ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 January, 2008

ಉಡುಪಿ ಪರ್ಯಾಯ : ವಿವಾದ?





ಸಮಾಜಕ್ಕೆ ಮಾದರಿಯಾಗಬೇಕಾಗಿರುವ ಮಠಾಧಿಪತಿಗಳು ಈ ಪರ್ಯಾಯದ ಸುಸಮಯದಲ್ಲಿ ಸಾರ್ವಜನಿಕವಾಗಿ ಕಚ್ಚಾಡುವುದು ಸರಿಯೇ? ಉಡುಪಿಯ ಅಷ್ಟ ಮಠ, ಅದರ ಯತಿಗಳ ಮೇಲೆ ಅಪಾರ ವಿಶ್ವಾಸವಿರುವ ನನ್ನಂತವರಿಗೆ ಇದು ದೊಡ್ಡ ಅಘಾತ. ಕೇವಲ ವಿದೇಶ ಯಾತ್ರೆಯಂತಹ ಕ್ಷುಲ್ಲಕ ವಿಷಯದಲ್ಲಿ ತಲೆಕೆಡಿಸಿ ಮದ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಕೃಷ್ಣನ ಪೂಜೆಯ ವಿಷಯವು ನ್ಯಾಯಾಲಯದ ಮೆಟ್ಟಲೇರಿ ಹೋಗಿ ಹೀಗೆ ಸಾರ್ವಜನಿಕವಾಗಿ ನಗೆಗೀಡಾಗಿದೆ. ಎಂತಹ ವಿಪರ್ಯಾಸ! ಸರಿ ಯಾವುದಾದರು ಮಠಾದೀಶರು ತಮ್ಮ ಹಠ ಬಿಟ್ಟು ಕೊಡಬಹುದಲ್ಲವೇ. ಇಲ್ಲ, ಇಲ್ಲಿ ಎಲ್ಲರೂ ತಮ್ಮ ತಮ್ಮ ಹಕ್ಕನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಕೆಲವೇ ದಿನಗಳ ಹಿಂದೆ ಪೇಜಾವರ ಶ್ರೀಗಳು ಇದು ವಾದವಲ್ಲ ಬದಲಾಗಿ ಬೇರೆ ಬೇರೆ ದೃಷ್ಟಿ ಕೋನ ಅಷ್ಟೇ ಎಂದು ಹೇಳಿಕೆ ಕೊಟ್ಟಿದ್ದರು. ನಾವೆಲ್ಲ ಒಟ್ಟಿಗೆ ಕುಳಿತು ಇದನ್ನು ಬಗೆಹರಿಸುವೆವು ಎಂದಿದ್ದರು. ಆದರೆ ಮಕರ ಸಂಕ್ರಾತಿಯ ಹಿಂದಿನ ದಿನ ಈವಿಷಯ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯವು ದಾವೆಗಳನ್ನು ವಜಾಮಾಡಿದಾಗ, ಪುತ್ತಿಗೆ ಮಠದ ಕಡೆಯವರು ಪಟಾಕಿ ಸಿಡಿಸಿ ಸಂತೋಷ ಆಚರಿಸಿದರೆಂದು ಪತ್ರಿಕೆಯು ವರದಿ ಮಾಡಿದೆ. ಇದು ಸರಿಯೇ? ಇದನ್ನು ಓದಿದಾಗಲೇ ಇದು ಕೇವಲ ಒಣ ಪ್ರತಿಷ್ಠೆಯಗಾಗಿ ವಿವಾದ ಮಾಡಿರುವುದು ಎಂದು ಸ್ಪಷ್ಟವಾಗುತ್ತದೆ.







ಶೀಕೃಷ್ಣನು ಜನಸಾಮಾನ್ಯರ ದೇವನು, ಗೋಪ ಬಾಲಕನು, ಕೇವಲ ಒಂದು ತುಲಸೀದಳದ ಸಮರ್ಪಣೆಯಿಂದಲೇ ತೃಪ್ತನು. ಅಂತವನನ್ನು ಯಾರು ಪೂಜೆ ಮಾಡಿದರೇನು? ಇಡೀ ವಿಶ್ವವನ್ನೇ ವ್ಯಾಪಿಸಿರುವವನನ್ನು ವಿದೇಶಯಾತ್ರೆ ಮಾಡಿದವರು ಪೂಜಿಸಬಾರದೇಕೆ? ಪುತ್ತಿಗೆ ಶೀಗಳು ಪರ್ಯಾಯ ಪೀಠದಲ್ಲಿ ಕುಳಿತುಕೊಳ್ಳಬಹುದು ಆದರೆ ಕಡೆಗೋಲು ಹಿಡಿದ ಬಾಲಗೋಪಾಲನನ್ನು ಪೂಜಿಸಬಾರದು..... ಈ ನಿಯಮವೇಕೆ? ಈ ಯತಿಗಳೆಲ್ಲ ಸಾಮಾನ್ಯರಲ್ಲ. ವೇದಾಭ್ಯಾಸ ಮಾಡಿದ ವಿದ್ವಾಂಸರು. ನಿತ್ಯ ಭಗವದ್ಗೀತೆಯ ಪಾರಾಯಣ ಮಾಡುವವರು, ಅಂತವರಿಗೆ ಹರಿಯ ಅಂತರ್ಯ ತಿಳಿಯದೇನು???? ಶುದ್ಧ ಭಕ್ತಿಯ ಬಯಸುವವನಿಗೆ ಬಂಗಾರ, ವಜ್ರ, ಮಾಣಿಕ್ಯಗಳ ಕವಚವೇನೋ ಮಾಡಿದರು. ಹೋಗಲಿ ಇದು ಭಕ್ತರು ಪ್ರೀತಿಯಿಂದ ಕೊಟ್ಟ ಕಾಣಿಕೆ ಪರವಾಗಿಲ್ಲ. ಆದರೆ ಅವನು ಎಂದಾದರೂ ಕೇವಲ ಭಾರತೀಯರು ಮಾತ್ರ ತನ್ನ ಭಕ್ತರು ಎಂದಿದ್ದಾನೆಯೇ? ಕುರುಬರ ಕನಕನು ಕರೆದನೆಂದು ಕಿಟಿಕಿಯಲ್ಲೇ ಅವನಿಗೆ ದರುಶನ ತೋರಿದವನನ್ನು ಪೂಜಿಸಲು ಯಾವ ನಿಯಮಗಳು ಬೇಕಾಗಿಲ್ಲ. ಅದೂ ಈ ಕಲಿಯುಗದಲ್ಲಿ ಅವನ ಅಸ್ಥಿತ್ವಕ್ಕೇ ಸಂಚಕಾರ ಬಂದಿರುವಾಗ. ಪುರಂದರ ದಾಸ ಮತ್ತೆ ಮತ್ತೆ ತಮ್ಮ ಪದ್ಯದಲ್ಲಿ ಹಾಡಿರುವಂತೆ ಹರಿಗೆ ತಾಳ ತಂಬೂರ ಜಾಗಟೆ ಶಂಖಗಳಿಗಿಂತ ಭಕ್ತಿಯು ಮುಖ್ಯ ಎಂದಿದ್ದಾರೆ. ನನಗೆ ನೆನಪಿದಂತೆ ಸರಸ್ವತಿಯೇ ನಾಲಗೆಯಲಿ ನಲಿದಾಡುತ್ತಿರುವ ಬನ್ನಂಜೆ ಗೋವಿಂದಾಚಾರ್ಯರು ಒಮ್ಮೆ ಹೇಳಿರುವಂತೆ ದೇವನನ್ನು ಪೂಜಿಸಲು ಯಾವ ನಿಯಮಗಳೂ ಬೇಕಾಗಿಲ್ಲ, ಮೆಟ್ಟು ಹಾಕಿ ಸ್ಮರಿಸಿದರೂ ಭಕ್ತವತ್ಸಲನು ಓಗೊಡುತ್ತಾನೆ. ಮುಖ್ಯವಾಗಿ ಬೇಕಾಗಿರುವುದು ಶೃದ್ಧೆ, ವಿಶ್ವಾಸ ಮತ್ತು ಭಕ್ತಿ.
" ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಪುರಂದರದಾಸರು ಹೇಳಿರುವಂತೆ ಭಕ್ತರ ಭಕ್ತನು ಆದ ಆ ವನಮಾಲಿಯು ಎಲ್ಲರಿಗೂ ಸದ್ಭುದ್ಧಿಯನ್ನು ಕೊಟ್ಟು ಈ ಪರ್ಯಾಯವನ್ನು ಸುಲಲಿತವಾಗಿ ನೆರವೇರಿಸಲಿ ಎಂದು ಆ ಜಗನ್ನಾಥನನ್ನು ಬೇಡಿಕೊಳ್ಳುವೆ.

3 comments:

ಸುಪ್ತದೀಪ್ತಿ suptadeepti said...

ನಿಜ ಶೀಲಾ, ಇಲ್ಲಿ ಮೆರೆಯುತ್ತಿರುವುದು ಪ್ರತಿಷ್ಠೆ. ಅಷ್ಟೆಲ್ಲ ಅಧ್ಯಯನ ಮಾಡಿದವರಿಗೆ ಸರ್ವಾಂತರ್ಯಾಮಿ ಭಗವಂತನ ಆಂತರ್ಯ ಹೇಗೆ ತಿಳಿದೀತು? ಅವರ ಮನದ ತುಂಬ ತುಂಬಿರುವುದು "ತಾನೇ ಮೇಲು", "ತಾನೇ ಹೆಚ್ಚು ಕಲಿತವನು", "ತಾನೇ ಹೆಚ್ಚು ಹಣ ಗಳಿಸಿದವನು(ಮಠಕ್ಕೆ!!??)", "ತಾನೇ ಹೆಚ್ಚು ಜನಪ್ರಿಯನು" ಇಂಥ ಪ್ರಾಪಂಚಿಕ ವಿಷಯಗಳು. ಅವರಲ್ಲಿರುವ ವಿದ್ಯೆಯಿಂದ ಅವರೇನಾದರೂ ನಿಜವಾಗಲೂ "ಜ್ಞಾನ" ಪಡೆದಿದ್ದರೆ ಇಂಥ ಪೀಕಲಾಟಗಳು ಏಳುತ್ತಲೇ ಇರಲಿಲ್ಲ. ಇವರಿಗೆಲ್ಲ ಇರುವುದು ಓದಿನಿಂದ ಸಿಕ್ಕಿದ ವಿದ್ಯಾಸಂಪತ್ತು. ಅದರ ತಿರುಳಿನ ಜ್ಞಾನವಲ್ಲ.

ಬೇಸರದ ವಿಷಯ....

ತೇಜಸ್ವಿನಿ ಹೆಗಡೆ said...

ನಮಸ್ಕಾರ,

"ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಬಹುಶಃ ಇಂಥವರಿಗಾಗಿಯೇ ಇರುವುದೇನೋ! ಉಳಿದ ಸಮಾಜ ವರ್ಗದವರಿಗೆ ಮಾದರಿಯಗಿರಬೇಕಾದವರೇ ತಮ್ಮನ್ನು ಆಡಿಕೊಂಡು ನಗುವಂತಾಗಿರುವುದು ನಿಜಕ್ಕೂ ಖೇದಕರ. ಆದಷ್ಟು ಬೇಗ ಇವರೆಲ್ಲಾ ತಮ್ಮ ಒಣ ಪ್ರತಿಷ್ಟೆಗಳನ್ನೆಲ್ಲಾ "ಕೃಷ್ಣಾರ್ಪಣಮಸ್ತು" ಮಾಡಲಿ ಎಂದು ಆ ಕೇಶವನನ್ನೇ ಬೇಡೋಣ. ಚಿಂತನಶೀಲ ಲೇಖನ. ಮತ್ತಷ್ಟು ಬರಲಿ.

ಅಂದಹಾಗೆ ನಾನೂ ಮಂಗಳೂರಿನವಳೇ ;-)

ಅಮರ said...

ಪ್ರಿಯ ಶೀಲಾ ಅವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...