ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 January, 2008

ಉಡುಪಿ ಪರ್ಯಾಯ : ವಿವಾದ?





ಸಮಾಜಕ್ಕೆ ಮಾದರಿಯಾಗಬೇಕಾಗಿರುವ ಮಠಾಧಿಪತಿಗಳು ಈ ಪರ್ಯಾಯದ ಸುಸಮಯದಲ್ಲಿ ಸಾರ್ವಜನಿಕವಾಗಿ ಕಚ್ಚಾಡುವುದು ಸರಿಯೇ? ಉಡುಪಿಯ ಅಷ್ಟ ಮಠ, ಅದರ ಯತಿಗಳ ಮೇಲೆ ಅಪಾರ ವಿಶ್ವಾಸವಿರುವ ನನ್ನಂತವರಿಗೆ ಇದು ದೊಡ್ಡ ಅಘಾತ. ಕೇವಲ ವಿದೇಶ ಯಾತ್ರೆಯಂತಹ ಕ್ಷುಲ್ಲಕ ವಿಷಯದಲ್ಲಿ ತಲೆಕೆಡಿಸಿ ಮದ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಕೃಷ್ಣನ ಪೂಜೆಯ ವಿಷಯವು ನ್ಯಾಯಾಲಯದ ಮೆಟ್ಟಲೇರಿ ಹೋಗಿ ಹೀಗೆ ಸಾರ್ವಜನಿಕವಾಗಿ ನಗೆಗೀಡಾಗಿದೆ. ಎಂತಹ ವಿಪರ್ಯಾಸ! ಸರಿ ಯಾವುದಾದರು ಮಠಾದೀಶರು ತಮ್ಮ ಹಠ ಬಿಟ್ಟು ಕೊಡಬಹುದಲ್ಲವೇ. ಇಲ್ಲ, ಇಲ್ಲಿ ಎಲ್ಲರೂ ತಮ್ಮ ತಮ್ಮ ಹಕ್ಕನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಕೆಲವೇ ದಿನಗಳ ಹಿಂದೆ ಪೇಜಾವರ ಶ್ರೀಗಳು ಇದು ವಾದವಲ್ಲ ಬದಲಾಗಿ ಬೇರೆ ಬೇರೆ ದೃಷ್ಟಿ ಕೋನ ಅಷ್ಟೇ ಎಂದು ಹೇಳಿಕೆ ಕೊಟ್ಟಿದ್ದರು. ನಾವೆಲ್ಲ ಒಟ್ಟಿಗೆ ಕುಳಿತು ಇದನ್ನು ಬಗೆಹರಿಸುವೆವು ಎಂದಿದ್ದರು. ಆದರೆ ಮಕರ ಸಂಕ್ರಾತಿಯ ಹಿಂದಿನ ದಿನ ಈವಿಷಯ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯವು ದಾವೆಗಳನ್ನು ವಜಾಮಾಡಿದಾಗ, ಪುತ್ತಿಗೆ ಮಠದ ಕಡೆಯವರು ಪಟಾಕಿ ಸಿಡಿಸಿ ಸಂತೋಷ ಆಚರಿಸಿದರೆಂದು ಪತ್ರಿಕೆಯು ವರದಿ ಮಾಡಿದೆ. ಇದು ಸರಿಯೇ? ಇದನ್ನು ಓದಿದಾಗಲೇ ಇದು ಕೇವಲ ಒಣ ಪ್ರತಿಷ್ಠೆಯಗಾಗಿ ವಿವಾದ ಮಾಡಿರುವುದು ಎಂದು ಸ್ಪಷ್ಟವಾಗುತ್ತದೆ.







ಶೀಕೃಷ್ಣನು ಜನಸಾಮಾನ್ಯರ ದೇವನು, ಗೋಪ ಬಾಲಕನು, ಕೇವಲ ಒಂದು ತುಲಸೀದಳದ ಸಮರ್ಪಣೆಯಿಂದಲೇ ತೃಪ್ತನು. ಅಂತವನನ್ನು ಯಾರು ಪೂಜೆ ಮಾಡಿದರೇನು? ಇಡೀ ವಿಶ್ವವನ್ನೇ ವ್ಯಾಪಿಸಿರುವವನನ್ನು ವಿದೇಶಯಾತ್ರೆ ಮಾಡಿದವರು ಪೂಜಿಸಬಾರದೇಕೆ? ಪುತ್ತಿಗೆ ಶೀಗಳು ಪರ್ಯಾಯ ಪೀಠದಲ್ಲಿ ಕುಳಿತುಕೊಳ್ಳಬಹುದು ಆದರೆ ಕಡೆಗೋಲು ಹಿಡಿದ ಬಾಲಗೋಪಾಲನನ್ನು ಪೂಜಿಸಬಾರದು..... ಈ ನಿಯಮವೇಕೆ? ಈ ಯತಿಗಳೆಲ್ಲ ಸಾಮಾನ್ಯರಲ್ಲ. ವೇದಾಭ್ಯಾಸ ಮಾಡಿದ ವಿದ್ವಾಂಸರು. ನಿತ್ಯ ಭಗವದ್ಗೀತೆಯ ಪಾರಾಯಣ ಮಾಡುವವರು, ಅಂತವರಿಗೆ ಹರಿಯ ಅಂತರ್ಯ ತಿಳಿಯದೇನು???? ಶುದ್ಧ ಭಕ್ತಿಯ ಬಯಸುವವನಿಗೆ ಬಂಗಾರ, ವಜ್ರ, ಮಾಣಿಕ್ಯಗಳ ಕವಚವೇನೋ ಮಾಡಿದರು. ಹೋಗಲಿ ಇದು ಭಕ್ತರು ಪ್ರೀತಿಯಿಂದ ಕೊಟ್ಟ ಕಾಣಿಕೆ ಪರವಾಗಿಲ್ಲ. ಆದರೆ ಅವನು ಎಂದಾದರೂ ಕೇವಲ ಭಾರತೀಯರು ಮಾತ್ರ ತನ್ನ ಭಕ್ತರು ಎಂದಿದ್ದಾನೆಯೇ? ಕುರುಬರ ಕನಕನು ಕರೆದನೆಂದು ಕಿಟಿಕಿಯಲ್ಲೇ ಅವನಿಗೆ ದರುಶನ ತೋರಿದವನನ್ನು ಪೂಜಿಸಲು ಯಾವ ನಿಯಮಗಳು ಬೇಕಾಗಿಲ್ಲ. ಅದೂ ಈ ಕಲಿಯುಗದಲ್ಲಿ ಅವನ ಅಸ್ಥಿತ್ವಕ್ಕೇ ಸಂಚಕಾರ ಬಂದಿರುವಾಗ. ಪುರಂದರ ದಾಸ ಮತ್ತೆ ಮತ್ತೆ ತಮ್ಮ ಪದ್ಯದಲ್ಲಿ ಹಾಡಿರುವಂತೆ ಹರಿಗೆ ತಾಳ ತಂಬೂರ ಜಾಗಟೆ ಶಂಖಗಳಿಗಿಂತ ಭಕ್ತಿಯು ಮುಖ್ಯ ಎಂದಿದ್ದಾರೆ. ನನಗೆ ನೆನಪಿದಂತೆ ಸರಸ್ವತಿಯೇ ನಾಲಗೆಯಲಿ ನಲಿದಾಡುತ್ತಿರುವ ಬನ್ನಂಜೆ ಗೋವಿಂದಾಚಾರ್ಯರು ಒಮ್ಮೆ ಹೇಳಿರುವಂತೆ ದೇವನನ್ನು ಪೂಜಿಸಲು ಯಾವ ನಿಯಮಗಳೂ ಬೇಕಾಗಿಲ್ಲ, ಮೆಟ್ಟು ಹಾಕಿ ಸ್ಮರಿಸಿದರೂ ಭಕ್ತವತ್ಸಲನು ಓಗೊಡುತ್ತಾನೆ. ಮುಖ್ಯವಾಗಿ ಬೇಕಾಗಿರುವುದು ಶೃದ್ಧೆ, ವಿಶ್ವಾಸ ಮತ್ತು ಭಕ್ತಿ.
" ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಪುರಂದರದಾಸರು ಹೇಳಿರುವಂತೆ ಭಕ್ತರ ಭಕ್ತನು ಆದ ಆ ವನಮಾಲಿಯು ಎಲ್ಲರಿಗೂ ಸದ್ಭುದ್ಧಿಯನ್ನು ಕೊಟ್ಟು ಈ ಪರ್ಯಾಯವನ್ನು ಸುಲಲಿತವಾಗಿ ನೆರವೇರಿಸಲಿ ಎಂದು ಆ ಜಗನ್ನಾಥನನ್ನು ಬೇಡಿಕೊಳ್ಳುವೆ.

07 January, 2008

ಬೈಲಕೂರಿನ ಪೊರಕೆ ಏಟಿನ ಜಾತ್ರೆ!

ಈ ಬೈಲಕೂರನ್ನು ಆಧುನಿಕತೆ ಆವರಿಸಿದ್ದರೂ ವರ್ಷ ಪ್ರತಿ ಚಂದ್ರಮಾನ ಯುಗಾದಿಯ ನಂತರ ಬರುವ ತದಿಗೆಯಂದು ಪೊರಕೆಯಿಂದ 'ಬಡಿ- ಹೊಡಿ’ ಎಂಬ ಜಾತ್ರೆ ತನ್ನ ಎಲ್ಲಾ ಹಳೆ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಈ ಜಾತ್ರೆಯಲ್ಲಿ ಬಾಜಾಭಂತ್ರಿ ಬದಲು ಟಣ್..ಟಣಾ...ಟಣ್ ಎಂಬ ನಾದ ಹೊಮ್ಮಿಸುವ ವಾದ್ಯ ಕನ್ನಾಲಿಗೆ ಮತ್ತು ನಾಡು- ಕಾಡಿನ ತುಂಬ ಮಾರ್ದನಿಗೊಳ್ಳುವ ಮರ್ದನ ವಾದ್ಯವನ್ನು ಉಪಯೋಗಿಸುತ್ತಾರೆ. ಸಿಡಿಮದ್ದುಗಳ ಆರ್ಭಟವಿಲ್ಲ. ರಥೋತ್ಸವದ ಬದಲಾಗಿ ಮನುಷ್ಯ ಮನುಷ್ಯರನ್ನೇ ಹೆಗಲ ಮೇಲೆ ತಲೆ ಕೆಳಗೆ ಮಾಡಿ ಹೊತ್ತು ತರುವ ಸಂಪ್ರದಾಯವಿದೆ. ಮೆರವಣಿಗೆಯ ಮುಂದೆ ಕುಸ್ತಿ, ಒಬ್ಬರಿಗೊಬ್ಬರು ಮುಂಗೈ ಹಿಡಿದು ಶಕ್ತಿ ಪಣಕ್ಕಿಡುವ ಸ್ಪರ್ಧೆಗಳಿವೆ. ಸಮಾರಾಧನೆಯ ಬದಲು ಮನೆ ಮನೆಯಿಂದ ತಂದ ಬುಟ್ಟಿ ಅಡುಗೆಯೇ ಭೋಜನ. ಜಾತ್ರೆಯ ಕೊನೆಯಲ್ಲಿ ’ಬರಲಿನ’(ಪೊರಕೆಯ) ಹೊಡೆದಾಟವಿದೆ.

ಅಂದು ಬೆಳಿಗ್ಗೆ ದೇವಸ್ಥಾನ ಹಾಗೂ ಓಕುಳಿ ತುಂಬಿದ ಹೊಂಡದ ಸುತ್ತಲು ಹಸುರು ಹಂದರ ಹಾಕಲು ಆರಂಭವಾಗುತ್ತದೆ. ತೋರಣ ಕಟ್ಟಲು ಬೇಕಾದ ಬಾಳೆ ಕಂಬಗಳನ್ನು ತರಲು ಪರಂಪರೆಯಂತೆ ಊರಗೌಡರ ಮನೆಗೆ ಹೋಗುತ್ತಾರೆ ಅದೂ ಆರತಿ ವಾದ್ಯಗಳ ಸಮೇತ! ಮೇಳದೊಂದಿಗೆ ಗೌಡರು ಮಾರುತಿಯ ಗುಡಿಗೆ ತಲುಪಿ ಶಂಖನಾದದೊಂದಿಗೆ ಚಪ್ಪರ ಹಾಕಿ ಬಾಳೇ ಕಂಬಗಳನ್ನು ಕಟ್ಟುತ್ತಿದ್ದಂತೆ ಜಾತ್ರೆಗೆ ಚಾಲನೆ ದೊರೆತಂತಾಗುತ್ತದೆ.

ಜಾಲಗಾರ ಮನೆತನದವರು ಹೊಡೆಯಲು ಬೇಕಾದ ಪೊರಕೆಗಳನ್ನು ಜಾತ್ರೆಯ ಹಿಂದಿನ ದಿನವೇ ಸಂಗ್ರಹಿಸುತ್ತಾರೆ. ಲಿಪ್ಪಿ ಹಾಗೂ ಲಕ್ಕೆಯ ಬರಲುಗಳನ್ನು ಪೆಂಡಿ ಕಟ್ಟುತ್ತಾರೆ. ಅವರಲ್ಲಿಗೆ ಹೋಗಿ ಈ ಪೊರಕೆಯ ಗಂಟುಗಳನ್ನು ಮೇಳದೊಂದಿಗೆ ಊರ ತುಂಬೆಲ್ಲ ಮೆರವಣಿಗೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಗಟ್ಟಿ ಮುಟ್ಟಾಗಿರುವ ಪೊರಕೆಗಳನ್ನು ನೋಡಿದ ಜನರು" ಹೌದು ನೋಡಪಾ... ಬರ್ಲ ಅಂದ್ರ ಹೀಂಗಾ ಇರಬೇಕು, ಒಂದು ಹೊಡ್ತ ಬಿತ್ತಂದ್ರ ಮ್ಯಾಕೆ ಏಳಕ ಬಂದಿರಬಾರದು ಹಾಂಗ ಆದಾವು ನೋಡು" ಎಂದು ಜಾಲಗಾರ ಹುಡುಗರಿಗೆ ಶಹಬ್ಬಾಷಗಿರಿ ಕೊಡುತ್ತಾರೆ. ಊರ ಕುಂಬಾರರು ಓಕುಳಿಯಾಡಲು ಬೇಕಾದ ಮಡಕೆಗಳನ್ನು ಹೊತು ತರುತ್ತಾರೆ. ಹೀಗೆ ಜಾತ್ರೆಯಲ್ಲಿ ಸಹಕರಿಸಿದವರೆಲ್ಲರನ್ನೂ ಜಾತ್ರೆಯ ನಂತರ ಉಡುಗೊರೆ ಕೊಟ್ಟು ಗೌರವಿಸುತ್ತಾರೆ.
ಈ ಜಾತ್ರೆಗೆ ಬೈಲಕೂರಿನ ಸುತ್ತಮುತ್ತಲ ಹಳ್ಳಿಗಳಾದ ಅಮರಗೊಳ, ಹಡಗಲಿ, ಗರಸಂಗಿ, ಮದರಿ, ತಂಗಡಿಗೆಯಂಥ ಹಳ್ಳಿಯವರಿಗೂ ಆಮಂತ್ರಣವಿದ್ದೂ ಅವರೂ ಇದರಲ್ಲಿ ಭಾಗವಹಿಸಲು ಬರುತ್ತಾರೆ. ಹೀಗೆ ಬರುವವರನ್ನು ಮೆರವಣಿಗೆಯ ಮೂಲಕ ಓಕುಳಿ ಜಾತ್ರೆಗೆ ಕರೆತರುವಾಗ ದಾರಿಯುದ್ದಕ್ಕೂ ಮುಂಗೈ ಹಿಡಿದು ಆಡುವುದು, ಕುಸ್ತಿ ಮಾಡುವುದು, ಗಜ ನಿಲ್ಲುವುದು( ಹೆಗಲಮೇಲೆ ಮತ್ತೊಬ್ಬನನ್ನು ತಲೆಕೆಳಗೆ ಕಾಲು ಮೇಲೆ ಮಾಡಿ ಹೊತ್ತು ತರುವುದು) ..... ತಮ್ಮ ತಮ್ಮ ಶಕ್ತಿ ಹಾಗೂ ಸಾಮರ್ಥ್ಯ ತೋರುತ್ತಾ ಬರುವವರನ್ನು ಜನರು ಅವರ ತಲೆಯ ಮೇಲೆ ಮಂಡಕ್ಕಿ ಚೆಲ್ಲಿ ಪ್ರೋತ್ಸಾಹ ತುಂಬುತ್ತಾರೆ.


ಹೀಗೆ ಗುಡಿಗೆ ಬರುವಾಗ ಗೋಧೂಳಿಯ ಸಮಯವಾಗುತ್ತದೆ. ದೇವಸ್ಥಾನ ಮುಂದೆ ಸುಮಾರು ಎಂಟು ಅಡಿ ಅಗಲ ಹಾಗೂ ಐದಾರು ಆಳದ ಹೊಂಡದಲ್ಲಿ ಗುಲಾಬಿ ರಂಗನ್ನು ಅದ್ದಿರುತ್ತಾರೆ. ಹನುಮಂತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಬಣ್ಣದ ಹೊಂಡ ಸುತ್ತ ಐದು ಪ್ರದಕ್ಷಿಣೆ ಹಾಕುತ್ತಿರುವಾಗಲೇ ಜನರು ಓಕುಳಿಯಾಡಲೂ ಪೊರಕೆಯೇಟು ತಿನ್ನಲೂ ಸಿದ್ಧರಾಗುತ್ತಾರೆ. ಪೂಜಾರಿ ಪೊರಕೆ ಪೆಂಡಿಗಳಿಗೂ ಬಣ್ಣದ ಹೊಂಡಕ್ಕೂ ಆರತಿ ಎತ್ತುತ್ತಾನೆ ಮತ್ತು ಸ್ವತಃ ತಾನೇ ಮೊದಲು ಹೊಂಡಕ್ಕೆ ಹಾರುತ್ತಾನೆ. ಜಾತ್ರೆಯ ನಿಜವಾದ ಸ್ವಾರಸ್ಯ ಈಗ ಪ್ರಾರಂಭವಾಯಿತು ನೋಡಿ! ಪುಜಾರಿ ಹೊರಬರಲಿಕ್ಕಿಲ್ಲ ಜನರು ಒಬ್ಬರಮೇಲೊಬ್ಬರು ಎರಗಿ ಪೊರಕೆಗಳನ್ನು ಎಳೆಯುವ ಪೈಪೋಟಿಯಲ್ಲಿ ತೊಡಗುತ್ತಾರೆ. ಹೊಂಡಕ್ಕೆ ಇಳಿದವರು ಮಡಿಕೆಯೋ, ಬಕೆಟೋ, ಕೊಡದಲ್ಲೋ ಓಕುಳಿ ತುಂಬಿಕೊಂಡು ಬಂದು ನಿಂತಿರುವವರ ಮೇಲೆ ಬಣ್ಣದ ನೀರೆರಚುತ್ತಾರೆ. ಬಣ್ಣ ಎರಚಿಸಿಕೊಂಡವರು ಪೊರಕೆಗಳಿಂದ ತಮ್ಮೆಲ್ಲ ಶಕ್ತಿ ಒಟ್ಟು ಮಾಡಿ ಓಕುಳಿ ಹಾಕಿದವರನ್ನು ಹೊಡೆಯುತ್ತಾರೆ. ಏಟು ಬಿದ್ದರೂ ಮತ್ತೆ ಹೊಂಡಕ್ಕೆ ಹಾರಿ ಮತ್ತೆ ಓಕುಳಿ ಎರಚಿ ಮತ್ತೊಮ್ಮೆ ಏಟು ತಿನ್ನುತ್ತಾರೆ. ಏಟು ಕೊಡುತ್ತಿದ್ದವರೂ ತಾವೂ ಹೊಂಡಕ್ಕೆ ಹಾರಿ ಬೇರೆಯರ ಪೊರಕೆಯೇಟು ತಿನ್ನುತ್ತಾರೆ. ವಾತಾವರಣದಲ್ಲೆಲ್ಲ ದೀಪಾವಳಿಯ ಪಟಾಕಿ ಸದ್ದಿನಂತೆ ಪೊರಕೆ ಪೆಟ್ಟಿನಿಂದ ಬರುವ ಸದ್ದು ಹಾಗೂ ಜನರ ಕೇಕೇ ಶಬ್ದಗಳಿಂದ ಅನುಕರಣಿಸುತ್ತದೆ. ಇಲ್ಲಿ ಯಾರೂ ಹೊಡೆತ ತಿನ್ನುವುದನ್ನು ತಪ್ಪಿಸಿಕೊಳ್ಳುವುದಿಲ್ಲ ಬದಲಿಗೆ ಬಾಸುಂಡೆಗಳು ಮೈ ತುಂಬ ಹೆಣೆದಿದ್ದರೂ ಮತ್ತೂ ಹೊಡೆಸಿಕೊಳ್ಳುತ್ತಾರೆ. ಹೊಡೆತ ತಿಂದವರು ಮತ್ತಷ್ಟು ಮಂದಿಗೆ ಹೊಡೆಯಬೇಕೆಂಬ ನಿಯಮವಿರುವುದರಿಂದ ಪೊರಕೆಯ ಪೆಟ್ಟಿನಿಂದ ಯಾರೂ ಮುಕ್ತರಾಗುವುದಿಲ್ಲ. ಬಣ್ಣಹಾಕಿ ಹೊಡೆತ ತಿನ್ನುವುದು ದೇವರ ಸೇವೆಯೆಂದೇ ತಿಳಿಯುತ್ತಾರೆ. ಹೊಂಡದ ನೀರು ಖಾಲಿಯಾಗುವರೆಗೂ ಇದು ನಡೆದು ಬಳಿಕ ಪೊರಕೆ ಸೇವೆಗೆ ತೆರೆ ಬೀಳುತ್ತದೆ. ಹಾ.... ಪೊರಕೆಗಳನ್ನು ಮನೆಗೊಯ್ದು ಮುಂದಿನ ಜಾತ್ರೆಯವರೆಗೂ ಜೋಪಾನವಾಗಿಡುತ್ತಾರೆ. ( ಯಾಕೆಂದು ನನಗೆ ಗೊತ್ತಾಗಿಲ್ಲ. ಹೇಗಿದ್ದರೂ ಮುಂದಿನ ಜಾತ್ರೆಗೆ ಜಾಲಗಾರರು ತಾನೆ ಪೊರಕೆಗಳ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಲೇಖಕರೂ ಏನೂ ತಿಳಿಸಿಲ್ಲ.)
ಇದನ್ನು ಓದಿದಾಗ ವಿದೇಶದಲ್ಲಿ ನಡೆಯುವ ಕಿತ್ತಳೆ , ಟೊಮೇಟೋ ಹಣ್ಣುಗಳನ್ನು ಹೀಗೆ ಮೈಮೇಲೆರಚಿ ನಡೆಯುವ ಜಾತ್ರೆಯ ನೆನಪಾಯಿತು. ಈ ಪೊರಕೆಯೇಟು ತಿನ್ನುವ ಜಾತ್ರೆಯ ಬಗ್ಗೆ ಇಲ್ಲಿರುವ ಆಧುನಿಕ ಯುವಕರೂ ಏನೂ ಪ್ರಶ್ನಿಸದೆ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸುತ್ತಿರುವುದು ಒಂದು ಸೋಜಿಗವೇ ಸರಿ! ನಮ್ಮ ಪೂರ್ವಜರು ಏನೇ ಪದ್ಧತಿ ಮಾಡಿದ್ದರೂ ಅದಕ್ಕೊಂದು ಅರ್ಥವಿರುವುದು ಎಂದು ನಾನು ನಂಬಿದ್ದೆ. ಆದರೆ ಇದು.....!


ಈ ಲೇಖನವನ್ನು ತರಂಗ ಪತ್ರಿಕೆಯಲ್ಲಿ ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ ಬರೆದಿರುವ " ಬೈಲಕೂರಿನ ಜಾತ್ರೆಗೆ ಬನ್ನಿ... ಪೊರಕೆ ಏಟು ತಿನ್ನಿ!" ಎಂಬ ಲೇಖನದಿಂದ ಆರಿಸಲಾಗಿದೆ.

05 January, 2008

ಪರಂಪರೆಯನ್ನು ಕುಲಗೆಡಿಸುವ ಹೊಸ ಹವ್ಯಾಸ..... ಇನೋವೇಷನ್ ಹೆಸರಲ್ಲಿ!

ಬೈಲಕೂರಿನ ಪೊರಕೆ ಏಟಿನ ಜಾತ್ರೆಯ ಬಗೆ ತರಂಗದಲ್ಲಿ ಓದಿದನ್ನು ಇಲ್ಲಿ ಬ್ಲಾಗಿಸುತ್ತೇನೆಂದು ಹೇಳಿದ್ದೆ. ಆದರೆ ಅದರ ಮೊದಲು ತಾರೀಕು ೩೧-೧೨-೨೦೦೭ದ ಉದಯವಾಣಿ ಪತ್ರಿಕೆಯಲ್ಲಿ "ಕಲಿ-ಯುಗ"ವೆಂಬ ಅಂಕಣದಲ್ಲಿ ಶ್ರೀಯುತ ಬೇಳೂರು ಸುದರ್ಶನರಿಂದ ಪ್ರಸ್ತಾವಿಸಲ್ಪಟ್ಟ ವಿಷಯವು ನನ್ನ ಗಮನ ಸೆಳೆದುದರಿಂದ ನನ್ನ ಸಹಬ್ಲಾಗಿಗರ ಗಮನಕ್ಕೂ ಈ ವಿಷಯ ಬರಲಿ ಎಂದು ಇಲ್ಲಿ ಇದನ್ನು ಬರೆಯುತ್ತಿದ್ದೇನೆ.
ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು ಈ ಖ್ಯಾತ ನಿರ್ದೇಶಕ ಶೇಖರ ಕಪೂರ್ ಅವರು ತಾವು ರಾಮಾಯಣ ಕಾಮಿಕ್ಸ ಪುಸ್ತಕವನ್ನು ಪ್ರಕಟಿಸುತ್ತೇನೆ ಎಂದು ಸ್ವಲ್ಪ ಕಾಲದ ಹಿಂದೆ ಘೋಷಿಸಿದ್ದು. ಈಗ ಈ ಕಾಮಿಕ್ಸಗಳು " ರಾಮಾಯಣ ಕ್ರಿಸ್ತಶಕ ೩೩೯೨" ಎಂಬ ಹೆಸರಿನಿಂದ ಪ್ರಕಟವಾಗಿವೆ. ಈ ಬಗ್ಗೆನೇ ಬೇಳೂರುನವರು ಬರೆದದ್ದು.
ಇಲ್ಲಿ ಅವರು ಪ್ರಕಟಿಸಿದ್ದನ್ನು ಯಥಾವತ್ತಾಗಿ ಕಾಪಿ ಮಾಡಿ ಅಂಟಿಸಿದ್ದೇನೆ. ದಯವಿಟ್ಟು ತಾಳ್ಮೆಯಿಂದ ಓದಿ, ಮುಂದೆ ನಿಮ್ಮಿಂದ ಏನು ಮಾಡಲು ಸಾಧ್ಯವಾಗುವುದೆಂದು ನಿರ್ಧರಿಸಿ. ನಮ್ಮ ಅತ್ಯಂತ ಪುರಾತನ ಪರಂಪರೆ ಹಾಗೂ ಮುಂದಿನ ಜನಾಂಗದ ಬಗ್ಗೆ ನಿಮಗೇನಾದರೂ ಕಾಳಜಿಯಿದ್ದರೆ ನೀವೆಲ್ಲಾ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರೆಂದು ನಂಬುತ್ತೇನೆ. ಬೇಳೂರುನವರ ತಾಣದ ವಿಳಾಸವನ್ನೂ ಹಾಗೂ ಅವರ ಮೈಲ್ ಐ ಡಿ ಯನ್ನೂ ಇಲ್ಲಿ ಹಾಕಿದ್ದೇನೆ.

www.mitrmaadhyama.co.in
beluru@gmail.com

************** ****** ***** **** *** *************************************

ಮಕ್ಕಳಿಗಾಗಿ ಕಾಮಿಕ್ಸ್: ರಾಕ್ಷಸ ರಾಮಾಯಣ ಮತ್ತು ನಗ್ನ - ಅಗ್ನಿ ದೇಹಿ ದೇವಿ


" “ಬೇರೆ ಹೊತ್ತಿನಲ್ಲಿ ಬಂದಿದ್ದರೆ ನಿನ್ನನ್ನು ಮದುವೆಯಾಗೋ ಪ್ರಸ್ತಾಪ ಇಡುತ್ತಿದ್ದೆ; ನಾವು ರಾ-ಕ್ಷಸರನ್ನು ಹುಟ್ಟಿಸಬಹುದಿತ್ತು." - ತೃಷ್ಣಾ ಎಂಬ ರಾಕ್ಷಸಿಯ ಜೊತೆ ಯುದ್ಧ ಮಾಡುತ್ತ ಲಕ್ಷ್ಮಣ ಹೇಳುತ್ತಾನೆ.
“ಸೀತೆಯನ್ನು ಮತ್ತೆ ಜೊತೆಗೆ ಕರೆದೊಯ್ಯುವುದೆ? ಲೋಕರಕ್ಷಣೆಯ ಕೆಲಸ ಸಾಕೋ ಸಾಕಾಗಿದೆ ವಿಶ್ವಾಮಿತ್ರ, ಅಂಥ ಕೆಲಸವನ್ನು ನಾನು ಯಾವಾಗಲೋ ಬಿಟ್ಟಿದ್ದೇನೆ." - ವಿಶ್ವಾಮಿತ್ರನಿಗೆ ರಾಮ ಹೇಳುತ್ತಾನೆ.
“ಈತ ರಾಮನೆ? ಸಮರವೀರನೆ? ಅಲ್ಲ; ಕೊಲೆಗಡುಕ!!" - ವಿಶ್ವಾಮಿತ್ರನಿಗೆ ಸೀತೆ ಹೇಳುತ್ತಾಳೆ.
ರಾಮ ಕೆಂಗಣ್ಣು ಬಿಡುತ್ತಾನೆ. ಮೊದಲೇ ಡಬ್ಲ್ಯು ಡಬ್ಲ್ಯು ಎಫ್‌ನಲ್ಲಿರುವಂತೆ ಉಬ್ಬಿದ ತೋಳುಗಳು, ಮಾಂಸಖಂಡಗಳು ಹುರಿಗೊಳ್ಳುತ್ತವೆ. ಸೆಟೆದುಕೊಂಡವನಂತೆ ಹೊರಟೇ ಹೋಗುತ್ತಾನೆ. ಮಾತೆತ್ತಿದರೆ ಉರಿಗಣ್ಣು ಮಾಡಿಕೊಂಡೇ ಪ್ರತಿಕ್ರಿಯಿಸುವ ರಾಮನಿಗೆ ಒಮ್ಮೆ ರೇಗಿಹೋಗುತ್ತದೆ; ರಾವಣನ ಮಗ ಮೇಘನಾದನನ್ನು ಕ್ಷಣಮಾತ್ರದಲ್ಲಿ ಹೊಡೆದುಹಾಕುತ್ತಾನೆ. ಇದರಿಂದ ರಾವಣ ಮತ್ತೆ ಪ್ರಚೋದನೆಗೊಂಡು ದಿಗಂತವೇ ಸೀಳಿಕೊಂಡ ಹಾಗೆ ರಾಮ - ಲಕ್ಷ್ಮಣ-ಸೀತೆ-ವಿಶ್ವಾಮಿತ್ರ ಇದ್ದೆಡೆಗೆ ಹಾರಿಬರುತ್ತಾನೆ. ಜೀವನವೃಕ್ಷದಿಂದ ರೂಪುಗೊಂಡ ಮಿಥಿಲಾನಗರವೇ ಸಿಡಿದುಹೋಗುತ್ತದೆ.
ರಾವಣ ಎಂದರೆ ನೀವು ಹತ್ತು ತಲೆಗಳವನು, ಮಹಾಪಂಡಿತನ ಥರ ಕಾಣಿಸುತ್ತಾನೆ ಎಂಬ ಭ್ರಮೆಯಲ್ಲಿ ಇದ್ದರೆ ಅದರಿಂದ ಹೊರಬನ್ನಿ. ಇಲ್ಲಿ ರಾವಣ ಎಂದರೆ ಹಾಲಿವುಡ್‌ನ ಸ್ಪೆಶಿಯಲ್ ಎಫೆಕ್ಟ್ ಸಿನೆಮಾಗಳಲ್ಲಿ ಕಾಣುವ ರಾಕ್ಷಸ. ಮಾತೆತ್ತಿದರೆ ಹೊಡಿ, ಕಡಿ ಎಂದು ಕಿರುಚುತ್ತಾನೆ. ‘ನೀವು ಮೂವರೂ ತಪ್ಪಿಸಿಕೊಳ್ಳಿ, ನಾನು ಮತ್ತೆ ಕ್ಷಾತ್ರಭಾವವನ್ನು ಮೆರೆಸುತ್ತ ರಾವಣನೊಂದಿಗೆ ಯುದ್ಧ ಮಾಡುವೆ ಎನ್ನುತ್ತ ವಿಶ್ವಾಮಿತ್ರ ಮತ್ತೆ ಭುಜಕೀರ್ತಿಯನ್ನು ಧರಿಸಿ.......
ಅರೆ, ಇದೆಂಥ ಕಥೆ ಮಾರಾಯ್ರೆ ಎಂದು ನೀವು ಗಲಿಬಿಲಿಗೊಂಡರೆ ಅದಕ್ಕೆ ನೀವೇ ಕಾರಣ. ಜಾಗತೀಕರಣದ ಈ ಹೊತ್ತಿನಲ್ಲಿ ಭಾರತದ ಸಂಸ್ಕೃತಿ - ಪರಂಪರೆಯ ಸೊಗಡನ್ನು ಹೊಸ ಹೊಸ ವಿಧಾನಗಳ ಮೂಲಕ ಸಗಟಿನಲ್ಲೋ, ಚಿಲ್ಲರೆಯಾಗಿಯೇ ಮಾರುವ ಭಾರತೀಯ ಮನಸ್ಸುಗಳೇ ಈ ಕಥೆಯನ್ನು ರೂಪಿಸಿವೆ. ಈ ಕಥೆಯನ್ನು ಹೊತ್ತ ಹತ್ತಾರು ಕಾಮಿಕ್ ಪುಸ್ತಕಗಳು (ಅಂದರೆ ಅಮರ ಚಿತ್ರಕಥೆಯಂಥ ಪುಸ್ತಕಗಳು, ಚಿತ್ರಗಳಿಂದಲೇ ತುಂಬಿರುವ ಪುಸ್ತಕ ಎಂಬುದಕ್ಕೆ ಮಾತ್ರ ಹೋಲಿಸಿಕೊಳ್ಳಿ ; ಚಿತ್ರಗಳ ನಿರೂಪಣೆ, ಕಥೆಯನ್ನು ಮಾತ್ರ ಅಮರಚಿತ್ರಕಥೆಗಳಿಗೆ ಹೋಲಿಸಿ ನಮ್ಮ ಅನಂತ ಪೈ ಅಜ್ಜನನ್ನು ಅವಮಾನಿಸಬೇಡಿ). ಅಮೆರಿಕಾದಿಂದ ಹಿಡಿದು ಎಲ್ಲ ವಿದೇಶಗಳಲ್ಲಿ ಬಿಕರಿಯಾಗುತ್ತಿವೆ. ಭಾರತದಲ್ಲೂ ಈ ಕಾಮಿಕ್ ಪುಸ್ತಕಗಳು ದೊರೆಯುತ್ತವೆ.
‘ರಾಮಾಯಣ ಕ್ರಿಸ್ತಶಕ ೩೩೯೨’ ಎಂಬ ಶೀರ್ಷಿಕೆ ಹೊತ್ತ ಈ ಪುಸ್ತಕಗಳನ್ನು ನಾನು ಅಂತರಜಾಲದಲ್ಲಿ ಹುಡುಕಿದೆ. ಕೆಲವು ಸ್ಯಾಂಪಲ್‌ಗಳು ಸಿಕ್ಕಿದವು. ಅವನ್ನೆಲ್ಲ ನನ್ನ ಜಾಲತಾಣದಲ್ಲಿ ನಿಮ್ಮ ಹೆಚ್ಚಿನ ಓದಿಗಾಗಿ ಕೊಟ್ಟಿದ್ದೇನೆ. ಆದರೆ ಅಲ್ಲಿಗೆ ಹೋಗಿ ತಿಣುಕುವಕ್ಕಿಂತ ಮೊದಲು ನನ್ನ ಇನ್‌ಸ್ಟಂಟ್ ವಿಮರ್ಶೆಯನ್ನು ಓದಿ. ಯಾಕೆಂದರೆ ರಾಮಾಯಣದ ಕಥೆಯ ಬಗ್ಗೆ ನಂಬಿಕೆ ಹೇಗೇ ಇರಲಿ, ನಂಬಿಕೆಯನ್ನು ಪ್ರಶ್ನಿಸುವ ಪ್ರವೃತ್ತಿ ಬೇರೆ. ಆದರೆ ರಾಮಾಯಣದಲ್ಲಿ ನಂಬಿಕೆ ಇರುವ ಸಿರಿವಂತ / ಮಧ್ಯಮ ವರ್ಗದ ತಂದೆ ತಾಯಂದಿರಿಗೆ ಪುರಾಣ - ಮಹಾಕಾವ್ಯಗಳ ನೀತಿಕಥೆಯ ಮುಂದುವರಿದ ಭಾಗ ಎಂಬಂತೆ ಬಿಂಬಿಸಿ ಮಾರುತ್ತಿರುವ ಈ ಕಾಮಿಕ್ಸ್‌ಗಳನ್ನು ಮಾರಿ ಹಣ ದೋಚುವ ಖದೀಮರಿಗೆ ಏನೆನ್ನೋಣ? ಹೋಗಲಿ, ಕಥೆಯಾದರೂ ರಾಮಾಯಣದ ಮುಂದುವರಿಕೆಯಾ ಎಂದರೆ ಅದೂ ಇಲ್ಲ ಬಿಡಿ. ರಾಮಾಯಣದ ಪಾತ್ರಗಳ ಮೂಲಕ ನಾಲ್ಕನೇ ದರ್ಜೆಯ ಬಾಲಿವುಡ್ ಸಿನೆಮಾ ಥರ ಈ ಕಾಮಿಕ್ಸ್‌ಗಳು ಕಾಣಿಸುತ್ತವೆ. ಇದಕ್ಕೆ ರಾಮಾಯಣವೇ ಆಧಾರವಾಗಿದ್ದು ಯಾಕೆ ಎಂದು ನಾನು ಕಕಮಕನಾಗಿದ್ದೇನೆ.
ಇನ್ನು ಈ ಕಾಮಿಕ್ಸ್‌ಗಳಲ್ಲಿ ಸೀತೆಯ ಚಿತ್ರಗಳನ್ನು ನೋಡಿಯೇ ತೀರ್ಮಾನಿಸಬಹುದು - ಇದೂ ಕೂಡಾ ಈಗ ಕಾಮಿಕ್ಸ್ ಚಾನೆಲ್‌ಗಳಲ್ಲಿ, ಪುಸ್ತಕಗಳಲ್ಲಿ ಬರುವಂಥ ಮಕ್ಕಳಿಗೆ ಹದಿಹರೆಯಕ್ಕಿಂತ ಮೊದಲೇ ಲೈಂಗಿಕ ಪ್ರಚೋದನೆಯನ್ನು ನೀಡುವ ಸಾಫ್ಟ್ ಪೋರ್ನ್ ಮಾದರಿಯ ಮುಂದುವರಿಕೆ ಎಂದು. ಈ ಕಾಮಿಕ್ಸ್‌ಗಳಲ್ಲಿ ನೀವು ಕಾಣುವ ಸೀತೆ ಸೀರೆಯನ್ನು ಹ್ಯಾಗೋ ಹೊದ್ದುಕೊಂಡಿದ್ದಾಳೆ. ಎಲ್ಲ ಫ್ರೇಮ್‌ಗಳಲ್ಲೂ ಯಾವಾಗಲೂ ಅವಳ ಎದೆ ಎದ್ದು ಕಾಣುತ್ತದೆ. ಅವಳು ಅಳುತ್ತಿರಲಿ, ಕೋಪದಲ್ಲಿರಲಿ, ದೇಹದ ಏರಿಳಿತಗಳು ರಾಚುವಂತೆ ಬರೆದಿರುವುದು ನಿಜಕ್ಕೂ ಹೌದೋ, ಅಥವಾ ನನ್ನ ಕಣ್ಣಿಗೇ ಹಾಗೆ ಕಾಣಿಸಿತೋ, ಗೊತ್ತಿಲ್ಲ; ನೀವೇ ತೀರ್ಮಾನಿಸಿ.
ಇದು ರಾಮಾಯಣದ ಗತಿಯಾದರೆ, ನಮ್ಮ ಪುರಾಣಗಳಲ್ಲಿ ಬರುವ ದೇವಿಯ ಗತಿ ಏನಾಗಿರಬಹುದು ಎಂದು ನೀವು ಊಹಿಸಬಲ್ಲಿರಾ? ‘ದೇವಿ’ ಹೆಸರಿನ ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಮಿಕ್ಸ್ ಕೂಡಾ ಇದೇ ಕೊಳ್ಳುಬಾಕ ಕಾಮಿಕ್ಸ್ ಸರದಾರರಿಂದ ಹೊರಬಿದ್ದಿದೆ. ಈ ದೇವಿ ನೀವು ತಕ್ಷಣಕ್ಕೆ ಕಲ್ಪಿಸಿಕೊಳ್ಳುವಂತೆ ಹೇಗಿದ್ದಾಳೇನೋ. ಆದರೆ ಈ ಕಾಮಿಕ್ಸ್‌ಗಳಲ್ಲಿ ಮಾತ್ರ ಕೇವಲ ಅಗ್ನಿಯ ಸೆಳಕುಗಳನ್ನು ಹೊದ್ದುಕೊಂಡ ನಗ್ನದೇಹಿ. ಅಂದರೆ, ನೀವು (ಸಾರಿ ನಮ್ಮ ಮಕ್ಕಳು) ಇಡೀ ಕಾಮಿಕ್ಸ್‌ನಲ್ಲಿ ಇವಳನ್ನು ಆಲ್‌ಮೋಸ್ಟ್ ನಗ್ನವಾಗಿಯೇ ನೋಡುತ್ತೀರ. ಪ್ರತಿಯೊಂದೂ ಫ್ರೇಮ್‌ನಲ್ಲಿ ಅವರ ದೇಹದ ಹಾವಭಾವಗಳು, ಸೆಕ್ಸ್ ಭಾಷೆಯಲ್ಲಿ ಹೇಳಬೇಕೆಂದರೆ ಕರ್ವ್‌ಗಳು ಸ್ಫುಟವಾಗಿ ಕಾಣುತ್ತವೆ. ಬಹುಶಃ ಇದುವರೆಗೂ ಬಾಲಿವುಡ್‌ನಲ್ಲೂ ಈ ಥರದ ನಗ್ನವೇಷ ಬಂದಿಲ್ಲ. ಇವಳೂ ಮಾನವರ ಸಂರಕ್ಷಕಿ. ಇವಳನ್ನು ಕಂಡರೆ ಕೆಟ್ಟವರಿಗೆ (??) ನಡುಕ ಬರುತ್ತದೆ. ಎಲ್ಲೇ ಕೆಟ್ಟವರು ದಾಳಿ ಮಾಡಿದರೂ ಇವಳು ಮರು ಅಟಾಕ್ ಮಾಡುತ್ತಾಳೆ.
ಹಾಗಾದರೆ ನಾನು ಖದೀಮರು, ಕೊಳ್ಳುಬಾಕರು ಎಂದು ಬೇಕಾಬಿಟ್ಟಿಯಾಗಿ ( ಈ ಅಂಕಣದಲ್ಲಿ ಹಿಂದೆಂದೂ ಬಳಸದ ಒರಟು ಭಾಷೆ ಇದು) ಜರೆದಿರುವ ವ್ಯಕ್ತಿಗಳು ಯಾರು ?
ಮೊದಲನೆಯವರು ‘ಫೂಲನ್ ದೇವಿ’ ಚಿತ್ರದ ಖ್ಯಾತಿಯ ಶೇಖರ್ ಕಪೂರ್. ಇವರು ಇತ್ತೀಚೆಗಷ್ಟೇ ‘ಎಲಿಝಬೆತ್ ೨’ ಎಂಬ ಸಿನೆಮಾ ಮಾಡಿ ಪ್ರಖ್ಯಾತರಾಗಿದ್ದಾರೆ. ಎರಡನೆಯವರು, ಇಡೀ ವಿಶ್ವಕ್ಕೆಲ್ಲ ವೇದಾಂತದ ಬೋಧನೆ ಮಾಡುತ್ತ, ವ್ಯಕ್ತಿತ್ವ ವಿಕಸನದ ಬಗ್ಗೆ ಹತ್ತಾರು ಪುಸ್ತಕಗಳನ್ನು ಬರೆದಿರುವ ದೀಪಕ್ ಛೋಪ್ರಾ ಎಂಬ ಮಹಾಶಯರು. ಇವರು ಬರೆದಿರುವ ಪುಸ್ತಕಗಳೆಲ್ಲ ಲಕ್ಷಗಟ್ಟಳೆ ಪ್ರತಿಗಳಲ್ಲಿ ಮಾರಾಟವಾಗಿವೆ. ಇಂಡಿಯಾ ಅಥೆಂಟಿಕ್ (ಅಂದರೆ ಖಚಿತವಾಗಿಯೂ ಭಾರತ ಎಂಬ ಅರ್ಥ ಬರುತ್ತದೆ) ಎಂಬ ಜಾಲತಾಣದ ಮೂಲಕ ಭಾರತದ್ದು ಎನ್ನಲಾಗುವ ಉತ್ಪನ್ನಗಳನ್ನು (ಇವು ಹಾಡು, ವಿಡಿಯೋ ಸಿಡಿಗಳಿಂದ ಹಿಡಿದು ಎಲ್ಲವನ್ನೂ ಒಳಗೊಂಡಿವೆ)ಮಾರುತ್ತಿರುವವರೂ ಇವರೇ. ಇವರ ಜೊತೆಗೆ ಇನ್ನಷ್ಟು ಭಾರತೀಯ ಹೆಸರುಗಳೂ ಇವೆ: ಸಿದ್ಧಅರ್ಥ ಕೋಟಿಯಾನ್, ಮುಕೇಶ್ ಸಿಂಗ್, ರವಿಕಿರಣ್, ಮಹೇಶ್ ಕಾಮತ್, ಪ್ರಕಾಶಕ ಶರದ್ ವರದರಾಜನ್, ಮುಖ್ಯ ಸಂಪಾದಕ ಗೌತಮ್ ಛೋಪ್ರಾ, ಜೀವನ್ ಕಾಂಗ್, ಸಮರ್‌ಜಿತ್ ಚೌಧರಿ, ಸುರೇಶ್ ಸೀತಾರಾಮನ್....
“ವರ್ಜಿನ್ ಕಾಮಿಕ್ಸ್" ಹೆಸರಿನಲ್ಲಿ ಈಗ ಇಂಥ ಕಾಮಿಕ್ಸ್‌ಗಳು ಎಲ್ಲೆಡೆ ಮಾರಾಟಕ್ಕಿವೆ. ‘ವರ್ಜಿನ್’ ಎಂದಮೇಲೆ ಗೊತ್ತಾಯಿತಲ್ಲ, ವಿಶ್ವದ ಸಿರಿವಂತರಲ್ಲಿ ಒಬ್ಬನಾಗಿರುವ ಚಾರ್ಲ್ಸ್ ಬ್ರಾನ್‌ಸನ್ ಕೂಡಾ ಈ ಶೇಖರ್ ಕಪೂರ್, ದೀಪಕ್ ಛೋಪ್ರಾ ಜೊತೆಗೂಡಿದ್ದಾನೆ.
ಈ ಕಾಮಿಕ್ಸ್‌ಗಳ ಬಗ್ಗೆ ನನಗೆ ಸುಳಿವು ಕೊಟ್ಟವರು ಕಳೆದ ವಾರವಷ್ಟೇ ಪರಿಚಿತರಾದ ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಯುವಕ. . ಅವರು ಖುಷಿ ಕೊಡದ ಇಂಜಿನಿಯರ್ ಕೆಲಸ ಬಿಟ್ಟು ವರಿ ಇಲ್ದೆ ಸದಾ ಸಮಾಧಾನ, ಸಂತಸ ಕೊಡೋ ಸದಭಿರುಚಿಯ ಕಾಮಿಕ್ಸ್‌ಗಳನ್ನು ಮಾಡಿ ಮಾರಾಟ ಮಾಡಲೇ ಹೆಣಗುತ್ತಿದ್ದಾರೆ ಎಂಬ ಕಥೆ ಬೇರೆ.
ಪುರಾಣವಿರಲಿ ಇತಿಹಾಸವಿರಲಿ, ಯಾವುದೋ ಕಟ್ಟುಕಥೆ ಇರಲಿ, ಮಕ್ಕಳಿಗೆ ಯಾವ ರೀತಿಯಲ್ಲಿ ಕಥೆ ಹೇಳಬೇಕೆಂದು ಗೊತ್ತಿಲ್ಲದ, ನಗ್ನತೆ - ಲೈಂಗಿಕತೆಯೇ ಬಂಡವಾಳವಾಗಿರುವ ಇಂಥ ಪ್ರಚಾರಪುರುಷರ ಬೌದ್ಧಿಕ ದಿವಾಳಿತನವನ್ನು ನಾವು ಪ್ರತಿಭಟಿಸಬೇಕೆಂದು ನನಗಂತೂ ಆನ್ನಿಸುತ್ತದೆ. ಅಂತಿಮ ತೀರ್ಮಾನ ನಿಮ್ಮದೇ.
ಅಂದಹಾಗೆ ದೀಪಕ್ ಛೋಪ್ರಾ ೨೦೦೮ರ ಕಾಮಸೂತ್ರ ಕ್ಯಾಲೆಂಡರ್ ಕೂಡಾ ರೂಪಿಸಿದ್ದಾರೆ. ನಿಮಗೆಲ್ಲರಿಗೂ ೨೦೦೮ರ ಕ್ಯಾಲೆಂಡರ್ ವರ್ಷದ ಶುಭಾಶಯಗಳು !


ಗಮನಿಸಿ
ವರ್ಜಿನ್ ಕಾಮಿಕ್ಸ್‌ಗಳಲ್ಲಿ ಇರುವ ಚಿತ್ರಗಳ ಸ್ಯಾಂಪಲ್‌ಗಳಿಗೆ ನನ್ನ beluru.googlepages.com/mitramaadhyama ಈ ಜಾಲತಾಣಕ್ಕೆ ಭೇಟಿ ಕೊಡಿ.
ನೀವು ದೀಪಕ್ ಛೋಪ್ರಾಗೆ ಕಾಗದ ಬರೆಯುವುದಿದ್ದರೆ felicia@chopra.com ಇಲ್ಲಿಗೆ ಈ ಮೈಲ್ ಮಾಡಿ, ನನಗೂ ಒಂದು ಪ್ರತಿ ಕಳಿಸಿ.
ನನ್ನ ಗೆಳೆಯರು ರೂಪಿಸಿದ ಸದಭಿರುಚಿಯ ಕಾಮಿಕ್ಸ್‌ಗಳನ್ನು ಉಚಿತವಾಗಿ ಓದಲು www.kidskhushi.com ಈ ಜಾಲತಾಣವನ್ನು ವೀಕ್ಷಿಸಿ."

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...