ ತಕ್ಕಷ್ಟು ತಕ್ಕಷ್ಟೇ ಉಪ್ಪು, ಸಕ್ಕರೆ ಹಾಕಿ.  ತೆಳ್ಳನೆಯ ಹಾಲಿಗೆ ಕೋರ್ನ್ ಫೋರ್ಲ್ ಅಥವಾ ಮೈದಾ ( ೪ ಚಮಚ) ಹಾಕಿ ಚೆನ್ನಾಗಿ ಗುಳಿ ಬರದ ಹಾಗೆ ಕಲಸಿ. ನಂತರ ಇದನ್ನು ಕುದಿ ಬರುತ್ತಿರುವ ಪದಾರ್ಥಕ್ಕೆ ಸೇರಿಸಿ. ದಪ್ಪವಾಗಿ ಬರುತ್ತಿದ್ದ ಹಾಗೆ ಗ್ಯಾಸನ್ನು ಆಫ್ ಮಾಡಿ. ಗೇರುಬೀಜ ಮತ್ತು ದ್ರಾಕ್ಷೆ ಹಣ್ಣನ್ನು ಸೇರಿಸಿ. ಈಗ ಸಣ್ಣ ಕಾವಲಿಯಲ್ಲಿ ತುಪ್ಪ ಬಿಸಿ ಮಾಡಲು ಇಡಿರಿ. ಸಾಸಿವೆ ಹಾಕಿ. ಅದು ಸಿಡಿಯುತ್ತಿರುವಾಗ ಜೀರಿಗೆ, ಕರಿಬೇವು ಸೇರಿಸಿ. ಸೌಟಿನಿಂದ ಒಮ್ಮೆ ಆಚೆ ಈಚೆ ಮಾಡಿ ಒಗ್ಗರಣೆಯನ್ನು ಪದಾರ್ಥಕ್ಕೆ ಹಾಕಿ ಬಿಡಿ. 

23 November, 2012

ಕುಂಬಳ ಕಾಯಿಯ ಹಲ್ವ( ಕಾಶಿ ಹಲ್ವ)




    ಸೆಮಿಸ್ಟರ್ ಪರೀಕ್ಷೆಯ ತಯಾರಿಗಾಗಿ ಮಗ ಮನೆಗೆ ಬಂದಿದ್ದಾನೆ.  ಅವನಿಲ್ಲದಿದ್ದಾಗ ಸ್ಪೆಷಲ್ ತಿಂಡಿ ಮಾಡಲು ಮನಸ್ಸಿರುವುದೇ ಇಲ್ಲ. ಮೊನ್ನೆ ದೀಪಾವಳಿಗೂ ಅವನಿರಲಿಲ್ಲ. ಈಗ ಏನಾದರೂ ಮಾಡಿ ಕೊಡಬೇಕೆಂದು ೩,೪ ದಿನದಿಂದ ಯೋಚನೆ ಮಾಡುತ್ತಿದ್ದೆ...ಆದರೆ ಏನು ಮಾಡಲಿ, ಕಾಲೇಜು, ಮನೆಪಾಠ, ಮನೆ ಕೆಲಸ ಇವುಗಳ ಮಧ್ಯೆ ಬಿಡುವು ಇಲ್ಲ.. ದಿನವಿಡೀ ದುಡಿತದಿಂದ ಆಯಾಸನೂ ಆಗುತ್ತದೆ.. ಹುಡುಗ ಇನ್ನೊಂದು ವರ್ಷ ಕೆಲಸಕ್ಕೆ ಅಂತ ಪರಊರಿಗೆ ಹೋಗುತ್ತಾನೆ..ಹಾಗಾಗಿ ನನ್ನೆಲ್ಲ ನೆವನಗಳನ್ನು ಬದಿಗಿಟ್ಟು ಏನಾದರೂ ಮಾಡಬೇಕೆಂದು ನಿನ್ನೆ ನಿರ್ಧರಿಸಿದೆ. ಕಾಲೇಜಿನಿಂದ ಬರುತ್ತಿರುವಾಗ ಮಾರ್ಗದ ಬದಿಯಲ್ಲಿ ಬೂದುಗುಂಬಳ ಕಾಯಿ ಮಾರಾಟಕ್ಕೆ ಇಟ್ಟುದನ್ನು ನೋಡಿ ಕೊಂಡೆ. ಇವತ್ತು ಅದರ ಸಾಂಬಾರ್ ಮಾಡಿದೆ.... ಹಾಗೆ ಹಲ್ವನೂ ಮಾಡಿದೆ.

  ಸಾಮಾಗ್ರಿಗಳು
 ೧/೨ ಕಿಲೊ ಕುಂಬಳ ಕಾಯಿ ಕಾಯಿ
 ೨ ಕಪ್ ಸಕ್ಕರೆ
 ೧ ಕಪ್ ತುಪ್ಪ
 ೧/೨ ಚಮಚ ಕೇಸರಿ
 ೪,೫ ಏಲಕ್ಕಿ
 ೮,೧೦ ಒಣಗಿದ ದ್ರಾಕ್ಷೆ ಹಣ್ಣು
 ೮,೧೦ ಗೇರುಬೀಜದ ತುಂಡುಗಳು













ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದುಬೀಜ, ತಿರುಳನ್ನು ಬೇರ್ಪಡಿಸಿ, ಸಣ್ಣ ಸಣ್ಣ ಹೋಳಾಗಿ ತುಂಡು ಮಾಡಿ ಇಡಿ.  ನಂತರ ತುರಿಯುವ ಮಣೆಯಲ್ಲಿ ತುರಿಯಿರಿ. ಹೀಗೆ ತುರಿದು ಮುಗಿಸಿದಾಗ ಕುಂಬಳಕಾಯಿ ಬಹಳಷ್ಟು ನೀರು ಬಿಡುತ್ತದೆ. ಸ್ವಲ್ಪ ಹಿಂಡಿ ತೆಗೆದು ಪ್ರೆಶರ್ ಕುಕ್ಕರಿನಲ್ಲಿ ಒಂದು ೫ ನಿಮಿಷ ಬೇಯಿಸಿ. ಅದು ಬೇಯುತ್ತಿರುವಾಗಲೇ ಅರ್ಧ ಕಪ್ ನೀರಿನಲ್ಲಿ ಸಕ್ಕರೆ ಕುದಿಯಲು ಇಡಿರಿ. ಅದು ಚೆನ್ನಾಗಿ ಕುದಿ ಬಂದು ಪಾಕವಾಗುವ ತನಕ ಹಾಗೆ ಇರಲಿ. ನಂತರ ಬೇಯಿಸಿದ ಕುಂಬಳ ಕಾಯಿಯ ತುರಿಯನ್ನು ಈ ಸಕ್ಕರೆ ಪಾಕದಲ್ಲಿ ಹಾಕಿ. ಕುಂಬಳ ಕಾಯಿ ಬೇಯಿಸಿದಾಗಲೂ ನೀರು ಬಿಡುವುದರಿಂದ ಅದನ್ನು ಸಕ್ಕರೆ ಪಾಕದಲ್ಲಿ ಹಾಕುವಾಗ ಆದಷ್ಟು ಹಿಂಡಿ ಹಾಕಿ. ಹೀಗೆ ಮಾಡಿದರೆ ಒಂದಷ್ಟು ಗ್ಯಾಸಿನ ಉಳಿತಾಯವಾಗುತ್ತದೆ.  ಒಂದರ್ಧ ಗಂಟೆ ಬೇಯಿಸಿದ ನಂತರ ತುಪ್ಪ ಸೇರಿಸಿ ಕೆದಕಿರಿ. ಕೇಸರಿಯನ್ನು ನೀರಿನಲ್ಲಿ ಕರಗಿಸಿ ಸೇರಿಸಿ. ದಪ್ಪವಾಗುತ್ತ ಬಂದಿದೆ ಎಂದೆನಿಸಿದಾಗ ಹುಡಿ ಮಾಡಿದ ಏಲಕ್ಕಿ ಸೇರಿಸಿ ಗ್ಯಾಸ್ ಆಫ್ ಮಾಡಿಬಿಡಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಬೀಜ  ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇರಿಸಿ.

20 November, 2012

ಕೊಟ್ಟೆ, ಏನು ನಿನ್ನಯ ಮಹಿಮೆ! (ಕಥೆ)

      

         "ಸುಮತಿ, ನಿನಗೆ ಕೊಟ್ಟೆ ಮಾಡಲು ಬರ್ತದಂತಲ್ಲ, ಕೇಳಿ ತುಂಬಾ ಖುಷಿಯಾಯ್ತು."  ಸುಮತಿಗೆ ಈ ವಯಸ್ಸಾದ ಹೆಂಗಸು ಯಾರೆಂದೂ, ಆಕೆ ಏನನ್ನುತ್ತಿದ್ದಾರೆಂದು ಏನೂ ಅರ್ಥ ಆಗಲಿಲ್ಲ. ಸುಮತಿಯ ಮುಖದಲ್ಲಿ ಮೂಡಿದ ಪ್ರಶ್ನೆಗಳನ್ನು ನೋಡಿ ಆ ಹೆಂಗಸು ತನ್ನ ಪರಿಚಯ ಮಾಡಿಕೊಟ್ಟರು. " ನಿಮ್ಮ ಮನೆಯ ಹತ್ತಿರವೇ ನಮ್ಮ ಮನೆ...ಹಾಗೆ ನೋಡಿದರೆ ಅದು ನಿಮ್ಮ ಮನೆನೇ. ನಮ್ಮ ಯಜಮಾನರು ನಿಮ್ಮ ಮಾವನಿಗೆ ಸಂಬಂಧಿ ಹಾಗೂ ನಿಮ್ಮ ಮಿಲ್ಲಿನಲ್ಲಿ ರೈಟರು. ನಿನ್ನ ಅತ್ತೆ ನನ್ನ ಕೈಯಲ್ಲೇ ಕೊಟ್ಟೆ ಮಾಡಿಸುತ್ತಿದ್ದರು. ಮೊನ್ನೆ ಸಿಕ್ಕಿದಾಗ ಇನ್ನು ನನ್ನ ಹೊಸ ಸೊಸೆಗೆ ಕೊಟ್ಟೆ ಮಾಡಲು ಬರುವುದರಿಂದ ಇನ್ನು ಮುಂದೆ ಅವಳೆ ಮಾಡ್ತಾಳೆ "ಅಂದರು.  ಅವರ ಮುಖದಲ್ಲಿ ಸಂತೋಷ ಎದ್ದು ತೋರುತಿತ್ತು....
     
         ಸುಮತಿಗೆ ಇದೆಲ್ಲ ಏನು ಅಂತ ಅರ್ಥವಾಗಲು ಹೆಚ್ಚು ಸಮಯ ತಾಗಲಿಲ್ಲ. ಎರಡೇ ದಿನಗಳೊಳಗೆ ಅತ್ತೆ ಕೊಟ್ಟೆಗೆ ಬೇಕಾದ ಉದ್ದು, ಅಕ್ಕಿ ನೀರಿಗೆ ಹಾಕುವಾಗಲೇ ಪುತ್ತುವಿನ ಕೈಯಲ್ಲಿ ಹಲಸಿನ ಮರದ ಗೆಲ್ಲುಗಳನ್ನು ಬಚ್ಚಲು ಕೋಣೆಯ ಬಳಿ ತಂದು ಹಾಕಲು ಹೇಳಿದನ್ನು ಸುಮತಿ ಕೇಳಿದ್ದಳು. ವಿದೇಯ ಪುತ್ತು ಕೆಲವೇ ನಿಮಿಷಗಳಲ್ಲಿ ದೊಡ್ಡ ದೊಡ್ಡ ಗೆಲ್ಲುಗಳನ್ನು ತಂದು ಹಾಕಿ, "ಅಮ್ಮ" ಅಂತ ಕರೆದುದು ಕಿವಿಗೆ ಬಿತ್ತು....ಅದೇಕೋ ಸುಮತಿಗೆ ಎರಡು ದಿನದ ಹಿಂದೆ ಸಿಕ್ಕಿದ ಆ ಮುತ್ತೈದೆಯ ನೆನಪು ಮನಪಟಲದಲ್ಲಿ ತೇಲಿ ಬಂದಿತು..."ಸುಮತೀ..." ಕರೆ ಬರಲು ಹೊತ್ತಾಗಲಿಲ್ಲ. ಕೈಯಲ್ಲಿ ಹಳೆ ರೀಡರ್ ಡೈಜೆಸ್ಟ್ ಹಿಡಿದು ಮಂಚದ ಮೇಲೆ ಕುಳಿತಿದ್ದ ಸುಮತಿ ಎದ್ದು," ಅತ್ತೇ... ಕರೆದಿರಾ?"  ಅಂದಳು. "ನಿನಗೆ ಕೊಟ್ಟೆ  ಮಾಡಲು ಬರ್ತದಂತಲ್ಲ, ನಿನ್ನ ಅಮ್ಮ ಇಲ್ಲಿಗೆ ಬಂದಾಗ ನನ್ನ ಮಗಳಿಗೆ ಅಡಿಗೆ ಮಾಡಲು ಬರುವುದಿಲ್ಲವಾದರೂ ಬಾಕಿ ಹೊರಗಿನ ಒಳಗಿನ ಕೆಲಸದಲ್ಲಿ ತುಂಬಾ ಜಾಣೆ ಎಂದಿದ್ದರು. ಯಾವಾಗಲು ನಮ್ಮ ರೈಟರ್  ಹೆಂಡತಿ ಮಾಡಿಕೊಡ್ತಿದ್ದಳು. ಇನ್ನು ಮುಂದೆ ನೀನೇ ಕೊಟ್ಟೆ ಮಾಡು" ಅಂದರು ಸುಮತಿಯ ಅತ್ತೆ ದರ್ಪದ ದನಿಯಲ್ಲಿ. ’ಅಷ್ಟೆ ತಾನೆ, ಕೊಟ್ಟೆ  ಏನು ಮಹಾ’ ಅಂದುಕೊಂಡು ಸುಮತಿ ಹಿಡಿಸೂಡಿ ಕಡ್ಡಿಗಳನ್ನು ತೆಗೆದುಕೊಂಡು ಹಿಂದೆ ಹೋದಳು. ದೊಡ್ಡ ದೊಡ್ಡ ಎಲೆಗಳನ್ನು ಆರಿಸಿ, ಪತ್ರಾವಳಿಗಳನ್ನು ಮಾಡಿಟ್ಟಳು. ಮಧ್ಯೆ ಎರಡು ಮೂರು ಸಾರಿ ಅತ್ತೆಯ ಸವಾರಿ ಇನ್ಸಪೆಕ್ಷನ್ ಮಾಡಲು ಬಂದಿತ್ತು. ೩೦ ಚಿಲ್ಲರೆ ಪತ್ರಾವಳಿ ಮಾಡಿ ಕೊಟ್ಟೆ  ಮಾಡಲು ಶುರುಮಾಡಿದಳು.  ಒಂಟಿಯಾಗಿ ಕುಳಿತು ಮಾಡುತ್ತಿರುವಾಗ ಅಮ್ಮನ ಮತ್ತು ಮನೆಯ ನೆನಪು ಬಂದು ಕಣ್ಣಾಲಿಗಳು ತುಂಬಿ ಬಂದಿದ್ದವು. ಇದೇ ಮೊದಲಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಒಬ್ಬಳೆ ಮಾಡುವುದು ಸುಮತಿ...ಅಮ್ಮನ ಮನೆಯಲ್ಲಿ ಅವಳು, ಅಮ್ಮ, ಚಿಕ್ಕಮ್ಮ, ಅಜ್ಜಿ....ಕೆಲವೊಮ್ಮೆ ಅಕ್ಕಂದಿರು( ಅಪ್ಪನ ಅಕ್ಕ, ತಂಗಿಯರು) ಹೀಗೆ ಎಲ್ಲರೂ ಕೂಡಿ ಮಾಡುತ್ತಿದ್ದರು. ಹೆಚ್ಚೆಂದರೆ ೫,೮ ಕೊಟ್ಟೆ  ಸುಮತಿಯ ಕೈಯಲ್ಲಿ ತಯಾರಾಗುತಿತ್ತು. ಬೆನ್ನಲ್ಲಿ ಹೊಗೆ ಬರಲು ಪ್ರಾರಂಭವಾಯಿತು....ಈಗಾಗಲೇ ೨ಗಂಟೆಗೂ ಮೀರಿ ಹೆಚ್ಚು ಹೊತ್ತು ಕಳೆದಿತ್ತು. ಸರಿ. ಕೊನೆಗೂ ಮುಗಿಯಿತು ಎಂದು ಸುಮತಿ ಅಂದುಕೊಂಡು ಏಳಲು ಯತ್ನಿಸುತ್ತಿರುವಾಗಲೇ ಅತ್ತೆ ಮತ್ತು ಅವಳ ಓರಗಿತ್ತಿ ಅಲ್ಲಿಗೆ ಬಂದರು. ಸುಮತಿಯ ಓರಗಿತ್ತಿ ಬಂದವಳೇ ಕೊಟ್ಟೆಗಳನ್ನು ಲೆಕ್ಕಮಾಡಲು ಕುಳಿತಳು. ಅತ್ತೆ ಏನೋ ಮಣಮಣ ಅನ್ನುತ್ತಿದ್ದರು. "ಅತ್ತೆ, ಬರೇ ೩೪ ಅಷ್ಟೇ" ಅಕ್ಕನ ಬಾಯಿಯಿಂದ ಬರೇ ಅಂತ ಕೇಳಿ ಸುಮತಿಗೆ ಮಿಂಚು ಹೊಡೆದಂತಾಯಿತು. "ಇದು ಸಾಕಾಗೊಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಾಡು. ಕಡಿಮೆ ಪಕ್ಷ ೫೦ ಆದರೂ ಬೇಕು. ನಾಳೆ ಹಿಟ್ಟು ಹಾಕುವಾಗ ಸಾಕಾಗದಿದ್ದರೆ ಮತ್ತೆ ಮಾಡಿಕೊಡು." ಒಂಚೂರು ದಯೆ ದಾಕ್ಷಿಣ್ಯವಿಲ್ಲದೆ ಅತ್ತೆಯ ಬಾಯಿಯಿಂದ ಮಾತುಗಳು ಉದುರಿತು. 

         ತನ್ನ ಕತೆ ಮುಗಿಯಲು ಹೆಚ್ಚು ಹೊತ್ತು ಬೇಕಾಗಿಲ್ಲ ಇನ್ನು ಅಂತ ಸುಮತಿಗೆ ಅನಿಸಿತು. ಏನೇ ಆದರು ಇನ್ನು ಅಲ್ಲಿ ಕೂರುವುದು ಅವಳಿಗೆ ಸಾಧ್ಯವಾಗಲಿಲ್ಲ. ಸೀದ ಎದ್ದು ತನ್ನ ಕೋಣೆಗೆ ಬಂದವಳೇ ಮಂಚದ ಮೇಲೆ ಬೋರಲಾಗಿ ಬಿದ್ದಳು. ಅವಳಿಗೆ ಅರಿವಿಲ್ಲದೆ ಕಣ್ಣಿನಿಂದ ಹನಿಗಳು ಹೊರನುಗ್ಗಿದವು. ಮೊದಲಬಾರಿಗೆ ಅಮ್ಮನ ಮೇಲೆ ಕೆಂಡದಂತ ಕೋಪ ಬಂದಿತು. ’ಬಡವನ ಕೋಪ ದವಡೆಗೆ ಮೂಲ’  ಏನೇ ಆದರು ತಾನು ಕೊಟ್ಟೆ ಮಾಡುವುದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದನ್ನು ಕೂಡಲೇ ಅರಿತಳು. ತನ್ನ ಪ್ರಿಯ ದೇವರ ನಾಮ ಸ್ಮರಣೆ ಮಾಡಿ ಒಂದಿಷ್ಟು ಶಕ್ತಿ, ಧೈರ್ಯವನ್ನು ಪಡೆದು ಅಲ್ಲಿಂದ ಎದ್ದು ಮುಖವನ್ನು ತೊಳೆದು ಕೊಟ್ಟೆ ಮಾಡುವ ಕಾಯಕ ಮುಂದುವರಿಸಿದಳು. ಇವಳ ಮನದಲ್ಲಿದ್ದುದು ಅತ್ತೆಗೆ ಮತ್ತು ಓರಗಿತ್ತಿಗೆ ಅರಿವಾಗಿತ್ತು. ಅವರಿಬ್ಬರು ಏನೊ ಮಾತಾಡಿಕೊಂಡರು ಕಾಣುತ್ತದೆ. ಸ್ವಲ್ಪ ಹೊತ್ತಿಗೆ ಓರಗಿತ್ತಿ ಅಲ್ಲಿಗೆ ಬಂದು ಪತ್ರಾವಳಿ ಹೇಗೆ ಮಾಡುವುದೆಂದು ಕಲಿಸಲು ಹೇಳಿದಳು. ಹೀಗೆ ಇಬ್ಬರು ಕೂಡಿ ೫೦ ಚಿಲ್ಲರೆಯಷ್ಟು ಮಾಡಿ ಮುಗಿಸುವಾಗ ರಾತ್ರಿ ೮.೩೦ ಕಳೆದಿತ್ತು.  ಪತಿ ಮತ್ತು ಮೈದುನರ ಸವಾರಿ ಅಂಗಡಿಯಿಂದ ಬಂದು ಟಿ. ವಿಯೆದರು ವಕ್ಕರಿಸಿತ್ತು. ಕೈತೊಳೆದು ಬಂದವಳಿಗೆ ಆರ್ಡರ್..೪ ಕಪ್ ಚಾ!  ಓರಗಿತ್ತಿ ತನ್ನ ಮಗುವಿನ ಗದ್ದಲ ಕೇಳಿ ಆಚೆ ನಡೆದಿದ್ದಳು. ಸುಮತಿ ಮುಖ ಊದಿಸಿ ಅಡಿಗೆ ಕೋಣೆಗೆ ನಡೆದಿದ್ದಳು. ತನ್ನ ಮನೆಯಲ್ಲಿ ಇಷ್ಟು ಹೊತ್ತಿಗೆ ಅಮ್ಮ ರಾತ್ರಿ ಊಟಕ್ಕೆ ತಮ್ಮನ್ನು ಕರೆಯುತ್ತಿದ್ದಳು. ಇಲ್ಲಿ ಇದೆಂತ ವಿಚಿತ್ರ...ರಾತ್ರಿ ೯ಗಂಟೆಗೆ ಚಾ..ಊಟ ೧೦.೩೦, ೧೧ ಗಂಟೆಗೆ! ಬಹಳ ಕಷ್ಟವಾಗುತಿತ್ತು ಹೊಂದಿಕೊಳ್ಳಲು.  ಆದರೆ ಬೇರೆ ದಾರಿಯಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ!

       ಈಗ ಅವಳಿಗೆ ಅರ್ಥವಾಯಿತು; ಆ ಹೆಂಗಸಿನ ಮುಖದಲ್ಲಿ ಕಂಡ ಸಂತೋಷದ  ಕಾರಣ! ಕೊಟ್ಟೆ ಏನು ನಿನ್ನಯ ಮಹಿಮೆ! ಅವಳು ಬಚಾವಾದಳು, ನಾನು ಸಿಕ್ಕಿ ಬಿದ್ದೆ ಅಂತ ಸುಮತಿಯ ಮುಖದಲ್ಲಿ ಒಂದು ವ್ಯಂಗ ನಗೆ ಮೂಡಿತು.!

18 November, 2012

ನನ್ನ ಪಿಕಾಸು ರಚಿಸಿದ ಲೊಗೊ.....


ನನ್ನ ಪಿಕಾಸು ರಚಿಸಿದ ಲೊಗೊ.....ನನ್ನ ಮಗಳ ಮುಖಪುಟ ಸ್ನೇಹಿತ, ನಾನು ನನ್ನ ಫೇಸ್ ಬುಕ್‍ನಲ್ಲಿ ಹಾಕಿದ, ಪಿಕಾಸು ರಚಿಸಿದ ಗಣಕ ಚಿತ್ರಗಳನ್ನು ನೋಡಿ ಪ್ರಭಾವಿತನಾಗಿ ತನ್ನ ವೆಬ್ ಜಾಲದ ಉಪಹಾರ ಗೃಹಕ್ಕೆ ಒಂದು ಲೊಗೊ ರಚಿಸುವಂತೆ ಹೇಳಿದಾಗ ನನ್ನ ಮಗನಿಗೆ ಪರೀಕ್ಷೆ ಹೊತ್ತು..ಆದರೂ ತಯಾರಿಸಿದ..ಅದು ಅವರಿಗೆ ಮೆಚ್ಚುಗೆಯಾಗಿ ಅವನಿಗೆ ಅವನ ಮೊದಲ ಸಂಪಾದನೆ ಸಿಗುವುದರಲ್ಲಿದೆ..ಅಮ್ಮನಿಗೆ ಇದಕ್ಕಿಂತ ಮತ್ತೇನು ಬೇಕು!  ವರುಷಗಳ ತಪಸ್ಸಿನ  ಸಾರ್ಥಕ ಭಾವ!!!

    ಅವನು ಮೊದಲು ರಚಿಸಿದ ಚಿತ್ರ ಅವರಿಗೆ ಹಿಡಿಸಿತಾದರೂ ಅದನ್ನು ವೆಬ್ ಜಾಲಕ್ಕೆ ಉಪಯೋಗಿಸುವ ಹಾಗಿರಲಿಲ್ಲ..ನಂತರ ಮಾಡಿದ ಚಿತ್ರ ನಿಜಕ್ಕೂ ಸೂಪರ್ ಅಂದ್ರು!

14 November, 2012

ಅವಳ ಗೊಂದಲ- ಸಣ್ಣ ಕತೆ!


      ಬಹಳ ಸಮಯದ ನಂತರ ಅತ್ತೆ ಮನೆಗೆ ಅವಳ ಭೇಟಿ. ಮನೆಯಲ್ಲಿ ಮೈದುನನ ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸಿಲ್ಲ. ಎಲ್ಲರ ಮುಖದಲ್ಲಿ ಎಂದೂ ಕಾಣದ ನಿರಾಳತೆ.. ಅತ್ತೆಯ ಗೈರುಹಾಜರಿಯ ಪರಿವೆ ಯಾರಿಗೂ ಇದ್ದಂತೆ ಕಾಣಲಿಲ್ಲ. ಸಂಜೆ ಎಲ್ಲರೂ ಹಾಲಿನಲ್ಲಿ ಸೇರಿ ಟಿ ವಿಯಲ್ಲಿ ಏನೋ ನೋಡುತ್ತಿದ್ದಾರೆ.. ಮೈದುನ ತಯಾರಾಗಿ ಬಂದುದನ್ನು ನೋಡಿದಳು. ಅವಳ ಬಳಿಯಲ್ಲಿ ಕುಳಿತ್ತಿದ್ದ ತನ್ನ ಹೆಂಡತಿಯನ್ನು ಸನ್ನೆಯಲ್ಲೇ ಕರೆಯುತ್ತಿದ್ದಾನೆ. ಅವಳ ಓರಗಿತ್ತಿಯಾದರೋ ನಾಚಿಕೆ ಗೀಚಿಕೆ ತೋರ್ಪಡಿಸದೇ ಕೂಡಲೇ ಎದ್ದು ತಯಾರಾಗಲಿಕ್ಕೆ ಹೋದಳು. ಅವಳು ಬಿಟ್ಟಬಾಯಿ ಮುಚ್ಚದೇ ಅದನ್ನು ನೋಡುತ್ತ ೩ವರ್ಷದ ಹಿಂದಿನ ತನ್ನ ಮದುವೆಯ ದಿನಗಳ ಕಾಲಕ್ಕೆ ಹೋದಳು.... 
                       

         ಮದುವೆ ಆಗಿ ೩ ದಿನ ಕಳೆದಿದ್ದರೂ ಅವಳ ಕೈಯ ಮದರಂಗಿಯ ಬಣ್ಣ ಮಾಸಿರಲಿಲ್ಲ..ಬದಲು ಮತ್ತಷ್ಟು ಗಾಢವಾಗಿ ಎದ್ದು ಕಾಣುತಿತ್ತು..ಎಲ್ಲರೂ ರಂಗು ಗಾಢವಾದುದನ್ನು ನೋಡಿ ಇವಳನ್ನು ಛೇಡಿಸುತ್ತಿದ್ದರು. ಇವಳೊ ನಾಚಿಕೆಯ ನಟನೆಯನ್ನು ತೋರಿಸುತ್ತಿದ್ದಳು. ಸಂಜೆ ಸರಿಸುಮಾರು ೭ಗಂಟೆ.. ಅತ್ತೆ ಕೆಸುವಿನ ಎಲೆಗಳನ್ನು ತೊಳೆಯಲು ನವವಧುವಿಗೆ ಅಪ್ಪಣೆ ಕೊಟ್ಟಿದ್ದರು. ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ, ಮಿಣಿ ಮಿಣಿ ಮಿಂಚುವ ಜಿರೋ ವೊಲ್ಟ್ ಬಲ್ಬಿನ ಬೆಳಕಿನಲ್ಲಿ  ಭಾವರಹಿತಳಾಗಿ ತೊಳೆಯುತ್ತಿದ್ದ ಅವಳಿಗೆ,"ನಾನು ಹೊರಗೆ ಹೋಗಿ ಬರುತ್ತೇನೆ."  ಹೇಳಿದ್ದು ಕೇಳಿಸಿತು.. ತಲೆ ಎತ್ತಿ ನೋಡಿದಾಗ ಪತಿ ಹೊಸ ಧಿರಿಸುಗಳನ್ನು ಹಾಕಿ ಹೊರಹೋಗಲು ತಯಾರಾಗಿದ್ದಾನೆ. ಮನಸ್ಸಿಗೆ ಪಿಚ್ಚೆನಿಸಿತು. ಸುಮ್ಮನೆ ತಲೆ ಆಡಿಸಿದಳು.. ಮತ್ತೇನಾದರು ಹೇಳಲು ಸಾಧ್ಯವಿತ್ತಾ ಅವಳಿಗೆ!  

                        ಹತ್ತಿರ ಕುಳಿತ ಓರಗಿತ್ತಿಯ ಮಗ ಏನೋ ಕೇಳಿದಾಗ ಮತ್ತೆ ಈ ಲೋಕಕ್ಕೆ ಬಂದಳು. ಹುಂ, ಒಂದು ನಿಟ್ಟುಸಿರು ತಂತಾನೆ ಹೊರಬಂತು. ರಾತ್ರಿ ಅಡಿಗೆ ಕೋಣೆಯಲ್ಲಿ ಓರಗಿತ್ತಿಯನ್ನು ಯಾರೋ ಛೇಡಿಸುತ್ತಿದ್ದರು..ಅಣ್ಣನಿಗೆ ಬಾಟ್ಲಿ ತರಲು ಹೋಗುವಾಗ ಸಹ ಅತ್ತಿಗೆ ಜೊತೆಗೇ ಬೇಕು.. ಆಗ ಅವಳಿಗರ್ಥವಾಯಿತು.  ಸಂಜೆ ಮೈದುನನ ಸವಾರಿ ಹೋದದ್ದು ಎಲ್ಲಿಗೆ ಅಂತ. ಮತ್ತೆ ತಲೆಯಲ್ಲಿ ತಳಮಳ,"ಅಲ್ಲ ನಿನಗೂ ಸಹ ನಿನ್ನ ಪತಿ ಇದೇ ರೀತಿ ಬಾಟ್ಲಿ ತರಲು ಹೋಗುವಾಗ ಕರೆದಿದ್ದರೆ ಖುಷಿಯಾಗುತ್ತಿತ್ತಾ. ಅರೇ, ತನ್ನ ಪತಿಗೆ ಈ ಅಭ್ಯಾಸ ಇಲ್ಲದಿದುದರಿಂದ ತಾನೆ ಇಷ್ಟಾದರು ಆರಾಮವಾಗಿರುವುದು... ಇಲ್ಲ ಅಂದರೆ ತಾನು ಅವನ ಜೊತೆ ಇರುತ್ತಿದ್ದೆನಾ? ಬೇಡಪ್ಪಾ ಬೇಡ... ಅವನು ಹೇಗಿದ್ದಾನೋ ಹಾಗೆ ಇರಲಿ." ನೆನಪಿಗೆ ಬಂದ ದೇವರಿಗೆಲ್ಲಾ ಕೈ ಮುಗಿದು ಕಟೀಲು ಶ್ರೀ ದುರ್ಗಾಪರಮೇಶ್ವರಿಗೆ ಹೂಪೂಜೆಯ ಹರಕೆ ಹೊತ್ತಳು ಅವಳು!

13 November, 2012

ಮಗಳ ಘನಕಾರ್ಯ....

ಮಗಳ ಘನಕಾರ್ಯ....




 ಅದೇನೋ ನಿನ್ನೆ ಬೆಳಿಗ್ಗೆಯಿಂದ ಬಿಡಿಸುತ್ತಾ ಕೂತಿದ್ದಾಳೆ ನನ್ನ ಮಗಳು...ಅಪರೂಪವಾದ ಈ ನೋಟ....ಕೇಳಿದೆ ಮಗಳ ಬಳಿ....ಹುಂ, ಏನು ಚಿತ್ರ ಗಿತ್ರ...ಏನು ವಿಶೇಷ???? ನಿಧಾನವಾಗಿ ಬಾಯಿಬಿಟ್ಟಳು, ತನ್ನ ಸ್ನೇಹಿತನ ಜಾಲದಲ್ಲಿ ಹಾಕಲು ಚಿತ್ರ ಮಾಡ್ತಿದ್ದೇನೆ..ಕೇಳಿದ ತಪ್ಪಿಗೆ ಒಂದಿಷ್ಟು ಸಲಹೆನೂ ಉಚಿತವಾಗಿ ಕೊಡಬೇಕಾಯಿತು. ಸ್ಕಾನಿಂಗ್ ಕೆಲಸನೂ ಅಮ್ಮನಿಗೇ ಅಂಟಿಸಿದಳು...ಜೊತೆಗೆ ವಾರ್ನಿಂಗ್- ಫೇಸ್ ಬುಕ್ಕಿನಲ್ಲಿ ಹಾಕಿದರೆ ನೋಡು!!! ಹೋಗೆ ನಿಂಗೆ ಹೆದರ್ತೇನೆಯಾ ...ಆದರೂ ಹಾಕಲಿಕ್ಕೆ ಹೋಗಲಿಲ್ಲ...ನನ್ನ ಬ್ಲಾಗ್ ಇದೆಯಲ್ಲವಾ...ಅದರಲ್ಲಿ ಹಾಕ್ತೇನೆ...{ ನನ್ನ ಮಕ್ಕಳು ಏನು ಮಾಡಿದರು ನನಗದು ಘನಕಾರ್ಯನೇ...:-)}

 ಅಂದ ಹಾಗೆ ಈ Beat Beans....ಈ ಲೋಗೋ ಮಾಡಿದ್ದು ಕೂಡ ನನ್ನ ಮಗ ಪಿಕಾಸು!

ಇಲ್ಲಿ ವಿಶೇಷವೇನೆಂದರೆ ನೋಡಲು ಚಿತ್ರ ಕಡ್ಡಿ ಮನುಷ್ಯರಂತೆ ಕಂಡರೂ..ಇದೆಲ್ಲಾ ಕಾಪಿ ಮಾಡಿದಲ್ಲ..ಅವಳದೇ ಐಡಿಯಾ!!! ಅದು ನನಗೆ ಬಹಳ ಖುಶಿ ಕೊಟ್ಟಿತು.

12 November, 2012

ಸ್ವಗತ!


ಭಾವಜೀವಿ-ಕರೆಯುವರೆನ್ನನವರು
ನಗೆಬರುವುದೆನಗೆ ಏಕೆನ್ನುವಿರಾ
ವ್ಯತ್ಯಾಸವಿಷ್ಟೇ;
ಅವರು ಇಂದ್ರಿಯಗಳಿಂದ ಸ್ಪಂದಿಸುವವರಾದರೆ,
ನಾನು ಹೃದಯದಿಂದ...

**************************



ಎಲ್ಲೆಲ್ಲೋ ಹುಡುಕಾಡುತ್ತ ಅಲೆಯುತ್ತಿದ್ದೆನಲ್ಲ
ವ್ಯರ್ಥವಾಗಿ ಕಳೆದೆ ಅಮೂಲ್ಯ ಸಮಯವನ್ನೆಲ್ಲ
ಕೊನೆಗೂ ನೀನು ಸಿಕ್ಕಿದೆಯಲ್ಲ
ಎಲ್ಲಿ ಎಂದು ಕೇಳಿದೆಯಲ್ಲ
ಇಲ್ಲೇ ನನ್ನ ಮನದಲ್ಲೇ ಎಂದೆ ನಲ್ಲ!

********************************
ಒಲವೇ,

ನನ್ನೆದೆಯಲಿ ಚಿಗುರುವ 
ಭಾವಗಳಿಗೆ ಹನಿಯುಣಿಸುವನು ನೀನೇ
ನನ್ನಾತ್ಮದ ಒಡೆಯನು ನೀನೇ
ನಿನ್ನರಮನೆಯ ಬಾಗಿಲಲಿ ನಿಂತಿದವಳ 
ಮೇಲೆ ಕೃಪಾದೃಷ್ಟಿ ತೋರುವವನು ನೀನೇ
ನನ್ನೆಲ್ಲ ಭಾವಗಳಿಗೆ ಮಾರ್ದನಿಗೊಡುವವನು ನೀನೇ
ಇಷ್ಟೆಲ್ಲ ಆದರೂ, 
ಒಮ್ಮೊಮ್ಮೆ ಅದೇಕೆ ನಿನ್ನ ಕರೆಗೆ ಓಗೊಡುತ್ತಿಲ್ಲ ನಾನು?


ನಮ್ಮೆಲ್ಲರ ಬಾಳು ಬೆಳಗಲಿ!





ನಮ್ಮ ಮನೆ ಮನಗಳನ್ನು ಸದಾ ಬೆಳಗಲಿ 
ಸಾಲು ಸಾಲಾಗಿ ಹಚ್ಚಿಟ್ಟ ಹಣತೆಗಳು!
ಸುಖ, ಶಾಂತಿ, ಸಮೃದ್ಧಿಗಳ ಬದುಕು ನಮ್ಮೆಲ್ಲರದಾಗಲಿ! 
ಸವಿನಯದ ಪ್ರಾರ್ಥನೆ ಆ ಪರಮಾತ್ಮನಲಿ!


ಮಿತ್ರವೃಂದಕ್ಕೆಲ್ಲಾ ಬೆಳಕಿನ ಹಬ್ಬದ ಶುಭ ಹಾರೈಕೆಗಳು!

10 November, 2012

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!


             ರೂಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......
      
         ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ ಕುಣಿಯುವ ಶಬ್ದ, ಕಪ್ಪೆಗಳ ವಟರ್ ವಟರ್ ಗಾಯನ, ಗುನುಗು ಹಕ್ಕಿಯ ಗೊಣಗಾಟ, ಕೋಗಿಲೆಗಳ ಮಂದರಾಗ, ರಾಬಿನ್‍ಗಳ ಚಿಲಿಪಿಲಿ, ಬುಲ್ ಬುಲ್‍ಗಳ ಗುಣು ಗುಣು ಹಾಡು ಜೊತೆಗೆ ಮಂದವಾಗಿ ಬೀಸುವ ಮರುತನ ಮೌನ ತರಂಗಗಳ ಉದಯರಾಗಗಳು ನನ್ನನ್ನು ಕಚುಕುಳಿಯಿಡುತ್ತಾ ಎಬ್ಬಿಸುತ್ತವೆ.  ಈ  catalystಗಳು ನನ್ನ ನಿತ್ಯದ otherwise same old boring ಕೆಲಸಗಳಿಗೆ ಹೊಳಪನ್ನು ಕೊಡುತ್ತವೆ. ಬಿಸಿಲೇರುವ ಮೊದಲೇ ಮತ್ತೊಮ್ಮೆ ತೋಟದ ಗಿಡಗಳ ಜೊತೆ ಒಂದಿಷ್ಟು ಪಂಚಾದಿಕೆ( ನಮ್ಮ ಕೊಂಕಣಿಯಲ್ಲಿ ಸುಮ್ಮಸುಮ್ಮನೆ ಮಾತನಾಡುವುದಕ್ಕೆ ಹೀಗೆನ್ನುತ್ತಾರೆ) ನಡೆಸಿ, ಹೆಚ್ಚು ಕಡಿಮೆ ಪ್ರತಿದಿನ ಕಾಣಿಸುವ ಹೊಸ ಹೊಸ ಕೀಟ, ಜೇಡಗಳ ವೀಕ್ಷಣೆ, ಬೆಕ್ಕಿನ ಮರಿಯೊಡನೆ ತೊದಲಾಟ, ಚಿಟ್ಟೆಗಳ ಜೊತೆ ಒಂದಿಷ್ಟು ಹಾರಾಟ ( ಕೆಮರಾ ತೆಗೆದುಕೊಂಡು ಹಾರಾಟನೇ ಮಾಡಬೇಕಾಗುತ್ತೆ) ಇವೆಲ್ಲಾ ನಡೆಸಿದರೆ ಆ ದಿನದ ನೇಚರ್ ವಾಕ್ ಮುಗಿಯುತ್ತದೆ. 









ಮತ್ತೆ ನಾಲ್ಕು ಗೋಡೆಯೊಳಗೆ ಬದುಕು.. ಮಧ್ಯ ಮಧ್ಯದಲ್ಲಿ ಅಂತರ್ಜಾಲವೆಂಬ ಕಿಟಿಕಿಯಿಂದ ಪ್ರಪಂಚದ ಕಿರುನೋಟದ ವೀಕ್ಷಣೆ... ನೆವನದಲ್ಲಿ ಸಿಗುವ ಮಕ್ಕಳ ಒಡನಾಟ... ಆಗಾಗ ಕುಂಚ ರಂಗಿನಲ್ಲಿ ಅದ್ದಿ ಗೋಡೆಗಳ ಮೇಲೆ, ಕ್ಯಾನ್‍ವಾಸಿನ ಮೇಲೆ ಚೆಲ್ಲುವ ಆಟ ಪಾಠ! ಇಲ್ಲೆಲ್ಲಾ ನಾನು ರೂಮಿಯನ್ನು ನೋಡುತ್ತಿರುತ್ತೇನೆ. ಪ್ರಕೃತಿ ತೆರೆದುಕೊಳ್ಳುವ ವಿಸ್ಮಯಗಳನ್ನು ನೋಡಬೇಕಾದರೆ ನಮ್ಮ ಹೊರಕಣ್ಣಿನ ಜೊತೆ ಒಳಗಿನ ಕಣ್ಣನ್ನೂ ವಿಶಾಲವಾಗಿ ತೆರೆದಿರಿಸಬೇಕು. ಆಗ ಮಾತ್ರ ಜೇನಿಗಿಂತ ಸ್ವಾದಿಷ್ಟವಾಗಿರುವ-ಪ್ರಕೃತಿಯಲ್ಲಿ ಅಡಗಿರುವ ಒಲವಿನ ಸಾಗರದಲ್ಲಿ ಮುಳುಗು ಹಾಕಿ ಪ್ರೇಮವೆಂಬ ಅಮೃತದ ರುಚಿಯನ್ನು ಆಸ್ವಾದಿಸಬಹುದು.  
************           ************              ************


ನನ್ನಾತ್ಮವೇ, ರಹಸ್ಯವೊಂದನ್ನು ಅರುಹುವೆ
ಆಲಿಸುವವಳಾಗು...
ಈ ಒಲವೆಂಬ  ತರುವಿನ ಸಂಗವನೆಂದಿಗೂ ಬಿಡದಿರು-
ಸದಾ ಬಾಡದ, ಕಂಪನ್ನೀವ ಕುಸುಮಗಳ ವರ್ಷವನ್ನೇ ಸುರಿಸುವುದದು.

03 November, 2012

ನನ್ನೊಳಗಿನ ರುಮಿ ಹೀಗನ್ನುತ್ತಾನೆ!





ನನ್ನೊಲವೆ, 
ಅದೇನೋ ಹಾಡು ಗೊಣಗುತ್ತಾ, ಕುಣಿಯುತ್ತಾ ಹೋಗುತ್ತಿದ್ದಿಯಾ...
ಅರೆ, ಅದೇಕೆ ಈ ಮೊದಲು ನಾ ನಿನ್ನ ನೋಡಿಲ್ಲ!
ನೋಡ ನೋಡುತ್ತಲೇ... ಕುಣಿಯತೊಡಗಿದೆ ನಿನ್ನ ಸುತ್ತಲೂ ನಾನೂ...
ಆಹಾ! ಲೋಕವೆಲ್ಲಾ ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದೆಯಲ್ಲಾ...
ಎಂದೂ ಮುಗಿಯದಿರಲಿ ಈ ಅಲೌಕಿಕ ಆನಂದ!

*****************************
ಒಲವೇ,

ಸಂಪೂರ್ಣವಾಗಿ ನಾನು ನಿನ್ನವಳೋ..
ಹಿಂದಿರುಗಿಸಬೇಡವೋ ಮತ್ತೆ ನನ್ನನ್ನು ನನಗೇ!

*****************************


 ಕೇಳುತ್ತಿದೆಯಾ... 
 ದಶ ದಿಕ್ಕುಗಳಿಂದಲೂ 
 ಪ್ರೀತಿಯು ನಿನ್ನನ್ನು  ಕರೆಯುತ್ತಲೇ ಇದೆ... 
 ಯಾವಾಗಲೂ...
 ಇನ್ನಾದರೂ ಬರುವಿಯಲ್ಲಾ ನೀನು...
 ಹೆಚ್ಚು ಕಾಯಿಸಬೇಡವೋ!

****************************

ಒಲವೇ,
ನಿನ್ನ ಹಾದಿಯಲಿ ಪಯಣಿಗಳಾಗಲು... 
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ.
ಸದಾ ತಗ್ಗಿ ಬಗ್ಗಿಯೇ ನಡೆವೆನೆಂದರೆ 
ನಂಬುವೆ ತಾನೆ!
 **************************************

ಒಲವೇ, 
ನೀನೆಷ್ಟು ನಿಕಟವಾಗಿರುವಿ ನನಗೆ?
ಖಂಡಿತವಾಗಿ ನನಗೊತ್ತು ನಿನಗಿದು ತಿಳಿದಿರಲಿಕ್ಕಿಲ್ಲವೆಂದು
ಹೇಳಲೇ, ಕೇಳುವೆಯಾ...

ನನ್ನ ಕನಸುಗಳನ್ನೆಲ್ಲ ಕಳೆದುಕೊಳ್ಳುವಷ್ಟು...
ನನ್ನಾತ್ಮವನ್ನೂ ಮರೆಯುವಷ್ಟು...
ಎಲ್ಲರಲ್ಲೂ ನಿನ್ನನ್ನೇ ಕಾಣುವಷ್ಟು...

ಆ ಸತ್ಯವ ತೋರಿಸಿದ್ದು
ಕನ್ನಡಿಯೊಳಗೆ ಕಂಡ 
ಕಣ್ಣಲಿ ನಿನ್ನ ಬಿಂಬ!


************************************


ನಿಸರ್ಗ ನನ್ನೊಳು ಹುಟ್ಟಿಸಿತು 
ಅನುರಾಗ ಭಾವವನ್ನು...
ಆ ಭಾವವೇ ಕವಿತೆಗಳ  
ಹುಟ್ಟಿಗೆ ಪ್ರೇರಣೆಯಂತೆ!

*********************************


ಒಲವಿನ ಹೃದಯದ 
ಆಳದ ಪರೀಕ್ಷೆ 
ಮಾಡಲು ಹೊರಟು 
ಇವಳು ತನ್ನನ್ನೇ 
ತಾನು ಕಳಕೊಂಡಳಂತೆ!

*****************************

ಒಲವೇ...
ಹೇಳಲೇನೋ ಕಾತರಿಸಿದೆ...
ಕ್ಷಣದಲ್ಲೇ ತನ್ನ ತೆಕ್ಕೆಗೆ ಸೆಳೆಯಿತು...
ಮಾತ ಮರೆತು ಮೌನಿಯಾದೆ....
ಅದರ ಆಲಿಂಗದಲ್ಲಿ!

**************************

ಒಲವೇ,
ನಿನ್ನ ನೋಟ ಚೆಲ್ಲಿದ ಕಿರಣ
ನನ್ನೆದೆಯ ಹಣತೆಯ ಬೆಳಗಿಸಿದೆ!
**********************************







30 October, 2012

ಅಮೃತಬಳ್ಳಿ!





ಅಮೃತಬಳ್ಳಿ
-ಖಾಲಿಹೊಟ್ಟೆಯಲ್ಲಿ ಒಂದೆರಡು ಎಲೆಗಳ ಸೇವನೆ ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ದೇಹದ ಸಕ್ಕರೆ ಅಂಶವನ್ನು ಅಂಕುಶದಲ್ಲಿರಿಸಲು ಹಾಗೂ ನಮಗೆ ತಿಳಿದೋ ತಿಳಿಯದೇ ನಾವು ತಿನ್ನುವ ಆಹಾರದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ಕಿತ್ತೊಗೆಯಲು ಬಲು ಸಹಕಾರಿ. ಅಲ್ಲದೆ ದೇಹದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದಕ್ಕೆ ಹೆಚ್ಚಿನ ಉಪಚಾರ ಬೇಕಾಗಿಲ್ಲ. ಒಂದಿಷ್ಟು ನೀರು, ಮಣ್ಣು, ಬಿಸಿಲು ಸಾಕು...

ಮಲ್ಲಿಗೆಯ ಕಂಪು!

 



ಮುಂಜಾನೆಯ ಹೊತ್ತು,
ಗಿಡದ ತುಂಬಾ ಅರಳಿದ
ಮಲ್ಲಿಗೆಯ ಕಂಪು,
ಅದ ಹೊತ್ತು ನನ್ನತ್ತ 
ಬೀಸಿದ ಸಣ್ಣನೆಯ ಗಾಳಿ
ನಾಸಿಕದೊಳು ನುಸುಳಿ,
ಕಣ್ಮನಕೆ ನೀಡಿತು ತಂಪು!

29 October, 2012

ಸಂಯಮ

ನಮ್ಮ ಶರೀರ ಮನಸ್ಸುಗಳ ಮೇಲೆ ಹತೋಟಿಯನ್ನು ಸಾಧಿಸುವುದನ್ನೇ ನಮ್ಮ ಹಿರಿಯರು ’ಸಂಯಮ’ ಎಂದು ಕರೆದರು. ಸಂಯಮವೆಂದರೆ ಇಂದ್ರಿಯ ಮನಸ್ಸುಗಳನ್ನು ನಿಷ್ಕ್ರಿಯಗೊಳಿಸುವುದು ಎಂದರ್ಥವಲ್ಲ.  ಅವಕ್ಕೆ ನಿರ್ವಹಿಸಲೇಬೇಕಾದ ಕರ್ತವ್ಯಗಳಿರುತ್ತವೆ. ಮನುಷ್ಯನ ಬದುಕು ಅರ್ಥಪೂರ್ಣವಾಗಿ, ಆಸ್ವಾದನೀಯವಾಗಿರಬೇಕಾದರೆ ಇಂದ್ರಿಯ ಮನಸ್ಸುಗಳ ತುಡಿತ, ಬಯಕೆಗಳಿಗೆ ಮಿತಿ ಔಚಿತ್ಯಗಳ ಗಡಿ ಹಾಕಿ, ಅವು ಅದನ್ನು ಮೀರದಂತೆ ನೋಡಿಕೊಳ್ಳುವುದೇ ಸಂಯಮ ಅಥವಾ ಸ್ವ-ನಿಯಂತ್ರಣ. ನೋಡಬಾರದ್ದನ್ನು  ನೋಡಬೇಕೆನ್ನುವ, ಕೇಳಬಾರದ್ದನ್ನು ಕೇಳಬೇಕೆನ್ನುವ, ಅಭಕ್ಷವಾದುದನ್ನು ಭಕ್ಷಿಸಬೇಕೆನ್ನುವ-ಇಂಥ ಎಲ್ಲ ಚಾಪಲ್ಯಗಳೂ ಮಿತಿ, ಔಚಿತ್ಯಗಳ ಎಲ್ಲೆಯನ್ನು ಅತಿಕ್ರಮಿಸದಂತೆ, ಅಗತ್ಯಕ್ಕಿಂತಲೂ ಹೆಚ್ಚು ಬೇಕೆನ್ನುವ ’ತೃಷ್ಣೆ’ಯೂ ಇದೇ ಗುಂಪಿಗೆ ಸೇರಿದುದು. ದೇಹ ಮನಸ್ಸುಗಳನ್ನು ಅಂಥ ಅತಿರೇಕಗಳಿಂದ ತಡೆಹಿಡಿಯುವುದು ಸ್ವ-ನಿಯಂತ್ರಣದ ಉದ್ದೇಶ.
ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲೂ ಬೆಳಕೊಂದನ್ನು ಭಗವಂತ ಇರಿಸಿದ್ದಾನೆ. ಅದು ಮಂಕಾಗದಂತೆ, ಆರಿಹೋಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಶುಚಿಯಾದ ಚಿಂತನೆಯ ತೈಲ ಹಾಕುತ್ತಾ, ಬತ್ತಿ ಕರಿಗಟ್ಟದಂತೆ ಸಂಯಮದ ಕಡ್ಡಿಯಿಂದ ಸ್ವಚ್ಛಗೊಳಿಸುತ್ತಿದ್ದರೆ, ಒಳಗೆ ಬೆಳಗುವ ದೀಪ ನಿರಂತರ ಬೆಳಕು ಬೀರುತ್ತದೆ.
-ವೈನತೇಯ

26 October, 2012

ಈ ಪ್ರಕಾಶವು ನಾಂದಿ ಹಾಡಲಿ!










ಈ ಪುಟ್ಟ ಹಣತೆಯ ಬೆಳಕು 
ಬಾಳಿಗೆ ಹೊಸ ಕಾಂತಿಯ ತುಂಬಲಿ!
ನಮ್ಮೊಳಗೆ ಬೇರೂರಿರುವ
ನರಕಾಸುರನ ಕಿತ್ತೆಸೆಯಲಿ!
ಬೆಚ್ಚನೆ ಹೊದ್ದು ಮಲಗಿರುವ
ನೈತಿಕತೆಯ ಬಡಿದೆಬ್ಬಿಸಲಿ!
ಮರೆತ ಮಾನವತೆಯ 
ಗುಣಗಳನ್ನು ಮತ್ತೆ ನೆನಪಿಸಲಿ!
ನಮ್ಮ ಮಣ್ಣಿನ ಸಂಸ್ಕೃತಿಯ
ಬೇರುಗಳನ್ನು ಮತ್ತಿಷ್ಟು ಗಟ್ಟಿಗೊಳಿಸಲಿ!
ಪಾಶ್ಚಿಮಾತ್ಯರ ಷೋಕಿಗೆ ಮರುಳಾದ
ಯುವಜನಾಂಗವ ತಿದ್ದಿ ಹಾದಿಗೆ ತರಲಿ!
ನಾಡಿನ ಉಜ್ವಲ ಭವಿಷ್ಯಕ್ಕೆ
ಈ ಪ್ರಕಾಶವು ನಾಂದಿ ಹಾಡಲಿ!

ಮನದ ಮೊರೆಯ ಕೇಳುವೆಯಾ, ನನ್ನೊಡೆಯ!


ಎಂದಿನಂತಿತ್ತಲ್ಲವೇ ಆ ಬೆಳಗು 
ಇತ್ತೇ ಬಿರುಗಾಳಿ ಬರುವರಿವು
ದಟ್ಟನೆಯ ಕಾರ್ಮೋಡ ಕವಿದು
ಇದ್ದಕ್ಕಿದ್ದಂತೆ ಸುರಿಯಿತು ಮುಗಿಲು
ಬಿರುಗಾಳಿಗಂಜಿದವು ಮನದ ಪುಟಗಳು
ಗಾಢಾ೦ಧಕಾರವು ಕವಿಯಿತು ಸುತ್ತಲೂ
ಮೂಕರಾಗವು ಹೊಮ್ಮಿತು ಮನದೊಳು
ಭಾರವ ಹೊರಲಾರದಿರಲು ಮನವು 
ಧಾವಿಸಿ ನೀ ಬಂದೆ ಅರಿತು
ತಂಪನೀವ ನುಡಿಯ ಉಸುರಲು
ಮನವಿಂದು ತುಂಬಿ ಬಂದು
ಒಡೆಯನನು ಬೇಡಿತು;
ಹರಸೆನ್ನ ತಮ್ಮನನು, ಸದಾ 
ಈ ಅಕ್ಕನ ಜೊತೆಯಿರಲೆಂದು!"

?????.......


ಗೊಂದಲವೆ...ಪ್ರಶ್ನೆಗಳು ಹುಟ್ಟುತ್ತವೆಯೇ.....
ಮನಸ್ಸನ್ನು ಮೌನವಾಗಿಸು ಮತ್ತು ಹೃದಯವನ್ನು ಭೇಟಿಯಾಗು.
ಅದುವೇ ನಿನ್ನೊಳಗಿನ ಪರಮಾತ್ಮನ ಭೇಟಿಗಿರುವ ನೇರ ದಾರಿ!

25 October, 2012

ಮನದೊಳಗಿನ ಕಿಚ್ಚು....ತನ್ನನ್ನೇ ಸುಡುವುದಲ್ಲವೆ!

    ಕಿಚ್ಚು- ಹೊರಗೇ ಇರಲಿ, ಒಳಗೇ ಇರಲಿ....ಮಾಡುವ  ಕೆಲಸ  ಒಂದೇ ಸುಡುವುದು. ಹೊರಗಿನ ಕಿಚ್ಚು ಕಣ್ಣಿಗೆ ಕಾಣಬಲ್ಲದು, ಅದನ್ನು ಆರಿಸಲು ಸಾಧ್ಯವಿದೆ. ಆದರೆ ಒಳಗಿನ ಕಿಚ್ಚು ಪರರನ್ನು ಮಾತ್ರವಲ್ಲದೆ ತನ್ನನ್ನೂ ಸುಡುವುದು. ಈ ಸತ್ಯವನ್ನು ಅರಿತಿದ್ದರೂ ನಾವದನ್ನು ಆರಿಸಲು ಪ್ರಯತ್ನಿಸುವುದಿಲ್ಲವೆ! ಏಕೆ ಹೀಗೆ? ಹಳೆ ಸುಧಾ ಪತ್ರಿಕೆಯ  "ವಿಚಾರ ಲಹರಿಯ" ಅಂಕಣದಲ್ಲಿ  ಒಂದು ಹೃದಯ ವಿದ್ರಾವಕ ಘಟನೆಯನ್ನು ನಿರೂಪಿಸಿದ್ದಾರೆ ವೈನತೇಯರು.

    ತಾಂಜಾವೂರು ರಾಜರ ಆಸ್ಥಾನದಲ್ಲಿ ವೀಣಾವಾದನದಲ್ಲಿ ಅದ್ವಿತೀಯ ಪಾಂಡಿತ್ಯವುಳ್ಳ ಕಾಳಹಸ್ತಿಯೆಂಬ ವೀಣಾವಾದಕರಿದ್ದರು. ತಮ್ಮಂತಹ ಮತ್ತೊಬ್ಬ ವಿದ್ವಾಂಸರು ಇರಬಾರದೆಂದು  ತಮ್ಮ ಪಾಂಡಿತ್ಯವನ್ನು ಯಾರೊಂದಿಗೂ ಹಂಚದೇ ಕಾಪಾಡಿಕೊಂಡಿದ್ದರು. ಮೈಸೂರಿನ ಅರಸರ ಆಮಂತ್ರಣದ ಕಾರಣ ಅವರಿಗೆ ಕೆಲವು ದಿನದ ಮಟ್ಟಿಗೆ ತಮ್ಮೂರಿನಿಂದ ದೂರವುಳಿಯಬೇಕಾಯಿತು. ಅರಸರ ಪೂಜೆಯ ಹೊತ್ತಿಗೆ ಹೊಸ ವೈಣಿಕನ ವಾದನ ಆಲಿಸಿದ ಅರಸರಿಗೆ ಬಹಳ ಮೆಚ್ಚಿಗೆಯಾಯಿತು. ಆ ಹೊಸ ವೈಣಿಕ ಬೇರ್ಯಾರಾಗಿರದೇ ಕಾಳಹಸ್ತಿಯವರ ಮಗನೇ ಆಗಿದ್ದನು. ಮೈಸೂರಿನಿಂದ ಹಿಂದಿರುಗಿ ಬಂದ ಕಾಳಹಸ್ತಿಯವರಿಗೆ ಮಗ ತಮಗಿಂತ ಚೆನ್ನಾಗಿ ನುಡಿಸುವನೆಂಬ ವಿಷಯ ಹಿಡಿಸಲಿಲ್ಲ. ತಡೆಯಲಾಗದಷ್ಟು ಈರ್ಷೆ ಸ್ವಂತ ಮಗನ ಮೇಲೆ ಉಂಟಾಯಿತು. ತಾವೇನೂ ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ಮಗನನ್ನು ಅಭಿನಂದಿಸುವ ನೆವನದಲ್ಲಿ ಅವನ ನಡುಬೆರಳನ್ನೇ ಕಚ್ಚಿತುಂಡು ಮಾಡಿಬಿಟ್ಟರು! ಅಕಟಕಟಾ!

    ಏಕಲವ್ಯನು ದ್ರೋಣರ ಮಾತ್ಸರ್ಯದಿಂದ ಹೆಬ್ಬೆರಳನ್ನೇ ಕಳಕೊಂಡನು. ದುರ್ಯೋಧನನು ತನ್ನ ಮಾತ್ಸರ್ಯದಿಂದ ತನ್ನ ವಂಶವನ್ನೆ ನಾಶಮಾಡಿದನು.    ಅಯ್ಯೋ ಮಾತ್ಸರ್ಯವು ಏನೇನು ಮಾಡಬಲ್ಲದು. ಅರಿಷಡ್ವರ್ಗಗಳ ವಾಸವು ಈ ನರ ದೇಹದೊಳು...ದೇವನು ಇತ್ತ ಸಹಜ ಸ್ವಭಾವವದು. ಅದು ಬೇರೊಬ್ಬರಿಗೆ ಹಾನಿ ಮಾಡುವ ಮಟ್ಟಕ್ಕೆ ಎಂದೂ ಏರಲು ಬಿಡಕೂಡದು. ಈರ್ಷೆಯು ನಮ್ಮ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಬೇಕೇ ಹೊರತು  ಮತ್ತೊಬ್ಬರನ್ನು ಮಟ್ಟ ಹಾಕುವಂತೆ ಮಾಡಿಸಕೂಡದು.

   ಉಪಸಂಹಾರದಲ್ಲಿ ಚಿಕ್ಕ ಕತೆ:
        ಮಗ ಗಣಕಯಂತ್ರದಲ್ಲಿ ಏನೋ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಟ ಆಡುತ್ತಿದ್ದಾನೆ.....ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿದ್ದಾನೆ...ಮಧ್ಯಮಧ್ಯದಲ್ಲಿ ತನ್ನ ಗೆಲುವನ್ನು ಮನೆಯಲ್ಲಿ ಎಲ್ಲರಿಗೂ ಕೇಳುವ ಹಾಗೆ ಹೂ ಹಾ..ಶಬ್ದಗಳು! ಕೊನೆಗೂ ಆಟ ಮುಗಿದು ಅಗಲ ಮುಖಮಾಡಿಕೊಂಡು ಹೊರ ಬಂದವನನ್ನು ನೋಡಿ " ಇದೇನು ಮಹಾ...ನಾನು ಒಂದಷ್ಟು ಆ ಗೇಮ್ ಕಲಿತರೆ ನಿನ್ನನ್ನು ಸೋಲಿಸುತ್ತಿದ್ದೆ." ಮಗನ ಮುಖ ಚಿಕ್ಕದಾಯಿತು. .....ಮಾತೇ ಇಲ್ಲ. ಮರುದಿನ ತನ್ನ ತಾಯಿಯ ಹತ್ತಿರ ತನ್ನನ್ನು ಚುಚ್ಚುತ್ತಿದ್ದ ಆ ಮಾತನ್ನು ಹೇಳಿಕೊಂಡ ಮಗ ಅಂದ, " ಅಮ್ಮ, ಅಪ್ಪನಿಗೆ ನನ್ನ ಮೇಲೆ ಹೊಟ್ಟೆಕಿಚ್ಚು." ಕೇಳಿದ ಅಮ್ಮನಿಗೆ ಹುಚ್ಚುಹಿಡಿಯುವುದು ಮಾತ್ರ ಬಾಕಿ!

     ಮಗ ತನ್ನ ದೊಡ್ಡ್ಪಪ್ಪನ ಊರಿಗೆ ಹೋದವನು ಮರಳಿ ಬಂದಿದ್ದಾನೆ. ಮೊದಲಬಾರಿಗೆ ತನ್ನ ದೊಡ್ಡಪ್ಪ, ದೊಡ್ಡಮ್ಮ, ತನ್ನ ಅಣ್ಣ, ಅಕ್ಕಂದಿರನ್ನು ಭೇಟಿಯಾಗಿದ್ದಾನೆ. ( ಬುದ್ಧಿಬಂದ ನಂತರ) ಸಮಯವಲ್ಲಿ ಆನಂದದಿಂದ ಕಳೆಯಿತು ಎಂಬುದನ್ನು ಆತನ ಮುಖವು ಸಾರಿ ಸಾರಿ ಹೇಳುತಿತ್ತು. ಅಷ್ಟರಲ್ಲೇ ಅವನ ದೊಡ್ಡಮ್ಮನ ಫೋನು. ಅವನ ಅಮ್ಮನಿಗೆ ಅಭಿನಂದನೆಗಳ ಸುರಿಮಳೆ..... ಎಂತಹ ಸುಪುತ್ರನೇ ನಿನ್ನ  ಮಗ...... ಅಪ್ಪಟ ಚಿನ್ನ...... ನಡತೆಯಲ್ಲಿ ಮಾತ್ರವಲ್ಲ ಜ್ಞಾನದಲ್ಲೂ ಅವನಿಗೆ ಅವನೇ ಸರಿಸಾಟಿ.....      ಇದನ್ನು ಕೇಳಿದ ಪೋಷಕರಿಗೆ ಮಹಾನಂದವಾಗದಿರಲು ಸಾಧ್ಯವೇ. ಆದರೆ ಅವನ ತಂದೆ ಮಾತ್ರ ಕೊಕ್ಕೆ ಹಾಕಿಯೇ ಬಿಟ್ಟರು. ಅವರೆಲ್ಲ ಒಂದಿಷ್ಟು ಕೂಡಿಸಿ(ಉತ್ಪ್ರೇಕ್ಷಿಸಿ)  ಮಾತನಾಡುವವರು........ ಇವನದೇನು ಮಹಾ......!  ಕೋಚಿಂಗ್ ಕ್ಲಾಸ್ ಹೋಗದೇ, ತರಗತಿಯಲ್ಲೂ ಚೆನ್ನಾಗಿ ಕಲಿಸದೇ ಇದ್ದರೂ ತನ್ನದೇ ಬಲದಲ್ಲಿ ಸರಕಾರಿ ಸೀಟ್ ಪಡೆದು, ಇದೀಗ ತರಗತಿಯಲ್ಲಿ  ಗುರುಗಳಿಗೆ ಮಾತ್ರವಲ್ಲದೆ ತನ್ನ ಗೆಳೆಯ ಗೆಳತಿಯರಿಗೂ ನೆಚ್ಚಿನವನಾದ ಈ ಹುಡುಗ ತನ್ನ ಪೋಷಕರಿಂದ ಇಂತಹ ಮಾತನ್ನು ಕೇಳಿಸಿಕೊಂಡರೆ ಅವನ ಮನಸ್ಥಿತಿ ಏನಾಗಬಹದು!

ನನ್ನ ಗೆಳತಿಯ ಕತೆ ಕೇಳಿದ ದಿನವೇ ಕಾಕತಾಳಿಯವಾಗಿ ಈ ಲೇಖನವನ್ನು ಓದಿದೆ. ಮನಸ್ಸಿನ ಸಂಕಟ ತಡೆಯಲಾರದೆ ಹೀಗೆ ಹಂಚಿ  ಭಾರ ಇಳಿಸಿಕೊಂಡೆ!

ಸಾವು ತಂದ ಭಾವ!



ಫೇಸ್‍ಬುಕ್ ಗೆಳತಿಯೊಬ್ಬಳ ಪತಿ ಅಕಸ್ಮಾತ್ತಾಗಿ ಅಘಾತಕ್ಕೀಡಾಗಿ ಇಹ ಲೋಕವನ್ನು ತ್ಯಜಿಸಿದರು ಎಂಬ ಸುದ್ದಿ ಕೇಳಿ ಬೇಸರ ಮಾಡಿಕೊಂಡ ಸುನಿತಾ ಮಂಜುನಾಥ್ ಅವರ ಬರಹ ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವ ಈ ರೀತಿಯಾಗಿ ಹೊಮ್ಮಿತು.

ನಮ್ಮೊಳಗೇ ಇರುವ 
ಅವನಿರುವಿಕೆಯನ್ನು 
ನಾವಾಗಿ ಅರಿತರೇ ಚೆನ್ನ.
ಚದುರಂಗದ 
ಪಡೆಗಳು ನಾವು.
ಅವ ನಡೆಸಿದ 
ನಡೆಯನ್ನು ಒಪ್ಪಲೇಬೇಕು.
ಅವನ ಕರೆ ಬಂದಾಗ 
ಹೊರಡಲೇಬೇಕು.
ಕಷ್ಟವಾದರೂ ಹೊರಟವರ
ಒಮ್ಮನಸಿನಿಂದಲೇ 
ಬೀಳ್ಕೊಡಬೇಕು ಆ 
ಆತ್ಮ ಪರಮಾತ್ಮನಲಿ
ಲೀನವಾಗಲಿ 
ಎಂಬ ಹಾರೈಕೆಯಲಿ.
**************
ಸುನಿತಾ ಮಂಜುನಾಥ್ ಅವರ ಬರಹ
_________________________


ಹುಟ್ಟು ನೀಡಿ ಬಂಧಗಳಿಂದ ಬಂಧಿಸುಯಾದರೆ 
ಸಾವ ಕಳುಹಿ ಎಲ್ಲ ತೊರೆಸುವೆಯೇಕೆ ...
ಆ ಮನೆಗೆ ಹೊಸ ಬೆಳಕ ನೀಡುವಾಗ...
ಈ ಮನೆಯ ಬೆಳಕ ನಂದಿಸುವ ಆಟವೇಕೆ...
ಹುಟ್ಟಿನ ಸಿರಿಯೇಕೆ....
ಮರಣ ಮೃದಂಗವೇಕೇ....
ನಿನ್ನ ಲೀಲೆಯ ನಾ ಅರಿಯಲು 
ನೀನೀ ಆಟ ಕಟ್ಟುವೆಯಾದರೆ...
ನಾ ನಿನ್ನ ಪ್ರೀತಿಸಬೇಕೆ..
ನಿನಗೆ ಹೆದರಬೇಕೇ..
ನಿನ್ನ ದ್ವೇಷಿಸಬೇಕೇ..
ನಿನ್ನಿರುವಿಕೆಯ ಪ್ರಶ್ನಿಸಬೇಕೆ...!!!??!!!?????
______________________________

ಅನುರಾಧ ಸಾಮಗ ಅವರ ಭಾವ!
________________________________


ಸಾವಲ್ಲೇ ಗೆಲುವೆ?!
--------------
ವಾತ್ಸಲ್ಯದಡಿಯಲ್ಲಿ ಮಗುವಾಗಿ ಬೆಳೆಯುತಿದ್ದವಳಲಿ
ಪ್ರೇಮ ಮೂಡಿಸಿ ಮಗುವಾಗುಳಿದಿಲ್ಲ ಎನಿಸಿದವ
ಎಲ್ಲಿಂದಲೋ ಬಂದು ಅವನಿಲ್ಲದೇನಿಲ್ಲ ಅನಿಸಿದವ
ಹೆಸರಿಗೆ ಅಪ್ಪನದರ ಜೊತೆ ತೆಗೆದು ತನ್ನದನ್ನಿತ್ತವ
ಅಸ್ತಿತ್ವವೊಂದಾಗಿದ್ದುದು ಅಚ್ಚರಿಯೆಂಬಂತೆ 
ಜೊತೆ ಪಡೆದೂ ಒಂದಾಗುಳಿವುದ ತೋರಿಸಿದವ
ಮಡಿಲಲ್ಲಿ ತಾಯ್ತನದ ಸೊಬಗ ಅರಳಿಸಿ
ಉಡಿ ತುಂಬಿ ತವರಿಗೆ ಕಣ್ತುಂಬಿ ಕಳಿಸಿದವ 
ಕೂಸ ಕಣ್ಣಲಿ ತಮ್ಮ ಪ್ರೇಮ ಬಿಂಬಿಸಿದಾಗ
ಹೊಸತು ಕಂಡವನಂತೆ ಸಂಭ್ರಮಿಸಿ ನಕ್ಕವ
ಬೇರೇನಿಲ್ಲವೆಂಬಂತೆ ಇಬ್ಬರ ಸುತ್ತಲೇ ಗಿರಕಿಯಾಡಿ
ಪ್ರಪಂಚ ಕೈಯ್ಯೊಳಗಿದ್ದಂತೆ ಮೆರೆಯುತ್ತಿದ್ದವ..

ಹಠಾತ್ತಾಗಿ ಹೀಗೆ ಬಿಟ್ಟು ನಡೆದರೆ.....?! 
ಕಣ್ಣೀರು ಹಸುಗಂದಗೆ, ತಾಯ್ತಂದೆಗೆ ಅರಗದು
ಮುಚ್ಚಿಟ್ಟ ಒಣದುಃಖ ಹಸಿಒಡಲು ಭರಿಸದು
ತಿಂಗಳಕಾಲ ಅಗಲದೆ ಬಂದುಬಂದು ಕಾಡಿದವನ
ಹಿಂಬಾಲಿಸಿ ಹೋಗುವ ದಾರಿಯೂ ಕಾಣದು
ಕಂಗಾಲಾಗಿ ಕೂತವಳ ಕಂಡನಿಸಿತು-
"ಸಾವಿಗಂಜಲೇಬೇಕೆ........?
ಸಾವಪ್ಪಿದಲ್ಲೇ ಗೆಲುವೇ..? ಅದು ಬಳಿಸಾರಿಯೂ
ಬಿಟ್ಟುಳಿಸಿದವರ ಪಾಲಿಗೆ ಬರೀ ಸೋಲೇ ಇರುವುದೇ?!"
( ಗೆಳತಿಯ ದುಃಖದ ಗುಂಗಲ್ಲಿ ಕಣ್ಣೀರಿನ ಮೌನಸಾಂತ್ವನದ ಜೊತೆ)














ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...