ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 December, 2011

ಕಿಂದರಿ ಜೋಗಿ! - ಮಾರ್ಡನ್ ತುಳು ನಾಟಕ!




  ಪ್ರತಿ ವರ್ಷ ಮಂಗಳೂರಿನ  ಆರ್‌ಎಕ್ಸ್‌ನವರು ಮಕ್ಕಳ ಶಿಬಿರವನ್ನು   ಎಪ್ರಿಲ್ ತಿಂಗಳ ಎರಡನೆಯ ವಾರದಲ್ಲಿ ಹತ್ತು ದಿನ ಏರ್ಪಡಿಸುವರು. ೫ವರ್ಷದ ಮಗುವಿಂದ ೧೫ವರ್ಷದ ಮಕ್ಕಳು ಈ ಶಿಬಿರದಲ್ಲಿ ಬೆಳಿಗ್ಗೆ ೯ರಿಂದ ಸಂಜೆ ೪.೩೦ವರೆಗೆ ಪಾಲ್ಗೊಂಡು ಹೊಸ ಹೊಸ ಆಟ, ಕಲೆಗಳನ್ನು ಕಲಿಯುವರು. ಕೊನೆಯ ದಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಈ ವರ್ಷ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾನು ಪಾಲ್ಗೊಂಡಿದ್ದೆ. ಕೊನೆಯ ದಿನದ ನಡೆಯುವ ನಾಟಕದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದ ಅದಕ್ಕಾಗಿ  ಕುವೆಂಪುನವರ ಕಿಂದರಿ ಜೋಗಿ ನಾಟಕವನ್ನು ಒಂದಿಷ್ಟು ರೂಪಾಂತರಗೊಳಿಸಿ ತುಳು ಭಾಷೆಯಲ್ಲಿ ಆಡಿಸುವ ನನ್ನ ನಿರ್ಧಾರ ನಮ್ಮ ಶಿಬಿರದ ಯೋಜಕರಿಗೆ ಇಷ್ಟವಾಯಿತು. ಪುಣ್ಯ ಕೋಟಿ ಗೋವಿನ ಹಾಡನ್ನು ಪುಟ್ಟ ಮಕ್ಕಳಿಂದ ನೃತ್ಯ ರೂಪಕವಾಗಿಯೂ, ಭಕ್ತ ಸುಧಾಮನ ಕತೆಯನ್ನು ಕೊಂಕಣಿ ಭಾಷೆಯಲ್ಲಿಯೂ ಮಕ್ಕಳಿಂದ ನಾಟಕವಾಡಿಸುವ ಹೊಣೆಹೊತ್ತ ನನಗೆ ತಯಾರಿ ನಡೆಸಲು ಹೆಚ್ಚು ದಿನಗಳು ಸಿಗಲಿಲ್ಲ. ಆದರೂ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್...ಹೀಗೆ ಎರಡೆರಡು ...ಹೊಣೆ. <ಕಿಂದರಿ ಜೋಗಿ> ನನ್ನ ಮೊದಲ ಸ್ಕ್ರಿಪ್ಟ್ ಇಲ್ಲಿದೆ ನೋಡಿ!


                                  ಕಿಂದರಿ ಜೋಗಿ! 

 ಪಾತ್ರ ವರ್ಗ- ಪಟೇಲ, ಮಾದ, ಕಿಂದರಿ ಜೋಗಿ, ಪಾತಮ್ಮ, ಗವರಕ್ಕ. ವೀರೇಶ, ಶಿವಪ್ಪ, ಇಲಿಗಳಾಗಿ ೧೦ ಚಿಕ್ಕ ಮಕ್ಕಳು, ಮತ್ತು   ೧೦,೧೨ ಮಕ್ಕಳು.


ಮೊದಲನೆಯ ಅಂಕ 

       ಊರಿನ ಜನರು ಎಲ್ಲರೂ ಚಿಂತಾಗ್ರಸ್ತರಾಗಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮಾತು ಬರದ ಮೂಕರಂತೆ ಒಬ್ಬರ ಮುಖವನ್ನು ಇನ್ನೊಬ್ಬರು ಮಿಕಿಮಿಕಿ ನೋಡುತ್ತಿರುವಂತೆ...ಒಂದು ಕ್ಷೀಣ ಸ್ವರ ಕೇಳುತ್ತದೆ.

  ಶಿವಪ್ಪ-( ಕ್ಷೀಣವಾಗಿ ಸುರುವಾಗಿ ಮತ್ತೆ ಗಟ್ಟಿ ಸ್ವರ ಬರಬೇಕು) ಈ ಎಲಿತ ಎಂಚಿನ ಉಪದ್ರವ ಮಾರಾಯ! ಒಂಚೂರು ಪೋಡಿಗೆಲಾ ಇಜ್ಜಿ. ರಾತ್ರಿ ಪೂರಾ ಎಂಕ್ಲೆನ ಮೈಯೊಡು ಆರಾಮಾದ ತಿರ್ಗೊಂದುಪ್ಪುಂಡು!

ಪಾತಮ್ಮ- ( ಅಳುವಂತೆ ರಾಗವಾಗಿ) ಒಂಜಿ ಸಾಮಾನುಲಾ ಬುಡ್ಪುಜ್ಜಿಯೆ!  ಅರ್ಧರ್ಧ ತಿಂದ ಪಾಡ್ದ ಗಮ್ಮತ್ತು ಮಲ್ಪರೆ!

ವೀರೇಶ- ಅಂದಂದ....ಒಂಜೊಂಜಿ ಎಲಿತ ಸೈಜ಼್ ತೂತರಾ! ಎಲ್ಲೆ ಪಿಲಿ ಲೆಕ್ಕ ತೋಜುಂಡು. ತೂಂಡ ಪೋಡಿಗೆ ಆಪುಂಡು. ಉಂದು ಪೂರಾ ಜೋಕುಳ ಕಣದ ತಿನ್ಪಿನ..ಅವು ಎಂಚಿನ ಮಾರಾಯ.....ಪೀಜ್......ಬರ್ಗ್...ತಿಂದದ ಅಂಚ                     ಆತಿನಿ.

ಹಿಂದಿನಿಂದ ಮಕ್ಕಳ  ಧ್ವನಿ- ಪಿಜ್ಜಾ, ಬರ್ಗರ್..ಅಜ್ಜಾ.. ಹೆ..ಹೆ...ಹೆ...

ಗವರಕ್ಕ- (ಅಳುತ್ತಾ) ಆ..ಆ..ಆ...ಎನ್ನ ಎಡ್ಡೇ... ಮದಮೆದ ಸೀರೆ ಕಚ್ಚದ ಮಲ್ಲ ಮಲ್ಲ ತೂತ ಮಲ್ತದ ಬುಡ್ತುಂಡು. ( ಈಚೆ ಆಚೆಯಿದ್ದವರನ್ನು ...ಯಜಮಾನನನ್ನು  ನೋಡಿ) ಈರ ಎಂಚಿನಾದ ಮಲ್ತದ  ಈ ಎಲಿತ ಉಪದ್ರವ ಉಂತ್ವೊಡುಯೆ...ಅತ್ಯೆ...ನಿಕಲ ಪಂಡ್ಲೆಯೆ....



ಈ ನಾಟಕದ ಛಾಯಾ ಚಿತ್ರವನ್ನು ತೆಗೆಯಲು ಆಗಲಿಲ್ಲ..ಅದಕ್ಕಾಗಿ ಗೋವಿನ ಹಾಡು ಮತ್ತು ಹಾಡಿನ ಛಾಯಾ ಚಿತ್ರ ಹಾಕಿದ್ದೇನೆ.



ಪಾತಮ್ಮ- ಅಂದಂದ...ಪಟೇಲರೇ...( ಯಜಮಾನರ ಕಡೆಗೆ ಎಲ್ಲರೂ ದೈನ್ಯದಿಂದ ನೋಡುವರು)

ಪಟೇಲ-( ಚಿಂತಾಕ್ರಾಂತನಂತೆ ನಟಿಸುತ್ತಾ ತಲೆಯ ಮೇಲೆ ಕೈಹಿಡಿದು, ತಲೆಯನ್ನು ಒತ್ತುತ್ತಾ) ಉಂದೊಂಜಿ ಮಲ್ಲ ಮಂಡೆ ಬಿಸಿ ಕೊರ್ತುಂಡು... ಎಂಚಿನ ಮಲ್ಪುಗ ಉಂದ ಎಲಿತ ಬಾದೆಗ? ಮಲ್ಲ ಕಿರಿಕಿರಿ... ಹಾ... ಒಂಜಿ ಕೆಲಸ ಮಲ್ಪೊಲಿ... ಅಂದ ಮಾದ... ಈ ಇತ್ತೆ ಒಂಜಿ ಮಲ್ಲ ಬೋರ್ಡ್ ಪಾಡ್ಲ... ತುಲ, ಯಾನ ಇಕ್ಕ ಬರೆದ ಕೊರ್ಪೆ... "ಏರಾಂಡ್ಲ ಈ ಎಲಿತ ಬಾದೆಡ ನಮ್ಮ ಬಚಾವ್ ಮಾಲ್ತಂಡ ಅಕ್ಲೆಗ್ ೫,೦೦೦ಕಾಸ್ ಪಟೇಲರ್ ಕೊರ್ಪೆರ್" ಪಂಡದ  ತುಲಾ ಸಮಾ ಬರೆವಡ್... ಬಕ್ಕ... ಆಂದ...ಮಾರಾಯ... ಪಂಡ... ಸುಪಂಡಿ ಬ್ಯಾಲೆ ಮಲ್ತಿನಂಚೆನೆ ಮಲ್ತಂಡ ಎನ್ನಡ ಪೆಟ್ಟು ತಿನ್ನೊಡ್ಚಿ! ಗೊತ್ತಾಂಡಾ.. !!!!

ಮಲ್ಲಕ್ಕ- ( ಸಣ್ಣ ಸ್ವರದಿಂದ) ಅಂದಂದ... ಈ ಪಿಟ್ಟಾಸಿ ಪಟೇಲರ ಕಪಾಟಡ್ದ...ಕಾ...ಸ್ ಪಿದಾಯಿ ಬರ್ಪುಂಡಾ... ತೂವೊಡು... ಅತ್ತೇ!!! ( ಹತ್ತಿರ ಕುಳಿತ್ತಿದ್ದ ಹೆಂಗಸಿನ ಬಳಿ ಹೇಳುವಳು)

ಗವರಕ್ಕ- ( ಮುಖವನ್ನು ಸಿಂಡರಿಸುತ್ತಾ) ಅಂದೇ... ಕಾಸ್  ಪಂಡದ ಜೀವ...  ಅವು ಎಂಚಿನ ನಕಲಿ  ನೋಟ್ ಕೊರ್ವೆರ  ತೋಜುಂಡು..( ಹತ್ತಿರದಲ್ಲಿದವರ ಮುಖದಲ್ಲಿ ನಗೆ  ಕಾಣುವುದು)
                            **********************************************                                          
ಎರಡನೆಯ ಅಂಕ

ಮಾದ ಬೋರ್ಡ್ ನೇತಾಡಿಸುತ್ತಿದ್ದಾನೆ.

ಅಲ್ಲಲ್ಲಿ ಜನ ಗುಂಪು ಕಟ್ಟಿ ಬೋರ್ಡ್ ನೋಡಿ ತಮ್ಮ ತಮ್ಮಲ್ಲೇ ಪಿಸು  ಮಾತನಾಡುತ್ತಿದ್ದಾರೆ. ಆಗಲೇ ಕೊಳಲನೂದುತ್ತ ಶಂಕರ ಜೋಗಿಯ ಪ್ರವೇಶವಾಗುತ್ತದೆ.

ಶಂಕರ ಜೋಗಿ ಬೋರ್ಡಿನ ಬಳಿ ಬರುತ್ತಾನೆ..

ಜೋಗಿ- ಎಂಚಿನ ಉಂದು? ಯಾರು ಈ ಊರಿನವರನ್ನು ಇಲಿಯ ಕಾಟದಿಂದ ಪಾರು ಮಾಡುವರೋ, ಅವರನ್ನು ನಮ್ಮ ಪಟೇಲರು ೫,೦೦೦ ರೂ ಗಳನ್ನು ಕೊಟ್ಟು ಸತ್ಕರಿಸುವರು. ಅರೇ ಯಾನ
 ಉಂದು ಒಂಜಿ ಚುಟುಕಿಡ ಮಲ್ಪುವೆ.. ತೂಕ, ಪಾತೆರ್ದ್   ತೂಕ.

  
   ತುಸು ದೂರದಲ್ಲೇ ಪಟೇಲ ಮತ್ತು ಅವನನ್ನು ಸುತ್ತುವರೆದು ನಿಂತ ಗುಂಪಿನ ಹತ್ತಿರ ಬರುವನು. 

ಜೋಗಿ- ನಮಸ್ಕಾರ ಯಜಮಾನೆರೆ... ತೂಂಡಾ ನಿಕಲ ಭಾರಿ ಕಷ್ಟದ ಉಳ್ಳೆರೆಂದು ಎಕ್ಕ ತೋಜುಂಡು... ಯಾನ ಈ ಮಾತ ಎಲಿನ ದೂರ ಕೊಣ್ಪೋಪೆ. ಈರ ಪಂಡಿಲೆಕ್ಕ ೫೦೦೦ರೂಪೀಸ್ ಕೊರ್ಪರಾ?

ಪಟೇಲ- ( ಮುಖದಲ್ಲಿ ನಗೆ ಕಾಣಿಸಿಕೊಳ್ಳುತ್ತದೆ) ನಮಸ್ಕಾರ ನಮಸ್ಕಾರ... ಈರ್ನ ಎಂಕಲ್ನ ಮಲ್ಲೇಶ ಸ್ವಾಮಿನೇ ಮೂಲು ಕಣತಿನಿ ತೋಜುಂಡು. ಮಾದ ಬಕ್ಕ ನೆನಪು ಮಾಲ್ಪಲ...  ಬರ್ಪುನ ಸಂಡೇ  ಒಂಜಿ ಮಲ್ಲ ಪೂಜೆ ಮಲ್ಪೆರೆ ಉಂಡು ಪಂಡದ ಪೂಜಾರೆಗ ಪಣ್ಣೊಡು.

 ( ಅವರು ಮಾತನಾಡುತ್ತಿರವಾಗ ಹೆಗ್ಗಣವೊಂದು ಮಲ್ಲಕ್ಕನ ಕೈಯಿಂದ ಆಕೆ ತಿನ್ನುತ್ತಿದ್ದನ್ನು ಕಸಿದು ಓಡುತ್ತದೆ. ಎಲ್ಲರೂ ಕಣ್ಣು ದೊಡ್ಡದು ಮಾಡಿ ಅತ್ತ ನೋಡುತ್ತಾರೆ...ಅವಳ ಹತ್ತಿರ ಕುಳಿತಿದ್ದ ಮಗು ಹೆದರಿ ದೊಡ್ಡದಾಗಿ ರಾಗ ಎಳೆಯುತ್ತದೆ.) 

 ಪಂಡ್ಲೆ, ಪಂಡ್ಲೆ.. ಎಂಚಿನ ಪ್ಲಾನ್ ಈರ್ನ್?  ಇತ್ತೆ ಈರೇ ಎಲಿತ ಉಪದ್ರವ ತೂದರತ್ತ.  ಪಂಡ ಈರ್ ವೊವ್ಲುಡ್ದ್ ಬತ್ತಿನಿ? 

ಜೋಗಿ- (ಮುಗಳ್ನಗುತ್ತಾ ) ಯಾನ ಘಟ್ಟಡ್ದ ಮೇಲ್ದ ಜನ.. ತಿರುಗುಂದೇವುಪ್ಪು        
ನತ್ತ ಅಂಚ ಎಂಕ್ ನಿಕಲ್ನ ಲಾಂಗ್ವೇಜ್ಲಾ ಬರ್ಪುಂಡ್! ತುಲೆ ಯಜ್ಮಾನರೇ.. ಪಂಡಿ ಲೆಕ್ಕ ಈರ್ ಯಂಕ್ ಐನ್ ಸಾವಿರಾ ರೂಪೀಸ್ ಕೊರಡು.. ಬಕ್ಕ ಭಾಷೆ ತಪ್ಪೆರಬಲ್ಲಿ... ತಪ್ಪಂಡ... ಬಕ್ಕ ತೂಲೆ!


ಅಲ್ಲಿದ್ದ ಜನರೆಲ್ಲಾ ಸಂತೋಷದಿಂದ ಒಬ್ಬನೊಬ್ಬರು ಅಭಿನಂದಿಸುವರು... ಮತ್ತು ಪಟೇಲರತ್ತ ತಿರುಗಿ,

ಎಲ್ಲರೂ- ಪಂಡಿಲೆಕ್ಕ ಕೊರ್ಪೆ ಪಂಡ್ಲೆ ಪಣ್ಣಲೆ ಯಜಮಾನರೇ, ಪಂಡ್ಲೆ.. ಪಂಡ್ಲೆ...

ಪಟೇಲ-( ಎಲ್ಲರತ್ತ ಒಮ್ಮೆ ನೋಡುತ್ತಾ... ಸ್ವಗತದಲ್ಲಿ- ಹುಂ, ಪಿಟ್ಟಾಸಿ ಜನ...ಬುದ್ಧಿ ಕಲ್ಪವೆ ನಿಕಲೆಗ! ತುಲೆ, ಹುಂ)  ಆವು ಮಾರಾಯ್ರೇ. ಈರ್ ಒಂಜಿ ಸರ್ತಿ ಎಂಕ್ಲೆನ್ ಎಲಿತ ಉಪದ್ರವಡ ಬಚಾವ್ ಮಲ್ಪುಲೆ. ಪ್ರಾಮಿಸ್ ಮಲ್ಪೆ... ಖಂಡಿತ ೫,೦೦೦ ರೂಪೀಸ್ ಕೊರ್ಪೆ. 

ಶಂಕರ ಕಿಂದರಿ ಕೊಳನ್ನು ಊದುವನು. 

ಹ್ಮೂಂ,. ಇಲಿಗಳು ಬರುವುದು ಕಾಣುವುದಿಲ್ಲ....

ಜನ ಮುಖಮುಖ ನೋಡುತ್ತಾರೆ. ಮಕ್ಕಳೆಲ್ಲಾ ಅಲ್ಲಿ ಸೇರುತ್ತಾರೆ. ಆಗ ಗವರಕ್ಕನ ದೊಡ್ಡ ಮಗ ಶರವಣ ಎದ್ದು ನಿಲ್ಲುತ್ತಾನೆ.

ಶರವಣ- ಅಂಕಲ್, ಅಂಕಲ್... ಎಕ್ಸಕ್ಯೂಜ್ ಮಿ... ಡು ಯು ನೋ, ಮೈಕಲ್ ಜಾಕ್ಸನ್ ಸಾಂಗ್ಸ್.. ಆರ್ ಸಲ್ಮಾನ್ ಖಾನ್ಸ್... ಸಾಂಗ್ಸ್... ಅವು ಪಾಡಂಡ ಬರ್ಪೆರಾ ತೂಲೆ.  ಈ ಓಲ್ಡ್ ಸಾಂಗ್‍ಗ್ ಪಿರಾಯಿ
 ಬರ್ಪುಜೆರ.


ಎಲ್ಲರೂ ನಗುತ್ತಾ ತಮ್ಮತಮ್ಮಲ್ಲೇ ಪ್ರತಿಕ್ರಿಯಿಸುತ್ತಾರೆ.

ಕಿಂದರಿ-( ಹುಬ್ಬನ್ನು ಮೇಲಕ್ಕೆತ್ತಿ... ಬಾಯಿಯನ್ನು ಅಗಲಕ್ಕೆ ಬಿಡಿಸಿ) ಅಬ್ಬಬ್ಬ!!! ಜೋಕಳೆಗ ಸಮ ಎಲಿನಕಲು... ಬಕ್ಕ,ಅವುಲ ಬರ್ಪುಂಡ್... ಈತ ಮುಟ್ಟ ಊದಿನಿಜ್ಜಿ.. ಇನಿ ಅವುಲಾ ಮಲ್ಪುಗ. ಈ ಕೆಟ್ಟ ಕಲಿ ಕಾಲಡ ನಂಕ ಮಾತ ಕಲ್ಪೊಡತ್ತಾ.. ಇಜ್ಜಾಂಡಾ ಬದಿಕೆರೆ ಆಪುಂಡಾ!

ಕಿಂದರಿ ಚೀಲದಿಂದ ಕೊಳಲನ್ನು ( ಬೇಕಾದರೆ ಆಧುನಿಕತೆ ತೋರಿಸಲು ಸೆಕ್ಸಫೋನು ವಾದನ ಉಪಯೋಗಿಸಬಹುದು) ತೆಗೆದು.... ಇಲ್ಲಿ ಯಾವುದೇ ಇತ್ತೀಚಿನ ಸಿನೆಮಾ ಹಾಡನ್ನು ಊದುವಂತೆ ನಟಿಸಬಹುದು. ಹಿನ್ನಲೆಯಲ್ಲಿ ಆ ಸಂಗೀತ ಕೇಳಿಬರುವುದು.

 (ನಾನು ವಾಂಟೆಡ್ ಚಿತ್ರದ ಜಲ್ವಾ ಹಾಡನ್ನು ಹಾಕಿ ಮಕ್ಕಳಿಗೆ ಅದೇ ತರದ ಸ್ಟೆಪ್ ನನ್ನ ಮಗಳ ಕೈಯಲ್ಲಿ ಕಲಿಸಿದ್ದೆ.)   

ಜೋಗಿ- ಈ ಮೊಬೈಲ್ ಈಗ ಉಪಯೋಗ ಆಂಡ... ಮುರಾಣಿ ಆಯಿ ಬಾಲೆ ಯಂಕ್ ಪೊಸಪೊಸ ಸಾಂಗ್ ಫೀಡ್ ಮಲ್ತದ ಕೊರ್ತನತ್ತ... ಅಂಚ ಯಾನ್ ಇವು ಮಾತ ಕೇಣದ್ ಕೇಣದ ಕಲ್ತೆ. ( ಬಡಬಡಿಸುವನು. )

ಸಂಗೀತವನ್ನು ಕೇಳಿ ಇಲಿಗಳೆಲ್ಲಾ ಸಂದುಗೊಂದುಗಳಿಂದ ನಾಟ್ಯವಾಡುತ್ತ ಬರುವರು. ಕೆಲವು ಅಲ್ಲಿ ಕುಳಿತಿದ್ದ ಹೆಂಗಸರ ಹಿಂದಿನಿಂದ ಬರುತ್ತವೆ. ಇಲಿಗಳ ಪಾತ್ರವನ್ನು  ೫,೬ ವಯಸ್ಸಿನ ಮಕ್ಕಳು ಮಾಡಿದರೆ ಒಳ್ಳೆಯದು. ಇಲಿಗಳ ಪ್ರವೇಶವಾಗುತ್ತಿದ್ದಂತೆ ಅಲ್ಲಿ ಕುಳಿತ್ತಿದ್ದ ಜನರು ಬೆಚ್ಚಿ ಹಿಂದೆ ಓಡಬೇಕು.  ರಂಗದ ಎದುರುಗಡೆ ಜೋಗಿ ಅವನ ಹಿಂದೆ ಮಕ್ಕಳು ಹಾಡಿಗೆ ತಕ್ಕ ತಾಳ ಹಾಕುತ್ತಾ ೫ ನಿಮಿಷ ನೃತ್ಯ ಮಾಡಬೇಕು. ಜೋಗಿ ಮುಂದೆ ಇಲಿಗಳ ಪಾತ್ರದ ಮಕ್ಕಳು ಹಿಂದೆ ಹಿಂದೆ.. ನದಿ ತೀರ ಸೃಷ್ಟಿಸಬೇಕು. ನೀಲಿ ಸೀರೆಯನ್ನು ನೀರಿನ ಅಲೆಗಳಂತೆ ಅಲ್ಲಾಡಿಸಬೇಕು. ಇಲಿಗಳು ಸೀರೆಯ ಕೆಳಗೆ ನುಸುಳುವಂತೆ ಸೀರೆಯನೆತ್ತಿ  ಅನುಕೂಲ ಮಾಡಿಕೊಡಬೇಕು. 
                                                                                                                **********************                                                      
  
   ಮೂರನೆಯ ಅಂಕ

ಕಿಂದರಿಯ ಪ್ರವೇಶವಾಗುವುದು. ಜನರೆಲ್ಲಾ ಸಂತೋಷದಿಂದ ಒಬ್ಬರನೊಬ್ಬರು ಅಭಿನಂದಿಸುವರು. ಯಾರೂ ಕಿಂದರಿಯನ್ನು ಗಮನಿಸುವುದಿಲ್ಲ. 

ಕಿಂದರಿ- ( ಪಟೇಲ ಬಳಿ ಬರಲು ಯತ್ನಿಸುವನು) ಪಟೇಲರೇ, ಪಟೇಲರೇ ... ( ಜನರ ಗಮನವನ್ನು ತನ್ನೆಡೆ ಸೆಳೆಯಲು ಯತ್ನಿಸುವನು) ಕೊರ್ಲೆ...ಕೊರ್ಲೆ..ಎನ್ನ ಬಹುಮಾನ.. ಕಾಸು...  ೫,೦೦೦.
ಪಟೇಲ- (ಜೋರಾಗಿ ನಗುವನು. ಜನರನೆಲ್ಲಾ ನೋಡುತ್ತಾ) ಪೋ ಮಾರಾಯ...೫,೦೦೦ ಕಾಸಗೆ... ಕುಶಾಲಾ... ಯಾನ ಇಂಚೆನ ಪಂಡಿನಿ... ಆಂಡಲಾ... ಈ ಒಂಜಿ
ಉಪಕಾರ ಮಲ್ತದೆ.. ಅಂಚಿ ನಿಕ್ಕ ನಮ್ಮ ಮಲ್ಲ ಥಾಂಕ್ಸ್!ಏ.... ಮಾದ, ಮಾದ, ತುಲಾ... ವೀರೇಶ, ಅಣ್ಣಪ್ಪ, ಶಿವಪ್ಪ, ಗವರಕ್ಕ, ಮಲ್ಲಮ್ಮ ನಿಕಲ ಥಾಂಕ್ಸ್ ಪಂಡೆರಾ... ಜೋಗಿಯಪ್ಪಗ, ಪಂಡ್ಲೆ.. ಪಂಡ್ಲೆ..


ಎಲ್ಲರೂ ಯಪ್ಪಾ....ಮಲ್ಲ ಥಾಂಕ್ಸ್ ಎನ್ನುವರು.

ಕಿಂದರಿ- ( ಮುಖದ ಮೇಲೆ ಬೇಸರ ಮೂಡುತ್ತದೆ... ನಂತರ ಕೋಪ ಕಾಣಿಸುತ್ತದೆ....ಕಣ್ಣು ದೊಡ್ಡದು ಮಾಡಿ ಜೋರಾದ ಸ್ವರದಿಂದ ) ಭಾಷೆ ತಪ್ಪುದೆರ. (ಎಲ್ಲರೂ ಗಪ್‌ಚಿಪ್ ಆಗುತ್ತಾರೆ)   
ನಿಕ್ಲೆಗ್ ಉಂದ ಎಡ್ಡೆಅತ್ತ.... ಆಂಡಲಾ ಬಕ್ಕೊಂಜಿ ಸಲ ಪಣ್ಪೆ. ಮರ್ಯಾದೆರ ಎಂಕ್ ಕೊರ್ಪೆ ಪಂಡಿನ ಕೊರ್ಲೆ... ಇಜ್ಜಾಂಡ...

ಪಟೇಲ- ಪೋ ಪೋ ... ಕೊರ್ಪುಜಿ.. ಎಂಚಿನ ಮಲ್ಪೆ... ಅಟ್ಟಹಾಸದಲ್ಲಿ ನಗುವನು. 

 ಕಿಂದರಿ ಕೋಪದಿಂದ ಸುತ್ತಲೂ ನೋಡುವನು. ಮತ್ತಿನ್ನೊಮ್ಮೆ ಕೊಳಲನ್ನು ಎತ್ತಿಕೊಳ್ಳುವನು. 

ಸ್ವಗತದಲ್ಲಿ- ಆವಾಗ ಜಲ್ವಾ ಈಗ ಮೈಕೆಲ್ ಜಾಕ್ಸನ್....ಊದುವನು. ಎಲ್ಲರೂ ಬೆರಗಾಗಿ ನೋಡುತ್ತಿದ್ದಂತೆಯೇ  ಮಕ್ಕಳೆಲ್ಲಾ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಕಿಂದರಿಯನ್ನು ಹಿಂಬಾಲಿಸುವರು. ತಡೆಯಲು ಬಂದ ತಂದೆ ತಾಯಿಯರ ಕೈಯನ್ನು ನೂಕಿ ಮಾಟಕ್ಕೆ ಒಳಗಾದವರಂತೆ ಕಿಂದರಿಯನ್ನು ಹಿಂಬಾಲಿಸುವರು. ತಾಯಿಯು ಎತ್ತಿಕೊಂಡಿರುವ ಮಗು  ಕೈಯಿಂದ ಜಾರಿ ಕಿಂದರಿಯನ್ನು ಕುಣಿಯುತ್ತಾ ಹಿಂಬಾಲಿಸುತ್ತದೆ.  ಗ್ರಾಮಸ್ತರು, ಪಟೆಲರು ಮಾತು ಬಾರದ ಮೂಕರಂತೆ ಬಿಟ್ಟ ಬಾಯಿಯಿಂದ ದೃಶ್ಯವನ್ನು ನೋಡುವರು.   

ಪರದೆ ಜಾರುತ್ತದೆ...                                                                             



28 December, 2011

ಕಲಾ ಜೀವನದಲ್ಲೊಂದು ತಿರುವು! ಹೊಸ ಬೆಳಕು, ಹೊಸ ಹುರುಪು!

 
               ೧೯೮೯ರಲ್ಲಿ ಬಿ. ಜಿ. ಎಮ್‌ನಲ್ಲಿ ಜೂನ್ ತಿಂಗಳಲ್ಲಿ ನನ್ನ ಚಿಕ್ಕಮ್ಮನ ಮೂಲಕ ಸೇರ್ಪಡೆಗೊಂಡಾಗ ನನ್ನ ಬದುಕು ಈಗ ನಿಜವಾಗಿ ಪ್ರಾರಂಭಗೊಂಡಿತೆಂದೆನಿಸಿತ್ತು. ಬೆಳಿಗ್ಗೆ ಸಾಧಾರಣ ೯.೩೦ಕ್ಕೆ ಚಿತ್ರ ಮಾಡಲು ಕುಳಿತರೆ ನನಗೆ ಮನೆಗೆ ತಿರುಗಿ ಹೋಗಲು ಮನಸ್ಸು ಬರುತ್ತಿರಲಿಲ್ಲ...ಆಗ ನನಗೆ ನನ್ನೊಳಗೆ ಕಲಾದಾಹ ಎಷ್ಟಿದೆಯೆಂಬುದು ಅರಿವಿಗೆ ಬಂತು. ಅದಕ್ಕಿಂತ ಮುಂಚೆ ನನ್ನಷ್ಟಕ್ಕೆ ಚಿತ್ರಗಳನ್ನು ಬಿಡಿಸುತ್ತಿದ್ದೆನಾದರೂ ನಿಯಮಗಳ ಅರಿವಿರಲಿಲ್ಲ..ಚಿತ್ರ ಪರಿಕರಣೆಗಳ ಬಗ್ಗೆ ಏನೂ ಪ್ರಾಥಮಿಕ ಜ್ಞಾನವಿರಲಿಲ್ಲ..ಆದರೂ ಬಚ್ಚಲು ಗೋಡೆಗಳ ಮೇಲೆ ಆಗಿನ ಡಿಸ್ನಿ ವರ್ಲ್ಡ್‌ನ ಎಲ್ಲಾ ಕಾರ್ಟೂನ್‌ಗಳು ಸುಣ್ಣದಲ್ಲಿ ರರಾಜಿಸುತ್ತಿದ್ದವು. ಅವುಗಳು ಚೆನ್ನಾಗಿರುತ್ತಿದ್ದವೂ ಕೂಡಾ. ಆದರೂ ಮನೆಯಲ್ಲಿ ನನಗೆ ಎಂದೂ ಪ್ರೋತ್ಸಾಹದ ಮಾತುಗಳು ಬಂದಿರಲಿಲ್ಲ. ಇದರಿಂದಲೋ ಏನೋ ನಾನು ಇಂದಿಗೂ ಸಹ ಪ್ರೋತ್ಸಾಹದ ಮಾತುಗಳ ನಿರೀಕ್ಷೆ ಮಾಡುವುದಿಲ್ಲ.  ಸರಿ, ಬಿ. ಜಿ.ಮೊಹಮ್ಮದರ ಕೈಕೆಳಗೆ ನನ್ನ ತರಬೇತಿ ಪ್ರಾರಂಭವಾಯಿತು...ಬೇಸಿಕ್‍  ತಂತ್ರಗಳನ್ನು ಬಲು ಬೇಗ ದಾಟಿ, ಇದ್ದಿಲಿನ (ಚಾರ‍್ಕೋಲ್) ಮೂಲಕ ಬಿಡಿಸಲು ಕಲಿಕೆ ಪ್ರ‍ರಂಭವಾದ ದಿನದಿಂದ ನನ್ನ ಕನಸುಗಳಿಗೆ ರೆಕ್ಕೆಗಳು ಮೂಡಲು ಪ್ರಾರಂಭವಾಯಿತು.  ಜೆ ಜೆ ಆರ್ಟ್ ಸ್ಕೂಲ್‍ನಲ್ಲಿ ಕಲಿಯುವ ನನ್ನ ಮಹತ್ವಾಕಾಂಕ್ಷೆಗೆ ಇಂಬು ನೀಡುವಂತೆ ಗುರುಗಳ ಮೆಚ್ಚುಗೆ, ನನ್ನ ಸಹಪಾಠಿಗಳ ಪ್ರೋತ್ಸಾಹದ ಮಾತುಗಳು ಕೇಳಿಬಂದವು.  ನಾನು ಮೂರು ತಿಂಗಳಲ್ಲೇ ನನ್ನೆಣಿಕೆಗೆ ಮೀರಿ ಬೆಳೆದೆ...ಚಿತ್ರ ಕಲೆಯಲ್ಲಿ ಮೇಲಿಂದ ಮೇಲೆ ಪದೋನ್ನತಿ ಸಿಕ್ಕಿತು...ಅಲ್ಲಿಗೆ ಬರುತ್ತಿದ್ದ ಅನೇಕರಿಗೆ ಆಶ್ಚರ್ಯ! ಆದರೆ ಇದು ಸಾಧ್ಯವಾದದ್ದು ನನ್ನೊಳಗಿನ ಕಲಾವಿದೆಯ ಹಠ ಮತ್ತು ನಿರಂತರ ಪ್ರಯತ್ನದಿಂದ. ಮನೆಯಲ್ಲಿ ಮದುವೆಯ ಮಾತು ಕತೆ ನಡೆಯುತಿತ್ತು...ನನ್ನ ಕಲಿಕೆಯು ಪೂರ್ಣವಾಗುವುದೇ, ನನ್ನ ಪತಿ ಮತ್ತು ಅವನ ಮನೆಯವರು ನನಗೆ ಮುಂದೆ ಕಲಿಯಲು ಅನುಕೂಲ ಮಾಡಿಕೊಡುವರೇ, ಇದೆಲ್ಲಾ ಪ್ರಶ್ನೆಗಳು  ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿರಲಿಲ್ಲ...ಬಹುಶಃ  ಕಲಾ ಜೀವನದ ಹಾದಿ ಹಿಡಿದ ನಾನು ಇನ್ನೆಂದೂ ಹಿಂದೆ ತಿರುಗಿ ಬರುವುದಿಲ್ಲ..ಅದೇ ದಾರಿಯಲ್ಲಿ ನಡೆದು ಮುಂದೊಂದು ದಿನ ದೇಶದ ಅತ್ಯುನ್ನತ ಕಲಾವಿದರಲ್ಲಿ ಒಬ್ಬಳಾಗುವೆ ಎಂಬ ವಿಶ್ವಾಸವಿತ್ತು ನನ್ನಲ್ಲಿ.  ಬೇಗನೇ ಕಪ್ಪು ಬಿಳಿ ಜಲ ಚಿತ್ರ..ಅಲ್ಲಿಂದ ಜಲ ವರ್ಣ....ಅದರಲ್ಲಿಯೂ ನಾನೊಂದು ಬಿಡಿಸಿದ ಸ್ಟಿಲ್‍ ಲೈಫ಼್‍ ಚಿತ್ರ- ಹಸಿರು ಬಣ್ಣದ ಗಾಜಿನ ಬಾಟ್ಲಿ ಮತ್ತು ಅದರ ಜೊತೆ ಹಣ್ಣುಗಳು ಬಹಳ ಸುಂದರವಾಗಿ ಮೂಡಿ ಬಂದಿತ್ತು.( ಈ ಚಿತ್ರ ಮದುವೆಯಾದ ಹೊಸತರಲ್ಲಿ ನನ್ನ ಓರಗಿತ್ತಿ ತನಗೆ ಬೇಕೆಂದು ತೆಗೆದುಕೊಂಡು ಹೋಗಿದ್ದಳು...ಅದು ಈವಾಗ ಅವಳ ಬಳಿ ಸಹ ಇಲ್ಲ.)  ಒಂದು ದಿನ ಮಾಸ್ಟ್ರು ತೈಲ ವರ್ಣಗಳಿಗೆ ಬೇಕಾದ  ಸಲಕರಣೆಗಳನ್ನು ತರಲು ಹೇಳಿದಾಗ ಆನಂದ ಆಶ್ಚರ್ಯ ಉಂಟಾಯಿತು. ಇವುಗಳ ಮಧ್ಯೆ ಗುರುಗಳ ಪತ್ನಿಯವರಿಂದ ಎರಡು ತಗಡಿನ ಮೇಲೆ ಉಬ್ಬು ಚಿತ್ರ ಬಿಡಿಸುವುದನ್ನು ಸಹ ಕಲಿತೆ. ಮಾರ್ಚ್ ತಿಂಗಳ ಮೊದಲವಾರ ಅದು.... ನನ್ನ ತಾಯಿಯವರು ಹುಡುಗ ಮತ್ತು ಮನೆಯವರು ನೋಡಲು ಬರುವ ವಿಷಯ ತಿಳಿಸಿದರು. ಮುಂದೆ ಎಲ್ಲವೂ ಬೇಗ ಬೇಗನೇ ನಡೆಯಿತು...೧೫ನೇ ತಾರೀಕು ನಿಶ್ಚಯ ತಾಂಬೂಲ...೨೪ ಜೂನ್‍ರಂದು ಮದುವೆಯೂ ಆಯಿತು. ಅದರ ಜೊತೆ ನನ್ನ ಕನಸಿನ ಸೌಧವೂ ಕುಸಿಯುತು. ಮೊದಮೊದಲು ಸಿಡುಕುತಿದ್ದ ನಾನು ಜೀವನದೊಂದಿಗೆ ಬಲು ಬೇಗ ರಾಜಿ ಮಾಡಿಕೊಂಡು ಬಿಟ್ಟೆ...ಮಕ್ಕಳಿಗಾಗಿ ಹೊಸ ಕನಸ ನೇಯುವುದು ಪ್ರಾರಂಭವಾಯಿತು!  ನನ್ನ ಕನಸಿನಂತೆ ನನ್ನ ಮಗ ಮಗಳು ಇಬ್ಬರೂ ಚಿತ್ರ ಬಿಡಿಸುವುದರಲ್ಲಿ ನುರಿತರಾದರು. ಇಷ್ಟೆಲ್ಲ  ನನ್ನೊಳಗಿನ ಕಲಾವಿದೆಯ ಧ್ವನಿ ಇನ್ನೂ ಕ್ಷೀಣವಾಗಿ ಮೊರೆಯಿಡುತಿತ್ತು....ಹೃದಯವು ಕೂಗುತಿತ್ತು. ಮುಂದೆಂದೂ ಕುಂಚವನ್ನು ಕೈಗೆತ್ತುವ ಆಸೆಯನ್ನೇ ಬಿಟ್ಟಿದ್ದೆ. ಆದರೆ ೨೦೦೭ರಲ್ಲಿ  ನನ್ನ ಜೀವನದಲ್ಲಿ ಮತ್ತಿನ್ನೊಮ್ಮೆ ಬೆಳಕಿನ ಕಿರಣಗಳು ಕಾಣಹತ್ತಿದವು. ಬರಡಾದ ಬೆಂಗಾಡಿನಲ್ಲಿ ವೃಕ್ಷಗಳ ಮೇಲೆ ಮತ್ತೆ ಹಸಿರೆಲೆ ಕಾಣಿಸಿಕೊಂಡವು. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮನೆ ಪಾಠ ಪ್ರ‍ಾರಂಭಿಸಿದೆ...ನಿಧಾನವಾಗಿ ಮಕ್ಕಳ  ಸಂಖ್ಯೆ ಹೆಚ್ಚಾಯಿತು..ಕೈಯಲ್ಲಿ ಬಂದ ಕಾಸು ಆತ್ಮವಿಶ್ವಾಸವನ್ನೂ ತಂದಿತು. ಬಂದ ಮಕ್ಕಳಲ್ಲಿ ಕೆಲವರಿಂದ ಚಿತ್ರ ಕಲಿಸಿ ಎಂಬ ಬೇಡಿಕೆಯೂ ಬಂತು...ಇಲ್ಲಿಯೂ ಒಳ್ಳೆಯ ಬೆಳವಣಿಗೆ ಕಾಣ ಬಂತು..

                    ಅಂತೂ ೨೦೧೦ರಲ್ಲಿ ಮತ್ತಿನ್ನಷ್ಟು ಬೆಳವಣಿಗೆ ಜೀವನದ ನಡೆಯನ್ನೂ, ಅರ್ಥವನ್ನೂ ಬದಲಾಯಿಸಿತು.  ಸಂಬಂಧಗಳ ವ್ಯಾಖ್ಯಾನವನ್ನೆ ಬುಡಮೇಲು ಮಾಡಿತು! ನಾ ಆರಾಧಿಸುತ್ತಿದ್ದ ಆ ಅದೃಶ್ಯ ಶಕ್ತಿ, ಮಾಟಗಾರ ತನ್ನ ಕಣ್ಕಟ್ಟನ್ನು ತೋರಿಸಿದ.  ನನ್ನ ನಂಬಿಕೆ ನಿಜವೆಂದು ನಿರೂಪಿಸಿ ತೋರಿದ ಕಪಟನಾಟಕ ಸೂತ್ರಧಾರಿ! ತಾಳ್ಮೆಯಿಂದ ಅವನ ಪರೀಕ್ಷೆಗಳನ್ನು ಎದುರಿಸಿದ ನಾನು ಅದರ ಫಲವನ್ನು ಪಡೆದೆ. ಅದೊಂದು ದಿನ ನನ್ನ ಜೀವನವೆಂಬ ನೌಕೆಯು ಬೀಸಿದ ಬಿರುಗಾಳಿಗೆ ಸಿಕ್ಕಿ ಹೊಯ್ದಾಡುತ್ತಿದ್ದಾಗ ಜೀವ ಕಳೆಯಲು ಹೊರಟಿದ್ದ ನನ್ನನ್ನು ನನ್ನೊಳಗಿನ ಹೋರಾಟಗಾರ್ತಿಯೇ ತಡೆದು ನಿಲ್ಲಿಸಿದ್ದಳು! ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟಾಗಲೂ  ಕಹಿಯನ್ನೇ ಉಣಬಡಿಸಿದ ವಿಧಿಯು, ಕಣ್ಣಿನ ನೋಡುವ ಶಕ್ತಿಗೆ ಹಾನಿಯುಂಟು ಮಾಡಿತ್ತು. ಇವೆಲ್ಲಾ ನನ್ನ ಪಾಪ ಕರ್ಮಗಳ ಫಲವೆಂದು ದಿನ ಕಳೆದಂತೆ ಅರ್ಥಮಾಡಿಕೊಂಡ ನಾನು ಮತ್ತ್ಯಾವುದೇ ಒಳ್ಳೆಯದರ ನಿರೀಕ್ಷೆಯಲ್ಲಿರಲಿಲ್ಲ! ಆದರೂ ಬಹುಶಃ ನನ್ನ ತಪಸ್ಸು ಅವನ ಮನಸನ್ನು ತಟ್ಟಿರಬೇಕು!  ಅನಿತಾಳನ್ನು ನನ್ನ ಬಳಿ ಕಳುಹಿಸಿದ.   ಬಹುಶಃ ಅನಿತಾಳು ಇಂದಿಗೂ ವಿಸ್ಮಿತಳಾಗುತ್ತಿದ್ದಿರಬಹುದು. ಅದ್ಯಾಕೆ ನಾನು ಇವಳನ್ನು (ನನ್ನನ್ನು) ಆಯ್ಕೆ ಮಾಡಿದೆಯೆಂದು!     ಜಗನ್ನಾಥನ ಲೀಲೆಯನ್ನು ಅರಿತವರಾರು?  ಅನಿತಾಳ ಬೇಡಿಕೆಯಂತೆ ಮಾಡಿದ ೬ ಹೂಗೊಂಚಲುಗಳ ಜಲವರ್ಣ ಇನ್ನೂ ಕೈಗಳಲ್ಲಿ ಶಕ್ತಿಯಿದೆ ಎಂಬುದನ್ನು ನಿರೂಪಿಸಿತು. ನಿಧಾನವಾಗಿ ಬಂದ , ಬೇಡಿಕೆಯಂತೆ ಮಾಡಿಕೊಟ್ಟ ಮತ್ತೆರಡು ಚಿತ್ರಗಳ ಕೆಲಸವು ಮತ್ತಿಷ್ಟು ಹರುಪು ತುಂಬಿತು ವಿನಾ ಇನ್ಯಾವುದೇ ನಿರೀಕ್ಷೆಯನ್ನು ತರಲಿಲ್ಲ. ಆದರೆ ವೀಣಾ ಶ್ರೀನಿವಾಸ್ ಅವರ ಕಲಾಪ್ರದರ್ಶನ ನನ್ನ ಜೀವನದಲ್ಲಿ ಹೊಸ ತಿರುವುವನ್ನು ಪಡೆಯುವುದು ಎಂದೂ ಅನಿಸಿರಲಿಲ್ಲ. ನನ್ನನ್ನು ಕಲಾವಿದರ ಚಾವಡಿಯ ಸದಸ್ಯಳಾಗಿ ಮಾಡಿಕೊಂಡಾಗಲೂ ನಾನು ಅವರಂತಹ ನುರಿತ  ಕಲಾವಿದರ ಮಧ್ಯೆ ಗುರುತಿಸಿಕೊಳ್ಳುವಷ್ಟು ಯೋಗ್ಯತೆ ಪಡೆದಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದ್ದೆ. ಆದರೆ ಆ ಗತಿಯಲ್ಲಿ ಸಾಗಬೇಕೆಂಬ ಬಲು ಆಸೆಯಿದೆ...ಅದಕ್ಕಾಗಿ ಮಾರ್ಗದರ್ಶನ ನೀಡಬೇಕೆಂದು ಕೋರಿದ್ದೆ. ಆದರೆ ಅದು ಇಷ್ಟು ಬೇಗನೆ ಸಿಗುವುದೆಂದು ಕನಸು ಮನಸಿನಲ್ಲಿ ಎಣಿಸರಿರಲಿಲ್ಲ. ೧೮ನೇ ಡಿಸೆಂಬರ್‍‍ನಲ್ಲಿ ನಡೆದ ಕಲಾಮೇಳದಲ್ಲಿ ಪ್ರಸಿದ್ಧ ಕಲಾವಿದರ ಕೃತಿಗಳ ಜೊತೆ ನನ್ನ ಚಿತ್ರ ಪ್ರದರ್ಶನ ನಡೆಯಿತು. ನನ್ನ ಸೌಭಾಗ್ಯವೇ ಸರಿ. ಜೊತೆಗೆ ಅನೇಕ ಕಲಾವಿದರ ಒಡನಾಟದ ಭಾಗ್ಯವೂ ಪಡೆದೆ. ನನ್ನ ಜೀವನದ ಸುದಿನವದು.

































       ಇಷ್ಟೇ ಅಲ್ಲ..ಈಗ ಇನ್ನೊಂದು ಸುವರ್ಣಾವಕಾಶ  ಬಾಗಿಲನ್ನು ತಟ್ಟಿದೆ. ಫೆಬ್ರವರಿ ೫ರಂದು ಮಹಿಳೆಯರು ಪ್ರದರ್ಶಿಸುವ  "ವರ್ಣ ವನಿತೆ" ಎಂಬ ಮಹಿಳೆಯರು ಮಾತ್ರ ನಡೆಸುವ ಶಿಬಿರದಲ್ಲಿ ಚಿತ್ರ ಬಿಡಿಸುದಕ್ಕೆ ೧೭ ಮಹಿಳೆಯರಲ್ಲಿ ಒಬ್ಬಳಾಗಿ ಆಯ್ಕೆಯಾಗಿದ್ದೇನೆ. ಅನನುಭವಿಯಾದ ನನಗೆ ನನ್ನ ಗೆಳೆಯ, ಒಡೆಯನಾದ ಶ್ರೀರಾಮನು ಹನುಮನೊಂದಿಗೆ ಸಹಾಯ ಮಾಡುವನು ಎಂದು ನಂಬುತ್ತೇನೆ. ನನ್ನ ಓದುಗರ ಪ್ರೋತ್ಸಾಹದ ಮಾತುಗಳು ಶ್ರೀರಕ್ಷೆಯನ್ನು ನೀಡುವುದು!

22 December, 2011

ಮೊದಲ ಗ್ಯಾಲರಿ ಭೇಟಿ ಮತ್ತು ವೀಣಾ ಶ್ರೀನಿವಾಸ್!



                     ೨೦೧೦ರ ಮಾರ್ಚ್ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಲೇಖನಗಳು ನನ್ನ ಗಮನ ಸೆಳೆದವು. ಈ ಎರಡೂ ಲೇಖನಗಳು ಚಿತ್ರ ಕಲೆಯ ಬಗ್ಗೆ ಇದ್ದವು. ವಿಕಲ ಚೇತನಳಾದ ಮಂಗಳ ಜ್ಯೋತಿ ಶಾಲೆಯಲ್ಲಿ ಕಲಿತ ಸುಧಾರತ್ನ ಮತ್ತು ವೀಣಾ ಶ್ರೀನಿವಾಸ್. 


        ಬಹುಶಃ ೨೦೦೧ರಲ್ಲೆಂದು ತೋರುತ್ತದೆ. ನನ್ನ ತಮ್ಮನ ಮದುವೆಯಾಗಿ ಎರಡು ವರ್ಷವಾಗಿತ್ತು. ಅವನು ಅಮೇರಿಕದಿಂದ ಊರಿಗೆ ಬಂದಿದ್ದನು. ಮಂಗಳೂರಿನ ಸ್ಕೂಲ್ ಬುಕ್ ಕಂಪನಿಯ ಮೊಮ್ಮಗಳಾದ ಅವನ ಹೆಂಡತಿಯೊಂದಿಗೆ  ಸ್ಕೂಲ್ ಬುಕ್ ಕಂಪನಿಯ ಶ್ರೀನಿವಾಸ್ ಭಂಡಾರಿ ಅವರ ಮನೆಗೂ ಭೇಟಿ ಕೊಟ್ಟಿದ್ದನು. ಅವರೊಂದಿಗೆ ನನ್ನ ತಾಯಿಯೂ ಹೋಗಿದ್ದರು. ಅಲ್ಲಿಂದ ಬಂದ ಅವರು ಮತ್ತು ವಾಣಿ ಹೇಳಿದ ಮಾತು ಈಗಲೂ ನೆನಪಿದೆ...ಒಂದು ಕೋಣೆಯ ತುಂಬಾ ಸುಂದರ ಚಿತ್ರಗಳನ್ನು ವೀಣಾ ಮಾಡಿ ಇಟ್ಟಿದ್ದರು...ಮತ್ತು ಅಮ್ಮನಿಗೆ ಅದನ್ನು ನೋಡಿ ತುಂಬಾನೆ ಸಂತೋಷವಾಯಿತು...ಹಾಗು ನನ್ನ ನೆನಪಾಯಿತು ಎಂದು  ನನಗೆ ರಿಪೋರ್ಟ್ ಕೊಟ್ಟಿದ್ದರು ಸಹ! ಈ ೨೦೧೦ರಲ್ಲಿ ವೀಣಾ ಅವರ ಚಿತ್ರ ಕಲೆಯ ಬಗ್ಗೆ ಪ್ರಕಟವಾದದನ್ನು ನೋಡಿ ಹಿಂದೆ ಅಮ್ಮ ಹೇಳಿದ ಮಾತು ನೆನಪಾಯಿತು. ಅವರ ದೂರವಾಣಿ ಅಂಕೆ ಗೊತ್ತಿಲ್ಲದಿದುದರಿಂದ ಅಂಗಡಿಗೆ ಫೋನು ಮಾಡಿ ತಿಳಕೊಂಡೆ...ಕೂಡಲೇ ವೀಣಾಗೆ ಫೋನು ಹಚ್ಚಿ ಮಾತನಾಡಿ ಅವರಿಗೆ ಅಭಿನಂದನೆಗಳನ್ನು ಕೊಟ್ಟೆ. ಅದರಲ್ಲಿ ಅವರು ಕಾವಿಕಲೆಯ ಬಗ್ಗೆ ಮಾಡುತ್ತಿರುವ ಅಧ್ಯಯನದ ಬಗ್ಗೆಯೂ ಬರೆದಿತ್ತು. ವೀಣಾ ತಮ್ಮ ಮನೆಗೆ ಬಂದು ಭೇಟಿಯಾಗು ಎಂದು ಆಹ್ವಾನವನ್ನೂ ಕೊಟ್ಟಿದ್ದರು...ನಾನು ನನ್ನ ಚಿತ್ರಗಳನ್ನು ನೋಡಿ ಅಭಿಪ್ರಾಯ ಕೊಡಿ ಎಂದು ಕೇಳ್ಕೊಂಡಿದ್ದೆ...ಅಷ್ಟೇ ಮುಂದೆ ನಮ್ಮ ನಡುವೆ ಏನೂ ಬೆಳವಣಿಗೆ ನಡೆದಿರಲಿಲ್ಲ. ಆದರೆ ಇತ್ತೀಚೆಗೆ ನನ್ನ ಉಬ್ಬು ಚಿತ್ರಕ್ಕೆ ಚೌಕಟ್ಟು ಹಾಕಿಸಲು ತೊಂದರೆ ಬಂದಾಗ ಪುನಃ ಅವರಿಗೆ ಫೋನು ಹಚ್ಚಿ ವಿಚಾರಿಸಿದಾಗ, ಅವರು ತಮ್ಮ ಚಿತ್ರಗಳಿಗೆ ಚೌಕಟ್ಟು ಹಚ್ಚಿಸುವನ ಬಳಿ ಕೊಡುವಂತೆ ಹೇಳಿ ತಮ್ಮ ಡಿಸೆಂಬರ್ ೫ರಂದು ನಡೆಯುವ ಚಿತ್ರ ಪ್ರದರ್ಶನಕ್ಕೆ ಆಹ್ವಾನವನ್ನಿತ್ತರು. ಸರಿ, ಇದು ನನಗೆ ಬಂದ ಮೊದಲ ಆಹ್ವಾನ...ನೋಡೋಣ ಎಂದು ಕೊಂಡೆ...ಯಾಕೆಂದರೆ ಇಷ್ಟರವರೆಗೆ ಯಾವ ಗ್ಯಾಲರಿಗೂ ಕಾಲಿಡರಿರಲಿಲ್ಲವಾದುದರಿಂದ ಒಬ್ಬಳೇ ಹೋಗಲು ಮುಜುಗರವಾಗುತಿತ್ತು....ನಮ್ಮಲ್ಲಿ ಬೇರೆ ಯಾರಿಗೂ ಈ ಆರ್ಟ್ ಜಗತ್ತೆಂದರೆ ಅಷ್ಟೊಂದು ಇಷ್ಟವಿಲ್ಲವಾದುದರಿಂದ ನನಗೆ ಏನು ಮಾಡುವುದೆಂದು ತೋಚಿರಲಿಲ್ಲ.  ಸಂಜೆ ಉದ್ಘಾಟನೆ ಹೊತ್ತಿಗೆ ಹೋಗುವುದು ಖಂಡಿತ ಸಾಧ್ಯವಿರಲಿಲ್ಲ...ಅದೇ ಸಮಯದಲ್ಲಿ ನನ್ನ ತರಗತಿ ನಡೆಯು ನಡೆಯುದರಿಂದ.
     
              ಕೊನೆಗೂ ಮಂಗಳವಾರ ಬೆಳಿಗ್ಗೆ ಹೊರಟು ನಿಂತೆ...ಎಷ್ಟು ವೇಗವಾಗಿ ಕೆಲಸ ಮಾಡಿದರೂ ೧೧.೩೦ ಗಿಂತ ಮೊದಲು ಹೊರಡಲಾಗಲಿಲ್ಲ. ಪ್ರದರ್ಶನ ನಡೆಯಿತ್ತಿದ್ದದು ವೀಣಾ ಅವರದ್ದು..ಆದರೆ ನೋಡಲು ಹೋಗುತ್ತಿರುವ ನನ್ನೆದೆ ಢವ ಢವ ಎಂದು ಹೊಡೆದು ಕೊಳ್ಳುತಿತ್ತು. ಬಸ್ಸಿನಿಂದ ಇಳಿದು ಪ್ರಸಾದ್ ಆರ್ಟ್ ಗ್ಯಾಲರಿ ಹತ್ತಿರಬಂದಾಗ ಮೊದಲು ಕಂಡದ್ದು ಕೋಟಿ ಪ್ರಸಾದ್ ಆಳ್ವರನ್ನು..ನೋಡುತ್ತಲೇ ಮುಗುಳ್ನಗೆ ಚಿಮ್ಮಿಸಿದರು ಆಳ್ವರು. (ವರ್ಷದ ಹಿಂದೊಮ್ಮೆ ಅವರನ್ನು ಡ್ರೈವಿಂಗ್ ಕಲಿಯಬೇಕೆಂದು ವಿಚಾರಿಸಲು ಬಂದಿದ್ದಾಗ ಭೇಟಿಯಾಗಿದ್ದೆ..ಮಾತು ಮಾತಲ್ಲಿ ನಾನು ಸಹ ಕಲಿತದ್ದು ಅವರದೇ ಗುರುಗಳಾದ ಬಿ ಜಿ ಮೊಹಮ್ಮದ್‌ರಲ್ಲಿ ಎಂದು ಹೇಳ್ಕೊಂಡಿದ್ದೆ....ಮುಂದೆ ವಾಹನ ಕಲಿಯುವ ಹುರುಪು ಕಮರಿತು..ಹಾಗಾಗಿ ಮತ್ತೆ ಅವರನ್ನು ಭೇಟಿ ಸಹ ಆಗಿರಲಿಲ್ಲ...ಆದರೂ ಅವರು ಮುಖ ಪರಿಚಯವಿದ್ದ ಕಾರಣ ಮುಗುಳ್ನಕ್ಕರು)  ಸರಿ, ಒಳ್ಳೆ ಶಕುನ ಎಂದು ಕೊಂಡು ನಿಧಾನವಾಗಿ ಗ್ಯಾಲರಿಯಲ್ಲಿ ಕಾಲಿಟ್ಟೆ...ವೀಣಾ ಅವರ ಮುಖ ಅರಳಿತು...ಎದ್ದು ಕೈ ನೀಡಿ ಸ್ವಾಗತಿಸಿದರು....ಚಿತ್ರಗಳನ್ನು ನೋಡಲು ಹೋಗು...ಸ್ವಲ್ಪ ಹೊತ್ತಲ್ಲೇ ಬಂದು ಸೇರುವೆ ಎಂದು ಸೂಚಿಸಿದರು.  ಢವಢವಿಸುವ ಎದೆ ಶಾಂತವಾಗಿತ್ತು..ನಿಧಾನವಾಗಿ ಚಿತ್ರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಆನಂದ ಪಡುತ್ತಿದ್ದೆ. ಅವರ ಒಂದು ಚಿತ್ರ ಹೃದಯವನ್ನು ತಟ್ಟಿತು....ಕಾಲ ಚಕ್ರ ಮಧ್ಯದಲ್ಲಿ ಸುತ್ತುತ್ತಿದೆ ಒಂದು ತುದಿಯಲ್ಲಿ ಕಣ್ಣಲ್ಲಿ ನೀರು ತೊಟ್ಟಕ್ಕುತ್ತಿರುವ ಬಾಲೆ ಇನ್ನೊಂದು ತುದಿಯಲ್ಲಿ ಯಮದೂತರ ಆಗಮನಕ್ಕಾಗಿ ಕಾದಿರುವ ಹಣ್ಣು ಹಣ್ಣು ಮುದುಕಿ!  ಈ ಚಿತ್ರವು ಹೆಣ್ಣು ಮಕ್ಕಳ ಕಷ್ಟ ಕಾರ್ಪಣ್ಯವನ್ನು ಹೇಗೆ ಹಿಡಿದಿಟ್ಟು ಕೊಂಡಿದೆಯಲ್ಲಾ ಅಂದು ಕೊಂಡೆ! ಸ್ವಲ್ಪ ಹೊತ್ತಲ್ಲೇ ವೀಣಾ ಅವರು ಬಂದು ಕೂಡಿಕೊಂಡರು....ನನ್ನ ಮನದಲ್ಲಿದ್ದುದನ್ನು ಅವರಿಗೆ ಹೇಳಿದೆ. ಅವರು ಆ ಚಿತ್ರ ಅವರಿಗೂ ಕೊಟ್ಟ ಸಂತೃಪ್ತಿ  ಹೇಳಿ...ಇನ್ನೂ ಅದರಲ್ಲಿ ಕೆಲಸ ಬಾಕಿಯಿದೆ ಅಂದರು. ಅಲ್ಲಿಂದ ನಮ್ಮ ಮಾತು ಕತೆ ಕಾವಿ ಕಲೆಯ ಬಗ್ಗೆ ತಿರುಗಿತು....ಆ ಬಗ್ಗೆಯೂ ಹೇಳಿಕೊಂಡರು. ಹೊನ್ನಾವರದಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಗೋಡೆಗಳಲ್ಲಿರುವ ಈ ಉಬ್ಬು ಚಿತ್ರಗಳ ಬಗ್ಗೆ ಹೇಳಿದರು. ದೇವಸ್ಥಾನದ ನವೀಕರಣ ಮಾಡುವ ಯೋಜನೆಯಲ್ಲಿ ನಾವು ಹಲವಾರು ಶತಮಾನಗಳ ಹಿಂದಿನ ಕಲೆಯಿಂದ ಕೊಂಡಿಗಳನ್ನು ಕಳಚಿಕೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಅದರ ಪುನರುತ್ತಾನಕ್ಕಾಗಿ ತಾವು ದೇವಸ್ಥಾನದ ಆವರಣದಲ್ಲಿರುವ ಈ ಉಬ್ಬು ಚಿತ್ರಗಳ ಫೋಟೋ ತೆಗೆದು ಅದನ್ನು ಕ್ಯಾನ್ವಾಸಿನಲ್ಲಿ ಪುನಃ ರೂಪಿಸಿ ಜನರ ಗಮನ ಸೆಳೆಯುವ ಪ್ರಯತ್ನಕ್ಕೆ ತೊಡಗಿರುವುದನ್ನು ತಿಳಿಸಿದರು.  ನಾನು ಬರುವಾಗಲೇ ಈ ನನ್ನ ಮೊದಲ ಗ್ಯಾಲರಿಯ ಭೇಟಿಯ ಬಗ್ಗೆ ಬ್ಲಾಗಿನಲ್ಲಿ ಬರೆಯಬೇಕೆಂದುಕೊಂಡಿದ್ದೆ..ಅದಕ್ಕಾಗಿ ಫೋಟೋ ತೆಗೆಯಲು ಹಿಂಜರಿಕೆಯಿಂದಲೇ ವೀಣಾ ಅನುಮತಿ ಕೇಳಿದೆ....ಬಹಳ ಸಂತೋಷದಿಂದಲೇ ಒಪ್ಪಿದರು. ಕಲಾವಿದರೆಂದರೆ ಅವರು ನಮ್ಮಂತಹ ಸಾಮಾನ್ಯರ ಜೊತೆಯಲ್ಲಿ ಬೆರೆಯುವುದಿಲ್ಲವೆಂದು ಅಂದುಕೊಂಡ ನನಗೆ ಇವರ ನಡವಳಿಕೆ ಬಹಳನೇ ಆಶ್ಚರ್ಯ ಆನಂದ ತಂದಿತು. ಅವರ ಬಯೋ ಡಾಟವೂ ಬೇಕೆಂದು ಹೇಳಿ ದೊಡ್ಡ ಸಂದರ್ಶನ ನಡೆಸುವವಳಂತೆ ಎಲ್ಲವನ್ನೂ ಕೇಳಿಕೊಂಡು ಬರೆದುಕೊಂಡೆ. ಇಷ್ಟೆಲ್ಲಾ ಆದ ನಂತರ ನನ್ನ ಗಮನ ಅಲ್ಲಿದ್ದ ಇಬ್ಬರು ಮಹನೀಯರ ಕಡೆ ತಿರುಗಿತು. ನೋಡಿದರೆ ಪರಿಚಿತರಂತೆ ತೋರುತ್ತಿದ್ದರು..ಇವರು ಕುದ್ರೋಳಿ ಗಣೇಶರಂತಿದ್ದಾರಲ್ಲವೇ ಎಂದು ...ಎರಡು ಮೂರು ಸಲ ಆಲೋಚಿಸುತ್ತಲೇ ನೀವು....ಗ...ಣೇಶ...ಕುದ್ರೋಳಿ....ಎಂದು ತಡವಡಿಸುತ್ತಲೇ ಅವರತ್ತ ನೋಡಿದಾಗ...ಅವರು ನಸುನಗುತ್ತಲೇ ಹೌದು ಅಂದರು. ಅಯ್ಯೋ ಇವರು ನನ್ನೊಂದಿಗೆ ಮಾತನಾಡುವುದು ಕನಸಾ ನನಸಾ? ಎಂದು ನನ್ನಲ್ಲೇ ಬಡಬಡಿಸಿದೆ.  ಸರಾಗವಾಗಿ ನನ್ನನ್ನು ತಮ್ಮ ಮಾತುಕತೆಯಲ್ಲಿ ಸೇರಿಸಿಕೊಂಡರು ಅಲ್ಲದೆ ತಮ್ಮ ಜೊತೆಯಲ್ಲಿ ಫೊಟೋ ತೆಗೆಯಲು ಅನುಮತಿ ಕೊಟ್ಟರು ಮಾತ್ರವಲ್ಲದೆ, ತಾವೇ ವೀಣಾ ಮತ್ತು ನಾನು ಜೊತೆಯಲ್ಲಿ ನಿಂತ ಚಿತ್ರವನ್ನೂ ತೆಗೆದರು....ಮೊದಲೇ ಹೇಳಿದಂತೆ ಮತ್ತೊಬ್ಬರೂ ಅಲ್ಲಿದರು...ಈಗ ನನಗೆ ಬಹಳ ಧೈರ್ಯ ಬಂದಿತ್ತು. ಅವರನ್ನು ತಾವು ಸಹ ಕಲಾವಿದರೇ ಎಂದು ಪ್ರಶ್ನಿಸಿದೆ...ನಗುತ್ತಲೇ ಪ್ರಶಾಂತ್ ನಾನು...ನಿಮ್ಮ ಪರಿಚಯ ನನಗೆ ಚೆನ್ನಾಗಿ ಇದೆ....ನೀವು ಚಿಕ್ಕಂದಿನಿಂದ ನನ್ನನ್ನು ನೋಡಿದ್ದಿರಿ ಎಂದು ನನ್ನ ಹಳೆಯ ದಿನಗಳ ನೆನಪು ಕೊಟ್ಟ ಪ್ರಶಾಂತ್!  ಒಟ್ಟಾರೆ ಡಿಸೆಂಬರ್ ೫ ನನ್ನ ಬಾಳಿನಲ್ಲಿ ಮತ್ತೊಂದು ತಿರುವಿಗೆ ನಾಂದಿ ಹಾಡಿತು. ವೀಣಾ ನನ್ನನ್ನು ಕಲಾವಿದರ ಕೂಟದಲ್ಲಿ ಸೇರಿಸಿ ಕೊಂಡರು ಮಾತ್ರವಲ್ಲದೆ ಡಿಸೆಂಬರ್ ೧೮ರಂದು ನಡೆಯುವ ಕಲಾಮೇಳದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.












     ವೀಣಾ ಅವರು ಒಂದು ನಮ್ಮ ನಾಡಿನ ಅಪ್ರತಿಮ ಚಿತ್ರಕಲಾವಿದೆ ಖಂಡಿತ ಹೌದು...ಅದಕ್ಕಿಂತಲೂ ಅವರೊಳಗೆ ಇರುವ ಒಂದು ಅತ್ಯುತ್ತಮ ಚೇತನ, ಆತ್ಮವನ್ನು ಅನುಭವಿಸಿದೆ.  ಅವರು ಮಹಿಳೆಯರು ಜೀವನದಲ್ಲಿ ಪ್ರತಿಯೊಂದು ಘಟ್ಟದಲ್ಲಿ ಪುರುಷನನ್ನೇ ಅವಲಂಬಿಸಿ ನಡೆಸುವ ಜೀವನದ ಬಗ್ಗೆ ಸ್ಪಂದಿಸುವ ರೀತಿ ನಿಜಕ್ಕೂ ಆಶ್ಚರ್ಯಕರವಾಗಿತ್ತು.  ಮಹಿಳೆಯರ ಈ ರೀತಿಯ ಅವಲಂಬಿತ ಜೀವನ, ಪುರುಷರ ದಬ್ಬಾಳಿಕೆ ಇದರ ಬಗ್ಗೆ ಅವರ ಕಳಕಳಿ ಚಿತ್ರದಲ್ಲಿಯೂ, ಅವರ ಮಾತಿನಲ್ಲಿಯೂ ವ್ಯಕ್ತವಾಗುತಿತ್ತು.  ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಈ ಧ್ವನಿಗಳು ಅಡಗಿ ಹೋಗುತ್ತವೆ...




      ವೀಣಾ ಶ್ರೀನಿವಾಸ್ ಅವರ ಕಿರು ಪರಿಚಯ!
 ತಂದೆ ಯು. ಜೆ. ಕಾಮತ್ ಅವರು ನಿವೃತ್ತ ಬ್ಯಾಂಕ್ ಅಧಿಕಾರಿ. ತಾಯಿ ಸಖು ಕಾಮತ್...ಸರಳ, ಸದ್ಗುಣಗಳ ದಂಪತಿಗಳ ಸಂತಾನವಾದ ಇವರು ಸ್ವಾಭಾವಿಕವಾಗಿಯೇ ಈ ಉದಾತ್ತ ಗುಣಗಳನ್ನು ತಮ್ಮ ತಂದೆ ತಾಯಿಯರಿಂದ ಎರವು ಪಡಕೊಂಡಿದ್ದಾರೆಂದೆನಿಸುತ್ತದೆ. ತಂದೆಗೆ ಬ್ಯಾಂಕ್‍ನಲ್ಲಿ ಕೆಲಸವಿದ್ದುದರಿಂದ ಸಹಜವಾಗಿಯೇ  ವೀಣಾ ಅವರು ತಮ್ಮ ವಿದ್ಯಾಭ್ಯಾಸವನ್ನು ಬೇರೆ ಬೇರೆ ಊರುಗಳಲ್ಲಿ ಪಡಕೊಂಡರು. ಪ್ರಾಥಮಿಕ ಕಲಿಕೆ ದೆಹಲಿಯ ಕನ್ನಡ ಶಾಲೆಯಲ್ಲಿ ನಡೆಯಿತೆಂದು ಅಭಿಮಾನದಿಂದ ಹೇಳ್ಕೊಂಡರು. ಹತ್ತನೇ ತರಗತಿ ಉಡುಪಿಯಲ್ಲಿ, ೧೧,೧೨ ನ್ನು ಪುನಃ ದೆಹಲಿಯಲ್ಲಿ ಮಾಡಿದರು. ಬೆಂಗಳೂರಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆಯುತ್ತಿರುವಾಗಲೇ ವಿವಾಹ ನಡೆಯಿತೆಂದರು. ಈ ಮಧ್ಯೆ ನನಗೆ ಅವರು ತಮ್ಮ ಬಾಲ್ಯದಿಂದಲೇ ಚಿತ್ರ ಕಲೆ ಕಲಿಯುತ್ತಿದ್ದರೇನೋ ಎಂದು ಕುತೂಹಲ..೯ನೇತರಗತಿಯಲ್ಲಿದ್ದಾಗ ಸ್ವಲ್ಪ ಸಮಯ ಕಲಿತ ಮಾಹಿತಿ ಕೊಟ್ಟರು. ಸರಿ, ಹಾಗಾದರೆ ಇವರು ಯಾವಾಗ ನುರಿತ ಕಲಾವಿದೆಯಾಗಿ ರೂಪುಗೊಂಡರು ಎಂದು ನನ್ನ ಪ್ರಶ್ನೆ!  ಅವರ ಉತ್ತರ ನನ್ನನ್ನು ಅಚ್ಚರಿಗೆ ನೂಕಿತು. ಮದುವೆಯಾದ ಮೇಲೆ ತಮ್ಮ ಮಾವನರು ಎಂ ಆರ್ ಪಾವಂಜೆ ಬಳಿ ಕಳುಹಿಸಿದರು!!!! ಮದುವೆಯಾದ ಮೇಲೆ ನನ್ನ ಕಲಾಜೀವನಕ್ಕೆ ವಿರಾಮ ಚಿನ್ಹೆ! ಇವರ ಕಲಾಜೀವನಕ್ಕೆ ನಾಂದಿ. ವಿಶೇಷವೆಂದರೆ ಇವೆರಡೂ ೧೯೯೦-೯೧ರಲ್ಲಿ ನಡೆದದ್ದು...ನನ್ನ ವಿವಾಹ ’೯೦ರಲ್ಲಿ ನಡೆಯಿತು..ಅವರದು ’೯೧ರಲ್ಲಿ...ಹೋಗಲಿ, ಅವರವರು ಪಡಕೊಂಡು ಬಂದದ್ದು! 
    ವೀಣಾ ಅವರು ತಮ್ಮ ಅತ್ತೆ, ಮಾವ, ಪತಿ ಶ್ರೀನಿವಾಸ್ ಅವರ ಪ್ರೋತ್ಸಾಹದಿಂದ ಉತ್ತೇಜಿತರಾಗಿ ಕಲೆಯನ್ನು ಮತ್ತಷ್ಟು ಶ್ರೀಮಂತ ಮಾಡತೊಡಗುವುದರಲ್ಲಿ ಮಗ್ನರಾಗಿದ್ದಾರೆ. ಇವರ ಮಗಳು ತಪಸ್ಯಾತನ್ನ ತಾಯಿಯ ಹೆಜ್ಜೆಯಲ್ಲೇ ನಡೆಯುತ್ತಿದ್ದಾಳೆ ಅನ್ನುವುದು ಬಹಳ ಸಂತೋಷದ ಸಂಗತಿ!

02 December, 2011

"ಅಣ್ಣಾ ಹಜಾರೆ ಏನಾಗಿದೆ ನಿಮಗೆ?"- ಒಂದು ಸಮರ್ಥನೆಯ ಯತ್ನ!



ಪ್ರಿಯ ಓದುಗರೇ,
   ಈ ಲೇಖನ ನನ್ನ <ಅಣ್ಣಾ ಹಜಾರೇ- ಏನಾಗಿದೆ ನಿಮಗೆ>  ಇದಕ್ಕೆ ಬಂದ ಪ್ರತಿಕ್ರಿಯೆಗಳಿಗಾಗಿ ತಯಾರಾದ ಬರಹ.  ಇದನ್ನು ಸಂಪದದಲ್ಲೂ ಹಾಕಿದ್ದೆ... ಬಹುಶಃ  ಹಜಾರೆಯ ಮೇಲೆ ಯಾವ ಅಪಾದನೆಯನ್ನು ಒಪ್ಪಲು ಹೆಚ್ಚಿನವರು ತಯಾರಿಲ್ಲ... ಆದರೆ ನನಗೆ ಹಜಾರೆ ಮೇಲೆ ಅಪಾರ ಗೌರವವಿದೆ.. ಅವರು ತಂದ ಬದಲಾವಣೆಗಳನ್ನು ಮೆಚ್ಚಿದ್ದೇನೆ ಕೂಡ.     ಆದರೂ ಕೆಲವೊಂದು ನಡವಳಿಕೆ ಸರಿಯೆಂದು ನನ್ನ ಮನ ಒಪ್ಪಲಿಲ್ಲ.. ಅದರ ಫಲ ಈ ಲೇಖನ.
                                
      ಮೊದಲಾಗಿ ಒಂದು ಮಾತನ್ನು ಸ್ಪಷ್ಟ ಪಡಿಸಲು ಬಯಸುತ್ತೇನೆ. ಇದು ಯಾವ ಕಾರಣಕ್ಕೂ ಯಾರನ್ನೂ ದೂಷಿಸಲು ಅಥವ ಯಾರ ತಪ್ಪನ್ನು ಎತ್ತಿ ತೋರಿಸಿ ಅವರನ್ನು ಅಪಮಾನ ಪಡಿಸಲು ಉದ್ದೇಶಿಸಿದ್ಧ ಪಡಿಸಿದಲ್ಲ... ಇದರಿಂದ ವೈಯುಕ್ತಿಕವಾಗಿ ನನಗೆ ಯಾವ ಲಾಭವೂ ಸಿಗಲಿಲ್ಲ, ಮುಂದೆ ಸಿಗುವುದೂ ಇಲ್ಲ... ಕೇವಲ ದೇಶದ, ನಮ್ಮ ಮುಂದಿನ ಜನಾಂಗದ ಏಳಿಗೆಯ ಬಗ್ಗೆ ಇರುವ ಕಳಕಳಿಯು ಹೀಗೆ, ಈ ವಿಷಯದ ಮೇಲೆ ಬರೆಯುವಂತೆ ಪ್ರೇರೇಪಿಸಿತು. ಹಾಗಾಗಿ ನಿಮ್ಮ ಭಾವನೆಗಳಿಗೆ ಎಲ್ಲಿಯಾದರೂ ನೋವಾದರೆ ಕ್ಷಮೆಯಿರಲಿ.  ಇಲ್ಲಿ ಕೆಲವರ ಹೇಳಿಕೆಯನ್ನು ಉಲ್ಲೇಖಿಸಬಹುದು... ಅದು ಯಾರನ್ನೂ ಹೀಯಾಳಿಸಲಲ್ಲ.. ಕೇವಲ ನನ್ನ ಬರಹವನ್ನು ಸಮರ್ಥಿಸಲು... ಅದಕ್ಕೂ ಮೊದಲೇ ಕ್ಷಮೆ ಕೋರುತ್ತೇನೆ.

      ಮೊದಲಾಗಿ ನನ್ನ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳಿಗೆ ಸ್ಪಂದಿಸುವುದು ನನ್ನ ಅಭ್ಯಾಸ... ಅದು ಸರಿಯೋ ತಪ್ಪೋ ಎಂದು ಗೊತ್ತಿಲ್ಲ... ಅದರಲ್ಲೂ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ವಿಶೇಷ ಆಸಕ್ತಿ... ಯಾಕೆಂದರೆ ಗೊತ್ತಿದ್ದೊ.. ಗೊತ್ತಿಲ್ಲದೆಯೋ ಜನರು ಇವರನ್ನು ಇವರ ನಡವಳಿಕೆಯನ್ನು ಕಣ್ಣು ಮುಚ್ಚಿ ಅನುಸರಿಸುತ್ತಾರೆ... ಬಹುಶಃ ಇತ್ತೀಚಿನವರೆಗೆ ಅಂದರೆ ಈ ಲೋಕಪಾಲ ಮಸೂದೆಯ ಜಾರಿಗೆಗಾಗಿ ಸತ್ಯಾಗ್ರಹ ನಡೆಯುವ ತನಕ ಹೆಚ್ಚಿನವರಿಗೆ ಹಜಾರೆಯ ಬಗ್ಗೆ ಏನೂ ಮಾಹಿತಿ ಇರಲಿಲ್ಲ... ನಾನು ಅವರ ಬಗ್ಗೆ   ಓದಿದ್ದೆನಾದರೂ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಆದರೆ ರಾಮಲೀಲಾ ಮೈದಾನದಲ್ಲಿ ನಡೆದ ೧೨ದಿನದ ಉಪವಾಸ ಅವರನ್ನು ಬರೇ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲಿಯೂ ಪ್ರಸಿದ್ಧಿಗೆ ತಂದಿತು... ಒಂದು ದಿನ ಉಪವಾಸ ಮಾಡುವುದೇ ಕಷ್ಟ.. ಅದರಲ್ಲೂ ೭೪ರ ವಯೋವೃದ್ಧ... ಒಂದು ಸೋಜಿಗವೆಂದೆನಿಸಿತು. ಸರಕಾರಕ್ಕೆ ನಡುಕ ತಂದರು... ಜನಾನುರಾಗವನ್ನು ಕೆಲವೇ ದಿನಗಳಲ್ಲಿ ಪಡೆದರು.. ಇವರ ಕರೆಗೆ ಓಗೊಟ್ಟು ಜನ ಸಾಗರದಂತೆ ಬಂದು ಸೇರಿತು... ಅದರಲ್ಲೂ ಯಾವಾಗಲು ನಿರ್ಲಿಪ್ತ ಧೋರಣೆಯಿರುವ ಐ ಟಿ ಟೆಕ್ಕಿಗಳು... ತಮ್ಮ ವೀಕ್ ಎಂಡ್‌ನ್ನು ಅಣ್ಣನವರಿಗೆ ಮೀಸಲಾಗಿಟ್ಟರು... ಈ ಎಲ್ಲಾ ವಿದ್ಯಮಾನಗಳನೆಲ್ಲಾ  ಬಿಟ್ಟ ಕಣ್ಗಳಿಂದ , ಕುತೂಹಲದಿಂದ ಗಮನಿಸುತ್ತಿದ್ದ ನಾನು ಇದರ ಮೇಲೊಂದು ಬರಹ ಬರೆದೆನು... ನನ್ನಲ್ಲೊಂದು ಹೊಸ ಆಸೆ ಉದಯವಾಯಿತು... ಹೊಸ ಭಾರತದ ಉತ್ಥಾನದ ಸ್ವಾಗತಕ್ಕಾಗಿ ತಯಾರಾದೆ...

    ಆದರೆ ಇತ್ತೀಚಿನ ಹಜಾರೆ  ತಂಡದಲ್ಲಿ ನಡೆದಿರುವ ಬೆಳವಣಿಗೆ ನಿರಾಸೆ ತಂದಿತು.. ಮೊದಲಾಗಿ ತಂಡದವರು ಬೇಕಾಬಿಟ್ಟಿಯಾಗಿ   ಹೇಳಿಕೆ ಕೊಡಲಾರಂಭಿಸಿದರು... ಒಂದಿಷ್ಟೂ ಮುಲಾಜಿಲ್ಲದೆ ಅದನ್ನು ಸಮರ್ಥಿಸಲೂ ತೊಡಗಿದರು.

          ಮೊದಲಾಗಿ ನಾನು ಕಿರಣ್ ಬೇಡಿಯವರ ಬಗ್ಗೆ ಉಲ್ಲೇಖಿಸಲು ಬಯಸುತ್ತೇನೆ.  ಕಿರಣ್ ಬೇಡಿ ನನ್ನ ಅಚ್ಚುಮೆಚ್ಚಿನ ಮಹಿಳೆಯಾಗಿದ್ದರು. ತಮ್ಮ ಶಿಸ್ತಿನ ನಡವಳಿಕೆಯಿಂದ, ತಿಹಾರ್ ಜೈಲಿನಲ್ಲಿ ತಂದ ಮಾದರಿ ಬದಲಾವಣೆಗಳಿಂದ ಅವರು  ಜನ ಮನದಲ್ಲಿ ಒಂದು ಪ್ರಮುಖ  ಸ್ಥಾನ ಪಡೆಯುವಂತೆ ಮಾಡಿತು.  ಆದರೆ ಅವರ ರಾಜಿನಾಮೆ ಬಹಳ ಕೌತುಕಮಯವಾಗಿತ್ತು, ಸಹಜವಾಗಿಯೇ ಇದರ ಬಗ್ಗೆಯೂ ಕತೆ ಹುಟ್ಟಿತ್ತು ಕೂಡ! ನ್ಯಾಯವಾಗಿ ತಮಗೆ ಬರಬೇಕಾದ ಡೆಲ್ಲಿ ಕಮಿಷನರ್ ಪದವಿ ಸಿಗದೇ ಹೋದುದಕ್ಕಾಗಿ ಪ್ರತಿಭಟನೆ ತೋರಲು ಅವರು ತಮ್ಮ ಹುದ್ದೆಯಿಂದ ಹೊರನಡೆದರು ಎಂದು. ಈ ಕತೆ ಎಷ್ಟು ನಿಜವೋ ತಿಳಿಯದು. ಒಂದು ವೇಳೆ ಹೌದೆಂದಾರೂ ಅವರು ರಾಜಿನಾಮೆ ಕೊಟ್ಟು ಪ್ರತಿಭಟಿಸಿದ್ದು ಸರಿಯಾಗಿಯೇ ಇದೆ.  ಆದರೆ ಅದರಲ್ಲಿಯೂ ಒಂದು ಟ್ವಿಸ್ಟ್‌ಯಿದೆ... ಅವರಿಗೆ ಈ ಯು ಪಿ ಎ ಸರಕಾರದ ಮೇಲೆ ಈ ವಿಷಯಕ್ಕೆ ಕೋಪವಿದ್ದು ಪ್ರತಿಕಾರ ತೆಗೆದುಕೊಳ್ಳಲು ಅಣ್ಣಾ ಅವರು ಮತ್ತವರ ಚಳುವಳಿ ಮಾಧ್ಯಮವೆಂದಾದರೆ ಅದು   ಖಂಡನೀಯ. ಆದರೆ ಇದರ ಸತ್ಯಾಸತ್ಯೆಗಳನ್ನು ಕಂಡು ಹಿಡಿಯಲು ಸಾದ್ಯವೇ?     ಮಾನವನ ಸ್ವಭಾವ ಬಹಳ ನಿಗೂಢವಾದದ್ದು, ಯಾವಾಗ ಯಾರು ಬದಲಾಗುತ್ತಾರೆ ಎಂದು ಹೇಳುವುದು ಅಸಾಧ್ಯ.   ಅಲ್ಲದೆ ಇತ್ತೀಚಿನ ಸುದ್ದಿಯ ಪ್ರಕಾರ ಅವರು ತಮ್ಮ ಪ್ರಯಾಣದ ವೆಚ್ಚದ ನೆಪ ಮಾಡಿ ಹೆಚ್ಚು ಭತ್ಯ ವಸೂಲಿ ಮಾಡಿದ್ದು ನನ್ನೊಳಗಿನ  ತಳಮಳಕ್ಕೆ  ಕಾರಣವಾಯಿತು. ಅಷ್ಟೆ ಅಲ್ಲದೆ  ಈ ವಿಷಯ ಬಯಲಾದ ಕೂಡಲೇ ಅವರು ಆ ಹಣವನ್ನು ತಾವು ಟ್ರಸ್ಟ್‌ಗೆ ಸೇರಿಸಿದ ವಿಷಯವನ್ನು ಮಾಮುಲಾಗಿ ಘೋಷಿಸಿದರು. ಇದು ಸರಿಯೇ? ಸರಿ ಈ ವಿಷಯವು ಸ್ವಲ್ಪ ಸಮಯ ಚರ್ಚೆಗೆ ಗ್ರಾಸವಾಯಿತು.. ಈಗ ಕೆಲವೇ ಮಂದಿ ಅಣ್ಣಾ ಅಭಿಮಾನಿಗಳಿಗೆ ಸ್ವಲ್ಪ ಇಕ್ಕಟ್ಟೂ ಆಯಿತು.

    ಹೋಗಲಿ, ಅವರು ಹಣ ಹೆಚ್ಚು ತೆಗೆದುಕೊಂಡರೂ ಅದನ್ನು ಪ್ರಾಯೋಜಕರ ಗಮನಕ್ಕೆ ತಂದು ವಿಷಯವನ್ನು ಸ್ಪಷ್ಟ ಪಡಿಸಿ ತೆಗೆದು ಕೊಳ್ಳಬಹುದಾಗಿತ್ತು... ಆ ಹಣ ಜನರ ಸೇವೆಗೆ ಸಲ್ಲುವುದಾದರೆ ಬಹುಶಃ ಅವರಿಗೆ ಆಕ್ಷೇಪವಿರುತ್ತಿರಲಿಲ್ಲವೆಂದೆನಿಸುದು.  ಇಲ್ಲಿ ನನಗೆ ಪುನಃ ಗಾಂಧೀಜಿಯವರ ನೆನೆಪಾಯಿತು.  ಸುಳ್ಳು ಹೇಳಿ, ಅಥವಾ ಮೋಸ ಮಾಡಿ ಸಂಪಾದಿಸಿದ ಹಣದ ಸದುಪಯೋಗವಾಗುತ್ತದೆಯೇ? ಇದು ನಮ್ಮ ರಾಜಕಾರಣಿಗಳು, ಉದ್ಯಮಿಗಳು ತಿರುಪತಿ ( ಅಥವಾ ಬೇರೆ ಬಹಳ ವಿಖ್ಯಾತ ದೇವರ) ಹುಂಡಿ ತುಂಬುವುದರ ಹಾಗೆ ಅಲ್ಲವೇ? ಹೇಳಿ ಇಂತವರಿಗೆ ಬೇರೆಯವರ ಲೋಪ ದೋಷ ಎತ್ತಿ ತೋರಿಸುವ ಹಕ್ಕಿದೆಯೇ? ಇದರಲ್ಲಿ ಸೂಕ್ಷ್ಮವಾಗಿ ವ್ಯತ್ಯಾಸ ಖಂಡಿತವಾಗಿ ಇದೆ. ಸರಿ ಒಪ್ಪುತ್ತೇನೆ.. ರಾಜಕಾರಣಿಗಳು ಮಾಡುವುದು ಸ್ವಾರ್ಥಕ್ಕಾಗಿ ಮತ್ತು ಕಿರಣ್  ಬೇಡಿ ಜನರ ಏಳಿಗೆಗೆಗಾಗಿ... ಆದರೆ ನೀವು ಏನೇ ಹೇಳಿ ನಮ್ಮ ಒಳ್ಳೆಯ ಕೆಲಸಕ್ಕಾಗಿ ನಾವು ನೇರದಾರಿಯನ್ನೇ ಹಿಡಿಯಬೇಕು.. ಇದು ನಾವು ತಪ್ಪು ದಾರಿಯಲ್ಲಿ ಸಂಪಾದನೆ ಮಾಡಿ ಅದರ ಕರ್ಮ ಫಲದಿಂದ ಪಾರಾಗುವುದಕ್ಕೆ ಭಗವಂತನಿಗೆ ತರ ತರದ ಲಂಚ ಕೊಡುತ್ತೇವೆ ನೋಡಿ.. ಹಾಗೆಯೇ ಆಯಿತಲ್ಲವೆ?  ಆದರೂ ತಿಳಿದವರು ನನ್ನ ಅಭಿಪ್ರಾಯವನ್ನು ಸರಿಯಲ್ಲವೆಂದು ತಿಳಿದರೆ... ಯಾಕೆ ಎಂದು ನಿರೂಪಿಸಿದರೆ ಅದನ್ನು ಖಂಡಿತ ಸ್ವೀಕರಿಸಲು ಅಡ್ಡಿಯಿಲ್ಲ.

   ಈಗ ಭರತ್ ಭೂಷಣ್- ಅವರಂತೂ ತಮ್ಮ ಹದ್ದನ್ನೇ ಮೀರಿ ಕಾಶ್ಮೀರದ ಬಗ್ಗೆ ಮಾಧ್ಯಮದ ಎದುರು ಹೇಳಿಕೆ ಕೊಟ್ಟಾಗ ಸ್ವತಃ  ಅಣ್ಣಾ ಹಜಾರೆಯೇ ದಂಗಾದರು!  ನಾವೆಲ್ಲ ನೋಡಿದ ಕಪಾಳ ಮೋಕ್ಷದ ಪ್ರಹಸನ ಇಲ್ಲೂ ನಡೆದಿತ್ತು.. ( ಇಲ್ಲಿ ಕಪಾಳ ಮಾತ್ರವಲ್ಲದೆ ಒಟ್ಟಾರೆ ಹಿಗ್ಗು ಮುಗ್ಗು ಹೊಡೆದರಲ್ಲವೆ?) ನೋಡಿ ನಮ್ಮವರ ಮೈಂಡ್ ಸೆಟ್ ಉಂಟ್ಲವ ಅದು ಬಹಳ ವಿಚಿತ್ರವಾದದ್ದು.. ಕೆಲವೊಮ್ಮೆ ತಲೆಯೆತ್ತಿ ಕೂರಿಸುತ್ತಾರೆ.. ಮತ್ತೆ ಅವರನ್ನೇ ಯಾವಾಗ ಎತ್ತಿ ಬೀಸಿ ಹೊಡೆಯುತ್ತಾರೆಂದು ಹೇಳಲು ಅಸಾಧ್ಯ! ಹಾಗೊಂದು ಹೇಳಿಕೆ ಕೊಡುವ ಮೊದಲು ತಮ್ಮವರೊಂದಿಗೆ ಸಮಾಲೋಚನೆ ಕೂಡ ಮಾಡಿಲ್ಲ.. ಅಂದರೆ ಈ ತಂಡದವರು ತಮ್ಮೆಲ್ಲ ಆಲೋಚನೆ ಹಾಗು ಕೆಲಸಗಳು ಎಂದಿಗೂ ನ್ಯೂನತಾರಹಿತವಾದದ್ದು ಎಂದು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆಯೆ? ಇನ್ನು ಅರವಿಂದ ಕೆಜ್ರಿವಾಲ ಅವರೂ ಸರಕಾರಿ ಸರ್ವಿಸ್‌ನಲ್ಲಿರುವಾಗ... ಈ ಕತೆಗಳೆಲ್ಲಾ ತಮಗೆ ತಿಳಿದೇ ಇದೆ.. ಅಂತೂ ಅದಕ್ಕೂ ಜನರ ಅನುಕಂಪ ಪಡೆಯುವುದಕ್ಕೋ,  ತಮ್ಮ ಮಿತ್ರ ಹಾಗು ತಂದೆಯವರಿಂದ ಹಣ ಪಡೆದು ಸರಕಾರಕ್ಕೆ ಕೊಡಬೇಕಾದ ಬಾಕಿ ಸಲ್ಲಿಸಿದರೆಂದು ಮಾಧ್ಯಮದ ಮುಂದೆ ಹೇಳಿಕೊಂಡರು. ( ಇಲ್ಲಿ ನಮ್ಮ ಸರಕಾರವು ಕೂಡ ಪ್ರತಿಕಾರಕ್ಕಾಗಿ ಹೀಗೆ ಮಾಡಿತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ. ) ಅವರ ಮೇಲು ಹಲ್ಲೆ ನಡೆಯಿತು, ಕಾಂಗ್ರೆಸ್  ಬೆಂಬಲಿಗನಿಂದ.  ಹಲ್ಲೆಕಾರ ಜಿತ್ರೇಂದ್ರ ಪಾತಕ್‌ನನ್ನು  ಕೆಲಸದಿಂದ ತೆಗೆದು ಹಾಕಬಾರದೆಂದು ಕೆಜ್ರಿವಾಲ ಕಂಪನಿಯನ್ನು ಕೇಳಿಕೊಂಡು ಪತ್ರ ಬರೆದರೆಂದು  ಮಾಧ್ಯಮದಲ್ಲಿ ಪ್ರಚಾರವಾಯಿತು.  ಹಿಂಸೆಯನ್ನು ಕೇವಲ ಅಹಿಂಸೆಯೊಂದಿಗೆ ಎದುರಿಸಬೇಕು ಹಾಗೂ ಪಾತಕ್‌ನನ್ನು ಕೆಲಸದಿಂದ ತೆಗೆದು ಹಾಕಿದರೆ ಅದು ಅವನ ಹಾಗು ಅವನ ಮನೆಯವರ ಮೇಲೆ ನಡೆಯುವ ಹಿಂಸಾಚಾರವಾದುತು... ಎಂಬ ಹೇಳಿಕೆಯೂ.

   ಅಣ್ಣಾನವರು ತಮ್ಮ ಕೆಲ ಹೇಳಿಕೆಗಳಿಂದ  ತಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಕಪ್ಪು ಬಣ್ಣ ಮೆತ್ತಿಕೊಂಡರು. ಮತ- ಮದ್ಯ- ಹಿಂಸೆ...  ಹಿಸ್ಸಾರ್ ಉಪಚುನಾವಣೆಯಲ್ಲಿ ಅವರು ಕಾಂಗ್ರೆಸ್ಸಿಗೆ ಮತಹಾಕಬಾರದೆಂದು ಕರೆಕೊಟ್ಟರು... ಯಾಕಪ್ಪಾ? ನಿಮ್ಮ ಇಗೋಗೆ ಯು ಪಿ ಎಸರಕಾರ ಪೆಟ್ಟುಕೊಟ್ಟಿದೆಯೆಂದೆ! ಅಣ್ಣಾ ಸರಿಯಾಗಿ ಯೋಚಿಸಿ.. ನೀವು ಎದೆತಟ್ಟಿ ಹೇಳಿ ? ಯಾವ ಪಕ್ಷ ಜನಹಿತಕ್ಕೋಸ್ಕರ ಕೆಲಸ ಮಾಡಿದೆದೆಯೆಂದು? ಅಲ್ಲ ಈಗ ನಮ್ಮ ಕರ್ನಾಟಕದಲ್ಲೂ ಬಳ್ಳಾರಿ ಚುನಾವಣೆ ಆಯಿತಲ್ವ! ನೀವು ಯಾವ ಪಕ್ಷಕ್ಕೆ ಓಟು ಹಾಕಬಹುದೆಂದೋ... ಹಾಕಬಾರದೆಂದೋ ಹೇಳಿಲ್ಲಾ????? ಯಾಕಪ್ಪಾ! ಮೊನ್ನೆಯ ಉದಯವಾಣಿಯ ರಾಜಾಂಗಣ ಅಂಕಣದಲ್ಲಿ ಅರಕೆರೆ ಜಯರಾಮ್ ಇದನ್ನು ಪ್ರಸ್ತಾವಿಸಿದರು... ನನಗನ್ನಿಸುತ್ತೇ ಅವರಿಗೆ ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಬಾಜಪದ ಮತ್ತು ರೆಡ್ಡಿಗಳ ಕುಸ್ತಿಯ ಬಗ್ಗೆ ಏನೂ ಗೊತ್ತಿರಲಿಕ್ಕಿಲ್ಲವೆಂದು.. ಅವರ ಗಮನವನ್ನೆಲ್ಲಾ ಯು ಪಿ ಎ ಸರಕಾರವೇ ಸೆಳೆದಿದೆ.
ಮದ್ಯಪಾನ ಮಾಡುವವರನ್ನು ಹೊಡೆದು ತಿದ್ದಬೇಕೆಂದು ಕರೆಕೊಟ್ಟರು.. ಅಲ್ರಿ ಎಷ್ಟು ಜನರನ್ನಂತ ಹೊಡೆಯಬಹುದು? ಹೋಗಲಿ ಕುಡುಕ ಗಂಡನ್ನ ಅವನ ಹೆಂಡತಿಯೇ ಹೊಡೆದಳೆಂದು ಕೊಳ್ಳುವ... ಅವನು ಬಿಡುತ್ತಾನೆಯೇ! ಇಬ್ಬರೂ ಹೊಡಕೊಂಡು ಸತ್ತ ಮೇಲೆ ದುಃಖ ಮರೆಯಲು ಇವರ ಮಕ್ಕಳು ಕುಡಿದು ಜಗಳ ಮಾಡಿಕೊಂಡು ಯಮಲೋಕದ ಹಾದಿ ಹಿಡಿಯುತ್ತಾರಂತೆ! ಅಯ್ಯೋ ಇದೆಂತಹ ಕಲ್ಪನೆ! ಬಡಿ ಹೊಡಿ ಎನ್ನುವುದು ಎಂತಹ ಬಾಲಿಶ  ಹೇಳಿಕೆಯಲ್ಲವೆ? ಅದೂ  ನಮ್ಮ ಕಾಲದ ಗಾಂಧಿಯವರಿಂದ! ಮೂರನೆಯ ವಿಷಯವನ್ನು ಈಗಾಲೇ ಪ್ರಸ್ತಾವಿಸಿದ್ದೇನೆ.

    ಹೇಗೂ ಕಂಠಮಟ್ಟ ಚರ್ಚೆಯಲ್ಲಿ ಮುಳುಗಿದ್ದೇನೆ... ಇನ್ನೂ ಒಂದಿಷ್ಟು ನನ್ನ ಮನದಲ್ಲಿದ್ದುದನ್ನು ಹೇಳಿಕೊಂಡು ನಿರಾಳವಾಗಲು ಯತ್ನಿಸುತ್ತೇನೆ.  ಈ ಲೇಖನ ಬರೆದ ಮೇಲೆ ಸಂಪದದಲ್ಲಿ  ಸ್ವಲ್ಪ ಖಾರ ಪ್ರತಿಕ್ರಿಯೆ ಸಿಕ್ಕಿತು... ಹೆಚ್ಚಿನವರಿಗೆ ನಾನು ಅಣ್ಣಾ ಅವರ ವಿರುದ್ಧವಾಗಿ ಬರೆದದ್ದು ಹಿಡಿಸಲಿಲ್ಲ. ಹಾಗೆ ನೋಡಿದರೆ ಬಹುಶಃ ಹೆಚ್ಚಿನವರು ಶರದ್ ಪವಾರರ ಕಪಾಳ ಮೋಕ್ಷ ಪ್ರಸಂಗವನ್ನು ಬಹಳ ಆಸ್ವಾದಿಸಿದರು... ಫೇಸ್‌ಬುಕ್ಕಿನಲ್ಲಿ ಈ ವಿಷಯವನ್ನು ಮತ್ತಷ್ಟು ರೋಚಕವನ್ನಾಗಿ ಮಾಡಿ ಅದರ್ ವಿಡಿಯೋಗಳನ್ನು ಹಾಕಿ ಆನಂದ ಪಟ್ಟರು.  ರಾಜಕಾರಣಿಗಳು ಖಂಡಿತ ಶಿಕ್ಷಾರ್ಹರು ಅದರಲ್ಲೂ ಪವಾರರು ಕೃಷಿ ಮಂತ್ರಿಯಾಗಿ  ಮಾಡಿದ್ದೇನೆಂದು ಹುಡುಕಿದರೆ, ಅನೇಕ ಆತ್ಮಹತ್ಯೆಗಳ ಪಟ್ಟಿ ಮಾತ್ರ ಕೈಗೆ ಸಿಗುವುದು. ಆದರು ನಾವು ಮೂರ್ಖರು, ಇನ್ನೂ ಅವರನ್ನು ಪಟ್ಟದಿಂದ ಇಳಿಸುವ ಮನಸ್ಸು ಮಾಡಿಲ್ಲ ಅಂದಮೇಲೆ ನಡೆದಲ್ಲಾ ವಿದ್ಯಮಾನಗಳಿಗೆ ಕೇವಲ ರಾಜಕಾರಣಿಗಳನ್ನು ದೂರುವುದು ಸರಿಯೇ?  ಹೋಗಲಿ ಈ ನಿಟ್ಟಿನಲ್ಲಿ ಮಾಧ್ಯಮಗಳು ಹೇಗೆ ಜನರಿಗೆ ಮಾಹಿತಿ ನೀಡುತ್ತಿವೆ! ಅದರಲ್ಲಿ ಜೊಳ್ಳು ಎಷ್ಟು ಎಂದು ತಿಳಿಯುವುದು ಹೇಗೆ?  ಪ್ರತಿಯೊಂದಕ್ಕೂ ಸರ್ಕಾರವನ್ನು ಹೊಣೆ ಮಾಡುವ ಮೊದಲು ನಮ್ಮನ್ನು ತಿದ್ದಿಕೊಳ್ಳುವ ಕೆಲಸ ಆಗಬೇಕಾಗಿದೆ.

    ಕೆಲವೊಂದು ವಿಷಯವನ್ನು ನೀವೆಲ್ಲಾ ಗಮನಿಸಿದ್ದಿರೋ ಇಲ್ಲವೋ ಎಂದು ತಿಳಿಯದು... ಬೆಲೆ ಏರಿಕೆಯಾಗುತ್ತಿದೆ ಎಂದು ಎಲ್ಲರೂ ಲಭೋ ಲಭೋ ಎಂದು ಬಾಯಿ ಬಾಯಿ ಬಡಬಡಿಸುತ್ತಿದ್ದಾರೆ.. ಆದರೆ ಈ ದಿಕ್ಕಿನಲ್ಲಿ ತಾವೇನು ಮಾಡಿ ಪರಿಸ್ಥಿತಿಯನ್ನು ಸುಧಾರಿಸಬಹುದೆಂದು ಯಾರೂ ಯೋಚಿಸಿಲ್ಲವಾ? ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಯಾದಷ್ಟು ವಾಹನಗಳನ್ನು ಕೊಳ್ಳುವವರ ಸಂಖ್ಯೆಯೂ ಏರುತ್ತಿಲ್ಲವಾ? ಇಗೀಗ ಪ್ರತಿಯೊಂದು ಮನೆಯಲ್ಲಿ ನಾವಿಬ್ಬರು ನಮಗಿಬ್ಬರು ಎಂಬಂತೆ ಪ್ರತಿಯೊಂದು ಸದಸ್ಯನಿಗೂ ಸ್ಕೂಟರ್, ಬೈಕ್.... ಮತ್ತೊಂದು ಎಲ್ಲರಿಗೂ ಒಟ್ಟಿಗೆ ತಿರುಗಲು ಕಾರ್... ಹಾಗೆಯೇ ಮುಂಚಿನ ಹಳೆಯ ಫ್ರಿಜ್ ಟೀವಿ ಗಳೆಲ್ಲಾ ಎಕ್ಸ್‌ಚೇಂಜ್‌ನಲ್ಲಿ ಕೊಟ್ಟು ಬದಲಾಗಿ ಮತ್ತೊಂದಿಷ್ಟು ಕೊಟ್ಟು  ಹೊಸದಾಗಿ ಮನೆಯನ್ನು ಅಲಂಕರಿಸಿವೆ... ಇಷ್ಟೆಲ್ಲಾ ಇದ್ದು ಮನೆಯ ಉಳಿದ ಫರ್ನಿಚರ್ ಹಳೆಯದಿಡುವುದೇ... ಅದಕ್ಕೂ ಲಕ್ಷ ಸುರಿದು ತಂದಾಯಿತು... ಇದು ಅತ್ತ ಶ್ರೀಮಂತರೂ ಅಲ್ಲದ ಇತ್ತ ಬಡವರು ಎಂದು ಗುರುತಿಸಲಾಗದ ಮಧ್ಯಮ ವರ್ಗದ ಕತೆ. ಹಣ ಎಲ್ಲಿಂದ ಅಂತಿರಾ? ಇಲ್ವೆ ನಮ್ಮ ಬ್ಯಾಂಕುಗಳು... ಕಾಲು ಹಿಡಿದು ಡಿಬಿಟ್ ಕಾರ್ಡ್ ಕೊಡುತ್ತವೆ.. ಮತ್ತೆ ವಸೂಲಿ ಮಾಡಲು ರೌಡಿಗಳನ್ನು ಕಳಿಸುತ್ತವೆ.  ಮತ್ತು ಕೆಲವರು ಲಂಚ ಪಡಕೊಂಡು ಸಂಸಾರದ ಗಮ್ಮತ್ತಿಗೆ ಹಣ ಸುರಿಸುತ್ತಾರೆ. ಮೊದಮೊದಲು ಸ್ವಲ್ಪ ದಾಕ್ಷಿಣ್ಯ ಮಾಡಿಕೊಂಡರೂ ಕಾಲಕ್ರಮೇಣ ಅದು ಅಭ್ಯಾಸವಾಗಿ ಹೋಗುತ್ತದೆ.  ಇದೊಂದು ಕತೆಯಾದರೆ ಮತ್ತೊಂದು ಲಾಟರಿ ಹಾಗು ಶೇರ್ ಮೇಲೆ ಹಣಹಾಕುತ್ತಿರುವ ಗುಂಪಿನವರದು. ಇವರ ಮನೆಯವರ ಗತಿ ಗೋವಿಂದ... ಸಾಲದ ಮೇಲೆ ಮತ್ತಿಷ್ಟು ಸಾಲ.... ಇನ್ನು ಸಮಾರಂಭಗಳ ವೈಭೋಗ.. ಒಬ್ಬರು ಮಾಡಿದರೆಂದು ಮತ್ತೊಬ್ಬರು.. ನನಗೆ ಹುಟ್ಟು ಹಬ್ಬಗಳನ್ನು ಆಚರಿಸಿದ ನೆನಪೇ ಇಲ್ಲ. ಆದರೆ  ಈ ಬರ್ತಡೆ ಪಾರ್ಟಿಗಳ ವೈಭವ ನೋಡಿ ದಂಗಾಗಿ ಹೋಗಿದ್ದೇನೆ.. ಕಡಿಮೆಯಂದರೂ ೨೫,೦೦೦. ಅಯ್ಯಪ್ಪಾ ಏನು ಶೃಂಗಾರ...

     ಪಶ್ಚಿಮ ದೇಶದ ಕೊಳ್ಳುಬಾಕತನವನ್ನು ಅನುಸರಿಸುತ್ತಿದ್ದೇವೆ... ಮಾಲ್‌ಗಳಲ್ಲಿ ನಡೆಯುತ್ತಿರುವ ವ್ಯಾಪಾರ ನೋಡಿದವರು ನಮ್ಮ ದೇಶದಲ್ಲಿ ಹೊಟ್ಟೆ ಬಟ್ಟೆಗಿಲ್ಲದೆ ಸಾಯುವವರೂ ಇದ್ದಾರೆಂದು ನಂಬುವ ಹಾಗಿಲ್ಲ.. ಹಾಗೆ ನೋಡಿದರೆ  ಇಷ್ಟರ ವರೆಗೆ ನನಗೆ ಅಂತಹ ಕಡು ಬಡವನ ಭೇಟಿಯಾಗಿಲ್ಲ... ಬರೇ ಪತ್ರಿಕೆಗಳ ಅಂಕೆ ಸಂಖ್ಯೆ ನೋಡಿಯೇ ಇದರ ಬಗ್ಗೆ ಅರಿವು ಇರುವುದು.


                       ಯಾವುದೇ ವಸ್ತುವಿಗೆ ಬೆಲೆ ಬರುವುದು ಅದರ ಬೇಡಿಕೆಯ ಮೇಲೆ ಹೊಂದಿಕೊಂಡು.  ಅಲ್ಲದೇ ಆ ವಸ್ತು ಮಾರುಕಟ್ಟೆಯಲ್ಲಿ ಸರಿಯಾಗಿ ಸಿಗದೇ ಹೋದರೆ ಅದರ ಬೆಲೆ ಮತ್ತಷ್ಟು ಏರುವುದು. ನಾವೆಲ್ಲಾ ನೋಡಿದ ಈರುಳ್ಳಿ, ಟೊಮೆಟೋಗಳ ಬೆಲೆ ಏರಿಕೆಯ ಹಾರಾಟ ಯಾಕಾಯಿತು ಎಂದು ಯಾರಾದರೂ ಆಲೋಚನೆ ಮಾಡಿದ್ದಿರಾ? ಸ್ವಲ್ಪ ಸಮಯ ಇವೆಲ್ಲಾ ಇಲ್ಲದೆ ಹೊಟ್ಟೆಗೆ ಏನೂ ಸೇರುವುದಿಲ್ಲವಾ!  ಅಂತಸ್ತಿನ ಭೇದವಿಲ್ಲದೆ ಜನರು ಮುಗಿಲು ಬಿದ್ದು ಈ ವಸ್ತುಗಳ ವ್ಯಾಪಾರ ಮಾಡಿದರು.. ಬೆಲೆ ಏರುತ್ತಲೇ ಹೋಯಿತು...ಜನ ಸರಕಾರಕ್ಕೆ ಶಾಪ ಹಾಕುತ್ತಲೇ ಮಾರ್ಕೆಟಿಗೆ ಓಡಿದರು... ಮತ್ತೆ ಟೊಮೆಟೋ ತರುವುದಕ್ಕೆ.. ನಗೆ ಬರುತ್ತಿತ್ತು ಎನಗೆ. ಪೆಟ್ರೋಲ್ ಬೆಲೆ ಏರುತ್ತಲೇ ಇದೆ ( ಈ ಮಧ್ಯ ೧, ೨ ಕಮ್ಮಿ ಮಾಡಿದೆ ಇಂದು ಸುದ್ದಿ ಓದಿದೆ)  ಸರಕಾರಕ್ಕೆ ಸಹಸ್ರನಾಮ ಮಾಡುತ್ತಲೇ ಜನ ವಾಹನಗಳನ್ನು ಕೊಳ್ಳುತ್ತಲೇ ಇದ್ದಾರೆ!  ವಾಹನಗಳನ್ನು ಓಡಿಸಿ ರಾಲಿ ಮಾಡಿ ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ!! ಎಂತಹ ವಿಪರ್ಯಾಸ!!!!
  ಎಲ್ಲಿಂದ ಎಲ್ಲಿಗೆ ಸಂಬಂಧ ಅನ್ನು ಕೊಳ್ಳಬೇಡಿ... ಇವೆಲ್ಲಕ್ಕೂ ಸೂಕ್ಷ್ಮವಾಗಿ ಹೊಂದಿಕೊಂಡಿವೆ. ನಾನೇನೂ ರಾಜಕಾರಣಿಗಳು ಒಳ್ಳೆಯವರು ಎಂದು ಸಮರ್ಥಿಸುವುದಿಲ್ಲ... 
  ಅದರೆ  ಪ್ರತಿಯೊಂದಕ್ಕೂ ರಾಜಕಾರಣಿಯೇ ಕಾರಣ ಎಂದು ಬೆರಳು ತೋರುವುದಕ್ಕಿಂತ ಮೊದಲು  ಆತ್ಮ ವಿಮರ್ಶೆ ಮಾಡಿಕೊಳ್ಳುವ ಅಗತ್ಯ ಎದ್ದು ಕಾಣುವುದಿಲ್ಲವೇ? ಈ ರಾಜಕಾರಣಿಗಳು ಯಾರು? ನಮ್ಮ ಪ್ರತಿನಿಧಿಗಳಲ್ಲವೆ? ನಾವೇ ಇವರನ್ನು ಆಯ್ಕೆ ಮಾಡಿ  ಪಟ್ಟದ ಮೇಲೆ ಕೂರಿಸಿದ್ದೇವೆ. ಅವರು ತಪ್ಪು ಮಾಡಿದಾಗ ಅವರನ್ನು ಹಿಂದಕೆ ಕರೆಸಿಕೊಳ್ಳುವ ಅಧಿಕಾರವೂ ನಮಗಿರುವುದು. ಆದರೂ ಅವರ ತಪ್ಪು ಹುಡುಕುತ್ತಲೇ ಮತ್ತೆ ಮತ್ತೆ ಅವರನ್ನೇ ಏಕೆ ಆರಿಸುತ್ತೇವೆ...
    ಲಂಚ ಕೊಟ್ಟು ಅದರ ರುಚಿ ತೋರಿಸಿದ್ದು ನಾವೇ ತಾನೆ...ನಮ್ಮಿಂದ ಅನೇಕ ತಪ್ಪುಗಳಾಗಿವೆ...ಆಗುತ್ತಲೇ ಇವೆ. ಯಾರು ಯಾರನ್ನು  ತಿದ್ದುವುದು?  
         ಆದರೆ ನಮ್ಮಲ್ಲಿರುವ ಹುಳುಕನ್ನು ನಾವು ತಿದ್ದಿಕೊಳ್ಳುವುದು ಯಾವಾಗ... ಅಲ್ಲದೆ ಈ ಭ್ರಷ್ಟಾಚಾರಕ್ಕೆ ನಮ್ಮ ಸಾವಿರಾರು ಕೋಟಿಗಳ ಒಡೆಯರಾದ ಉದ್ಯಮಪತಿಗಳು ಕುಮ್ಮುಕ್ಕು ಕೊಡುವುದು ಈಗೇನೂ ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ.. ಅಲ್ಲದೇ ಆಪಾದನೆ ಹೊತ್ತ, ಜೈಲಿನಲ್ಲಿರುವ ಕ್ರಿಮಿನಲ್‍ಗಳು ಚುನಾವಣೆಗೆ  ನಿಂತು ಗೆದ್ದು ಬರುತ್ತಾರಲ್ಲ! ಯಾರು ಹೊಣೆ ಇದಕ್ಕೆ!  ಬಳ್ಳಾರಿಯಲ್ಲಿ ರಾಮುಲು ಕೇವಲ ಪಾರ್ಟಿ ಬದಲಿಸಿ ಆರಾಮವಾಗಿ ಗೆದ್ದು ಬಂದರು. ಎಲ್ಲಿಯ ತನಕ ಜನರು ವಿಚಾರ ಹೀನರಾಗಿರುತ್ತಾರೋ  ಅಲ್ಲಿಯ ತನಕ ಯಾವ ತಪರಾಕಿಯೂ ನಮ್ಮ ರಾಜಕಾರಣಿಗಳನ್ನು ಬದಲಾಯಿಸುವುದಿಲ್ಲ.. ನಮ್ಮ ಮಾಧ್ಯಮಗಳು, ಬುದ್ಧಿಜೀವಿಗಳು ಜನರನ್ನು ಚಿಂತನೆ ಹಚ್ಚುವ ಕೆಲಸ ತೊಡಗಬೇಕು. ಕೈ ಕೈ ಮಿಲಾಯಿಸಿ, ಬಡೆದು ಹೊಡೆದು ತಿದ್ದುವುದಕ್ಕಿಂತ ನಮ್ಮ  ಗಾಂಧಿ ತಾತನ ಅಹಿಂಸಾ ಮಾರ್ಗ ನಮ್ಮ ಆಯ್ಕೆಯಾಗಬೇಕು... ಹಜಾರೆಯವರೇ,  ನೀವು ಈ ನಿಟ್ಟಿನಲ್ಲಿ ನಮ್ಮ ದೇಶದ ಯುವ ಜನತೆಗೆ ದಾರಿ ತೋರಿ.    ನಿಮ್ಮ ಕೆಲ ಹೇಳಿಕೆ ಹೊರತು ಈಗಲೂ ನೀವು ನನ್ನ ಮೆಚ್ಚಿನ ನಾಯಕರು. ನಮ್ಮ ದೇಶಕ್ಕೆ, ಯುವಕರಿಗೆ ಹೊಸ ಬೆಳಕು ತೋರಿಸಿದಿರಿ, ಬೇಸತ್ತ ಜನರಿಗೆ ಬದಲಾವಣೆಯ ರುಚಿ ತೋರಿಸಿದಿರಿ. ಆದರೆ ಅಹಿಂಸೆಯೇ ನಿಮ್ಮ ಆಯುಧವಾಗಿರಬೇಕು ಎಂಬುದು ನನ್ನ ಆಶಯ. 

       

       

               ನನ್ನ ಬರಹವನ್ನು ಮುಕ್ತಾಯಗೊಳಿಸುವ ಮೊದಲು ಎರಡು ವಿಷಯಗಳುನ್ನು ಪ್ರಸ್ತಾವಿಸಲು ಬಯಸುತ್ತೇನೆ. ಒಂದು ರೋಚಕ- ರೋಚರ, ಮತ್ತೊಂದು ಸುಬ್ರಹ್ಮಣ್ಯದಲ್ಲಿ ನಡೆದ ಮಡೆ ಸ್ನಾನ. ಕನ್ನಡ ಪ್ರಭ ಪತ್ರಿಕೆಯ  ಮುದ್ರಾ ರಾಕ್ಷಸನ ಕಾರಬಾರದಿಂದ ಆದ ತಪ್ಪು ಈಗಾಗಲೇ ಎಲ್ಲರ ಅರಿವಿಗೆ ಬಂದಿರುವುದು. ಅದರ ಬಗ್ಗೆ ಫೇಸ್ ಬುಕ್ಕಿನಲ್ಲಿ ಭಾರಿ ಚರ್ಚೆಯೂ ನಡೆದಿತ್ತು. ವಿಶ್ವೇಶ ಭಟ್ಟರು ಕ್ಷಮೆ ಕೇಳಿದ ಮೇಲೂ ಅದರ ಬಗ್ಗೆ ಸ್ವಲ್ಪ ಖಾರವಾಗಿ ಮಾತುಕತೆ ಆಗಿತ್ತು... ತಪ್ಪು ಆಗುವುದು ಸಹ. ನಾವೆಲ್ಲರೂ ಬಹುಶಃ ಪ್ರತಿದಿನ ತಪ್ಪು ಮಾಡುವರೇ! ಅಷ್ಟೇ ಅಲ್ಲ ಬೇರೆಯವರ ತಪ್ಪನ್ನು ಎತ್ತಿ ತೋರಿಸುವುದು ಎಲ್ಲರಿಗೂ ಸುಲಭ ಸಹ. ಆದರೆ ನಾನು ಹಜಾರೆಯವರ ತಪ್ಪು ಎತ್ತಿ ಹಿಡಿದದ್ದು ಕೇವಲ ದೇಶದ, ಯುವ ಜನತೆಯ ಹಿತಕ್ಕೋಸ್ಕರ ಹೊರತು ಬೇರೆ ಮತ್ತ್ಯಾಕೂ ಅಲ್ಲ.   ವಿಶ್ವೇಶರ ಭಟ್ ಸಹ ವಿಜಯಕರ್ನಾಟಕದ ಏಳಿಗೆಗೆ ಕಾರಣರಾದ ಸಂಗತಿ ಎಲ್ಲರಿಗೂ ಅರಿವಿರುವುದು. ಆದರೂ ಅವರ ನಾಯಕತ್ವದಲ್ಲಿ ನಡೆಯುವ ಪತ್ರಿಕೆಯ  ಕಣ್ತಪ್ಪಿ ನಡೆದ ಮುದ್ರಣ ದೋಷ ಹೇಗೆ ರೋಚಕ ಸಂಗತಿಯಾಗಿ ಬದಲಾಯ್ತು ಅಲ್ಲ.  
    
           ಮತ್ತೊಂದು ಸುಬ್ರಮಣ್ಯದಲ್ಲಿ ನಡೆದ ಮಡೆ ಸ್ನಾನ... ಇದೂ ಹೇಗೂ ಅನೇಕ ಲೇಖನಗಳಿಗೆ ಪ್ರೇರಕವಾಯಿತು... ಕೆಲವರಿಗೆ ಇದು ಬ್ರಾಹ್ಮಣರ ಮೇಲೆ ಗೂಬೆ ಕೂರಿಸಲು ಒಂದು ನೆಪವಾಯಿತು. ಮತ್ತೆ ಕೆಲವರು ಮೂಢನಂಬಿಕೆ ಎಂದು ಜರಿದರು.  ಹೆಗ್ಗಡೆಯವರ ಪತ್ರಿಕಾ ಹೇಳಿಕೆ ನೋಡಿ ಆಶ್ಚರ್ಯವಾಯಿತು.  ದೊಡ್ಡವರೆಂದು ತಿಳಿದು ಕೊಳ್ಳುವ ಜನ ಕೆಲವೊಮ್ಮೆ ಎಷ್ಟು ಸಣ್ಣವರಾಗುತ್ತಾರಲ್ಲ?  
      ಈ ಲೇಖನದ ಆಶಯ ತಮಗೆಲ್ಲರಿಗೂ ಅರ್ಥವಾದಿತೆಂಬ ಹಾರೈಕೆಯಿಂದ ಬರಹ ಮುಗಿಸುತ್ತೇನೆ!.
   












27 November, 2011

ಕಲಾಸಂತೆ- ಪ್ರಜ್ವಲ್, ಮನಿಷಾ ಮತ್ತು ನಾನು!































ಇವು ಒಂದಿಷ್ಟು ನನ್ನ ಮಕ್ಕಳು ಮತ್ತು ನಾನು ಎರಚಿದ ಬಣ್ಣಗಳು...ಕೆಲವೊಂದು ಅಪೂರ್ಣವಾಗಿವೆ..ಆದರೂ ಒಂದಿಷ್ಟಾದರು ಕಲಾಸೇವೆ ಮಾಡಲು ಸಾಧ್ಯವಾಯಿತಲ್ಲ ಎಂಬುದೇ ಸಮಾಧಾನ. ಇಪ್ಪತ್ತೆರಡು ವರ್ಷಗಳು ಕಳೆದು ಹೋಯಿತು...ಯೌವನದ ಪ್ರಮುಖ ಭಾಗದಲ್ಲಿ, ತುಂಬಾ ಸಾಧಿಸಲು ಹುಮ್ಮಸಿರುವ, ಶಕ್ತಿಯಿರುವ ಕಾಲದಲ್ಲಿ ನನ್ನ ಕುಂಚಗಳು ನನ್ನೊಂದಿಗೆ ಸಹಕರಿಸಿಲ್ಲ ಮಾತ್ರವಲ್ಲದೆ ಕಾಲನೂ ನನ್ನೊಂದಿಗೆ ಮುನಿಸಿಕೊಂಡಿದ್ದನು...ಆದರೂ ಈ ನಾಲ್ಕು ವರ್ಷದಲ್ಲಿ ಮತ್ತಿನ್ನೊಮ್ಮೆ ಕುಂಚಗಳು ನನ್ನ ಬೆರಳುಗಳೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡಿವೆ.  ಹಾಗಾಗಿ ಬರೇ ಕುಂಚಮಾತ್ರವಲ್ಲದೆ ಕಲೆ ಹೊಸ ಆಯಾಮಗಳಲ್ಲಿ ನನ್ನನ್ನು ತೊಡಗಿಸಲು ಯತ್ನಿಸುತ್ತಿದ್ದೇನೆ. ಅದರ ಫಲವಾಗಿ ಈ ತಗಡಿನ ಮೇಲಿನ ಉಬ್ಬು ಚಿತ್ರ ಮೂಡಿಬಂತು.  ಸಹ ಬ್ಲಾಗಿಗರಿಗೆ ಇದು ಮೆಚ್ಚುಗೆ ಯಾಯಿತೇ ಒಂದು ತಿಳಿಯುವ ಕುತೂಹಲವಿದೆ ನನಗೆ!





ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...