ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 December, 2007

ಹರಕೆಯ ಕುರಿ- ಕಾಮಧೇನು!

ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಪರಂಪರೆಗಳು, ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ. ಒಂದುಕಡೆ ಬಹಳ ಮುಂದುವರೆದ ಆಧುನಿಕ ಜನಾಂಗ ಇನ್ನೊಂದೆಡೆ ಮೂಡ ನಂಬಿಕೆಯೋ, ಮತ್ತೇನೋ ಅಥವಾ ಪವಾಡಗಳೋ ಎನ್ನುವಂತಹ ಉತ್ಸವಗಳು. ಹಳೆಯ ತರಂಗವನ್ನು ತಿರುವುತ್ತಿದ್ದಾಗ ಈ ಲೇಖನವು ನನ್ನನ್ನು ಸೆಳೆಯಿತು. ನನ್ನ ಬ್ಲಾಗಿನ ಹೆಸರೇ ತಿಳಿಸುವಂತೆ ನನ್ನ ಚಿತ್ತವನ್ನು ಕದಡುವ ಅಥವಾ ಪ್ರಸನ್ನಗೊಳಿಸುವ ಯಾವುದೇ ಸಂಗತಿಯನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಹಾಗಾಗಿ ಈ ಲೇಖನ. ಇದೇ ೨೦೦೭ರ ಎಪ್ರಿಲ್ ತರಂಗದಲ್ಲಿ ಕಿಶನ್ ರಾವ್ ಕುಲಕರ್ಣಿ ಕುಪ್ಪಗಿಯವರ ಲೇಖನಿಯಿಂದ ಮೂಡಿ ಬಂದ ಈ ಲೇಖನದಿಂದ ಸಂಕ್ಷಿಪ್ತವಾಗಿ ಆಯ್ದು ಪ್ರಸ್ತುತ ಪಡಿಸಿದ್ದೇನೆ.



ಬೈಲಕೂರ ಎಂಬ ಊರು,. ಬಹುಶಃ ಉತ್ತರ ಕರ್ನಾಟಕದ ಒಂದು ಹಳ್ಳಿ. ಎಲ್ಲಾ ಊರಿನಲ್ಲಿ ನಡೆಯಿವಂತೆ ಈ ಊರಿನಲ್ಲೂ ಒಂದು ಜಾತ್ರೆ ನಡೆಯುತ್ತದೆ. ಆದರೆ ಈ ಜಾತ್ರೆಯು ಎಲ್ಲಾ ಕಡೆಯಲ್ಲಿ ಇರುವಂತೆ ರಥೋತ್ಸವವೋ ಅಥವಾ ದೀಪಾರಾಧನೆಯಿಂದಲೋ ಕಳೆಕಟ್ಟುವುದಿಲ್ಲ.......ಆದರೆ ಪೊರಕೆ ಏಟಿನಿಂದ, ಅದೂ ಖುಷಿಯಿಂದ ತಿನ್ನುವ ಏಟುಗಳಿಂದ ಕಳೆಕಟ್ಟುತ್ತದೆ. ಆದರೆ ನನ್ನನ್ನು ಸೆಳೆದದ್ದು ಇದಲ್ಲ. ಇಲ್ಲಿಯೇ ಪಾದುಕೆ ಸೇವೆ ಎಂದು ಮತ್ತೊಂದು ಹರಕೆಯ ಸೇವೆಯನ್ನು ಭಕ್ತರು ಹೊತ್ತುತ್ತಾರೆ. ಅದೂ ಯಾವ ದೇವರಿಗೆ ಅಂತಿರಾ....ಪವನಪುತ್ರ ಹನುಮಾನನಿಗೆ! ಇದರಲ್ಲೇನು ವಿಚಿತ್ರ ಎಂದುಕೊಳ್ತಿರಾ? ಸರಿ ಬಿಡಿ, ಇಂತಹ ಹರಕೆಗಳು ಭಾರತದ ಉದ್ದಗಲಕ್ಕೂ ನಡೆಯುತ್ತಿರುವುದರಿಂದ ಅದರಲ್ಲೇನೂ ಆಶ್ಚರ್ಯವೂ ಇಲ್ಲ ವಿಚಿತ್ರವೂ ಇಲ್ಲ. ವಿಪರ್ಯಾಸವಿರುವುದು ಭಕ್ತರು ಹರಕೆಯೆಂದು ಒಪ್ಪಿಸುವ ಪಾದುಕೆಯಲ್ಲಿ.

ಈ ಪಾದುಕೆಗಳು ಸುಮಾರು ಒಂದು ಅಡಿಅಗಲ ಮತ್ತು ಎರಡು ಅಡಿ ಉದ್ದವಾಗಿದ್ದು ಮುತ್ತು, ಹವಳ, ಬಣ್ಣ ಬಣ್ಣದಬಟ್ಟೆ, ಗೆಜ್ಜೆ, ಮಿರಿಮಿರಿ ಮಿಂಚುವ ಕಾಗದಗಳಿಂದ ಅಲಂಕೃತಗೊಂಡಿರುತ್ತದೆ. ಹರಕೆಹೊತ್ತವರು ಮಾರುತಿಯ ಗುಡಿಗೆ ತಮ್ಮ ತಲೆಯ ಮೇಲೆ ಈ ಪಾದುಕೆಗಳನ್ನು ಹೊತ್ತು ತರುತ್ತಾರೆ. ಇಲ್ಲಿ ಹರಕೆಯ ಕಥೆ ಮುಗಿಯುವುದಿಲ್ಲ. ಈ ಪಾದುಕೆಗಳಿಂದ ಮೈಯಲ್ಲ ಹೊಡಕೊಳ್ಳುತ್ತಾರೆ. ಹೀಗೆ ಮಾಡಿದರೆ ಮೈ- ಕೈ ನೋವು, ಕೆಮ್ಮು, ದಮ್ಮು, ನೆಗಡಿಯಂತಹ ಕಾಯಿಗಳು ವಾಸಿಯಾಗುತ್ತದೆ ಅಲ್ಲದೆ ಭೂತ- ದೆವ್ವಗಳ ಕಾಟವೂ ಮಾಯವಾಗುತ್ತದೆ ಎಂದು ನಂಬುತ್ತಾರೆ.
ನಾ ಓದಿದಂತೆ ಕ್ರೂರತನವಿರುವುದು ಪಾದುಕೆಯಲ್ಲಿ. ಈ ಪಾದುಕೆಗಳನ್ನು ತಯಾರಿಸಲು ಕೊಂಬು, ಕಿವಿ, ಬಾಲ, ಹಲ್ಲು ಮುಕ್ಕಾಗಿರದ ಆರೋಗ್ಯವಂತ ಕಪಿಲೆ ಇಲ್ಲವೇ ಬಿಳಿ ಆಕಳಿನ ಚರ್ಮವೇ ಬೇಕು. ಈ ಮೆಟ್ಟನ್ನು ಗುಡಿಗೆ ಒಪ್ಪಿಸುವಾಗ ಅದನ್ನು ತಯಾರಿಸಿದ ಚಮ್ಮಾರನಿಗೆ ಕಬ್ಬು, ಐದು ಬಗೆಯ ಧಾನ್ಯ, ದಕ್ಷಿಣೆ, ಹೋಳಿಗೆಯ ಉಲ್ಪಿ ಕೊಡುವುದು ಮಾತ್ರವಲ್ಲದೆ ಒಂದು ಪ್ರಾಣಿಯನ್ನು ಬಲಿ ನೀಡಿ ಪ್ರಸ್ಥ ಮಾಡಿಸಬೇಕು. ಇದಕ್ಕೆಲ್ಲಾ ಸುಮಾರು ಹದಿನೈದು ಸಾವಿರ ರೂಪಾಯಿ ಖರ್ಚು ಆಗುವುದೆಂದು ಲೇಖನ ಬರೆದ "ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ" ಬರೆದಿದ್ದಾರೆ.
ಬೇಸರವೆಂದರೆ ಈ ಹರಕೆಯನ್ನು ಪೂರೈಸಲು ಒಂದು ಆರೋಗ್ಯವಂತ ದನವು ಬಲಿಯಾಗಬೇಕಾಗುತ್ತದೆ. ಇಂತಹ ಪರಂಪರೆಯ ಅಗತ್ಯ ನಮಗಿದೆಯೇ? ಎಂಬುದುದು ನನ್ನ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಕಳುಗಳನ್ನು, ಅಪರೂಪದ ತಳಿಗಳನ್ನು ರಕ್ಷಿಸುವಂತಹ ಕಾರ್ಯಗಳು ನಡೆಯುತ್ತಿವೆ. ಗೋಮೂತ್ರದಿಂದ ಔಷಧ ಮಾತ್ರವಲ್ಲದೆ ಕೀಟನಾಶಕಗಳನ್ನೂ ತಯಾರಿಸುತ್ತಿದ್ದಾರೆ ಮತ್ತು ಅದರ ಪ್ರಚಾರವೂ ಆಗಿ ಜನರು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಈ ಬೈಲಕೂರಿನ ಜನತೆಗೆ ತಿಳಿ ಹೇಳಿ ಆರೋಗ್ಯವಂತ ದನದ ಹತ್ಯೆಯ ಪರಂಪರೆಯನ್ನು ದೂರಮಾಡಿಸುವ ಪ್ರಯತ್ನಗಳು ನಡೆಯಬೇಕು.
ಕಾಮಧೇನುವನ್ನು ಪೂಜಿಸುವಂತ ಹಿರಿಮೆಯನ್ನು ಹೊತ್ತಿದ ಹಿಂದೂ ನಾಡಿನಲ್ಲೇ ಹರಕೆಯ ಹೆಸರಿನಲ್ಲಿ ಹಸುವಿನ ಕ್ರೂರ ಹತ್ಯೆ......ಎಂತಹ ವಿಪರ್ಯಾಸ.
ಅಂದ ಹಾಗೆ ಇದೇ ಊರಿನಲ್ಲಿ ನಡೆಯುವ ಪೊರಕೆ ಜಾತ್ರೆಯೂ ಏನೂ ಕಡಿಮೆ ವಿಚಿತ್ರದಲ್ಲ. ಒಂದು ಸಮಾಧಾನವೆಂದರೆ ಇದರಲ್ಲಿಯಾವುದೇ ಪ್ರಾಣಿಯನ್ನು ಬಲಿ ಕೊಡುವುದಿಲ್ಲ. ಆ ವರ್ಣನೆ ಇನ್ನೊಂದು ಕಂತಿನಲ್ಲಿ.

06 December, 2007

ದೇವರಿದ್ದಾನೆಯೇ?-2

ಅಂದ ಹಾಗೆ ಇಷ್ಟೆಲ್ಲಾ ಮಕ್ಕಳಿಗೆ ಹೇಳಿದ ವಿಷಯ ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಇದು ನನ್ನ ಅನುಭವವನ್ನು ದಾಖಲಿಸುವ ಪ್ರಯತ್ನ.... ಮತ್ತು ಮುಂದೆ ಯಾರಿಗಾದರೂ ಉಪಯೋಗವೂ ಆಗಬಹುದೆಂಬ ದೂರಾಲೋಚನೆ. ಪಾಪ ಪುಣ್ಯಗಳ ಬಗ್ಗೆ ಅಷ್ಟೆಲ್ಲಾ ಹೇಳಿದ ಮೇಲೆ ಮಕ್ಕಳ ಮೇಲೆ ಅದರ ಯಾವುದೇ ರೀತಿಯ ದುಷ್ಪರಿಣಾಮವಾಗಬಾರೆಂದೆಂದು, ನಾವು ತಿಳಿಯದೇ ಅಥವಾ ಬೇರೆ ಉಪಾಯವಿಲ್ಲದೇ ಸುಳ್ಳು ಹೇಳಿದಾಗ ನಮಗೆ ಬರುವ ಪಾಪವನ್ನು ನಿವಾರಿಸಿಕೊಳ್ಳಲು ಸುಲಭೋಪಾಯವನ್ನೂ ತಿಳಿಸಿದೆ. ಅದೇನಂದರೆ ಪಶ್ಚಾತ್ತಾಪ ಪಡುವುದು ಮತ್ತು ನಮ್ಮಿಂದಾದಷ್ಟು ಬೇರೆಯವರಿಗೆ ಸಹಾಯ ಮಾಡುವುದು.


ಸರಿ, ಈಗ ವಿಷಯಕ್ಕೆ ಬರೋಣ. ಸುಪ್ತದೀಪ್ತಿಯವರು ನಮ್ಮ ಅನುಭವವನ್ನು ತಿಳಿಸಲು ಹೇಳಿದ್ದಾರೆ. (ದೇವರ) ಪ್ರತಿಯೊಬ್ಬರಿಗೂ ದೇವರ ಅಥವಾ ವಿಶೇಷ ಶಕ್ತಿಯ ಅನುಭವಂತೂ ಖಂಡಿತವಾಗುವುದು. (ಇಲ್ಲಿ ನಾನು ದೇವರನ್ನು ವಿಶೇಷ ಶಕ್ತಿಯೆಂದೂ ಗುರುತಿಸಲು ಇಷ್ಟಪಡುತ್ತೇನೆ.) ಕೆಲವೇಮಂದಿಗೆ ಅದನ್ನು ಗುರುತಿಸಲು ಶಕ್ಯವಾಗುವುದು. ಇಲ್ಲಿ ಇಂತಹ ಅನುಭವವಾಗಲು ಅವರೇನು ದೈವಭಕ್ತರಾಗಬೇಕೆಂದಿಲ್ಲ. ನಮ್ಮ ಪೂರ್ವಜನ್ಮದ ವಾಸನೆಯಿಂದ ನಮಗೆ ದೈವಿಕ ಅನುಭೂತಿಯನ್ನು ಅನುಭವಿಸುವ ಆನಂದವು ಲಭಿಸುವುದು. ಆದರೆ ಕೆಲವರು ಮಾತ್ರ ಇದನ್ನು ನಿಜ ಆನಂದದಿಂದ ಸೇವಿಸಲು ಯೋಗ್ಯರಾಗುತ್ತಾರೆ. ಯಾಕೆಂದರೆ ಇಂತಹ ಭಾವನೆಯನ್ನು ಅನುಭವಿಸಲು ಅವರು ಮಾನಸಿಕವಾಗಿ ಧ್ರಡವಾಗಿರಬೇಕು, ಅಲ್ಲದೇ ಸುಪ್ತವಾಗಿರುವ ಆರನೇ ಇಂದ್ರಿಯ ಜಾಗೃತವಾಗಿರಬೇಕು

ಪ್ರತಿದಿನ ನಿಜ ಭಕ್ತಿಯಿಲ್ಲದೆ ಮಂತ್ರಗಳನ್ನು, ಭಜನೆಗಳನ್ನು ಪೂಜೆಗಳನ್ನು ಮಾಡುವುದರಿಂದ ನಮಗೆ ದೇವರ ಇರುವಿಕೆಯ ಅನುಭವವಾಗುವುದಿಲ್ಲ. ದೇವರು ನಮ್ಮಒಳಗೆ ಇರುತ್ತನಾದರೂ ಅವನನ್ನು ನಾವು ತೀರ್ಥಕ್ಷೇತ್ರಗಳಲ್ಲಿ, ದೇವಸ್ಥಾನಗಳಲ್ಲಿ ಹುಡುಕುತ್ತೇವೆ. ಭೀತಿಯಿಲ್ಲದೆ ಪಾಪಕಾರ್ಯಗಳನ್ನು ಮಾಡಿ ಅದನ್ನು ನಿವಾರಿಸಲು ದೇವರ ಮೂರ್ತಿಗೆ ವಜ್ರ ವೈಡೂರ್ಯಗಳನ್ನು ತೊಡಿಸುತ್ತೇವೆ. ಶಿಥಿಲವಾದ ನಮ್ಮ ಸಮಾಜಿಕ, ಮಾನವೀಯ, ನೈತಿಕ ಮೌಲ್ಯಗಳ ಉದ್ಧಾರ ಮಾಡದೇ ಕೋಟಿಗಟ್ಟಲೆ ಹಣ ಸುರಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿದ್ದೇವೆ. ಒಂದು ಕಡೆ ತಲೆಯ ಮೇಲೆ ಸೂರು ಇಲ್ಲದೆ, ಹೊಟ್ಟೆಗೆ ಗತಿಯಿಲ್ಲದೆ ಒದ್ದಾಡುತ್ತಿರುವವರಿದ್ದರೆ ಇನ್ನೊಂದೆಡೆ ಬಂಗಾರದ ದೇವಸ್ಥಾನಗಳು--- ಎಂತಹ ವಿಪರ್ಯಾಸ! ಇದೇನು ಕಲಿಯುಗಕ್ಕೆ ಮಾತ್ರ ಸಂಬಂಧಿಸಿದಲ್ಲ, ಪ್ರತಿಯೊಂದು ಯುಗದಿಂದಲೂ ನಡೆಯುತ್ತಲೇ ಇರುವ ಕತೆಗಳು. ದೇವರ ಹುಡುಕಾಟವೂ ಹಾಗೆಯೇ ನಡೆಯುತ್ತಿದೆ. ಇದರಲ್ಲಿ ಜಯಪಡೆದ ಯೋಗಿಗಳು ತಮ್ಮ ಅನುಭವವನ್ನು ಜನಸಾಮಾನ್ಯನಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಲೌಕಿಕ ಭೋಗದಲ್ಲಿ ಮುಳುಗಿರುವ ನಮ್ಮ ಮಿದುಳಿಗೆಟುಕುವುದೇ ಈ  ಬೋಧನೆಗಳು!




ನಮ್ಮ ಒಳಗಿರುವ ಪರಮಾತ್ಮನನ್ನು ಕಾಣುವ ಆನಂದವು.

ನಾನೂ ನನ್ನಲಿರುವ ಆನಂದ ಸ್ವರೂಪ ಶಕ್ತಿಯನ್ನು ಹುಡುಕುವ ಪ್ರಯತ್ನದಲ್ಲೇ ಇದ್ದೇನೆ. ಸಂಸಾರವೆಂಬ ಸಾಗರದಲ್ಲಿ ಈಜಾಡುತ್ತಲೇ ಮೋಹ ಮಾಯೆಗಳೆಂಬ ದೈತ್ಯ ಶಾರ್ಕಗಳಿಂದ ಸುತ್ತುವರೆದಿರುವಾಗ ಭಗವಂತನ ಪೂರ್ಣರೂಪದ ದರ್ಶನ ನಮಗೆ ಲಭಿಸುದೆಂದೆಣಿಸುವುದಿಲ್ಲ. ಮತ್ತು ಆಶೆಯೂ ಪಡುವುದಿಲ್ಲ. ಯಾಕೆಂದರೆ ನಮ್ಮ ಸುತ್ತಲಿನ ಪ್ರಕೃತಿಯಲ್ಲೇ ಅಡಗಿರುವ ಪರಮಾತ್ಮನು ನಿತ್ಯವೂ ತನ್ನ ದರುಶನ ಕೊಡುತ್ತಿರುವಾಗ ಇಲ್ಲ ಸಲ್ಲದ ಹುಡುಕಾಟ ಬೇಕೇ? ಈ ಪರಮಾತ್ಮನನ್ನು ಕಾಣಲು ನಮ್ಮ ಇಂದ್ರಿಯ ಬುದ್ಧಿಗಳನ್ನು ತೆರೆದಿಟ್ಟರೆ ಸಾಕು


ನಾನಂತೂ ಪ್ರತೀದಿನ ಬೆಳಿಗ್ಗೆ ಕಾಣುವ ಸೂರ್ಯನಿಂದ ಹಿಡಿದು ನಾನು ಮಾಡುವ ಎಲ್ಲಾ ಕಾರ್ಯಗಳನ್ನು ಬಲು ಆನಂದದಿಂದ ಮಾಡುತ್ತೇನೆ. ಕಸ ಗುಡಿಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಅಡುಗೆ ಮಾಡುವ ಇಂತಹ ಕೆಲಸಗಳು ಯಾರಿಗೆ ತಾನೆ ಇಷ್ಟ? ನಾನು ಇದರ ಹೊರತಾಗಿರಲಿಲ್ಲ.... ಬೇಸರದಿಂದಲೇ ಮಾಡುತ್ತಿದೆ. ಇದರ ಪರಿಣಾಮ ನನ್ನ ಜೀವನದಲ್ಲಿ ಸುಖವೆಂದರೆ ಮರೀಚಿಕೆಯಾಗಿತ್ತು... ಯಾವಾಗಲೂ ಸಿಡಿಮಿಡಿ, ಕೋಪ, ತಾಪ, ಅನಾರೋಗ್ಯ.. ಮೊದಲಾದವುಗಳು ನನ್ನಲ್ಲಿ ಹಾಯಾಗಿ ಮನೆ ಮಾಡಿಕೊಂಡಿದ್ದವು. ಹಾ.... ಇದರ ಮಧ್ಯೆ ನನ್ನ ಮಂತ್ರ, ಸ್ತೋತ್ರಗಳ ಪಠನವೂ ಸಾಂಗವಾಗಿ ನಡೆದಿತ್ತು. ಇಷ್ಟೆಲ್ಲ ನಿನಗಾಗಿ ಮಾಡುವಾಗ ಯಾಕೆ ನೀನು ಕಣ್ಣು ಮುಚ್ಚಿ ಕುಳಿತಿರುವೆ? ನಿನ್ನನ್ನು ಭಕ್ತ ವತ್ಸಲನೆಂದು ಯಾಕಾಗಿ ದಾಸರು ಕರೆದರೋ? ಎಂದೆಲ್ಲಾ ಪ್ರಶ್ನೆಗಳನ್ನು ದೇವರಲ್ಲಿ ಕೇಳುತ್ತಿದ್ದೆ.

ಇಂತಹ ಸಮಯದಲ್ಲೇ ನನ್ನಲ್ಲಿ ಜಿಜ್ಞಾಸೆಗಳು ಮೂಡಲು ಪ್ರಾರಂಭವಾಯಿತು.....ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರಲು ಪ್ರಾರಂಭವಾಯಿತು. ಹಾಗೆಯೇ ಉತ್ತರಗಳ ಹುಡುಕಾಟವೂ...... ಇಂತಹ ಹುಡುಕಾಟದಲ್ಲೇ ನನಗೆ ನನ್ನ ಒಳಗೇ ಇರುವಿಕೆಯ ಆನಂದದ ಅರಿವಾಯಿತು. ಇದನ್ನು ಪಡೆಯಬೇಕಾದರೆ ನಾವು ಎಲ್ಲದರಲ್ಲಿಯೂ ಭಗವಂತನನ್ನೇ ಕಾಣಬೇಕೆಂಬ ಜ್ಞಾನೋದಯವಾಯಿತು.

05 December, 2007

ದೇವರಿದ್ದಾನೆಯೇ?-1

ದೇವರಿದ್ದಾನೆಯೇ?

ದೇವರು ಇದ್ದಾನೆ ಅಥವಾ ಇಲ್ಲವೇ ಇಂದು ಅವರವರ ನಂಬಿಕೆಗೆ ಸಂಬಂಧ ಪಟ್ಟದ್ದು. ಕೆಲವರಿಗೆ ದೇವರು ಅವರವರ ಭಾವಕ್ಕೆ ತಕ್ಕಂತೆ ಬದಲಾಗುತ್ತಾರೆ. ಕೆಲವರಿಗೆ ಕಷ್ಟದಲ್ಲಿ ಸಹಾಯ ಮಾಡಿದವರೇ ದೇವರು, ಅಂದರೆ ಅವರಿಗೆ ಪರಮಾತ್ಮ ಮಾನವ ರೂಪದಲ್ಲೇ ಗೋಚರಿಸುತ್ತಾನೆ. ಕೆಲವರಿಗೆ ಪ್ರಕೃತಿಯೇ ದೇವರು, ತಮ್ಮಸುತ್ತಲಿನ ವಾತಾವರಣದಲ್ಲಿರುವ ಎಲ್ಲಾ ಭೌತಿಕ ವಸ್ತುಗಳಲ್ಲಿ ದೇವರು ಗೋಚರನಾಗುತ್ತಾನೆ. ಮತ್ತೂ ಕೆಲವರಿಗೆ ಕಾಯಕವೇ ದೇವರು, ತಮ್ಮ ಕರ್ತವ್ಯ, ಕೆಲಸದಲ್ಲೇ ಮಗ್ನರಾಗಿ ಭಗವಂತನ ಸಾನಿಧ್ಯವನ್ನು ಆನಂದಿಸುತ್ತಾರೆ.

ಮೇಲೆ ತಿಳಿಸಿರುವಂತೆ ದೇವರು ಭಕ್ತರಿಗೆ ಅವರವರ ಭಾವಕ್ಕೆ, ಭಕ್ತಿಗೆ ಅನುಗುಣವಾಗಿಕಾಣಿಸುತ್ತಾನೆ. ಮತ್ತು ಅದು ಸರಿಯೂ ಹೌದು ಎಂದು ಹೇಳಬಹುದು. ಯಾಕೆಂದರೆ ಇದಕ್ಕೆಲ್ಲಾ ನಾವು ನಮ್ಮ ಪುರಾಣದಲ್ಲಿ ಉದಾಹರಣೆಯನ್ನು ಕಾಣಬಹುದು. ಸಂತರಾದ ಸಖೂಬಾಯಿ, ತುಕಾರಾಮ, ಜ್ಞಾನದೇವ, ಮುಕ್ತಾಬಾಯಿ, ಪುರಂದರದಾಸ, ರಾಮಕೃಷ್ನ ಪರಮಹಂಸ, ಶಾರದಾ ದೇವಿ ಮೊದಲಾದವರೆಲ್ಲಾ ಸಂಸಾರವನ್ನು ತ್ಯಜಿಸದೇ ದೇವರ ಇರುವಿಕೆಯನ್ನು ಅನುಭವಿಸಿಲ್ಲವೇ?

ಈ ವಿಷಯ ಯಾಕೆ ಬಂತೆಂದರೆ, ಸುಪ್ತದೀಪ್ತಿಯವರು ತಮ್ಮ ಬ್ಲಾಗಿನಲ್ಲಿ ದೇವರು ಇದ್ದಾನೆಯೇ ಎಂದು ಓದುಗರನ್ನು ಪ್ರಶ್ನಿಸಿದ್ದಾರೆ ಅಲ್ಲದೇ ನನ್ನ ವಿದ್ಯಾರ್ಥಿಗಳು ನನ್ನನ್ನೂ ಇದೇ ಪ್ರಶ್ನೆಯನ್ನು ಕೇಳಿದ್ದರು.( ನನ್ನಲ್ಲಿ ಮನೆ ಪಾಠಕ್ಕೆಂದು ಬರುವ ಮಕ್ಕಳಿಗೆ ಪಾಠವಾದ ನಂತರ ನಾನು ನೀತಿ ಮತ್ತು ಪ್ರಕೃತಿಯ ರಕ್ಷಣೆಯ ವಿಷಯಗಳನ್ನು ಕತೆಯ ರೂಪದಲ್ಲಿ ಹೇಳುತ್ತಿದ್ದೇನೆ) ಮಕ್ಕಳಿಗೆ ಅವರ ಅರ್ಥವಾಗುವ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವರು ಮೇಲೆ ಸ್ವರ್ಗದಲ್ಲಿದ್ದಾನೆ ಮತ್ತು ನಾವು ಮಾಡುವ ಕರ್ಮಗಳನ್ನು ಪ್ರತಿಯೊಂದು ಗಳಿಗೆಗೂ ಬರೆಯುತ್ತಿದ್ದಾನೆ ಎಂದೂ , ಅದಕ್ಕೆ ಅನುಗುಣವಾಗಿ ನಮಗೆ ಪುಣ್ಯ ಪಾಪದ ಫಲಗಳು ದೊರೆಯುವುದೆಂದು ಹೇಳಿದ್ದೇನೆ. ಹೀಗೆ ಯಾಕೆ ಹೇಳಬೇಕಾಯಿತೆಂದರೆ ಆ ಮಕ್ಕಳು ಒಳ್ಳೆಯ ಮನೆತನದವರಾದರೂ, ದೇವರ ಸ್ತೋತ್ರ, ಭಜನೆ ಹೇಳುವ ತಂದೆ , ತಾಯಿಯರ ಕುಡಿಯಾದರೂ ಮನೆಯ ಹೊರಗೆ ಅವರು ಮಾಡುವ ಕೆಲಸಗಳನ್ನು ನೋಡಿದರೆ ಇಂತವರ ಕೈಯಲ್ಲಿ ನಮ್ಮ ದೇಶದ ಭವಿಷ್ಯ ಏನಾಗುವುದೋ ಎಂದು ಹೆದರಿಕೆ ಹುಟ್ಟಿಸಿರುವಂತಿತ್ತು. ಹೀಗಾಗಿ ನಾನು ನನ್ನ ಪಾಠ ಹೇಳುವ ಕೆಲಸದ ಜೊತೆ ಅವರನ್ನು ನೀತಿವಂತರನ್ನಾಗಿ ಮಾಡುವ ಪ್ರಯತ್ನದಲ್ಲಿ ನಮ್ಮ ಪುರಾಣದ ಕತೆಗಳನ್ನು ಹೇಳುವ ಕಾಯಕ ಪ್ರಾರಂಭಿಸಿದ್ದೇನೆ.

ಪುಸ್ತಕಗಳಲ್ಲಿ ಸರಸ್ವತಿಯ ವಾಸವಿರುವುದರಿಂದ ನಾವು ಯಾವಾಗಲೂ ಅವಳನ್ನು ಚೆನ್ನಾಗಿಡಬೇಕು ಹಾಗು ನಮ್ಮ ಅಕ್ಷರ ಚೆನ್ನಾಗಿದ್ದರೆ ಸರಸ್ವತಿಯು ನಮಗೆ ಬಲುಬೇಗ ಒಲಿಯುತ್ತಾಳೆ.( ಅಂದರೆ ಬಾಯಿಪಾಠವಾಗುತ್ತದೆ) ಹೀಗೆಲ್ಲಾ ಹೇಳಿದ ಮೇಲೆ ಒಂದಿಷ್ಟು ಸುಧಾರಿಸಿದ್ದಾರೆ. ಸತ್ಯವಾನ್ ಹರಿಶ್ಚಂದ್ರನ ಕತೆ ಹೇಳಿ ಆ ನಾಟಕ ನೋಡಿದ ಗಾಂಧೀಜಿ ತಮ್ಮ ಕೆಟ್ಟಚಟಗಳ್ಳನ್ನು ಬಿಟ್ಟು ಸತ್ಯವನ್ನೇ ಹೇಳುವ ಪ್ರತಿಜ್ಞೆಯನ್ನು ಮಾಡಿದ ಕತೆ ಹಾಗು ಬಾಲಕರಾದ ಪ್ರಹ್ಲಾದ, ದ್ರುವರ ಕತೆಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರಿತು. ಇಂದಿಗೂ ಮಕ್ಕಳು ದೇವರು ನಾವು ಕೋಣೆಯಲ್ಲಿದ್ದಾನೆಯೇ, ನಮ್ಮನ್ನು ನೋಡುತ್ತಿದ್ದಾನೆಯೇ ಎಂದು ಕೇಳುತ್ತಿದ್ದಾರೆ..... ನಾನು ಅವರಿಗೆ ಹೌದೆಂದು ಹೇಳುವಾಗ ನನ್ನ ಆತ್ಮ ನನ್ನನ್ನು " ನೀನು ನಿಜವನ್ನೇ ಹೇಳುತ್ತಿದ್ದಿಯೇ" ಎಂದು ಕೇಳುವ ಹಾಗೆ ನನಗೆ ಅನಿಸಿತು.

ನಾನು ಈ ಬಾಲಕರಿಗೆ ಹೇಳಿದ ಹಾಗೆ ಬಾಲ್ಯದಲ್ಲಿ ಪಾಪ ಪುಣ್ಯಗಳ ಪ್ರಭಾವವನ್ನು ನಂಬಿದ್ದೆ.... ಹಾಗಾಗಿ ತಪ್ಪು ಮಾಡುವಾಗ ನನ್ನ ಮನಸ್ಸು ಚುಚ್ಚುತ್ತಿದ್ದರಿಂದ ನನ್ನಿಂದ ನಡೆಯುವ ಕರ್ಮಗಳಲ್ಲಿ ತಪ್ಪುಗಳ ಸಂಖ್ಯೆ ಕಡಿಮೆಯಿರುತ್ತಿತ್ತು. ಅಲ್ಲದೆ ನನ್ನ ಮಕ್ಕಳಿಗೂ ನಾನು ಹಾಗೆಯೇ ಉಪದೇಶಿಸಿದೆ. ದೇವರು ನಮ್ಮ ಕರ್ಮಗಳ ಅನುಸಾರವಾಗಿ ನಮಗೆ ಮುಂದಿನ ಜನ್ಮ ಕೊಡುತ್ತಾನೆ..... ಅಂದರೆ ನಾವು ಅನಾವಶ್ಯಕವಾಗಿ ಮತ್ತೊಂದು ಜೀವಿಗೆ ತೊಂದರೆ ಕೊಟ್ಟರೆ ಮುಂದಿನ ಜನ್ಮದಲ್ಲಿ ನಾವು ಕೆಟ್ಟ ಜನ್ಮ ( ಏನಾದರು ಪ್ರಾಣಿಯಾಗಿ---- ನಾಯಿ , ಬೆಕ್ಕುಹಾವು...ಇತ್ಯಾದಿ. ) ಪಡೆಯುತ್ತೇವೆ. ನಮಗೆಲ್ಲಾ ತಿಳಿದೇ ಇದೆ ಮನುಜ ಜನ್ಮ ಶ್ರೇಷ್ಠವೆಂದು. ಇಂತಹ ಹೆದರಿಕೆ ನಮ್ಮನ್ನು ಕೆಟ್ಟ ಕಾರ್ಯ ಮಾಡದಂತೆ ತಡೆಯುತ್ತದೆ. ಅಥವಾ ಕಡಿಮೆ ಮಾಡುತ್ತದೆ.

...........ಇನ್ನೂ ಇದೆ........

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...